Homeಚಳವಳಿಅಂಬೇಡ್ಕರ್ ಜನ್ಮದಿನ ವಿಶೇ‍ಷ: ಅಂಬೇಡ್ಕರ್ ಪರಿಭಾವಿಸಿದ ಭಾರತ V/s ವರ್ತಮಾನ ಭಾರತ

ಅಂಬೇಡ್ಕರ್ ಜನ್ಮದಿನ ವಿಶೇ‍ಷ: ಅಂಬೇಡ್ಕರ್ ಪರಿಭಾವಿಸಿದ ಭಾರತ V/s ವರ್ತಮಾನ ಭಾರತ

ಭಾರತದ ಪ್ರತಿಯೊಂದು ಶೋಷಿತ ಸಮುದಾಯದ ಹಕ್ಕುಗಳ ಬಗ್ಗೆಯೂ ಇಷ್ಟೊಂದು ಕಳಕಳಿವಹಿಸಿ ಚಿಂತಿಸಿದ ಮತ್ತು ಹೋರಾಡಿದ ಇನ್ನೊಂದು ಜೀವ ಈ ದೇಶದಲ್ಲಿ ಹುಟ್ಟಿರಲಿಕ್ಕಿಲ್ಲ....

- Advertisement -
- Advertisement -

ಸುದೀರ್ಘ ಕಾಲ ವಿಸ್ಮೃತಿಯೇ ತಾವಾಗಿಹೋಗಿದ್ದ ಈ ದೇಶದ ದೊಡ್ಡ ಸಂಖ್ಯೆಯ ಶೋಷಿತ ಸಮುದಾಯದ ಎದೆಗಳಲ್ಲಿ ಸ್ವಾಭಿಮಾನದ ಕಿಡಿ ಹೊತ್ತಿಸಿ, ಅರಿವಿನ ದೀಪ ಮತ್ತು ಸಂಘಟನೆಯ ಶಕ್ತಿಗಳನ್ನು ಕೈಗಿತ್ತಿದ್ದು ಬಾಬಾಸಾಹೇಬರು. ಆ ಶಕ್ತಿಗಳೊಂದಿಗೆ ಮುಂದಿನ ದಾರಿ ಹುಡುಕಿಕೊಳ್ಳಿರೆಂದು ಬೀಳ್ಕೊಂಡ ಅದಮ್ಯ ಚೇತನ ಡಾ. ಅಂಬೇಡ್ಕರ್ ಅವರ ಮತ್ತೊಂದು ಜಯಂತಿಯ ಬೆಳಕಿನಲ್ಲಿ ಕೆಲವು ಸಂಗತಿಗಳನ್ನು ದಾಖಲಿಸಬೇಕೆನಿಸಿತು.

ಸ್ವಲ್ಪ ಸಮಯದ ಹಿಂದೆ ಅಂಬೇಡ್ಕರ್ ಪರಿಭಾವಿಸಿದ ಭಾರತದ ಬಗ್ಗೆ ಮಾತನಾಡಲಿಕ್ಕಾಗಿ ಟಿಪ್ಪಣಿ ಮಾಡಿಕೊಳ್ಳುತ್ತಾ, ಅವರ ಕೆಲವು ಬರಹಗಳನ್ನು ಮತ್ತೊಮ್ಮೆ ತಿರುವಿ ಹಾಕುತ್ತಿದ್ದಾಗ, ಭಾರತದ ಪ್ರತಿಯೊಂದು ಶೋಷಿತ ಸಮುದಾಯದ ಹಕ್ಕುಗಳ ಬಗ್ಗೆಯೂ ಇಷ್ಟೊಂದು ಕಳಕಳಿವಹಿಸಿ ಚಿಂತಿಸಿದ ಮತ್ತು ಹೋರಾಡಿದ ಇನ್ನೊಂದು ಜೀವ ಈ ದೇಶದಲ್ಲಿ ಹುಟ್ಟಿರಲಿಕ್ಕಿಲ್ಲ ಎನಿಸಿತ್ತು. ಅನೇಕ ಮಹಾನುಭಾವರು ಮತ್ತು ಮಹಾನುಭಾವೆಯರು ಇತಿಹಾಸದಲ್ಲಿ ತಮ್ಮ ಕೈಚಾಚಲು ಸಾಧ್ಯವಾದಷ್ಟು ಅಗಲಕ್ಕೂ ಮಾನವತೆಯ ತಂಪನ್ನು ಹರಡಲು ನೋಡಿದವರು ನಮ್ಮ ಇತಿಹಾಸದಲ್ಲಿದ್ದಾರೆ; ಆದರೆ ಹೀಗೆ ಎಲ್ಲ ಕೋನಗಳಿಂದ, ಎಲ್ಲ ದಿಕ್ಕುಗಳಿಂದಲೂ ಆಲೋಚಿಸಿದವರು? ಜಾತಿಯಿಂದಲೋ, ವರ್ಗದಿಂದಲೋ, ಲಿಂಗದಿಂದಲೋ ಅಥವಾ ಇನ್ಯಾವುದೇ ಮಾನದಂಡವನ್ನು ತೆಗದುಕೊಂಡು ನೋಡಿದಾಗಲೂ ಕಡುಹಿಂದುಳಿದವರೆಂದು ಕಂಡುಬಂದ ಎಲ್ಲ ವರ್ಗ-ಸಮುದಾಯಗಳನ್ನು ಅಂಬೇಡ್ಕರ್ ಅವರು ತನ್ನ ಮಡಿಲಿಗೆಳೆದುಕೊಂಡಿದ್ದಾರೆ. ಭವಿಷ್ಯದ ಭಾರತದಲ್ಲಿ ಅಂತಹ ಎಲ್ಲರ ಸಾಮಾಜಿಕ, ಆರ್ಥಿಕ, ರಾಜಕೀಯ ಹಕ್ಕುಗಳು ಖಾತ್ರಿಯಾಗಬೇಕೆಂದು ಅವಿರತವಾಗಿ ಇನ್ನಿಲ್ಲದಂತೆ ಶ್ರಮಿಸಿದ್ದಾರೆ. ಅವರು ಬಯಸಿದ್ದು:

• ಹುಟ್ಟಿನ ಆಧಾರದಲ್ಲಿ ತಾರತಮ್ಯ ಮಾಡದಂತಹ ಸಾಮಾಜಿಕ ವ್ಯವಸ್ಥೆ
• ದೇಶದ ಪ್ರತಿಯೊಬ್ಬರಿಗೂ ಸಮಾನವಾದ ಅವಕಾಶಗಳು, ಸವಲತ್ತುಗಳು, ನ್ಯಾಯ ಮತ್ತು ಹಕ್ಕುಗಳು
• ಸರ್ಕಾರದ ಕಡೆಯಿಂದ ಸಾಮಾಜಿಕ-ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಅಗತ್ಯವಿರುವಂತಹ ನೀತಿಗಳು- ಭಾರತದ ಸಮಾಜದ ಮೂಲಸ್ವರೂಪವನ್ನು ಬದಲಿಸುವ ಶಕ್ತಿ ಹೊಂದಿರುವ ಭೂಮಿಯ ಹಂಚಿಕೆ ಮತ್ತು ಸಹಕಾರಿ ಬೇಸಾಯ ಪದ್ಧತಿ, ಉದ್ಯೋಗಗಳಲ್ಲಿ ಅತ್ಯಂತ ಶೋಷಿತ ಸಮುದಾಯಕ್ಕೆ ಮೀಸಲಾತಿ, 14 ವರ್ಷದವರೆಗೆ ಉಚಿತ, ಕಡ್ಡಾಯ ಶಿಕ್ಷಣ, ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಹಕ್ಕುಗಳು…………. ಇಂತಹ ಇನ್ನೂ ಎಷ್ಟೋ ಕ್ರಮಗಳು
• ದೇಶದ ಪ್ರತಿಯೊಬ್ಬ ಪ್ರಜೆಯೂ ಗೌರವ ಮತ್ತು ಘನತೆಯಿಂದ ಬದುಕಲು ಬೇಕಿರುವಂತಹ ಮೂಲಭೂತ ಹಕ್ಕುಗಳು
• ಎಲ್ಲ ಸಮುದಾಯಗಳನ್ನು ಪ್ರಾತಿನಿಧಿಕವಾಗಿ ಒಳಗೊಳ್ಳಬಲ್ಲ ಚುನಾವಣಾ ವ್ಯವಸ್ಥೆ
• ಜನರ ಮನಸ್ಸಿನಾಳದಲ್ಲಿ ಬೇರೂರಿರುವ ಜಾತಿ-ಅಸ್ಪೃಶ್ಯತೆಯ ವಿಷವನ್ನು ತೊಳೆದು ನಿರ್ಮಲಗೊಳಿಸಲು ಬೇಕಿರುವ, ಪ್ರತಿಯೊಬ್ಬ ಮನುಷ್ಯನಲ್ಲೂ ಇರುವ ಒಳದನಿಯನ್ನು ಜಾಗೃತಗೊಳಿಸಿ ನಿಜವಾದ ಮನುಷ್ಯರನ್ನಾಗಿಸಬಲ್ಲ ಆಧ್ಯಾತ್ಮಿಕ (ಧರ್ಮ) ಸಂರಚನೆ

ಇಂತಹ ರಚನೆಗಳನ್ನು ರೂಪಿಸಿಕೊಂಡ ಭಾರತ ಮಾತ್ರ ಸದೃಢವಾಗಿಯೂ, ಸಮಾನವಾಗಿಯೂ ಮತ್ತು ನಿಜಕ್ಕೂ ಆಧುನಿಕವಾಗಿಯೂ ಬೆಳೆದು ಅಭಿವೃದ್ಧಿ ಹೊಂದಲು ಸಾಧ್ಯ; ಹಾಗಿಲ್ಲವಾದರೆ ಭಾರತವನ್ನು ಸೋಲಿಸಲು ಹೊರಗಿನ ಯಾವ ಶತ್ರುವೂ ಬೇಕಿಲ್ಲ, ಇಲ್ಲಿರುವ ಶೋಷಣೆ, ತಾರತಮ್ಯ, ಅಸಮಾನತೆಗಳೇ ಸಾಕು ಈ ದೇಶವನ್ನು ಹಿಂದೆ ತಳ್ಳಲು ಎಂಬ ಬಗ್ಗೆ ಅವರಿಗೆ ಖಚಿತವಾದ ಅಭಿಪ್ರಾಯವಿತ್ತು.

ಆದ್ದರಿಂದಲೇ, ಸಂವಿಧಾನದಲ್ಲಾಗಲೀ, ಅದಕ್ಕೂ ಮೊದಲೇ ಬರೆದಿದ್ದ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ ಎಂಬ ತಮ್ಮ ದೀರ್ಘ ಪ್ರಬಂಧದಲ್ಲಾಗಲೀ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಸಮಾನತೆಗೆ ಅಂಬೇಡ್ಕರ್ ಅವರು ಅಷ್ಟು ಪ್ರಾಮುಖ್ಯತೆ ನೀಡಿದ್ದರು.

ಆದರೆ, ಸಮಾನವಾದ, ಮಾನವತೆಯ ಮೇಲೆ ನಿಂತಿರುವ ದೇಶವೊಂದನ್ನು ಕನಸುತ್ತಾ ಅದಕ್ಕಾಗಿ ಹೋರಾಟ ಮತ್ತು ಶಾಸನಾತ್ಮಕ ಪ್ರಯತ್ನಗಳಲ್ಲಿ ತೊಡಗಿರುವಾಗಲೇ, ಅವರಿಗೆ ತಾನು ಪರಿಭಾವಿಸುತ್ತಿರುವ ಭಾರತ ವಾಸ್ತವದಲ್ಲಿ ಸಾಕಾರಗೊಳ್ಳುತ್ತಿಲ್ಲ ಎಂಬ ಆತಂಕ ಮನದಾಳದಲ್ಲಿ ಮನೆ ಮಾಡಿತ್ತೇ? ತನ್ನ ಕಣ್ಣೆದುರು ಸ್ವಾತಂತ್ರ್ಯಾನಂತರ ಕಟ್ಟಲ್ಪಡುತ್ತಿದ್ದದ್ದು ತಾನು ಬಯಸಿದ್ದ ದೇಶವಲ್ಲ ಎಂದು ಅವರು ಪರಿಭಾವಿಸಿದ್ದರೇ? ಈ ಪ್ರಶ್ನೆ ಹುಟ್ಟಿ, ಖಚಿತ ಉತ್ತರವಿಲ್ಲದೆ ಹಾಗೆಯೇ ಉಳಿದುಬಿಡುತ್ತದೆ!

ಅಂದರೆ, ಅಂಬೇಡ್ಕರ್ ಅವರು ಆತಂಕದೊಂದಿಗೆ ಮುಂದೆ ಏನಾಗಲಿದೆಯೆಂದು ಊಹಿಸಿದ್ದರೋ ಅದೇ ಭಾರತ ಇಂದು ನಮ್ಮ ಕಣ್ಣಮುಂದಿದೆಯೇ?

“ಸಮಾನತೆಯಿಲ್ಲದ ಸ್ವಾತಂತ್ರ್ಯ ಅರ್ಥಹೀನ” ಎಂದು ಅಂಬೇಡ್ಕರ್ ಅವರು ಹೇಳಿದ್ದಂತೆಯೇ, ಪ್ರಜಾತಂತ್ರವೆಂದು ಕರೆಯಲು ಕಷ್ಟವಾಗುವಂತಹ ಸಮಾಜವೊಂದರಲ್ಲಿ ಬದುಕುತ್ತಿದ್ದೇವೆ. ಅದರಲ್ಲೂ ಈ ಒಂದೆರಡು ದಶಕಗಳಂತೂ, ಎಲ್ಲ ಬಗೆಯ ಕಾನೂನುಗಳನ್ನು, ನೀತಿ-ನಿಯಮಗಳನ್ನೂ ಗಾಳಿಗೆ ತೂರುತ್ತಾ, ತಮ್ಮ ಅಜೆಂಡಾದಲ್ಲಿದ್ದ ಹಿಂದಿನ ಶೋಷಣೆ, ದಬ್ಬಾಳಿಕೆ, ದಮನಗಳ ಸಾಮಾಜಿಕ ವ್ಯವಸ್ಥೆಯನ್ನೇ ಪುನರ್ ಸ್ಥಾಪಿಸಲು ಬಯಸುವ ಮನುವಾದಿ ಬಿಜೆಪಿಯ ಕಪಿಮುಷ್ಟಿಯೊಳಕ್ಕೆ ಈ ದೇಶ ಸಿಲುಕುತ್ತಿರುವುದಕ್ಕೆ ಸಾಕ್ಷಿಯಾಗಿವೆ. ಈ ಐದು ವರ್ಷಗಳು, ಸುಮಾರು ನೂರು ವರ್ಷಗಳ ನಡಿಗೆಯ ಗುರುತುಗಳನ್ನು ಅಳಿಸಿಹಾಕಿ ದೇಶವನ್ನು ಹಿಂದಕ್ಕೆಳೆದಿದೆ. ಎರಡು ವಿಶ್ವಯುದ್ಧಗಳಿಗಿಂತ ಮುಂಚೆ ಬದುಕಿದ್ದ ಸಮಾಜದ ಯುವಜನರು ಮುಗ್ಧವಾಗಿ ಯೋಚಿಸಬಹುದಾಗಿದ್ದಂತೆ, ಇಂದಿನ ತಲೆಮಾರಿಗೆ ಯುದ್ಧವೆಂಬುದು ಆತಂಕವನ್ನಲ್ಲ ಬದಲಿಗೆ ಸಂಭ್ರಮೋತ್ಸಾಹವನ್ನು ತರುತ್ತಿದೆ. ಇನ್ನೊಂದು ಸಮುದಾಯವನ್ನು ದಮನಿಸಿ, ತಲೆ ಎತ್ತಲಾಗದಂತೆ ಮುಗಿಸಿಬಿಡುವುದೆಂದರೆ, ವರ್ತಮಾನದ ಸಾಮಾನ್ಯ ಜನರಿಗೆ ತಮ್ಮ ಸ್ವಾಭಾವಿಕ ಹಕ್ಕುಗಳ ಮರುಸ್ಥಾಪನೆಯಂತೆ ಕಾಣುತ್ತಿದೆ. ಇತರರ ನಂಬಿಕೆಗಳನ್ನು ಗೌರವಿಸುವುದು ಬಲಹೀನತೆಯಾಗಿಯೂ, ಪ್ರಶ್ನಿಸುವುದು ಮತ್ತು ಟೀಕಿಸುವುದು ದೇಶದ್ರೋಹವಾಗಿಯೂ ಬಿಂಬಿಸಲ್ಪಟ್ಟಿದೆ.

ತಮ್ಮ ಕುಟುಂಬದ ಯುವಜನರಿಗೆ ಉದ್ಯೋಗ ಸಿಗದಿರುವುದು ಮೀಸಲಾತಿ ನೀತಿಯ ‘ಹುನ್ನಾರ’ವಾಗಿ (ಸ್ವತಃ ತಾವೇ ಮೀಸಲಾತಿಯ ಪರಿಧಿಯೊಳಗಡೆಯೇ ಇದ್ದರೂ ಕೂಡಾ) ವಿವರಿಸಲ್ಪಟ್ಟಿದೆಯೇ ಹೊರತು, ಸರ್ಕಾರದ ಕುಟಿಲ ನೀತಿಯ ಪರಿಣಾಮವೆಂದಲ್ಲ. ಇಳಿಯುತ್ತಿರುವ ತಲಾ ಆದಾಯ, ಏರುತ್ತಿರುವ ಬೆಲೆಗಳು ಆ ಕ್ಷಣಕ್ಕೆ ಚಿಂತೆ ಮೂಡಿಸಿದರೂ, ಅವುಗಳಿಗೂ ಆಳುತ್ತಿರುವ ಸರ್ಕಾರಕ್ಕೂ ಸಂಬಂಧವಿದೆಯೆಂಬ ಅರಿವಿನ ತಂತುಗಳು ಕಡಿದುಹೋಗಿವೆ. ‘20ನೇ ಶತಮಾನದ ಫ್ಯಾಸಿಸಂ ಕಾಲದ ಟಿವಿ ಆಂಕರ್’ ಗೋಬೆಲ್ಸ್‌ನ ಸಿದ್ಧಾಂತವನ್ನೇ ನಂಬಿ ಬೆಳೆಯುತ್ತಿರುವ ಇಂದಿನ ಮಾಧ್ಯಮಗಳ ಗಿಳಿಪಾಠವೇ ಇಂದು ಜಗತ್ತಿನ ಆತ್ಯಂತಿಕ ಸತ್ಯವಾಗಿ ಹೋಗಿರುವ ವಿಪರ್ಯಾಸವನ್ನು ನಮ್ಮ ಶುಷ್ಕ ಕಣ್ಣುಗಳು ನೋಡುತ್ತಿವೆ.

ಮತ್ತೊಮ್ಮೆ ಶೋಷಿತ ಜಗತ್ತು ವಿಸ್ಮೃತಿಯ ವಿಷದೊಳಕ್ಕೆ ಜಾರಿಸಲ್ಪಡುತ್ತಿದೆ……….. ಜಾರುವಿಕೆ ವೇಗವನ್ನು ತಡೆದು ನಿಲ್ಲಿಸಲು ಶಕ್ತಿ ಸಾಲದೆ ನೊಂದ ಕಾಲುಗಳು ಮತ್ತು ಮನಸ್ಸಿನೊಂದಿಗೆ ಚಳುವಳಿಗಳು ನಿಂತಂತಿದೆ.
ನನ್ನ ಪ್ರಕಾರ, ಅಂಬೇಡ್ಕರ್ ಪರಿಭಾವಿಸಿದ್ದು ಒಂದು ಭಾರತವನ್ನಲ್ಲ!! ಅವರ ದಾರ್ಶನಿಕ ಕಣ್ಣುಗಳ ಎದುರಿಗಿದ್ದದ್ದು ಎರಡು ಭಾರತಗಳು; ತಮ್ಮ ಹಕ್ಕುಗಳಿಗಾಗಿ ಎಚ್ಚರವಾಗಿದ್ದು ಎಲ್ಲ ಶೋಷಿತ, ದಮನಿತ ಸಮುದಾಯಗಳು ಸೇರಿ ಹೋರಾಡಿದ್ದೇ ಆದಲ್ಲಿ ಮೂಡಿಬರಬಹುದಾಗಿದ್ದ ಸಮಾನ ಭಾರತ ಮತ್ತು ಹಾಗಿಲ್ಲದೆ ಮತ್ತೆ ಮೋಸದ ಜಾಲದೊಳಕ್ಕೆ ಬಿದ್ದು ತಮ್ಮ ಐಕ್ಯತೆಯನ್ನು ಒಡೆದುಕೊಂಡು ಜನಸಾಮಾನ್ಯರು ದಿಕ್ಕುತಪ್ಪಿದ್ದೇ ಆದಲ್ಲಿ ಮೂಡಬಹುದಾಗಿದ್ದ ‘ಮಸಾಣ’ ಭಾರತ!! ಇಂದು ನಮ್ಮ ಪಯಣ ವೇಗವಾಗಿ ಸಾಗುತ್ತಿರುವುದು ಈ ಎರಡನೇ ಭಾರತದೆಡೆಗೆ………………..

ಅಂಬೇಡ್ಕರ್ ಅವರೇ ಈ ಅರಿವು ರಹಿತ ಸ್ಥಿತಿಯಿಂದ ಹೊರಬರಲು ಕೆಲವು ಹತಾರಗಳನ್ನೂ ನೀಡಿದ್ದಾರೆ. ಚಿಂತನೆಗಳಿಂದ ನಾವು ಪಡೆಯಬೇಲಾದ ಅನೇಕ ಸಂಗತಿಗಳಿದ್ದರೂ, ಬಹಳ ಮುಖ್ಯವಾಗಿ, ಸದಾ ಅರಿವು, ಐಕ್ಯತೆ ಮತ್ತು ಪ್ರಯತ್ನಶೀಲತೆಯನ್ನು ಉಳಿಸಿಕೊಂಡಿರಬೇಕೆಂಬ ಅವರ ಮೂಲಮಂತ್ರಗಳು; ಅವರ ಬದುಕು ಮತ್ತು ಆಚರಣೆಯಿಂದ ಕಲಿಯಬೇಕಾದ್ದು, ತನ್ನ ಮೂಲ ಆಶಯಕ್ಕಾಗಿ ಎಂದೂ ದಣಿವರಿಯದ ದುಡಿಮೆ, ನಂಬಿದ ತತ್ವಕ್ಕಾಗಿ ಭಾರೀ ಪ್ರಯೋಗಗಳಿಗಿಳಿಯುವ ದಿಟ್ಟತನ ಮತ್ತು ಆಶಾವಾದ.

ಇಂದು, ಈ ಕಾಲ ನಮ್ಮೆದುರು ದೀರ್ಘ ನಡಿಗೆಯ ಸವಾಲನ್ನು ಇರಿಸಿದೆ. ಸವಾಲನ್ನು ಸ್ವೀಕರಿಸಿ ಮುನ್ನಡೆಯಲು ಅಂಬೇಡ್ಕರ್ ಎಂಬ ಚೇತನದಿಂದ ಸ್ಪೂರ್ತಿ ಮತ್ತು ವಿಶ್ವಾಸವನ್ನು ಕಡ ಪಡೆದುಕೊಳ್ಳೋಣ; ಉತ್ತಮ ನಾಳೆಗಳನ್ನು ಕಟ್ಟಿಕೊಂಡು ಮರಳಿಸುವ ವಾಗ್ದಾನದೊಂದಿಗೆ!

ಆತಂಕದ ತೂಗುಯ್ಯಾಲೆಯಲ್ಲಿರುವ ಎಲ್ಲ ಜೀವಪರ ಮನಸ್ಸುಗಳಿಗೆ ಅಂಬೇಡ್ಕರ್ ದಿನಾಚರಣೆಯ ಆಶಾವಾದಿ ಶುಭಾಶಯಗಳು.

  • ಮಲ್ಲಿಗೆ ಸಿರಿಮನೆ

(ಸಾಮಾಜಿಕ ಹೋರಾಟಗಾರ್ತಿ, ಕರ್ನಾಟಕ ಜನಶಕ್ತಿಯ ಪ್ರಧಾನ ಕಾರ್ಯದರ್ಶಿ)


ಇದನ್ನೂ ಓದಿ:  ವಿಕಿಪೀಡಿಯಾದಲ್ಲಿ ಕನ್ನಡಿಗರು ಅತಿ ಹೆಚ್ಚು ಹುಡುಕಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ!

ನಾನಕ್ ಚಂದ್ ರತ್ತುರವರ ’ಬಾಬಾ ಸಾಹೇಬರ ಕೊನೆ ದಿನಗಳು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...