Homeಚಳವಳಿಅಂಬೇಡ್ಕರ್ ಜನ್ಮದಿನ ವಿಶೇ‍ಷ: ಅಂಬೇಡ್ಕರ್ ಪರಿಭಾವಿಸಿದ ಭಾರತ V/s ವರ್ತಮಾನ ಭಾರತ

ಅಂಬೇಡ್ಕರ್ ಜನ್ಮದಿನ ವಿಶೇ‍ಷ: ಅಂಬೇಡ್ಕರ್ ಪರಿಭಾವಿಸಿದ ಭಾರತ V/s ವರ್ತಮಾನ ಭಾರತ

ಭಾರತದ ಪ್ರತಿಯೊಂದು ಶೋಷಿತ ಸಮುದಾಯದ ಹಕ್ಕುಗಳ ಬಗ್ಗೆಯೂ ಇಷ್ಟೊಂದು ಕಳಕಳಿವಹಿಸಿ ಚಿಂತಿಸಿದ ಮತ್ತು ಹೋರಾಡಿದ ಇನ್ನೊಂದು ಜೀವ ಈ ದೇಶದಲ್ಲಿ ಹುಟ್ಟಿರಲಿಕ್ಕಿಲ್ಲ....

- Advertisement -
- Advertisement -

ಸುದೀರ್ಘ ಕಾಲ ವಿಸ್ಮೃತಿಯೇ ತಾವಾಗಿಹೋಗಿದ್ದ ಈ ದೇಶದ ದೊಡ್ಡ ಸಂಖ್ಯೆಯ ಶೋಷಿತ ಸಮುದಾಯದ ಎದೆಗಳಲ್ಲಿ ಸ್ವಾಭಿಮಾನದ ಕಿಡಿ ಹೊತ್ತಿಸಿ, ಅರಿವಿನ ದೀಪ ಮತ್ತು ಸಂಘಟನೆಯ ಶಕ್ತಿಗಳನ್ನು ಕೈಗಿತ್ತಿದ್ದು ಬಾಬಾಸಾಹೇಬರು. ಆ ಶಕ್ತಿಗಳೊಂದಿಗೆ ಮುಂದಿನ ದಾರಿ ಹುಡುಕಿಕೊಳ್ಳಿರೆಂದು ಬೀಳ್ಕೊಂಡ ಅದಮ್ಯ ಚೇತನ ಡಾ. ಅಂಬೇಡ್ಕರ್ ಅವರ ಮತ್ತೊಂದು ಜಯಂತಿಯ ಬೆಳಕಿನಲ್ಲಿ ಕೆಲವು ಸಂಗತಿಗಳನ್ನು ದಾಖಲಿಸಬೇಕೆನಿಸಿತು.

ಸ್ವಲ್ಪ ಸಮಯದ ಹಿಂದೆ ಅಂಬೇಡ್ಕರ್ ಪರಿಭಾವಿಸಿದ ಭಾರತದ ಬಗ್ಗೆ ಮಾತನಾಡಲಿಕ್ಕಾಗಿ ಟಿಪ್ಪಣಿ ಮಾಡಿಕೊಳ್ಳುತ್ತಾ, ಅವರ ಕೆಲವು ಬರಹಗಳನ್ನು ಮತ್ತೊಮ್ಮೆ ತಿರುವಿ ಹಾಕುತ್ತಿದ್ದಾಗ, ಭಾರತದ ಪ್ರತಿಯೊಂದು ಶೋಷಿತ ಸಮುದಾಯದ ಹಕ್ಕುಗಳ ಬಗ್ಗೆಯೂ ಇಷ್ಟೊಂದು ಕಳಕಳಿವಹಿಸಿ ಚಿಂತಿಸಿದ ಮತ್ತು ಹೋರಾಡಿದ ಇನ್ನೊಂದು ಜೀವ ಈ ದೇಶದಲ್ಲಿ ಹುಟ್ಟಿರಲಿಕ್ಕಿಲ್ಲ ಎನಿಸಿತ್ತು. ಅನೇಕ ಮಹಾನುಭಾವರು ಮತ್ತು ಮಹಾನುಭಾವೆಯರು ಇತಿಹಾಸದಲ್ಲಿ ತಮ್ಮ ಕೈಚಾಚಲು ಸಾಧ್ಯವಾದಷ್ಟು ಅಗಲಕ್ಕೂ ಮಾನವತೆಯ ತಂಪನ್ನು ಹರಡಲು ನೋಡಿದವರು ನಮ್ಮ ಇತಿಹಾಸದಲ್ಲಿದ್ದಾರೆ; ಆದರೆ ಹೀಗೆ ಎಲ್ಲ ಕೋನಗಳಿಂದ, ಎಲ್ಲ ದಿಕ್ಕುಗಳಿಂದಲೂ ಆಲೋಚಿಸಿದವರು? ಜಾತಿಯಿಂದಲೋ, ವರ್ಗದಿಂದಲೋ, ಲಿಂಗದಿಂದಲೋ ಅಥವಾ ಇನ್ಯಾವುದೇ ಮಾನದಂಡವನ್ನು ತೆಗದುಕೊಂಡು ನೋಡಿದಾಗಲೂ ಕಡುಹಿಂದುಳಿದವರೆಂದು ಕಂಡುಬಂದ ಎಲ್ಲ ವರ್ಗ-ಸಮುದಾಯಗಳನ್ನು ಅಂಬೇಡ್ಕರ್ ಅವರು ತನ್ನ ಮಡಿಲಿಗೆಳೆದುಕೊಂಡಿದ್ದಾರೆ. ಭವಿಷ್ಯದ ಭಾರತದಲ್ಲಿ ಅಂತಹ ಎಲ್ಲರ ಸಾಮಾಜಿಕ, ಆರ್ಥಿಕ, ರಾಜಕೀಯ ಹಕ್ಕುಗಳು ಖಾತ್ರಿಯಾಗಬೇಕೆಂದು ಅವಿರತವಾಗಿ ಇನ್ನಿಲ್ಲದಂತೆ ಶ್ರಮಿಸಿದ್ದಾರೆ. ಅವರು ಬಯಸಿದ್ದು:

• ಹುಟ್ಟಿನ ಆಧಾರದಲ್ಲಿ ತಾರತಮ್ಯ ಮಾಡದಂತಹ ಸಾಮಾಜಿಕ ವ್ಯವಸ್ಥೆ
• ದೇಶದ ಪ್ರತಿಯೊಬ್ಬರಿಗೂ ಸಮಾನವಾದ ಅವಕಾಶಗಳು, ಸವಲತ್ತುಗಳು, ನ್ಯಾಯ ಮತ್ತು ಹಕ್ಕುಗಳು
• ಸರ್ಕಾರದ ಕಡೆಯಿಂದ ಸಾಮಾಜಿಕ-ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಅಗತ್ಯವಿರುವಂತಹ ನೀತಿಗಳು- ಭಾರತದ ಸಮಾಜದ ಮೂಲಸ್ವರೂಪವನ್ನು ಬದಲಿಸುವ ಶಕ್ತಿ ಹೊಂದಿರುವ ಭೂಮಿಯ ಹಂಚಿಕೆ ಮತ್ತು ಸಹಕಾರಿ ಬೇಸಾಯ ಪದ್ಧತಿ, ಉದ್ಯೋಗಗಳಲ್ಲಿ ಅತ್ಯಂತ ಶೋಷಿತ ಸಮುದಾಯಕ್ಕೆ ಮೀಸಲಾತಿ, 14 ವರ್ಷದವರೆಗೆ ಉಚಿತ, ಕಡ್ಡಾಯ ಶಿಕ್ಷಣ, ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಹಕ್ಕುಗಳು…………. ಇಂತಹ ಇನ್ನೂ ಎಷ್ಟೋ ಕ್ರಮಗಳು
• ದೇಶದ ಪ್ರತಿಯೊಬ್ಬ ಪ್ರಜೆಯೂ ಗೌರವ ಮತ್ತು ಘನತೆಯಿಂದ ಬದುಕಲು ಬೇಕಿರುವಂತಹ ಮೂಲಭೂತ ಹಕ್ಕುಗಳು
• ಎಲ್ಲ ಸಮುದಾಯಗಳನ್ನು ಪ್ರಾತಿನಿಧಿಕವಾಗಿ ಒಳಗೊಳ್ಳಬಲ್ಲ ಚುನಾವಣಾ ವ್ಯವಸ್ಥೆ
• ಜನರ ಮನಸ್ಸಿನಾಳದಲ್ಲಿ ಬೇರೂರಿರುವ ಜಾತಿ-ಅಸ್ಪೃಶ್ಯತೆಯ ವಿಷವನ್ನು ತೊಳೆದು ನಿರ್ಮಲಗೊಳಿಸಲು ಬೇಕಿರುವ, ಪ್ರತಿಯೊಬ್ಬ ಮನುಷ್ಯನಲ್ಲೂ ಇರುವ ಒಳದನಿಯನ್ನು ಜಾಗೃತಗೊಳಿಸಿ ನಿಜವಾದ ಮನುಷ್ಯರನ್ನಾಗಿಸಬಲ್ಲ ಆಧ್ಯಾತ್ಮಿಕ (ಧರ್ಮ) ಸಂರಚನೆ

ಇಂತಹ ರಚನೆಗಳನ್ನು ರೂಪಿಸಿಕೊಂಡ ಭಾರತ ಮಾತ್ರ ಸದೃಢವಾಗಿಯೂ, ಸಮಾನವಾಗಿಯೂ ಮತ್ತು ನಿಜಕ್ಕೂ ಆಧುನಿಕವಾಗಿಯೂ ಬೆಳೆದು ಅಭಿವೃದ್ಧಿ ಹೊಂದಲು ಸಾಧ್ಯ; ಹಾಗಿಲ್ಲವಾದರೆ ಭಾರತವನ್ನು ಸೋಲಿಸಲು ಹೊರಗಿನ ಯಾವ ಶತ್ರುವೂ ಬೇಕಿಲ್ಲ, ಇಲ್ಲಿರುವ ಶೋಷಣೆ, ತಾರತಮ್ಯ, ಅಸಮಾನತೆಗಳೇ ಸಾಕು ಈ ದೇಶವನ್ನು ಹಿಂದೆ ತಳ್ಳಲು ಎಂಬ ಬಗ್ಗೆ ಅವರಿಗೆ ಖಚಿತವಾದ ಅಭಿಪ್ರಾಯವಿತ್ತು.

ಆದ್ದರಿಂದಲೇ, ಸಂವಿಧಾನದಲ್ಲಾಗಲೀ, ಅದಕ್ಕೂ ಮೊದಲೇ ಬರೆದಿದ್ದ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ ಎಂಬ ತಮ್ಮ ದೀರ್ಘ ಪ್ರಬಂಧದಲ್ಲಾಗಲೀ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಸಮಾನತೆಗೆ ಅಂಬೇಡ್ಕರ್ ಅವರು ಅಷ್ಟು ಪ್ರಾಮುಖ್ಯತೆ ನೀಡಿದ್ದರು.

ಆದರೆ, ಸಮಾನವಾದ, ಮಾನವತೆಯ ಮೇಲೆ ನಿಂತಿರುವ ದೇಶವೊಂದನ್ನು ಕನಸುತ್ತಾ ಅದಕ್ಕಾಗಿ ಹೋರಾಟ ಮತ್ತು ಶಾಸನಾತ್ಮಕ ಪ್ರಯತ್ನಗಳಲ್ಲಿ ತೊಡಗಿರುವಾಗಲೇ, ಅವರಿಗೆ ತಾನು ಪರಿಭಾವಿಸುತ್ತಿರುವ ಭಾರತ ವಾಸ್ತವದಲ್ಲಿ ಸಾಕಾರಗೊಳ್ಳುತ್ತಿಲ್ಲ ಎಂಬ ಆತಂಕ ಮನದಾಳದಲ್ಲಿ ಮನೆ ಮಾಡಿತ್ತೇ? ತನ್ನ ಕಣ್ಣೆದುರು ಸ್ವಾತಂತ್ರ್ಯಾನಂತರ ಕಟ್ಟಲ್ಪಡುತ್ತಿದ್ದದ್ದು ತಾನು ಬಯಸಿದ್ದ ದೇಶವಲ್ಲ ಎಂದು ಅವರು ಪರಿಭಾವಿಸಿದ್ದರೇ? ಈ ಪ್ರಶ್ನೆ ಹುಟ್ಟಿ, ಖಚಿತ ಉತ್ತರವಿಲ್ಲದೆ ಹಾಗೆಯೇ ಉಳಿದುಬಿಡುತ್ತದೆ!

ಅಂದರೆ, ಅಂಬೇಡ್ಕರ್ ಅವರು ಆತಂಕದೊಂದಿಗೆ ಮುಂದೆ ಏನಾಗಲಿದೆಯೆಂದು ಊಹಿಸಿದ್ದರೋ ಅದೇ ಭಾರತ ಇಂದು ನಮ್ಮ ಕಣ್ಣಮುಂದಿದೆಯೇ?

“ಸಮಾನತೆಯಿಲ್ಲದ ಸ್ವಾತಂತ್ರ್ಯ ಅರ್ಥಹೀನ” ಎಂದು ಅಂಬೇಡ್ಕರ್ ಅವರು ಹೇಳಿದ್ದಂತೆಯೇ, ಪ್ರಜಾತಂತ್ರವೆಂದು ಕರೆಯಲು ಕಷ್ಟವಾಗುವಂತಹ ಸಮಾಜವೊಂದರಲ್ಲಿ ಬದುಕುತ್ತಿದ್ದೇವೆ. ಅದರಲ್ಲೂ ಈ ಒಂದೆರಡು ದಶಕಗಳಂತೂ, ಎಲ್ಲ ಬಗೆಯ ಕಾನೂನುಗಳನ್ನು, ನೀತಿ-ನಿಯಮಗಳನ್ನೂ ಗಾಳಿಗೆ ತೂರುತ್ತಾ, ತಮ್ಮ ಅಜೆಂಡಾದಲ್ಲಿದ್ದ ಹಿಂದಿನ ಶೋಷಣೆ, ದಬ್ಬಾಳಿಕೆ, ದಮನಗಳ ಸಾಮಾಜಿಕ ವ್ಯವಸ್ಥೆಯನ್ನೇ ಪುನರ್ ಸ್ಥಾಪಿಸಲು ಬಯಸುವ ಮನುವಾದಿ ಬಿಜೆಪಿಯ ಕಪಿಮುಷ್ಟಿಯೊಳಕ್ಕೆ ಈ ದೇಶ ಸಿಲುಕುತ್ತಿರುವುದಕ್ಕೆ ಸಾಕ್ಷಿಯಾಗಿವೆ. ಈ ಐದು ವರ್ಷಗಳು, ಸುಮಾರು ನೂರು ವರ್ಷಗಳ ನಡಿಗೆಯ ಗುರುತುಗಳನ್ನು ಅಳಿಸಿಹಾಕಿ ದೇಶವನ್ನು ಹಿಂದಕ್ಕೆಳೆದಿದೆ. ಎರಡು ವಿಶ್ವಯುದ್ಧಗಳಿಗಿಂತ ಮುಂಚೆ ಬದುಕಿದ್ದ ಸಮಾಜದ ಯುವಜನರು ಮುಗ್ಧವಾಗಿ ಯೋಚಿಸಬಹುದಾಗಿದ್ದಂತೆ, ಇಂದಿನ ತಲೆಮಾರಿಗೆ ಯುದ್ಧವೆಂಬುದು ಆತಂಕವನ್ನಲ್ಲ ಬದಲಿಗೆ ಸಂಭ್ರಮೋತ್ಸಾಹವನ್ನು ತರುತ್ತಿದೆ. ಇನ್ನೊಂದು ಸಮುದಾಯವನ್ನು ದಮನಿಸಿ, ತಲೆ ಎತ್ತಲಾಗದಂತೆ ಮುಗಿಸಿಬಿಡುವುದೆಂದರೆ, ವರ್ತಮಾನದ ಸಾಮಾನ್ಯ ಜನರಿಗೆ ತಮ್ಮ ಸ್ವಾಭಾವಿಕ ಹಕ್ಕುಗಳ ಮರುಸ್ಥಾಪನೆಯಂತೆ ಕಾಣುತ್ತಿದೆ. ಇತರರ ನಂಬಿಕೆಗಳನ್ನು ಗೌರವಿಸುವುದು ಬಲಹೀನತೆಯಾಗಿಯೂ, ಪ್ರಶ್ನಿಸುವುದು ಮತ್ತು ಟೀಕಿಸುವುದು ದೇಶದ್ರೋಹವಾಗಿಯೂ ಬಿಂಬಿಸಲ್ಪಟ್ಟಿದೆ.

ತಮ್ಮ ಕುಟುಂಬದ ಯುವಜನರಿಗೆ ಉದ್ಯೋಗ ಸಿಗದಿರುವುದು ಮೀಸಲಾತಿ ನೀತಿಯ ‘ಹುನ್ನಾರ’ವಾಗಿ (ಸ್ವತಃ ತಾವೇ ಮೀಸಲಾತಿಯ ಪರಿಧಿಯೊಳಗಡೆಯೇ ಇದ್ದರೂ ಕೂಡಾ) ವಿವರಿಸಲ್ಪಟ್ಟಿದೆಯೇ ಹೊರತು, ಸರ್ಕಾರದ ಕುಟಿಲ ನೀತಿಯ ಪರಿಣಾಮವೆಂದಲ್ಲ. ಇಳಿಯುತ್ತಿರುವ ತಲಾ ಆದಾಯ, ಏರುತ್ತಿರುವ ಬೆಲೆಗಳು ಆ ಕ್ಷಣಕ್ಕೆ ಚಿಂತೆ ಮೂಡಿಸಿದರೂ, ಅವುಗಳಿಗೂ ಆಳುತ್ತಿರುವ ಸರ್ಕಾರಕ್ಕೂ ಸಂಬಂಧವಿದೆಯೆಂಬ ಅರಿವಿನ ತಂತುಗಳು ಕಡಿದುಹೋಗಿವೆ. ‘20ನೇ ಶತಮಾನದ ಫ್ಯಾಸಿಸಂ ಕಾಲದ ಟಿವಿ ಆಂಕರ್’ ಗೋಬೆಲ್ಸ್‌ನ ಸಿದ್ಧಾಂತವನ್ನೇ ನಂಬಿ ಬೆಳೆಯುತ್ತಿರುವ ಇಂದಿನ ಮಾಧ್ಯಮಗಳ ಗಿಳಿಪಾಠವೇ ಇಂದು ಜಗತ್ತಿನ ಆತ್ಯಂತಿಕ ಸತ್ಯವಾಗಿ ಹೋಗಿರುವ ವಿಪರ್ಯಾಸವನ್ನು ನಮ್ಮ ಶುಷ್ಕ ಕಣ್ಣುಗಳು ನೋಡುತ್ತಿವೆ.

ಮತ್ತೊಮ್ಮೆ ಶೋಷಿತ ಜಗತ್ತು ವಿಸ್ಮೃತಿಯ ವಿಷದೊಳಕ್ಕೆ ಜಾರಿಸಲ್ಪಡುತ್ತಿದೆ……….. ಜಾರುವಿಕೆ ವೇಗವನ್ನು ತಡೆದು ನಿಲ್ಲಿಸಲು ಶಕ್ತಿ ಸಾಲದೆ ನೊಂದ ಕಾಲುಗಳು ಮತ್ತು ಮನಸ್ಸಿನೊಂದಿಗೆ ಚಳುವಳಿಗಳು ನಿಂತಂತಿದೆ.
ನನ್ನ ಪ್ರಕಾರ, ಅಂಬೇಡ್ಕರ್ ಪರಿಭಾವಿಸಿದ್ದು ಒಂದು ಭಾರತವನ್ನಲ್ಲ!! ಅವರ ದಾರ್ಶನಿಕ ಕಣ್ಣುಗಳ ಎದುರಿಗಿದ್ದದ್ದು ಎರಡು ಭಾರತಗಳು; ತಮ್ಮ ಹಕ್ಕುಗಳಿಗಾಗಿ ಎಚ್ಚರವಾಗಿದ್ದು ಎಲ್ಲ ಶೋಷಿತ, ದಮನಿತ ಸಮುದಾಯಗಳು ಸೇರಿ ಹೋರಾಡಿದ್ದೇ ಆದಲ್ಲಿ ಮೂಡಿಬರಬಹುದಾಗಿದ್ದ ಸಮಾನ ಭಾರತ ಮತ್ತು ಹಾಗಿಲ್ಲದೆ ಮತ್ತೆ ಮೋಸದ ಜಾಲದೊಳಕ್ಕೆ ಬಿದ್ದು ತಮ್ಮ ಐಕ್ಯತೆಯನ್ನು ಒಡೆದುಕೊಂಡು ಜನಸಾಮಾನ್ಯರು ದಿಕ್ಕುತಪ್ಪಿದ್ದೇ ಆದಲ್ಲಿ ಮೂಡಬಹುದಾಗಿದ್ದ ‘ಮಸಾಣ’ ಭಾರತ!! ಇಂದು ನಮ್ಮ ಪಯಣ ವೇಗವಾಗಿ ಸಾಗುತ್ತಿರುವುದು ಈ ಎರಡನೇ ಭಾರತದೆಡೆಗೆ………………..

ಅಂಬೇಡ್ಕರ್ ಅವರೇ ಈ ಅರಿವು ರಹಿತ ಸ್ಥಿತಿಯಿಂದ ಹೊರಬರಲು ಕೆಲವು ಹತಾರಗಳನ್ನೂ ನೀಡಿದ್ದಾರೆ. ಚಿಂತನೆಗಳಿಂದ ನಾವು ಪಡೆಯಬೇಲಾದ ಅನೇಕ ಸಂಗತಿಗಳಿದ್ದರೂ, ಬಹಳ ಮುಖ್ಯವಾಗಿ, ಸದಾ ಅರಿವು, ಐಕ್ಯತೆ ಮತ್ತು ಪ್ರಯತ್ನಶೀಲತೆಯನ್ನು ಉಳಿಸಿಕೊಂಡಿರಬೇಕೆಂಬ ಅವರ ಮೂಲಮಂತ್ರಗಳು; ಅವರ ಬದುಕು ಮತ್ತು ಆಚರಣೆಯಿಂದ ಕಲಿಯಬೇಕಾದ್ದು, ತನ್ನ ಮೂಲ ಆಶಯಕ್ಕಾಗಿ ಎಂದೂ ದಣಿವರಿಯದ ದುಡಿಮೆ, ನಂಬಿದ ತತ್ವಕ್ಕಾಗಿ ಭಾರೀ ಪ್ರಯೋಗಗಳಿಗಿಳಿಯುವ ದಿಟ್ಟತನ ಮತ್ತು ಆಶಾವಾದ.

ಇಂದು, ಈ ಕಾಲ ನಮ್ಮೆದುರು ದೀರ್ಘ ನಡಿಗೆಯ ಸವಾಲನ್ನು ಇರಿಸಿದೆ. ಸವಾಲನ್ನು ಸ್ವೀಕರಿಸಿ ಮುನ್ನಡೆಯಲು ಅಂಬೇಡ್ಕರ್ ಎಂಬ ಚೇತನದಿಂದ ಸ್ಪೂರ್ತಿ ಮತ್ತು ವಿಶ್ವಾಸವನ್ನು ಕಡ ಪಡೆದುಕೊಳ್ಳೋಣ; ಉತ್ತಮ ನಾಳೆಗಳನ್ನು ಕಟ್ಟಿಕೊಂಡು ಮರಳಿಸುವ ವಾಗ್ದಾನದೊಂದಿಗೆ!

ಆತಂಕದ ತೂಗುಯ್ಯಾಲೆಯಲ್ಲಿರುವ ಎಲ್ಲ ಜೀವಪರ ಮನಸ್ಸುಗಳಿಗೆ ಅಂಬೇಡ್ಕರ್ ದಿನಾಚರಣೆಯ ಆಶಾವಾದಿ ಶುಭಾಶಯಗಳು.

  • ಮಲ್ಲಿಗೆ ಸಿರಿಮನೆ

(ಸಾಮಾಜಿಕ ಹೋರಾಟಗಾರ್ತಿ, ಕರ್ನಾಟಕ ಜನಶಕ್ತಿಯ ಪ್ರಧಾನ ಕಾರ್ಯದರ್ಶಿ)


ಇದನ್ನೂ ಓದಿ:  ವಿಕಿಪೀಡಿಯಾದಲ್ಲಿ ಕನ್ನಡಿಗರು ಅತಿ ಹೆಚ್ಚು ಹುಡುಕಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ!

ನಾನಕ್ ಚಂದ್ ರತ್ತುರವರ ’ಬಾಬಾ ಸಾಹೇಬರ ಕೊನೆ ದಿನಗಳು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...