ತಮಿಳುನಾಡಿನ ಪುದುಕೋಟೈ ಜಿಲ್ಲೆಯ ಚಿನ್ನವೀರಮಂಗಳಂ ಎಂಬ ಕುಗ್ರಾಮ ಇದೀಗ ಭಾರತ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ವಿಲೇಜ್ ಕುಕಿಂಗ್ ಎಂಬ ಯೂಟ್ಯೂಬ್ ಚಾನಲ್ ಮೂಲಕ ತಮ್ಮ ಗ್ರಾಮದ ಹೆಸರನ್ನು ವಿಶ್ವದ ಮೂಲೆ ಮೂಲೆಗೂ ಪರಿಚಯಿಸುವಲ್ಲಿ ಅಲ್ಲಿನ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.
ಈ ಯೂಟ್ಯೂಬ್ ಚಾನೆಲ್ನ ಜನಪ್ರಿಯತೆ ಯಾವ ಮಟ್ಟಿಗೆ ಬೆಳೆದಿದೆ ಎಂದರೆ ಸ್ವತಃ ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ಈ ತಂಡದ ಸದಸ್ಯರನ್ನು ಭೇಟಿಯಾಗುತ್ತಾರೆ ಎಂದರೆ ಈ ಯೂಟ್ಯೂಬ್ ಸಾಧನೆ ಸಾಮಾನ್ಯದ್ದಲ್ಲ. ಅದೇ ರೀತಿ ರಾಹುಲ್ ಗಾಂಧಿಯಂತಹ ರಾಷ್ಟ್ರೀಯ ನಾಯಕರನ್ನು ತಮ್ಮ ಚಾನೆಲ್ ಕಡೆ ಬರುವಂತೆ ಮಾಡಿರುವ ಗ್ರಾಮಸ್ಥರ ಸಾಧನೆಯೂ ಸಣ್ಣದೇನಲ್ಲ. ಕರ್ನಾಟಕದಲ್ಲೂ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿರುವ ಈ ಯೂಟ್ಯೂಬ್ ಚಾನೆಲ್ ಕುರಿತು ನಿಮಗೆ ತಿಳಿಯದ ಹಲವು ರೋಚಕ ಮಾಹಿತಿ ಇಲ್ಲಿದೆ..!
ಇದು ಹಳ್ಳಿಯ ನಿವಾಸಿಯೊಬ್ಬರ ರೋಚಕ ಕಥೆ!
ಅವರ ಹೆಸರು ಸುಬ್ರಮಣಿಯಂ. ತೀರಾ ಹಿಂದುಳಿದ ಸಮುದಾಯದ ಯುವಕ. ಇವರ ತಂದೆ ತಾಯಿ ಭೂ ರಹಿತ ಕೃಷಿ ಕಾರ್ಮಿಕರು. ಇವರ ಸಮುದಾಯದಲ್ಲಿ ಮಾತ್ರವಲ್ಲ, ಅವರ ಗ್ರಾಮದಲ್ಲಿಯೇ ಏಕೈಕ ಪದವೀಧರ ಇವರೊಬ್ಬರೇ.

2009ರಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದ ಸುಬ್ರಮಣಿ ಎಂಕಾಂ ಮತ್ತು ಎಂಫಿಲ್ ಮುಗಿಸಿದರು. ಎಂಫಿಲ್ ಓದುವ ಸಮಯದಲ್ಲಿ ಕಾಲೇಜಿನ ಪ್ರಾಜೆಕ್ಟ್ ಕೆಲಸಕ್ಕಾಗಿ ತಮ್ಮ ಮನೆಯಲ್ಲಿ ಸಾಕಿದ್ದ ಕುರಿಗಳನ್ನು ಮಾರಿ 15,000ಕ್ಕೆ ಒಂದು ಕಂಪ್ಯೂಟರ್ ಖರೀದಿ ಮಾಡಿದ್ದರು. ಆ ಕಂಪ್ಯೂಟರ್ ಮೂಲಕ ತಮ್ಮ ಪ್ರಾಜೆಕ್ಟ್ ಕೆಲಸವನ್ನು ಮುಗಿಸಿ ಎಂಫಿಲ್ ಪದವಿಯನ್ನೂ ಪಡೆದಿದ್ದರು. ಆದರೆ, ಆ ಕಂಪ್ಯೂಟರ್ ಇವರ ಬದುಕನ್ನೇ ಬದಲಿಸಿತ್ತು!
ವಿದ್ಯಾಭ್ಯಾಸ ಮುಗಿಸಿದ್ದ ಸುಬ್ರಮಣಿ 2010ರಲ್ಲಿ ಒಂದು ಕಾಲೇಜಿಗೆ ಅತಿಥಿ ಉಪನ್ಯಾಸಕನಾಗಿ ಸೇರ್ಪಡೆಯಾಗುತ್ತಾರೆ. ಆದರೆ, ಅಲ್ಲಿದ್ದ ವಿದ್ಯಾರ್ಥಿಗಳು ಸಮಾಜದಿಂದ ಕೆಳಸ್ತರದಿಂದ ಬೆಳೆದುಬಂದಿದ್ದ ಇವರನ್ನು ಗೇಲಿ ಮಾಡಲು ಆರಂಭಿಸಿದ್ದರು. ಇದರಿಂದಾಗಿ ಮನನೊಂದಿದ್ದ ಸುಬ್ರಮಣಿ ಕೆಲಸ ಬಿಟ್ಟು ಮನೆ ಸೇರಿದ್ದರು.
ಅವರ ಬಳಿ ಮನೆಯಲ್ಲಿದ್ದ ಕಂಪ್ಯೂಟರ್ನಿಂದಲೇ ಸಂಪಾದನೆಗೆ ಪ್ರಯತ್ನಿಸಬೇಕು ಎಂದು ನಿರ್ಧರಿಸಿದ್ದ ಅವರು 2014ರ ವರೆಗೆ ಪ್ರತಿನಿತ್ಯ ಕಂಪ್ಯೂಟರ್ನಲ್ಲಿ ಏನೇನೋ ಹುಡುಕುತ್ತ ತಲೆಕೆಡಿಸಿಕೊಂಡಿದ್ದರು. ಮನೆಯಲ್ಲಿ ತಂದೆ ತಾಯಿ ಕೆಲಸಕ್ಕೆ ಹೋಗುವಂತೆ ಒತ್ತಾಯ ಮಾಡಿದ್ದರೂ ಅವರು ಅದ್ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ. ಕೊನೆಗೆ ತನ್ನ ಗ್ರಾಮದಲ್ಲಿ ಸಿಗುತ್ತಿದ್ದ 2ಜಿ ಇಂಟರ್ನೆಟ್ ಸಹಾಯದಲ್ಲೇ ವೆಬ್ಸೈಟ್ ಡಿಸೈನ್ ಮಾಡುವುದನ್ನು ಕಲಿತರು.
ಆ ವೆಬ್ಸೈಟ್ ಹಣ ಸಂಪಾದಿಸಲು ಆರಂಭಿಸಿತ್ತು. 2015ರಲ್ಲಿ ಅವರ ಮದುವೆಯ ಮುನ್ನಾ ದಿನ ಗೂಗಲ್ನಿಂದ ಮೊದಲ ಸಂಪಾದನೆಯಾಗಿ 10 ಸಾವಿರ ರೂ ಆತನ ಕೈ ಸೇರಿತ್ತು. ನೋಡನೋಡುತ್ತಿದ್ದಂತೆ ಅವರ ವೆಬ್ಸೈಟ್ ಕಾರ್ಪೊರೇಟ್ಗಳ ಕಣ್ಣು ಕುಕ್ಕುವಂತೆ ಮಾಡಿತ್ತು. 2015ರಲ್ಲೇ ಅವರಿಗೆ ಮುಂಬೈನಿಂದು ಒಂದು ಕಾರ್ಪೊರೇಟ್ ಕಂಪೆನಿಯೊಂದು ಕರೆ ಮಾಡಿ ಮುಂಬೈಗೆ ಬರುವಂತೆ ಏರ್ ಟಿಕೆಟ್ ನೀಡಿತ್ತು.
ಅಲ್ಲಿಗೆ ತೆರಳಿದ್ದ ಸುಬ್ರಮಣಿ ಅವರಿಗೆ ದೊಡ್ಡ ಶಾಕ್ ಒಂದು ಕಾದಿತ್ತು. ಮುಂಬೈಗೆ ಅವರನ್ನು ಕರೆಸಿಕೊಂಡಿದ್ದ ಕಂಪೆನಿ ಅವರ ವೆಬ್ಸೈಟ್ಅನ್ನು ತನಗೆ ಮಾರಾಟ ಮಾಡುವಂತೆ ಕೇಳಿತ್ತು. ಮಾರಾಟ ಮಾಡದಿದ್ದರೆ, ವೆಬ್ಸೈಟ್ ನಡೆಸದಂತೆ ತಡೆಯಲಾಗುವುದು ಎಂದು ಬೆದರಿಸಿದ್ದ ಆ ಕಾರ್ಪೊರೇಟ್ ಸಂಸ್ಥೆಯ ಮಂದಿ ಕೇವಲ 2 ಲಕ್ಷ ಹಣ ನೀಡಿ ಮತ್ತೆ ಬೇರೆ ಯಾವುದೇ ವೆಬ್ಸೈಟ್ ಮಾಡದಂತೆ ಅವರಿಂದ ಒಪ್ಪಂದ ಮಾಡಿಸಿಕೊಂಡಿತ್ತು. ಆನಂತರ ಹುಟ್ಟಿದ್ದೆ ಈ ವಿಲೇಜ್ ಕುಕಿಂಗ್ ಚಾನೆಲ್.
ವಿಲೇಜ್ ಕುಕಿಂಗ್ ಚಾನೆಲ್
ತನ್ನ ವೆಬ್ಸೈಟ್ಅನ್ನು ಕಾರ್ಪೊರೇಟ್ ಕಂಪೆನಿಗೆ ಮಾರಿ ಮುಂಬೈನಿಂದ ಹಿಂದಿರುಗಿದ್ದ ಸುಬ್ರಮಣಿಗೆ, ಮುಂದೇನು ಎಂಬ ದೊಡ್ಡ ಪ್ರಶ್ನೆ ಕಾಡಿತ್ತು. ಆಗಲೇ ಅವರು ಕಂಪ್ಯೂಟರ್ನಲ್ಲೇ ಮತ್ತೆ ಏನೇನೋ ಹುಡುಕಲು ಆರಂಭಿಸಿದ್ದು ಮತ್ತು ಆಗಲೇ ಅವರಿಗೆ ಹೊಳೆದಿದ್ದೆ “ನಾವೇಕೆ ಯೂಟ್ಯೂಬ್ ಚಾನೆಲ್ ಮಾಡಬಾರದು?” ಎಂಬ ಯೋಜನೆ.
ಯೂಟ್ಯೂಬ್ನಲ್ಲಿ ಅಡುಗೆ ಕಾರ್ಯಕ್ರಮಗಳಿಗೆ ತುಂಬಾ ಬೇಡಿಕೆ ಇದೆ ಎಂಬುದನ್ನು ಕಂಡುಕೊಂಡಿದ್ದ ಸುಬ್ರಮಣಿ ಈ ಯೋಚನೆಯನ್ನು ಮೊದಲು ತನ್ನ ತಾತ ಪೆರಿಯತಂಬಿ ಅವರ ಬಳಿ ತಿಳಿಸಿದ್ದರು. ಮದುವೆ ಕ್ಯಾಟರಿಂಗ್ ನಡೆಸುತ್ತಿದ್ದ ಪೆರಿಯತಂಬಿ ಯೂಟ್ಯೂಬ್ ಚಾನೆಲ್ನಲ್ಲಿ ಅಡುಗೆ ಮಾಡಲು ಒಪ್ಪಿಕೊಂಡು ಸಹಕರಿಸಿದ್ದು ದೊಡ್ಡ ನಡೆ. ಮುಂದಿನ ಹಂತಕ್ಕೆ ತನ್ನ ಸಹೋದರ ಸಂಬಂಧಿಗಳಾದ ವಿ. ಮುರುಗೇಶನ್, ವಿ. ಅಯ್ಯನಾರ್, ಜಿ. ತಮಿಳ್ ಸೆಲ್ವನ್, ಟಿ. ಮುತ್ತು ಮಾನಿಕ್ಕಂ ಜೊತೆ ಸೇರಿ ಒಂದು ತಂಡವನ್ನು ಕಟ್ಟಿದರು.
ಮೊದಮೊದಲು ಅಡುಗೆ ಮಾಡುವ ವಿಡಿಯೋ ಮಾಡಿ 2018 ರಲ್ಲಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದರು. ಆದರೆ, ನೂರಾರು ಕುಕಿಂಗ್ ಚಾನೆಲ್ಗಳಿರುವ ಯೂಟ್ಯೂಬ್ನಲ್ಲಿ ಇವರ ಚಾನೆಲ್ ಮೊದಮೊದಲು ಸಾವಿರ ವೀಕ್ಷಕರನ್ನೂ ಸಹ ದಾಟಿರಲಿಲ್ಲ. ಆಗಲೇ ಇವರು “ಎಲ್ಲರಂತೆ ನಾವು ಅಡುಗೆ ಮಾಡಿದರೆ ವೀಕ್ಷಕರನ್ನು ತಲುಪುವುದು ಕಷ್ಟ. ಹೀಗಾಗಿ ನಾವು ಸಾಮಾನ್ಯವಾಗಿ ಹಳ್ಳಿಗಾಡಿನಲ್ಲಿ ಹೇಗೆ ಅಡುಗೆ ಮಾಡುತ್ತೇವೋ ಹಾಗೆ ವಿಡಿಯೋ ಮಾಡುವ” ಎಂಬ ನಿರ್ಧಾರಕ್ಕೆ ಬಂದಿದ್ದರು.
ಅಡುಗೆಗೆ ಹಾಕುವ ಪ್ರತಿಯೊಂದು ಪದಾರ್ಥವನ್ನು ಕೂಗಿಕೂಗಿ ಹೇಳಲು ಆರಂಭಿಸಿದರು. ವಿಡಿಯೋ ರೆಕಾರ್ಡಿಂಗ್ನಲ್ಲಿ ಸೃಜನಶೀಲತೆಯನ್ನು ತೋರಿಸಲಾರಂಭಿಸಿದ್ದರು. ಇದು ಸಾಮಾನ್ಯವಾಗಿ ವೀಕ್ಷಕರನ್ನು ಸೆಳೆಯಲು ಆರಂಭಿಸಿತ್ತು. ಅಲ್ಲಿಂದ ಈವರೆಗೆ ಸುಬ್ರಮಣಿ ಹಿಂದಿರುಗಿ ನೋಡಿದ್ದೇ ಇಲ್ಲ.
ಅಂದುಕೊಂಡಷ್ಟು ಸುಲಭವಾಗಿರಲಿಲ್ಲ ಯೂಟ್ಯೂಬ್
ಯೂಟ್ಯೂಬ್ ಚಾನೆಲ್ ಆರಂಭಿಸಬೇಕು ಎಂದು ನಿರ್ಧರಿಸಿಯಾಗಿತ್ತು. ಆದರೆ, ಈ ಕೆಲಸ ಅಂದುಕೊಂಡಷ್ಟು ಸುಲಭದ್ದಾಗಿರಲಿಲ್ಲ. ಏಕೆಂದರೆ ಯೂಟ್ಯೂಬ್ ನಡೆಸಬೇಕು ಎಂದರೆ ಕ್ಯಾಮೆರಾ, ಎಡಿಟಿಂಗ್, ವಾಯ್ಸ್ ಮಿಕ್ಸಿಂಗ್ ಹೀಗೆ ಎಲ್ಲಾ ಕೆಲಸಗಳೂ ತಿಳಿದಿರಬೇಕು. ಆದರೆ, ಸುಬ್ರಮಣಿಗೆ ಇದ್ಯಾವುದೂ ಗೊತ್ತಿರಲಿಲ್ಲ. ಆದರೆ, ಅವರು ಸುಮ್ಮನೆ ಕೂರಲಿಲ್ಲ. ಬದಲಿಗೆ ಯೂಟ್ಯೂಬ್ ಮೂಲಕವೇ ಕ್ಯಾಮೆರಾ ಹ್ಯಾಂಡ್ಲಿಂಗ್ನಿಂದ ಹಿಡಿದು ವಿಡಿಯೋ ಎಡಿಟಿಂಗ್ವರೆಗೆ ಎಲ್ಲವನ್ನೂ ಕಲಿಯಲು ಆರಂಭಿಸಿದರು. ಕೆಲವೇ ದಿನಗಳಲ್ಲಿ ಕಲಿತು ಮುಗಿಸಿದರು.
ಆದರೆ, ಇವರ ಸವಾಲು ಇಷ್ಟಕ್ಕೆ ನಿಲ್ಲಲಿಲ್ಲ. ಏಕೆಂದರೆ ಇವರ ಗ್ರಾಮದಲ್ಲಿ ಈಗಲೂ 2ಜಿ ಸ್ಪೀಡ್ ನೆಟ್ವರ್ಕ್ ಸಿಕ್ಕರೆ ಅದೇ ಹೆಚ್ಚು. ಇನ್ನೂ ಬಾಡ್ಬ್ಯಾಂಡ್ ಕನೆಕ್ಷನ್ ದೂರದ ಮಾತು. ಹೀಗಾಗಿ ವಿಡಿಯೋ ಎಡಿಟಿಂಗ್ ಮಾಡಿದರೂ ಸಹ ಅದನ್ನು ರೆಂಡರಿಂಗ್ ಮಾಡಿ ಅಪ್ಲೋಡ್ ಮಾಡಲು ಕನಿಷ್ಟ 5 ರಿಂದ 6 ಗಂಟೆಯಾಗುತ್ತದೆ. ಆದರೂ ಈ ತಂಡ ತಾಳ್ಮೆಯಿಂದ ಯೂಟ್ಯೂಬ್ ನಡೆಸುತ್ತಿರುವುದು ಸಾಧನೆಯೇ ಸರಿ.

ಒಂದು ಕೋಟಿ ಸಬ್ಸ್ಕ್ರೈಬರ್ಸ್
2019ರವರೆಗೂ ಇವರ ಯೂಟ್ಯೂಬ್ ಚಾನೆಲ್ ಹತ್ತರಲ್ಲಿ ಮತ್ತೊಂದು ಎಂಬಂತೆ ಇತ್ತು. ಆದರೆ. ಆನಂತರ ಇವರ ಚಾನೆಲ್ ವೀಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು ಈಗ ಒಂದು ಕೋಟಿ ಚಂದಾದಾರರನ್ನು ಹೊಂದಿದೆ. ಇವರ ಜಾನೆಲ್ ಜನಪ್ರಿಯತೆ ಯಾವ ಮಟ್ಟಕ್ಕೆ ಇದೆ ಎಂದರೆ ಇವರ ಪ್ರತಿ ವಿಡಿಯೋಗಳು ಸಹ ಸರಾಸರಿಯಲ್ಲಿ 50 ರಿಂದ 60 ಲಕ್ಷ ಬಾರಿ ವೀಕ್ಷಿಸುತ್ತಾರೆ. ಕೆಲವು ವಿಡಿಯೋಗಳ ವೀಕ್ಷಣೆಯ ಸಂಖ್ಯೆ ಕೋಟಿಯನ್ನೂ ತಲುಪಿದೆ.
ಈ ತಂಡ ವಾರಕ್ಕೆ ಎರಡರಿಂದ ಮೂರು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತದೆ. ತಂಡದ ನಿರ್ವಾಹಕ ಸುಬ್ರಮಣಿ ನೀಡುವ ಮಾಹಿತಿಯಂತೆ ಒಂದು ತಿಂಗಳಿಗೆ ಇವರು ಯೂಟ್ಯೂಬ್ ಮೂಲಕವೇ 7 ರಿಂದ 8 ಲಕ್ಷ ಹಣ ಗಳಿಸುತ್ತಿದ್ದಾರೆ. ಈ ಪೈಕಿ 1 ರಿಂದ 2 ಲಕ್ಷ ರೂ ಯೂಟ್ಯೂಬ್ ವಿಡಿಯೋ ಮಾಡಲು ಖರ್ಚಾದರೆ ಉಳಿದ ಹಣವನ್ನು ತಂಡದ ಸದಸ್ಯರು ಹಂಚಿಕೊಳ್ಳುತ್ತಾರೆ.
ಇವರ ಸಹೋದರ ಸಂಬಂಧಿ ವಿ. ಮುರುಗೇಶನ್ ಕೆಲಸಕ್ಕಾಗಿ ದುಬೈಗೆ ಹೋಗಲು ಎಲ್ಲಾ ಸಿದ್ಧತೆ ನಡೆಸಿದ್ದರು. ಆದರೆ, ಇದೀಗ ಆತ ದುಬೈ ಕನಸನ್ನು ಪಕ್ಕಕ್ಕಿಟ್ಟು ಈ ಯೂಟ್ಯೂಬ್ನಲ್ಲಿ ಕೆಲಸ ಮಾಡುವ ಮೂಲಕವೇ ಕೈ ತುಂಬಾ ಸಂಪಾದಿಸುತ್ತಿದ್ದಾರೆ.
ಸಮಾಜ ಸೇವೆಗೆ ಮುಂದಾದ ಯುವಕರು
ಪುದುಕೋಟೈ ಜಿಲ್ಲೆಯ ವೀರಮಂಗಳಂ ಭಾಗದಲ್ಲಿ ಅನಾಥಾಶ್ರಮವೊಂದಿದೆ. ಹೀಗಾಗಿ ಈ ಯುವಕರು ತಮ್ಮ ಅಡುಗೆ ಚಾನಲ್ನಲ್ಲಿ ಏನೇ ಅಡುಗೆ ಮಾಡಿದರೂ ಸಹ ಇಲ್ಲಿನ ವಯಸ್ಸಾದ ಅನಾಥರಿಗೂ ಸೇರಿಯೇ ಮಾಡುತ್ತಾರೆ. ಅಲ್ಲದೆ, ಆ ಆಹಾರವನ್ನು ತಾವೇ ಬಡಿಸಿ ಸಂತಸಪಡುತ್ತಾರೆ.
ಇತ್ತೀಚೆಗೆ ಯೂಟ್ಯೂಬ್ನಲ್ಲಿ ತಾವು ಗಳಿಸಿದ ಹಣದಲ್ಲಿ ಈ ಅನಾಥಾಶ್ರಮಕ್ಕೆ ಅಗತ್ಯವಾದ ಎರಡು ಹೆಚ್ಚುವರಿ ಕಟ್ಟಡವನ್ನು ಇವರೇ ನಿರ್ಮಿಸಿಕೊಟ್ಟಿದ್ದಾರೆ. ಇತ್ತೀಚೆಗೆ ರಾಜ್ಯ ಕೊರೊನಾ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದರು. ಯುವಕರ ಈ ನಡೆ ಸಮಾಜಮುಖಿಯಾಗಿದ್ದು, ಇದೇ ಕಾರಣಕ್ಕೆ ಇವರ ಚಾನೆಲ್ ಬಗ್ಗೆ ತಮಿಳುನಾಡಿನ ಜನರೂ ಸಹ ಹೆಚ್ಚು ಒಲವು ಹೊಂದಿದ್ದಾರೆ ಎನ್ನಲಾಗುತ್ತಿದೆ.

ಮಾಂಸಾಹಾರಕ್ಕೆ ಮೊದಲ ಆದ್ಯತೆ
ತಮಿಳುನಾಡಿನ ಮಟ್ಟಿಗೆ ಹಳ್ಳಿ ಊಟ ಅಂದರೆ ಮಾಂಸಾಹಾರಕ್ಕೆ ಮೊದಲ ಆದ್ಯತೆ. ತಮಿಳಿಗರ ಪ್ರಸಿದ್ಧ ಖಾದ್ಯಗಳಲ್ಲಿ ಹೆಚ್ಚು ಇರುವುದು ಮಾಂಸಾಹಾರದಲ್ಲಿಯೇ. ತಮಿಳುನಾಡಿನ ಚೆಟ್ಟಿನಾಡು ಶೈಲಿಯ ಮಾಂಸದ ಅಡುಗೆಗಳಿಗೆ ಇಡೀ ವಿಶ್ವದಾದ್ಯಂತ ಇಂದು ದೊಡ್ಡ ಮಾರುಕಟ್ಟೆ ಇದೆ. ತಲಪಾಕಟ್ಟಿ ಬಿರಿಯಾನಿಗೆ ಬೆಂಗಳೂರಿನಲ್ಲೂ ಬಹು ಬೇಡಿಕೆ ಇದೆ ಎಂದರೆ ತಪ್ಪಾಗಲಾರದು. ಈ ವಿಲೇಜ್ ಕುಕ್ಕಿಂಗಿ ಚಾನೆಲ್ನವರು ಹೆಚ್ಚು ಮಾಡುವ ಅಡುಗೆಯೂ ಸಹ ಇದೇ ಚೆಟ್ಟಿನಾಡು ಶೈಲಿಯ ಅಡುಗೆ.
ಕೋಳಿ, ಕುರಿ, ಮೀನು, ಏಡಿ, ಗೀಜಗದ ಮೊಟ್ಟೆ, ಇರುವೆ ಹೀಗೆ ಎಲ್ಲಾ ವಿವಿಧ ಮಾಂಸಾಹಾರ ಖಾದ್ಯಗಳನ್ನು ಇವರು ವಿಧವಿಧವಾಗಿ ಹಳ್ಳಿ ಸೊಗಡಿನಲ್ಲಿ ಅಡುಗೆ ಮಾಡುವುದರಿಂದಲೇ ಪ್ರಸಿದ್ಧಿ ಪಡೆದಿದ್ದಾರೆ. ಕೆಲವೊಮ್ಮೆ ಇವರು ಸುವರ್ಣಗೆಡ್ಡೆ, ಹೂ ಕೋಸು, ಅಣಬೆಯನ್ನು ಬಳಸಿ ಸಸ್ಯಾಹಾರ ಅಡುಗೆಗಳನ್ನೂ ಮಾಡಿದ್ದುಂಟು. ಆದರೆ, ಮಾಂಸಾಹಾರಕ್ಕೆ ಸಿಕ್ಕಷ್ಟು ವೀಕ್ಷಕರು ಸಸ್ಯಾಹಾರಕ್ಕೆ ಸಿಕ್ಕಿಲ್ಲ ಎಂಬುದೂ ದಿಟ.
ರಾಹುಲ್ ಗಾಂಧಿ ಭೇಟಿ
ಜನವರಿಯಲ್ಲಿ ಪೊಂಗಲ್ ಹಬ್ಬದ ತಮಿಳುನಾಡಿನ ಸಾಂಪ್ರದಾಯಿಕ ಜಲ್ಲಿಕಟ್ಟು ಆಟವನ್ನು ವೀಕ್ಷಿಸುವ ಸಲುವಾಗಿ ರಾಹುಲ್ ಗಾಂಧಿ ಜನವರಿ 14ಕ್ಕೆ ತಮಿಳುನಾಡಿಗೆ ತೆರಳಿದ್ದರು. ಈ ವೇಳೆ ವಿಲೇಜ್ ಕುಕಿಂಗ್ ಚಾನೆಲ್ ಬಗ್ಗೆ ತಮ್ಮ ಪಕ್ಷದ ಸ್ಥಳೀಯ ಮುಖಂಡರ ಬಳಿ ಸ್ವತಃ ರಾಹುಲ್ ಗಾಂಧಿ ಅವರೇ ವಿಚಾರಿಸಿ, ಹಳ್ಳಿಗರ ತಂಡವನ್ನು ಭೇಟಿ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಕೊನೆಗೆ ಹಳ್ಳಿಯಲ್ಲಿ ಅಡುಗೆ ಮಾಡುವ ತಂಡವನ್ನು ಭೇಟಿ ಮಾಡಿ ಅವರ ಜೊತೆ ಅಣಬೆ ಬಿರಿಯಾನಿ ಅಡುಗೆಯನ್ನೂ ಮಾಡಿ ಸವಿದಿರುವ ರಾಹುಲ್ ಗಾಂಧಿ, ಆ ತಂಡಕ್ಕೆ ಅಮೆರಿಕ ತೆರಳಲು ಸಹಾಯ ಮಾಡುವ ಭರವಸೆ ನೀಡಿದ್ದಾರೆ. ರಾಹುಲ್ ಗಾಂಧಿ ತಮಿಳುನಾಡಿನ ವೀರಮಂಗಳಂ ಹಳ್ಳಿಯ ಈ ಉತ್ಸಾಹಿ ಯುವಕರ ತಂಡವನ್ನು ಭೇಟಿ ಮಾಡಿರುವ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮಿಳುನಾಡು ರಾಜಕೀಯದ ಮಟ್ಟಿಗೆ ಚರ್ಚೆಯ ವಿಚಾರವಾಗಿ ಬದಲಾಗಿದೆ.
ಈ ವಿಲೇಜ್ ಕುಕಿಂಗ್ ಚಾನೆಲ್ನ ಹತ್ತಾರು ವಿಡಿಯೋಗಳ ಪೈಕಿ ರಾಹುಲ್ ಗಾಂಧಿ ಭಾಗವಹಿಸಿದ ವಿಡಿಯೋ ಕೂಡ ಬೃಹತ್ ಸಂಖ್ಯೆಯ ವೀಕ್ಷಕರನ್ನು ಸೆಳೆದಿದೆ. ಅಂದಹಾಗೆ ರಾಹುಲ್ ಗಾಂಧಿ ಭಾಗವಹಿಸಿರುವ ವಿಡಿಯೋವನ್ನು 2.5 ಕೋಟಿ ಬಾರಿಗೆ ವೀಕ್ಷಿಸಲಾಗಿದೆ.
ಇದನ್ನೂ ಓದಿ: ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್ವಾದಿ ನಿರ್ದೇಶಕ ಪ.ರಂಜಿತ್



???