ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ತನಗೆ ಟಿಕೆಟ್ ನಿರಾಕರಿಸಿದ ಕಾರಣಕ್ಕೆ ಈ ವಾರದ ಆರಂಭದಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ್ದ ಅಸ್ಸಾಂ ಶಾಸಕ ಶಿಲಾದಿತ್ಯ ದೇವ್ ಇದೀಗ ಮತ್ತೆ ಪಕ್ಷಕ್ಕೆ ಮರಳಿದ್ದಾರೆ. ಬಿಜೆಪಿಯು ಅವರು ಪಕ್ಷದ ಪ್ರಮುಖ ಸದಸ್ಯರಾಗಿ ಮುಂದುವರೆಯುತ್ತಾರೆ ಎಂದು ಹೇಳಿದೆ.
ಅಸ್ಸಾಂನ ಸಚಿವ, ಈಶಾನ್ಯ ಡೆಮಾಕ್ರಟಿಕ್ ಅಲೈಯನ್ಸ್ (NEDA) ಕನ್ವೀನರ್ ಹಿಮಂತ ಬಿಸ್ವಾ ಶರ್ಮಾ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಿಲೀಪ್ ಸೈಕಿಯಾ ಶುಕ್ರವಾರ ಶಿಲಾದಿತ್ಯ ದೇವ್ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿದ್ದಾರೆ. ತಾನು ಸ್ವತಂತ್ರರಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದ ಶಿಲಾದಿತ್ಯ ದೇವ್ ಇದೀಗ ಮುಂಬರುವ ಚುನಾವಣೆಯಲ್ಲಿ ಯಾವುದೆ ಕ್ಷೇತ್ರದಲ್ಲೂ ಸ್ಪರ್ಧಿಸದೆ ಇರಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ವಿಧಾನಸಭೆಯಲ್ಲೇ ಸ್ಯಾನಿಟೈಸರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಿಜೆಪಿ ಶಾಸಕ!
“ನಾನು ಕಾಂಗ್ರೆಸ್ ಗೆಲ್ಲಲು ಅನುಮತಿಸುವುದಿಲ್ಲ ಏಕೆಂದರೆ ಇದು ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರೊಂದಿಗೆ ಮೈತ್ರಿ ಮಾಡಿದ್ದು, ಅವರನ್ನು ಬೆಳೆಸುತ್ತದೆ. ಹಾಗಾಗಿ ನನ್ನ ಪಕ್ಷದೊಂದಿಗೆ ಇರಲು ನಿರ್ಧರಿಸಿದ್ದೇನೆ” ಎಂದು ಶಿಲಾದಿತ್ಯ ದೇವ್ ಹೇಳಿದ್ದಾರೆ.
ಅಸ್ಸಾಂನಲ್ಲಿ ಬಿಜೆಪಿಯು 12 ಶಾಸಕರಿಗೆ ಈ ಬಾರಿ ಟಿಕೆಟ್ ನಿರಾಕರಿಸಿದ್ದು, ಈ ಕ್ಷೇತ್ರಗಳಿಗೆ 12 ಹೊಸ ಮುಖಗಳನ್ನು ಹೆಸರಿಸಿದೆ. “ಶಿಲಾದಿತ್ಯ ಅವರಿಗೆ ಪಕ್ಷದಲ್ಲಿ ಮತ್ತು ಹೊಸ ಸರ್ಕಾರದಲ್ಲಿ ಸೂಕ್ತವಾದ ಅವಕಾಶ ಕಲ್ಪಿಸಲಾಗುವುದು” ಎಂದು ದಿಲೀಪ್ ಸೈಕಿಯಾ ಹೇಳಿದ್ದಾರೆ.
ಅಸ್ಸಾಂನಲ್ಲಿ ಚುನಾವಣೆ ಮಾರ್ಚ್ 27 ರಿಂದ ಪ್ರಾರಂಭವಾಗಲಿದೆ. ಮೇ 2 ರಂದು ಫಲಿತಾಂಶ ಹೊರಬರಲಿದೆ.
ಇದನ್ನೂ ಓದಿ: ಖಾಸಗೀಕರಣ-ಕಾರ್ಪೊರೇಟೀಕರಣ ವಿರೋಧಿ ದಿನ: ಮಾ.15 ರಂದು ದೇಶದಾದ್ಯಂತ ಪ್ರತಿಭಟನೆ