Homeಕಥೆಕೆಂಪು ಹಳದಿ ಟಿ-ಶರ್ಟ್ ಮತ್ತು ಟಿಷ್ಯೂ ಪೇಪರ್; ರಾಜಶೇಖರ್ ಅಕ್ಕಿ ಬರೆದ ಕಥೆ

ಕೆಂಪು ಹಳದಿ ಟಿ-ಶರ್ಟ್ ಮತ್ತು ಟಿಷ್ಯೂ ಪೇಪರ್; ರಾಜಶೇಖರ್ ಅಕ್ಕಿ ಬರೆದ ಕಥೆ

- Advertisement -
- Advertisement -

ಇವನ್ಯಾಕೆ ಇಷ್ಟು ನಗ್ತಿದಾನೆ ಎಂದು ಯೋಚಿಸಿದಳು ಆಕೆ. ಉತ್ತರ ಕಂಡುಹಿಡಿಯುವುದು ಅಷ್ಟು ಕಷ್ಟವಾಗಲಿಲ್ಲ. ಇಂತಹ ಸಂದರ್ಭಗಳಲ್ಲಿ ಮುಗುಳ್ನಗುವುದು, ಕೆಟ್ಟ ಕೆಟ್ಟ ಜೋಕ್‌ಗಳಿಗೂ ದೊಡ್ಡದಾಗಿ ನಗುವುದು ಅವನಿಗೆ ರೂಢಿಯಾಗಿತ್ತು. ಅದು ಅವನ ಟ್ರೇನಿಂಗ್. ಆದರೆ ಆ ತರಬೇತಿಯ ಬಗ್ಗೆ ಅವನಿಗೆ ಅರಿವಿದೆಯೋ ಅಥವಾ ತನಗೆ ಗೊತ್ತಿಲ್ಲದೇ ಈ ರೀತಿ ತರಬೇತಿಗೊಂಡಿದ್ದಾನೋ ಎಂಬ ಪ್ರಶ್ನೆಗೆ ಉತ್ತರ ಆಗ ಸಿಗಲಿಲ್ಲ. ಅಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವ ಸಮಯವೂ ಅದಾಗಿರಲಿಲ್ಲ.

ಅದೊಂದು ಒಳ್ಳೇ ಕಲ್ಯಾಣಮಂಟಪ, ಸುಮಾರು ಒಂದೂವರೆ ಲಕ್ಷ ಬಾಡಿಗೆ. ಗಂಡಿನವರು ಮತ್ತು ಹೆಣ್ಣಿನವರಿಬ್ಬರೂ ಸೇರಿ ಮದುವೆಯ ಖರ್ಚು ನಿಭಾಯಿಸುತ್ತಿದ್ದರಿಂದ ಅಷ್ಟಾಗಿ ಹೊರೆಯಾಗಿರಲಿಲ್ಲ. ಜನಾನೋ ಜನ; ಇಷ್ಟೆಲ್ಲ ಜನಕ್ಕೆ ಹೇಗೆ ಬರಕ್ಕೆ ಸಾಧ್ಯವಾಗುತ್ತೆ, ಇವರ್‍ಯಾಕೆ ಇಷ್ಟು ಖುಷಿಯಲ್ಲಿದ್ದಾರೆ, ಎಲ್ಲರೂ ಹೈ ಸ್ಪಿರಿಟ್‌ನಲ್ಲಿ, ಎಲ್ಲರೂ ಕೆಟ್ಟ ಕೆಟ್ಟ ಹಳೆ ಜೋಕುಗಳನ್ನೇ ಹೊಡೆಯುವರು, ಅವುಗಳಿಗೆ ಸಿಗುತ್ತಿದ್ದ ನಗುವೂ ಆ ಜೋಕುಗಳಿಗೆ ತಕ್ಕಂತೆ. ಗಂಡಿನ ಕಡೆಯವರೆಲ್ಲರೂ ಒಂದೆರಡು ನಿಮಿಷ ಅವಳ ಕಡೆ ದಿಟ್ಟಿಸಿ ನೋಡುವರು. ಇರಲಿ, ನನ್ನನ್ನು ಚೆಕ್ ಮಾಡುತ್ತಿದ್ದಾರೆ, ಇಂತಹ ಒಳ್ಳೆ ಗಂಡಿಗೆ ತಕ್ಕ ಹೆಂಡತಿಯೋ ಅಲ್ಲವೋ ಎಂಬುದನ್ನು ಅಳೆಯುತ್ತಿದ್ದಾರೆ, ನೋಡಲಿ ಬಿಡು ಎಂದಳು.

ಅದೇನೂ ಅಂತಹ ಬೇಸಿಗೆಯ ದಿನವಲ್ಲ, ಆದರೂ ಅಷ್ಟು ಜನ ಸೇರಿದ್ದರಿಂದ ವಿಪರೀತ ಸೆಕೆ. ತನ್ನ ಗಂಡನಾಗಲಿರುವ ಅಥವಾ ಈಗಷ್ಟೇ ಗಂಡನಾದ ವ್ಯಕ್ತಿಯನ್ನು ನೋಡಲೇ ಅಥವಾ ಬಣ್ಣಬಣ್ಣದ ಬಟ್ಟೆಗಳನ್ನು ಹಾಕಿಕೊಂಡ ಜನರನ್ನು ನೋಡಬೇಕೆ ಎನ್ನುವ ತೊಳಲಾಟದಲ್ಲಿದ್ದಾಗ ಅವನು ಮತ್ಯಾರನ್ನೋ ಪರಿಚಯಿಸುತ್ತಿದ್ದ. ಆಗ ಅವಳೂ ಅಷ್ಟೇ ಯಶಸ್ವಿಯಾಗಿ ಮುಗುಳ್ನಕ್ಕು, ಆಸಕ್ತಿ ತೋರಿಸಿ, ಅವರ ತೊಟ್ಟ ಬಟ್ಟೆ ಗಮನಿಸುತ್ತ ಅವರ್‍ಯಾವಾಗ ಮುಂದಕ್ಕೆ ಹೋಗುತ್ತಾರೋ ಎಂದು ಕಾಯುತ್ತಿದ್ದಳು. ಅವಳೆಷ್ಟೇ ಪ್ರಯತ್ನಪಟ್ಟರೂ ಮದುವೆಗೆ ಬಂದಿದ್ದ ಜನರ ಬಟ್ಟೆಗಳನ್ನು ಗಮನಿಸಿದೇ ಇರಲು ಆಗುತ್ತಿದ್ದಿಲ್ಲ ಆಕೆಗೆ.

ಯಾಕೆ ಎಲ್ಲರೂ ಇಷ್ಟೊಂದು ಕೆಟ್ಟ ಡ್ರೆಸ್ ಸೆನ್ಸ್ ಹೊಂದಿದ್ದಾರೆ ಎಂಬ ವಿಚಾರ ಬಂದಕೂಡಲೇ ತಾನು ಕ್ಲಾಸಿಸ್ಟ್ ಆಗುತ್ತಿದ್ದೇನೆ, ಹೀಗೆಲ್ಲ ಜನರನ್ನು ಅಳೆಯಬಾರದು ಎಂದುಕೊಳ್ಳುತ್ತಿದ್ದಳು. ಆದರೆ ಕೆಂಪು ಹಳದಿ ಬಣ್ಣದ ಟಿ-ಶರ್ಟ್ ಹಾಕಿ ಜೀನ್ಸಿನಲ್ಲಿ ಸಿಗಿಸಿ ಎದುರಿಗೆ ಬಂದು ಪರಿಚಯಿಸಿಕೊಂಡಾಗ ಆ ಪುರುಷನ ಜನ್ಮಜಾಲಾಡದೇ ಇರಲು ಸಾಧ್ಯವಾಗಲಿಲ್ಲ. ಎಲ್ಲೆಲ್ಲೋ ಹೋಗಿ ಬಂದಿದ್ದೀಯಾ, ಎಷ್ಟೆಲ್ಲ ದುಡ್ಡು ಗಳಿಸಿದ್ದೀಯಾ, ಸ್ವಲ್ಪವಾದರೂ ಜಗತ್ತು ನೋಡಬಹುದಿತ್ತಲ್ಲ, ಕಣ್ಣು ತೆರೆಯಬಹುದಿತ್ತಲ್ಲ, ಇಲ್ಲ ಅವನಿಗೆ ಅವಶ್ಯಕತೆಯ ಬೀಳಲಿಲ್ಲ, ಯಾರೂ ಕಪಾಳಕ್ಕೂ ಕೊಡಲಿಲ್ಲ, ಮತ್ಯಾಕೆ ಬಿಡ್ತಾನೆ ಈ ಟಿ-ಶರ್ಟನ್ನು. ಅಷ್ಟರಲ್ಲಿ ಅವಳ ಅಮ್ಮ ಬಂದು ಟಿಷ್ಯೂ ಪೇಪರ್ ಕೊಟ್ಟು ಮುಖ ಒರೆಸಿಕೊಳ್ಳುವಂತೆ ಹೇಳಿದಳು, ಹೌದು ಮುಖವೆಲ್ಲ ಬೆವರಾಗಿತ್ತು; ಒರೆಸಿಕೊಂಡಳು. ಗಂಡ ನೋಡಿ ಮುಗುಳ್ನಕ್ಕ. ಅವನ್ಯಾಕೆ ನಕ್ಕ ಎಂದು ಕೇಳಲಿಲ್ಲ, ತನ್ನಲ್ಲಿ ಆ ಪ್ರಶ್ನೆ ಮೂಡಿದ್ದನ್ನೂ ತೋರಿಸಿಕೊಳ್ಳದೆ ಅವಳು ಮುಗಳ್ನಕ್ಕಳು.

ಜನ ಬಂದು ತಮ್ಮ ಹಳದಿ ಹಲ್ಲುಗಳನ್ನು ತೋರಿಸುವುದರಿಂದ ಅವಳು ಅಷ್ಟೇನು ವಿಚಲಿತಲಾಗದಿದ್ದಿಲ್ಲ. ಅವಳಿಗೆ ಭಯ ಹುಟ್ಟಿಸಿದ್ದು ಅವನ ನಗುಮುಖ. ಅವನು ತನ್ನ ರೂಢಿಗೆ ಅನುಗುಣವಾಗಿ ನಗುತ್ತಿದ್ದಾನೋ ಅಥವಾ ಅವನು ನಿಜವಾಗಿಯೂ ಖುಷಿಯಾಗಿದ್ದಾನೋ ಎಂಬ ವಿಚಾರ ಅವಳಲ್ಲಿ ಆತಂಕ ಹುಟ್ಟಿಸಿತು. ಅವನು ನಿಜವಾಗಿಯೂ ಸಂತಸದಲ್ಲಿದ್ದರೆ?

ಮತ್ತೊಮ್ಮೆ ಅವನೆಡೆ ನೋಡಿದಳು. ಅವನು ಮತ್ತೊಮ್ಮೆ ಮುಗುಳ್ನಕ್ಕ. ಅತ್ಯಂತ ನಿಷ್ಕಲ್ಮಷವಾದ ನಗೆ ಅನಿಸಿತು. ಇವನು ನಿಜವಾಗಿಯೂ ಒಳ್ಳೆಯ ಮನುಷ್ಯನೇ? ಈ ಪ್ರಶ್ನೆಗಳು ಅವಳ ಆತಂಕವನ್ನು ಹೆಚ್ಚಿಸುತ್ತಲೇ ಹೋದವು. ಅಮ್ಮ ಮತ್ತೆ ಬಂದು ಡ್ರೆಸ್ ಸರಿ ಮಾಡಿದಳು. ಯಾರ್‍ಯಾರೋ ಬಂದು ಕೈಯಲ್ಲಿ ಉಡುಗೊರೆಗಳನ್ನು, ಎನವಲಪ್‌ಗಳನ್ನು ಕೊಟ್ಟು ಮುಂದೆ ಹೋಗುತ್ತಿದ್ದರು. ಮೊದಲು ನಾಲ್ಕೈದು ಅತಿಥಿಗಳಿಗೆ ’ಇದ್ಯಾಕೆ, ಬೇಡ’ ಎಂತೆಲ್ಲ ಪ್ರತಿಭಟಿಸಿದ್ದಳು. ಆದರೆ ಅದಕ್ಕೆ ತಗಲುವ ಎನರ್ಜಿ, ಅದನ್ನು ಇಸಿದುಕೊಂಡು ತೆಪ್ಪಗೆ ಇರಬೇಕಾಗುವುದಕ್ಕೆ ತಗಲುವ ಎನರ್ಜಿಗಿಂತ ತುಂಬಾ ಕಡಿಮೆಯಾದುದರಿಂದ ಏನೇನು ಕೊಡುತ್ತಾರೋ ಅದನ್ನೆಲ್ಲ ದೂಸರಾ ಮಾತಿಲ್ಲದೇ ಇಸಿದುಕೊಂಡು ಪಕ್ಕದಲ್ಲಿ ನಿಂತಿದ್ದ ತನ್ನನ್ನು ’ತಂಗಿ’ ಎಂದು ಕರೆದುಕೊಳ್ಳುತ್ತಿದ್ದವಳ ಕೈಗೆ ಹಸ್ತಾಂತರಿಸುತ್ತಿದ್ದಳು. ಅವಳನ್ನು ನಂಬಬಹುದು ಎಂದು ಅಮ್ಮ ಮುಂಚೆಯೇ ಹೇಳಿದ್ದಳು. ಅಪ್ಪ ಬಂದ ಗೆಸ್ಟ್‌ಗಳನ್ನು ಸರಿಯಾಗಿ ಬರಮಾಡಿಕೊಳ್ಳಬೇಕೆಂದು ಮಂಟಪದ ಗೇಟಿನಲ್ಲಿಯೇ ನಿಂತಿದ್ದ. ಆಗಾಗ ಬಂದು ನೋಡಿ ನಗುತ್ತಿದ್ದ, ಅಮ್ಮನೊಂದಿಗೆ ಮಾತನಾಡಿ ಒಂದಿಷ್ಟು ಬೈಸಿಕೊಂಡು ಮತ್ತೆ ಎಲ್ಲೋ ಹೋಗುತ್ತಿದ್ದ. ಅವನೂ ಖುಷಿಯಾಗಿದ್ದಾನೆ ಅನಿಸಿತು. ಒಟ್ಟಾರೆ ಎಲ್ಲರೂ, ಅಪ್ಪ, ಅಮ್ಮ, ಅಣ್ಣ, ಗಂಡ, ಸಂಬಂಧಿಕರು, ಅತಿಥಿಗಳು ಎಲ್ಲರೂ ಖುಷಿಯಾಗಿದ್ದರು.

ತನ್ನ ಸಹೋದ್ಯೋಗಿಗಳು, ಗೆಳೆಯರೂ ಒಂದಿಷ್ಟು ಜನರು ಬಂದಿದ್ದರು. ಅವರನ್ನು ಇವನಿಗೆ ಪರಿಚಯಿಸಿದಾಗ ಅವನು ಅತಿ ಉತ್ಸಾಹದಿಂದ ಮಾತನಾಡಿದ್ದ. ಇವಳನ್ನು ನೋಡಿ ಗೆಳೆಯರು ಮುಗುಳ್ನಕ್ಕರು. ಆ ನಗೆಯ ಅರ್ಥ ಇವಳಿಗೆ ಗೊತ್ತಿತ್ತು. ಇವಳೂ ಮುಗುಳ್ನಕ್ಕಳು. ಗೆಳಯರು ಹೋಗಿ ಸ್ವಲ್ಪ ದೂರದಲ್ಲೇ ಕುಳಿತುಕೊಂಡರು. ಮೂವರು ಮಾತ್ರ ಮದುವೆಯ ಎಲ್ಲಾ ಶಾಸ್ತ್ರ ಮುಗಿದು, ಎಲ್ಲರೂ ಛತ್ರದಿಂದ ಹೊರಬೀಳುವ ತನಕ ಅಲ್ಲಿಯೇ ಇದ್ದರು, ಅವಳು ಅವರೆಡೆ ನೋಟ ಬೀರಿದಾಗೊಮ್ಮೆ ಮುಗುಳ್ನೆಗೆ ಬೀರುತ್ತ.

ಛತ್ರದಲ್ಲಿ ಜನ ಕಡಿಮೆಯಾದರು. ಎಲ್ಲರೂ ಊಟ ಮಾಡಿ ಒಬ್ಬೊಬ್ಬರಾಗಿ ಒಲ್ಲದ ಮನಸ್ಸಿನಂತೆ ಹೊರಟಂತೆ ಭಾಸವಾಯಿತು. ಒಳ್ಳೆಯ ಪಿಚ್ಚರ್ ಬೇಗನೇ ಮುಗೀತಲ್ಲ ಎಂಬ ಬೇಸರದಲ್ಲಿ ಎದ್ದು ಹೊರಟರು ಎಂದೆನಿಸಿತು ಇವಳಿಗೆ. ಜನರು ಹೊರಟಂತೆ ಇವಳ, ಮನೆಯವರ ಟೆನ್ಷನ್‌ಗಳು ಬದಲಾಗತೊಡಗಿದ್ದವು. ಮದುವೆ ಎಂದರೆ ಕೆಲಸಗಳ ರಾಶಿ. ಹೇಗೋ ಆಗುತ್ತೆ ಎಂದು ಇವಳಿಗೆ ತಿಳಿದಿತ್ತು ಹಾಗಾಗಿ ಹೆಚ್ಚು ಟೆನ್ಷನ್ ತೆಗೆದುಕೊಳ್ಳಲಿಲ್ಲ. ಅದರೊಂದಿಗೆ ಇವಳೂ ಕೆಲಸ ಮಾಡಲು ಶುರು ಮಾಡಿ ಅನೇಕ ವರ್ಷಗಳೇ ಕಳೆದಿದ್ದರಿಂದ ಹಣಕಾಸಿನ ತೊಂದರೆ ಅಷ್ಟಾಗಿ ಇರಲಿಲ್ಲ. ಆದರೂ ಅಪ್ಪ ಎಲ್ಲಾ ಖರ್ಚನ್ನು ತಾನೇ ಮಾಡುತ್ತೇನೆಂದು ಪಟ್ಟು ಹಿಡಿದು, ಎಲ್ಲಕ್ಕೂ ತಾನೇ ದುಡ್ಡು ಕೊಟ್ಟಿದ್ದ. ಹೌದು, ಇದು ಅವರ ಜವಾಬ್ದಾರಿ, ಇದೆಲ್ಲಾ ಬೇಕಾಗಿದ್ದು ಅವರಿಗೆ ಎಂದು ಇವಳೂ ಅಷ್ಟಾಗಿ ಪ್ರತಿಭಟಿಸಿರಲಿಲ್ಲ.

ಆದರೆ ಇವನ ಮಗುಳ್ನಗೆಗೆ ಕೊನೆಯೇ ಕಾಣಲಿಲ್ಲ. ನಾನು ಕ್ರೂರಿ ಮನುಷ್ಯಳಾ ಎಂತಲೂ ಒಂದೆರಡು ಸಲ ಅನಿಸಿತು. ಎರಡೇ ತಿಂಗಳ ಹಿಂದೆ ಅವನನ್ನು ಭೇಟಿಯಾಗಿದ್ದು. ಈಗ ಆಗಲಿಲ್ಲ ಎಂದರೆ ತುಂಬಾ ಕಷ್ಟ ಎಂದು ಈ ಮದುವೆಯನ್ನು ಸಾಧ್ಯವಾಗಿಸಲು ಇವಳ ಮನೆಯವರು ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡಿದ್ದರು. ಆ ಕೆಲವು ತಿಂಗಳು ಪ್ರತಿಭಟಿಸುವುದನ್ನು ಬಿಟ್ಟಿದ್ದಳು. ತನ್ನ ಹೆತ್ತವರಿಗೆ ಸಂತೋಷ ನೀಡಿದ್ದಳು. ಆದರೆ ಅವನ ನಗೆಯ ಕಾರಣದಿಂದ ಶುರುವಾದ ಆತಂಕ ಹೆಚ್ಚುತ್ತಲೇ ತೊಡಗಿತು. ಮೂರ್ನಾಲ್ಕು ಸಲ ಮಾತ್ರ ಮಾತನಾಡಿದ್ದಳು, ಅದೂ ಕಾಟಾಚಾರಕ್ಕೆ.

ಮದುವೆಯಾಗಿ ಸರಿಯಾಗಿ ಒಂದು ವರ್ಷವಾಗಿತ್ತು. ಅಂದು ಅಧಿಕೃತವಾಗಿ ವಿಚ್ಛೇದಿತರಾಗುವವರಿದ್ದರು. ಇಬ್ಬರೂ ಕೋರ್ಟಿಗೆ ಬರಲೇಬೇಕಿತ್ತು. ಬಂದ. ಅಂದು ಅವನು ಮುಗುಳ್ನಗಲಿಲ್ಲ. ಈ ದಾಂಪತ್ಯ ಜೀವನ ಉಳಿಯಲಿ ಎಂದು ತನಗಾದಷ್ಟು ಪ್ರಯತ್ನ ಪಟ್ಟಿದ್ದ ಹಾಗಾಗಿ ಅವನು ಮುಗುಳ್ನಗದೇ ಇರಲು ಸೂಕ್ತ ಕಾರಣಗಳಿದ್ದವು. ಒಂದಿಷ್ಟು ಸಿಟ್ಟು ನೋವನ್ನೂ ಪ್ರದರ್ಶಿಸುತ್ತಿದ್ದ. ಪಾಪ ಅನಿಸಿತು ಇವಳಿಗೆ. ಆಟ ಆಡುವಾಗ ಯಾರೋ ಚೀಟಿಂಗ್ ಮಾಡಿ ಗೆದ್ದಾಗ ಸೋತ ಮಗು ಹೇಗೆ ವರ್ತಿಸುತ್ತೋ, ಅದೇರೀತಿ ಮಾಡುತ್ತಿದ್ದ ಅನಿಸಿತು ಇವಳಿಗೆ. ’ಅಯ್ಯೋ, ನೀನು ಗೆದ್ದಿದ್ದೀಯ ಕಣೋ, ನಿನ್ನ ಕಲ್ಪನೆಯಲ್ಲಿದ್ದ ಗೆಲುವು ಎಂದಿಗೂ ಸಾಧ್ಯವಾಗುವಂತಿದ್ದಿಲ್ಲ, ಇದೇ ನಿನ್ನ ಗೆಲುವು, ಅರ್ಥ ಮಾಡಿಕೋ’ ಎಂದು ಹೇಳಬೇಕು ಅನಿಸಿತು ಅವಳಿಗೆ. ಅವನು ಧರಿಸಿದ್ದ ಕೆಂಪು ಹಳದಿ ಟಿ-ಶರ್ಟನ್ನೇ ನೋಡುತ್ತ ನಿಂತಳು. ಕೋರ್ಟ್‌ನ ಕ್ಲರ್ಕ್ ಹೇಳಿದ ಕಡೆ ಸಹಿ ಮಾಡಿದಳು. ಅವನೂ ಸಹಿ ಮಾಡಿದ.

ಅವನೊಂದಿಗೆ ಅವನ ಕುಟುಂಬದವರು ಬಂದಿದ್ದರು. ಕೆಲವರು ಇವಳನ್ನು ದುಷ್ಟೆಯಂತೆ ನೋಡಿದರೆ, ಇನ್ನೂ ಕೆಲವರು ಪ್ರೀತಿಯಿಂದಲೇ ನೋಡಿದರು. ಇವಳು ಯಾರನ್ನೂ ಜೊತೆಗೆ ಕರೆತಂದಿದ್ದಿಲ್ಲ. ಆದರೂ ಆ ಮೂರು ಸ್ನೇಹಿತರು ಬಂದು ಕೋರ್ಟಿನ ಕೋಣೆಯ ಹೊರಗೆ ನಿಂತಿದ್ದರು. ನೋಡಿ ಮುಗುಳ್ನಕ್ಕರು. ಮನೆಗೆ ಲಿಫ್ಟ್ ಕೊಡುವುದಾಗಿ ಕರೆದರು. ’ಸ್ವಚ್ಛಂದ ಗಾಳಿಯಲ್ಲಿ ತೇಲುವುದು’ ಎಂದು ಬರೆಯುತ್ತಾರಲ್ಲ ಲೇಖಕರು ಅದು ಇದೇನಾ ಎನ್ನುತ್ತ ಕೊಚ್ಚೆ ನೀರನ್ನು ದಾಟುತ್ತ, ಮುಖದ ಮೇಲೆ ಬಿದ್ದಿದ್ದ ಧೂಳನ್ನು ಸ್ನೇಹಿತೆ ಕೊಟ್ಟ ಟಿಷ್ಯೂ ಪೇಪರಿನಿಂದ ಒರೆಸಿಕೊಳ್ಳುತ್ತ ಅವರ ಕಾರು ಹತ್ತಿದಳು.

ರಾಜಶೇಖರ್‌ ಅಕ್ಕಿ

ರಾಜಶೇಖರ ಅಕ್ಕಿ
ಸಾಮಾಜಿಕ ಕಾರ್ಯಕರ್ತರಾಗಿರುವ ಅಕ್ಕಿ ಅಭಿನಯ, ಚಿತ್ರಕಥೆ ಬರಹ ಕಲಿಸಿಕೊಡುತ್ತಾರೆ.


ಇದನ್ನೂ ಓದಿ: ಪ್ರಬಂಧ; ನನಗೆ ದೆವ್ವ ಬಿಡಿಸಿದ ಕಥೆ: ಪ್ರತಾಪ್ ಹುಣಸೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...