ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ಎಲ್ಜೆಪಿ)ದ ತನ್ನ ಆರು ಲೋಕಸಭಾ ಸಂಸದರಲ್ಲಿ ಐವರು ಸಂಸದರು ಬಂಡಾಯವೆದ್ದಿದ್ದು, ತಮಗೆ ಹೊಸ ನಾಯಕತ್ವವನ್ನು ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಐದು ಬಂಡಾಯ ಸಂಸದರು ಚಿರಾಗ್ ಪಾಸ್ವಾನ್ ಅವರ ಚಿಕ್ಕಪ್ಪ, ಹಾಜಿಪುರ ಸಂಸದ ಪಶುಪತಿ ಕುಮಾರ್ ಪರಾಸ್ ಅವರನ್ನು ಎಲ್ಜೆಪಿಯ ಹೊಸ ಅಧ್ಯಕ್ಷರನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.
ದೂರವಾಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪರಾಸ್, ಪಕ್ಷವನ್ನು ಉಳಿಸಲು ಮತ್ತು ಎಲ್ಜೆಪಿಯನ್ನು ಕಟ್ಟಿದ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ರಾಜಕೀಯ ಸಿದ್ಧಾಂತಗಳನ್ನು ಮುಂದುವರೆಸಲು ಈ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಂಬೇಡ್ಕರ್ ಈಗ ಇದ್ದಿದ್ದರೆ ಬಿಜೆಪಿಗರು ಅವರನ್ನು ಪಾಕ್ ಪರ ಎನ್ನುತ್ತಿದ್ದರು: ಮೆಹಬೂಬಾ ಮುಫ್ತಿ
“ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್ಜೆಪಿ ತೀವ್ರ ಹಿನ್ನಡೆ ಅನುಭವಿಸಿತು. ನಾನು ಪಕ್ಷವನ್ನು ಪುನರುಜ್ಜೀವನಗೊಳಿಸುತ್ತೇನೆ ಮತ್ತು ಈ ಮೂಲಕ ಪಕ್ಷದ ಸಂಸ್ಥಾಪಕರ ಆತ್ಮಕ್ಕೆ ಶಾಂತಿ ಒದಗಿಸಲು ಪ್ರಯತ್ನಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಮೂಲಗಳ ಪ್ರಕಾರ, ಹೊಸ ನಾಯಕತ್ವದೊಂದಿಗೆ ಹೊಸ ಪಕ್ಷದ ರಚನೆಯನ್ನು ಭಾನುವಾರ ಸಂಜೆ ನವದೆಹಲಿಯಲ್ಲಿ ಪರಾಸ್ ನಿವಾಸದಲ್ಲಿ ನಿರ್ಧರಿಸಲಾಯಿತು. ಐವರು ಸಂಸದರೊಂದಿಗೆ ಎಲ್ಜೆಪಿಯ ಹೊಸ ಬಣವನ್ನು ರಚಿಸುವ ಈ ನಿರ್ಧಾರದ ಬಗ್ಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ತಿಳಿಸಲಾಯಿತು. ಚಿರಾಗ್ ಪಾಸ್ವಾನ್ ಅವರು ಪಕ್ಷದ ಹಿರಿಯರನ್ನು ಹಿನ್ನಲೆಗೆ ತಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಇದು ಪಕ್ಷದ ನಾಯಕರಿಗೆ ಅಸಮಾಧಾನವನ್ನುಂಟು ಮಾಡಿದೆ.
ಏತನ್ಮಧ್ಯೆ, ಜೆಡಿಯು ಹಿರಿಯ ಮುಖಂಡರೂ ಇತ್ತೀಚೆಗೆ ಪರಾಸ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಸ್ಥಳೀಯ ರಾಜಕೀಯ ಮೂಲಗಳು ತಿಳಿಸಿವೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. “ಚಿರಾಗ್ ಪಾಸ್ವಾನ್ ಅವರಿಗೆ ಪಾಠ ಕಲಿಸಲು ಹಿಂದಿನಿಂದ ಹೊಸ ರಾಜಕೀಯ ಆಟವನ್ನು ಆಡಲಾಗುತ್ತಿದೆ” ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್ ದರ ಹೆಚ್ಚಳಕ್ಕೆ ಕಾರಣ ತಿಳಿಸಿದ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್!
ಲೋಕಸಭಾ ಸ್ಪೀಕರ್ ಅನುಮೋದನೆಯ ನಂತರ ಸೋಮವಾರ ನವದೆಹಲಿಯಲ್ಲಿ ಈ ನಾಯಕತ್ವದ ಬೆಳವಣಿಗೆಯ ಕುರಿತು ಔಪಚಾರಿಕ ಪ್ರಕಟಣೆ ಘೋಷಣೆಯಾಗುವ ಸಾಧ್ಯತೆ ಇದೆ. ಪರಾಸ್ ಅವರು ಇತ್ತೀಚೆಗೆ ಸಿಎಂ ನಿತೀಶ್ ಕುಮಾರ್ ಅವರನ್ನು ಉತ್ತಮ ಆಡಳಿತಗಾರ ಎಂದು ಶ್ಲಾಘಿಸಿದ್ದರು. ಇದರ ನಂತರ ಬಿಹಾರದ ರಾಜಕೀಯ ವಲಯ ಹೊಸ ಸಂಚಲನ ಮೂಡಿಸಿವೆ.
ಸಂಸದರಾದ ಪ್ರಿನ್ಸ್ ರಾಜ್, ಚಂದನ್ ಸಿಂಗ್, ವೀಣಾ ದೇವಿ ಮತ್ತು ಮೆಹಬೂಬ್ ಅಲಿ ಕೈಸರ್ ಅವರನ್ನೊಳಗೊಂಡ ಬಂಡಾಯ ಗುಂಪು ಚಿರಾಗ್ ಪಾಸ್ವಾನ್ ಅವರ ಕಾರ್ಯವೈಖರಿಯ ಬಗ್ಗೆ ಬಹಳ ದಿನಗಳಿಂದ ಅಸಮಾಧಾನ ವ್ಯಕ್ತಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಪಕ್ಷದ ವಿಭಜನೆಗೆ ಜೆಡಿಯು ಕಾರಣ ಎಂದು ಕೂಡಾ ಚಿರಾಗ್ ಪಾಸ್ವಾನ್ ಆಪ್ತರು ಆರೋಪಿಸಿದ್ದಾರೆ. 2020 ರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಆಡಳಿತ ಪಕ್ಷದ ವಿರುದ್ದ ಸ್ಪರ್ಧಿಸಿ ಪಕ್ಷದ ಹಲವು ಸ್ಥಾನಗಳು ಕಳೆದುಕೊಳ್ಳಲು ಚಿರಾಗ್ ಕಾರಣವಾಗಿದ್ದರು. ಜೆಡಿಯುಗೆ ತೀವ್ರ ಹಾನಿ ಮಾಡಿರುವ ಚಿರಾಗ್ ಅವರನ್ನು ಏಕಾಂಗಿಯಾಗಿಸಲು ನಿತೀಶ್ ಕುಮಾರ್ ಅವರ ಪಕ್ಷವು ಬಹಳ ಹಿಂದಿನಿಂಲೂ ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ.
ಮುಂದಿನ ದಿನಗಳಲ್ಲಿ ಇದೀಗ ಬಂಡಾಯವೆದ್ದಿರುವ ಗುಂಪು ಜೆಡಿಯುಗೆ ಬೆಂಬಲ ನೀಡಬಹುದು ಎಂದು ಮೂಲಗಳು ತಿಳಿಸಿವೆ.
ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಬಂಡಾಯ ಶಮನಕ್ಕೆ ಶ್ರಮಿಸುತ್ತಿದ್ದು, ಅವರು ಪರಾಸ್ ಅವರ ನಿವಾಸಕ್ಕೆ ಇದೀಗ ತೆರಳಿದ್ದಾರೆ.
Delhi: LJP national president Chirag Paswan arrives at the residence of party MP and uncle Pashupati Kumar Paras, to meet him. pic.twitter.com/SetC1c4hMa
— ANI (@ANI) June 14, 2021
ಇದನ್ನೂ ಓದಿ: ರಾಮ ಜನ್ಮಭೂಮಿ ಟ್ರಸ್ಟ್ನಿಂದ ಭೂ ದಂಧೆ: ರಾಮನ ಹೆಸರಲ್ಲಿ ಲೂಟಿ ಎಂದ AAP, SP