ತ್ರಿಪುರಾದಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ತೃಣಮೂಲ ಪಕ್ಷದ 12 ನಾಯಕರು ಮತ್ತು ಕಾರ್ಯಕರ್ತರನ್ನು ಭಾನುವಾರ ಬಂಧಿಸಲಾಗಿದೆ. ಬಂಧಿತರಲ್ಲಿ ಶನಿವಾರ ತ್ರಿಪುರಾದ ಖೊವಾಯಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ ಗಾಯಗೊಂಡ ಪಕ್ಷದ ಸದಸ್ಯರೂ ಇದ್ದಾರೆ. ಅವರನ್ನು ಬಿಗಿ ಭದ್ರತೆಯೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತರನ್ನು ಭೇಟಿ ಮಾಡಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಟಿಎಂಸಿಯ ಉನ್ನತ ನಾಯಕರು ಅಗರ್ತಲಾಗೆ ತೆರಳಿದ್ದಾರೆ.
ಇದನ್ನೂ ಓದಿ: ಪೆಗಾಸಸ್ ಪ್ರತಿ ಹರಿದು ಪ್ರತಿಭಟನೆ: ರಾಜ್ಯಸಭೆಯಿಂದ ಟಿಎಂಸಿ ಸಂಸದ ಶಾಂತನು ಸೇನ್ ಅಮಾನತು
ರಾತ್ರಿ 7 ಗಂಟೆಯಿಂದ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ವೇಳೆ ಅವರು ಕೊರೊನಾ ನಿರ್ಬಂಧಗಳನ್ನು ಉಲ್ಲಂಘಿಸಿ ಪ್ರಯಾಣ ಮಾಡಿದ್ದಾರೆ. ಹೀಗಾಗಿ 12 ಟಿಎಂಸಿ ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಬಾಂಗ್ಶು ಭಟ್ಟಾಚಾರ್ಯ, ತಾನಿಯಾ ಪೊದ್ದಾರ್, ಸುದೀಪ್ ರಹಾ ಮತ್ತು ಜಯ ದತ್ತಾ ಸೇರಿದಂತೆ ಪಕ್ಷದ ನಾಯಕರನ್ನು ಬಂಧಿಸಲಾಗಿದೆ ಎಂದು ತ್ರಿಪುರಾ ಟಿಎಂಸಿ ವಕ್ತಾರ ಆಶಿಶ್ ಲಾಲ್ ಸಿಂಗ್ ಅವರು ಹೇಳಿದ್ದಾರೆ.
ಶನಿವಾರ ದಲೈ ಜಿಲ್ಲೆಯ ಅಂಬಾಸಾದಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ವಾಹನದ ಮೇಲೆ ದಾಳಿ ಮಾಡಿದಾಗ ರಾಹಾ ಮತ್ತು ದತ್ತಾ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪೆಗಾಸಸ್ ಹಗರಣ: ಒಕ್ಕೂಟ ಸರ್ಕಾರದ ವಿರುದ್ಧ ಟಿಎಂಸಿ, ಶಿವಸೇನೆ ವಾಗ್ದಾಳಿ
“ದಾಳಿಯ ನಂತರ, ನಾವು ರಾಷ್ಟ್ರೀಯ ಹೆದ್ದಾರಿ 8 ರ ಮೂಲಕ ಅಗರ್ತಲಾಕ್ಕೆ ಹಿಂತಿರುಗುತ್ತಿದ್ದೆವು. ಈ ವೇಳೆ ಪೊಲೀಸರು ನಮ್ಮ ವಾಹನಗಳನ್ನು ಖೋವಾಯಿಯಲ್ಲಿ ತಡೆದರು. ‘ದುಷ್ಕರ್ಮಿಗಳಿಂದ’ ನಮ್ಮ ಮೇಲೆ ಮತ್ತೆ ದಾಳಿಗಳು ನಡೆಯಬಹುದು ಎಂದು ಹೇಳಿ ನಮ್ಮನ್ನು ವಶಕ್ಕೆ ತೆಗೆದುಕೊಂಡರು. ನಿಜವಾಗಿ, NH 8 ರಲ್ಲಿ ನಮ್ಮ ಮೇಲೆ ದಾಳಿ ಮಾಡಲು ಬಿಜೆಪಿ ಕಾರ್ಯಕರ್ತರು ಹಲವಾರು ಸ್ಥಳಗಳಲ್ಲಿ ಜಮಾಯಿಸಿದ್ದರು” ಎಂದು ಆಶಿಶ್ ಲಾಲ್ ಹೇಳಿದ್ದಾರೆ.
ಆದಾಗ್ಯೂ, ಟಿಎಂಸಿ ಸದಸ್ಯರನ್ನು ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಿಜೆಪಿಗರು ತಮ್ಮ ಪಕ್ಷದ ಮೇಲೆ ನಡೆಸಿರುವ ದಾಳಿಯನ್ನು ಟಿಎಂಸಿ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ. ಈ ಘಟನೆಯು ತ್ರಿಪುರಾದಲ್ಲಿ “ಗೂಂಡಾ ರಾಜ್ಯ” ಇದೆ ಎಂದು ಸಾಬೀತುಪಡಿಸಿದೆ. ಇದರ ಪರಿಣಾಮವನ್ನು 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಮೂಲಕ ಎದುರಿಸಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಫೋನ್ ಹ್ಯಾಕ್ ಮಾಡಿಯೂ ಬಿಜೆಪಿಗೆ ಚುನಾವಣೆ ಗೆಲ್ಲಲು ಸಾಧ್ಯವಾಗಲಿಲ್ಲ


