50 ವರ್ಷಗಳ ಹಿಂದೆ ಆಂಗ್ಲೋ-ಇಂಡಿಯನ್ ಕುಟುಂಬದಿಂದ ಉಡುಗೊರೆಯಾಗಿ ಬಂದ ಚಿಕ್ಕ ಭೂಮಿಯಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದ 8 ಮಂದಿಯ ಕುಟುಂಬ ಈಗ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದೆ. ಪಕ್ಕದ ಮನೆಯವರ ಕೃತ್ಯಕ್ಕೆ ಕೊಡಗಿನ ಯರವ ಸಮುದಾಯದ ಮಹಿಳೆಯ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಕೊಡಗಿನ ಯರವ ಸಮುದಾಯದ ಮಹಿಳೆ ಪಂಜಿರಿ ಯರವರ ಕುಂಜಿ, ರಸ್ತೆಯಲ್ಲಿ ಕುಳಿತು ತನ್ನ ಮನೆ ನೆಲಸಮಗೊಳ್ಳುವುದನ್ನು ನೋಡುತ್ತಾ, ಅಳುತ್ತಾ ಕುಳಿತಿದ್ದರು. ಆಕೆ, ತನ್ನ ಮನೆಯನ್ನು ಉರುಳಿಸುವ ಪ್ರಕ್ರಿಯೆ ಮುಗಿಯುವವರೆಗೂ ಒಂದಿಂಚೂ ಕದಲದೆ, ಸುರಿವ ಮಳೆಯ ಮಧ್ಯೆಯೂ ಅಳುತ್ತಾ ರಸ್ತೆಯಲ್ಲೇ ಕುಳಿತ್ತಿದ್ದರು. ಆಕೆ ಹುಟ್ಟಿದಾಗಿನಿಂದ ಆಕೆಗೆ ಇದ್ದದ್ದು ಅದೊಂದೇ ಮನೆ. ತನ್ನ ಮನೆ ನೆಲಸಮಗೊಳ್ಳುತ್ತಿರುವುದನ್ನು ನೋಡಿ ಬಿಕ್ಕಿ-ಬಿಕ್ಕಿ ಅಳುತ್ತಿದ್ದರು.
ಪಂಜಿರಿ ಯರವರ ಕುಂಜಿ ದಕ್ಷಿಣ ಕೊಡಗಿನ ದೇವರಪುರ ಗ್ರಾಮದ ಕನ್ನಂಬಾಡಿ ನಿವಾಸಿ. ಅವರು ಹಲವಾರು ಎಸ್ಟೇಟ್ಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆಕೆ ಮತ್ತು ಆಕೆಯ ಕುಟುಂಬದ ಇತರ ಏಳು ಸದಸ್ಯರು ಕನ್ನಂಬಾಡಿಯಲ್ಲಿರುವ ಸರ್ವೇ ನಂಬರ್ 215/8 ರಲ್ಲಿ ಶೀಟ್ ಮನೆಯಲ್ಲಿ ವಾಸಿಸುತ್ತಿದ್ದರು.
ಇವರು ವಾಸಿಸುತ್ತಿದ್ದ ಚಿಕ್ಕ ಭೂಮಿಯನ್ನು ಸುಮಾರು 50 ವರ್ಷಗಳ ಹಿಂದೆ ಆಕೆಯ ಅಜ್ಜನಿಗೆ ಆಂಗ್ಲೋ-ಇಂಡಿಯನ್ ಕುಟುಂಬವಾದ ವಾರಿಂಗ್ ಕುಟುಂಬ ಉಡುಗೊರೆಯಾಗಿ ನೀಡಿತ್ತು.
ಇದನ್ನೂ ಓದಿ: ರಾಮಗೊಂಡನಹಳ್ಳಿ: ತಮ್ಮ ನೆಲವನ್ನು ಕಸಿಯುತ್ತಿರುವ ಸರ್ಕಾರದ ವಿರುದ್ಧ ಪ್ರತಿಭಟಿಸಿದ ದನಗಳು!
“ಕುಂಜಿಯ ಅಜ್ಜ ನಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಆಕೆಯ ಕುಟುಂಬದವರಿಗೆ ನಮ್ಮ ಕುಟುಂಬಕ್ಕೆ ಸೇರಿದ 215/8 ಸರ್ವೇ ನಂಬರ್ ಭೂಮಿಯನ್ನು ಉಡುಗೊರೆಯಾಗಿ ನೀಡಲಾಗಿತ್ತು. 215/8 ರಲ್ಲಿನ ಭೂಮಿಯು ಇನ್ನೂ ವಾರಿಂಗ್ ಕುಟುಂಬದ ನಮ್ಮ ಒಡೆತನದಲ್ಲಿದೆ. ಆದರೆ, ಕುಂಜಿಯ ಕುಟುಂಬದವರಿಗೆ ಆ ಸ್ಥಳವನ್ನು ಖಾಲಿ ಮಾಡುವಂತೆ ನಾವು ಎಂದಿಗೂ ಕೇಳಲಿಲ್ಲ” ಎಂದು ಈಗ ಚೆನ್ನೈನಲ್ಲಿ ನೆಲೆಸಿರುವ ವಾರಿಂಗ್ ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಅವ್ರಿಲ್ ಹೇಳಿದ್ದಾರೆ. ಅಲ್ಲದೆ,ಸರ್ವೇ ನಂಬರ್ 215/8 ರ ತೆರವುಗೊಳಿಸಲು ಕುಟುಂಬಕ್ಕೆ ನ್ಯಾಯಾಲಯದಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಅವರು ದೃಢಪಡಿಸಿದ್ದಾರೆ.
ಆದರೆ, ಆಗಸ್ಟ್ 20 ರಂದು ನೆರೆಯ ನಿವಾಸಿ ಸುಷ್ಮಾ ಸುಬ್ಬಯ್ಯ ಅವರು ಕುಂಜಿ ಮತ್ತು ಆಕೆಯ ಕುಟುಂಬವನ್ನು ಆ ಸ್ಥಳದಿಂದ ಹೊರಹಾಕಲು ಅವರ ಮನೆಯನ್ನು ನೆಲಸಮಗೊಳಿಸಿದ್ದಾರೆ. “ನಮಗೆ ಇಂಗ್ಲಿಷ್ ಓದಲು ಬರುವುದಿಲ್ಲ. ನಮಗೆ ಕೋರ್ಟ್ ನೋಟಿಸ್ ತೋರಿಸಲಾಯಿತು ಮತ್ತು ನಮ್ಮನ್ನು ನಮ್ಮ ಮನೆಯಿಂದ ಹೊರಹಾಕಲಾಯಿತು” ಎಂದು ಕುಂಜಿ ಕುಟುಂಬದ ಸದಸ್ಯರೊಬ್ಬರು ತಮ್ಮ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ.
ಹಲವು ವರ್ಷಗಳಿಂದ ನೆರೆಯವರ ಹಿಂಸೆಗೆ ಬಳಲುತ್ತಿದ್ದೇವೆ ಎಂದು ಯರವ ಸಮುದಾಯದ ಈ ಕುಟುಂಬ ಆರೋಪಿಸಿದ್ದಾರೆ. ಸುಬ್ಬಯ್ಯ ನಮಗೆ ಸ್ಥಳವನ್ನು ಖಾಲಿ ಮಾಡುವಂತೆ ಅನೇಕ ಬಾರಿ ಒತ್ತಾಯಿಸಿದ್ದಾರೆ. ಆದಾಗ್ಯೂ, ಸುಬ್ಬಯ್ಯನ ಮರಣದ ನಂತರ ಶೋಷಣೆ ದುಪ್ಪಟ್ಟಾಯಿತು. ಅವರ ಮಗಳು ಸುಷ್ಮಾ ನಮ್ಮ ಸಮುದಾಯದ ವಿರುದ್ಧ ಹಲವು ಬಾರಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇತ್ತ, ನ್ಯಾಯಾಲಯದ ಆದೇಶದಲ್ಲಿ ಸರ್ವೇ ನಂ. 218/8 ಅನ್ನು ತೆರವುಒಳಿಸಲು ಆದೇಶಿಸಲಾಗಿದೆ. ಆದಾಗ್ಯೂ, ಕುಂಜಿಯವರು ಆರ್ಟಿಸಿ ಸರ್ವೇ ನಂ. 215/8ರಲ್ಲಿ ವಾಸಿಸುತ್ತಿದ್ದರು ಎಂದು ದೃಢಪಡಿಸಿದೆ. ಅದು ವೇರಿಂಗ್ ಕುಟುಂಬಕ್ಕೆ ಸೇರಿದ್ದಾಗಿದ್ದು, ಆ ಸ್ಥಳದಲ್ಲಿ ತೆರವುಗೊಳಿಸಲು ಯಾವುದೇ ರೀತಿಯಲ್ಲೂ ಆದೇಶಿಸಲಾಗಿಲ್ಲ.
ಮನೆ ನೆಲಸಮದ ಬಗ್ಗೆ ಯರವ ಕುಟುಂಬದವರು ಗೋಣಿಕೊಪ್ಪಲು ಪೊಲೀಸರನ್ನು ಸಂಪರ್ಕಿಸಿದಾಗ, ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ಕುಟುಂಬವು ನ್ಯಾಯವನ್ನು ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದು, ಶೀಘ್ರದಲ್ಲೇ ಎಸ್ಪಿಯನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಗಂಗಾವತಿ: ಮಾದಿಗ ಸಮುದಾಯದ ಮೇಲೆ ಹಲ್ಲೆ ಪ್ರಕರಣ- ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು ಎಂದ ಕರಿಯಪ್ಪ ಗುಡಿಮನಿ


