ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ಗೆ ರಾಜ್ಯದಲ್ಲಿ ಸಂಯುಕ್ತ ಹೋರಾಟ ಸಂಘಟನೆ ಬೆಂಬಲ ವ್ಯಕ್ತಪಡಿಸಿದೆ.
ಭಾರತ್ ಬಂದ್ ಪೂರಕವಾಗಿ ಕರ್ನಾಟಕ ಬಂದ್ ಯಶಸ್ವಿಗೊಳಿಸಲು ಇಂದು (ಭಾನುವಾರ) ಸಂಯುಕ್ತ ಹೋರಾಟ ಕರ್ನಾಟಕ ಆನ್ಲೈನ್ ಬಹಿರಂಗ ಸಭೆ ನಡೆಸಿದೆ.
ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, “ದೇಶದಲ್ಲಿ ರೈತರ ಸತ್ಯಾಗ್ರಹ ಆರಂಭವಾಗಿ 10 ತಿಂಗಳಾಗುತ್ತಾ ಬಂದಿದೆ. ಭಾರತ ಸರ್ಕಾರ ರೈತರ ಧ್ವನಿಗೆ ಒಗುಡುತ್ತಿಲ್ಲ. ಭಾರತ ಸರ್ಕಾರ ರೈತರ ಪರ ಇಲ್ಲ. ರೈತರನ್ನು ಕೀಟಲೆ ಮಾಡುತ್ತಿದೆ. ರೈತರ ಬಗ್ಗೆ ಅವರಿಗಿರುವ ತಿರಸ್ಕಾರ ಭಾವನೆ ಇದು. ಈಗಾಗಲೇ ಹಲವು ಭಾರಿ ಸರ್ಕಾರವನ್ನು ಎಚ್ಚರಿಸಲು ರೈತರು ಪ್ರಯತ್ನಿಸಿದ್ದರೂ ಅವರು ಎಚ್ಚರಗೊಳ್ಳುತ್ತಿಲ್ಲ. ಹಾಗಾಗಿ ದೇಶದ ರೈತರು 27 ರಂದು ರಸ್ತೆ ಬಂದು ಒಗ್ಗಟ್ಟು ಪ್ರದರ್ಶಿಸಬೇಕು” ಎಂದರು.
“ಕರ್ನಾಟಕದ ಚಳುವಳಿಗಾರ ಮುಂದಿರುವ ಸವಾಲು ಎಂದರೆ ಕರ್ನಾಟಕ ಬಂದ್. ಇದನ್ನು ಹೇಗೆ ನಿರ್ವಹಿಸಬೇಕು ಎಂಬುದು ಮುಖ್ಯ. ಬೆಂಗಳೂರು, ನಮ್ಮ ಹೋಬಳಿ, ತಾಲೂಕು, ಜಿಲ್ಲೆ, ರಾಜ್ಯದಲ್ಲಿಯೂ ಬಂದ್ ಯಶಸ್ವಿಯಾಗಬೇಕು. ಕರ್ನಾಟಕದ ಎಲ್ಲಾ ಚಳುವಳಿಗಾರರು ರೈತ, ಕಾರ್ಮಿಕ, ಮಹಿಳಾ, ಕನ್ನಡಪರ, ವಿದ್ಯಾಥಿ ಜನಪರ ಸಂಘಟನೆಗಳು ಈ ಬಂದ್ನಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ಧ್ವಜಗಳನ್ನು ಹಿಡಿದು ಪ್ರತಿಭಟನೆಗೆ ಸಾಥ್ ನೀಡಬೇಕು” ಎಂದರು.
ಇದನ್ನೂ ಓದಿ: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ: ಅಕಾಲಿದಳದ ಮುಖ್ಯಸ್ಥರನ್ನು ಬಂಧಿಸಿದ ಪೊಲೀಸರು
“ಕೇಂದ್ರ, ಜಿಲ್ಲಾ ಮಟ್ಟದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ವ್ಯಾಪಾರಿಗಳಲ್ಲಿ ಮನವಿ ಮಾಡಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಹೋರಾಟಕ್ಕೆ ತಡೆ ಹಾಕಲು ಪ್ರಯತ್ನಿಸುತ್ತವೆ. ಹಾಗಾಗಿ ನಾವು ನಾಗರಿಕರ ಮನವೊಲಿಸಲು ಮುಂದಾಗಬೇಕು. ಈ ಸೆ.27 ದೇಶಕ್ಕೆ ಮಹತ್ತರ ಸಂದೇಶ ನೀಡಬೇಕು” ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
“ವಿಪಕ್ಷಗಳು ಬೆಲೆ ಏರಿಕೆ, ಪೆಟ್ರೋಲ್, ಡಿಸೇಲ್ ಬಗ್ಗೆ ಮಾತ್ರ ಮಾತನಾಡುತ್ತಿವೆ. ಆದರೆ, ದೇಶದ ಎಲ್ಲಾ ಕ್ಷೇತ್ರಗಳನ್ನು ಕಾರ್ಪೋರೇಟ್ ಮತ್ತು ಎಂಎನ್ಸಿ ಕಂಪನಿಗಳುಗೆ ದಾರೆ ಎರೆಯುತ್ತಿರುವ ಬಗ್ಗೆ ನಾವು ನಾಗರಿಕರಿಗೆ ಮನವರಿಕೆ ಮಾಡಬೇಕು. ನಾವು ನಾಗರಿಕರಾಗಿ ಸರ್ಕಾರ ಮಾಡುವ ತಪ್ಪುಗಳಿಂದ ನಮ್ಮ ಬದುಕಿನ ನೆಲೆ ಕಳೆದುಕೊಳ್ಳುವ ಸ್ಥಿತಿ ತಲುಪುತ್ತಿದೆ ಎಂಬುದನ್ನು ಜನರಿಗೆ ತಿಳಿಸಬೇಕು” ಎಂದರು.
” ಈ ಹಿನ್ನೆಲೆ ಜಿಲ್ಲಾ, ತಾಲೂಕು, ಹೋಬಳಿ ಮಟ್ಟದಲ್ಲಿ ಸಾರಿಗೆ, ಅಂಗಡಿ ಮುಂಗಟ್ಟು, ಶಾಲಾ ಕಾಲೇಜು ಮಟ್ಟದಲ್ಲಿ ಎಲ್ಲರಿಗೂ ಬಂದ್ ಬಗ್ಗೆ ಜೊತೆಗೆ ಕೃಷಿ ಮೇಲೆ ಒಕ್ಕೂಟ ಸರ್ಕಾರ ತಂದಿರುವ ಕಾನೂನುಗಳನ್ನು ಜನರಿಗೆ ಮನವರಿಗೆ ಮಾಡಿಕೊಡಬೇಕು. ಭಾರತ ಸರ್ಕಾರ ತಂದಿರುವ ವಿವಾದಿತ ಕೃಷಿ ಕಾನೂನುಗಳ ಬಗ್ಗೆ ಹೆಚ್ಚು ಪ್ರಚಾರ ನೀಡಬೇಕು. ಆಗ ನಮ್ಮ ವಿಚಾರಕ್ಕೆ ಹೆಚ್ಚು ಶಕ್ತಿ ಬರುತ್ತದೆ. ಸಂಯುಕ್ತ ಹೋರಾಟ ವೇದಿಕೆ ಕರೆ ನೀಡಿರುವ ಸಂಪೂರ್ಣ ಯಶಸ್ವಿಯಾಗಬೇಕು. ಇದಕ್ಕೆ ನಾವೇಲ್ಲರು ಪ್ರಯತ್ನ ಪಡೆಬೇಕು” ಎಂದು ಹೇಳಿದರು.
ಇದನ್ನೂ ಓದಿ: ಸೆಪ್ಟೆಂಬರ್ 27 ರಂದು ‘ಭಾರತ ಬಂದ್’ ಕರೆ ನೀಡಿದ ರೈತ ಒಕ್ಕೂಟ; ಮಾರ್ಗಸೂಚಿ ಬಿಡುಗಡೆ
ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ರೈತ ಸಂಘಟನೆ ಸಂಯುಕ್ತ ಹೋರಾಟ, ಕರ್ನಾಟಕ ಬಂದ್ ನಡೆಸಲು ನಿರ್ಧರಿಸಿದೆ. ಅದರ ಸಿದ್ಧತೆಯ ಭಾಗವಾಗಿ ಎಲ್ಲಾ ಜಿಲ್ಲೆಗಳಲ್ಲೂ ರೈತ, ದಲಿತ, ಮಹಿಳಾ, ಕಾರ್ಮಿಕ, ವಿದ್ಯಾರ್ಥಿ-ಯುವಜನರ ಸಂಘಟನೆಗಳು ಒಗ್ಗೂಡಿ ಪೂರ್ವಭಾವಿ ಸಭೆಗಳನ್ನು ನಡೆಸಿವೆ.
ಚಿತ್ರದುರ್ಗ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆಗಳು ನಡೆದಿದ್ದು, ಭಾರತ್ ಬಂದ್ ಯಶಸ್ವಿಗೊಳಿಸಲು ಕರ್ನಾಟಕ ಬಂದ್ ಹೆಚ್ಚು ಪರಿಣಾಮಕಾರಿಯಾಗಿ ನಡೆಸಲು ತಯಾರಿಗಳು ಪ್ರಾರಂಭಗೊಂಡಿವೆ.
ಬಹಿರಂಗ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್, ಕರ್ನಾಟಕ ರಾಜ್ಯ ರೈತ ಸಂಘ ಬಡಗಲಪುರ ನಾಗೇಂದ್ರ, ಕರ್ನಾಟಕ ಪ್ರಾಂತ ರೈತ ಸಂಘದ ಬಯ್ಯಾರೆಡ್ಡಿ, ಆರ್ಕೆಎಸ್ನ ದಿವಾಕರ್, ಕರ್ನಾಟಕ ಜನಶಕ್ತಿಯ ಮಲ್ಲಿಗೆ ಸಿರಿಮನೆ, ದಲಿತ ಸಂಘಟನೆ ವಕ್ಕೂಟದ ಮಾವಳ್ಳಿ ಶಂಕರ್ ಭಾಗವಹಿಸಿದ್ದರು.
ಕರ್ನಾಟಕ ಬಂದ್ ಯಶಸ್ವಿಗೊಳಿಸಲು ಬೆಂಗಳೂರಿನ ಫ್ರೀಡಂ ಪಾರ್ಕ್ ಒಳಾವರಣದಲ್ಲಿ ಕೋಡಿಹಳ್ಳಿ ಚಂದ್ರಶೇಖರ್, ಚಾಮರಸ ಮಾಲೀ ಪಾಟೀಲ್, ಮೈಕೆಲ್ ಫರ್ನಾಂಡೀಸ್, ಎಸ್.ಆರ್.ಹಿರೇಮಠ ಅವರಿದ್ದ ಅಧ್ಯಕ್ಷೀಯ ಮಂಡಳಿ ಸೆ.16 ರಂದು ಸಮಾಲೋಚನಾ ಸಭೆ ನಡೆಸಿತ್ತು.
ಇದನ್ನೂ ಓದಿ: ರೈತ ಹೋರಾಟ: ಸೆ.27ಕ್ಕೆ ಭಾರತ್ ಬಂದ್ಗೆ ಕರೆ ನೀಡಿದ ರೈತ ಸಂಘಟನೆಗಳು


