“ಸರ್ಕಾರಿ ಅಧಿಕಾರಿಗಳು ನಮ್ಮ ಚಪ್ಪಲಿ ಎತ್ತಲಷ್ಟೇ ಯೋಗ್ಯರು, ಅವರಿಗೆ ಯಾವುದೇ ಸ್ವತಂತ್ರ ನಿಲುವು ಇರುವುದಿಲ್ಲ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಹಿರಿಯ ಬಿಜೆಪಿ ನಾಯಕಿ ಉಮಾಭಾರತಿ ಈಗ ಭಾಷೆ ಸುಧಾರಿಸಿಕೊಳ್ಳುವುದಾಗಿ ಹೇಳಿದ್ದಾರೆ.
ವಿವಾದಾತ್ಮಕ ಹೇಳಿಕೆಗೆ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಕಾಂಗ್ರೆಸ್ ಹಿರಿಯ ದಿಗ್ವಿಜಯ ಸಿಂಗ್ ಕೂಡ ಟೀಕಿಸಿ, ಕ್ಷಮೆ ಕೇಳುವಂತಿ ತಿಳಿಸಿದ್ದರು. ಇದರಿಂದ ಅವರಿಗೆ ಪತ್ರ ಬರೆದಿರುವ ಬಿಜೆಪಿ ನಾಯಕಿ ಉಮಾ ಭಾರತಿ , ತಾನು ಭಾಷೆಯನ್ನು ಬದಲಿಸಿಕೊಳ್ಳುತ್ತೇನೆ, ನೀವು ಕೂಡ ಹಾಗೆ ಮಾಡಿ ಎಂದಿದ್ದಾರೆ.
ಮಂಗಳವಾರ ಪತ್ರ ಬರೆದಿರುವ ಉಮಾ ಭಾರತಿ, “ನನ್ನ ಮಾತುಗಳಿಂದ ನನಗೆ ತುಂಬಾ ನೋವಾಗಿದೆ. ನೀವು ಸರಿಯಾದ ಭಾಷೆಯನ್ನು ಬಳಸಿ ಎಂದು ನಾನು ನಿಮಗೆ ಪದೇ ಪದೇ ಹೇಳುತ್ತಿದ್ದೆ. ನಾನು ಇನ್ನು ಮುಂದೆ ನನ್ನ ಭಾಷೆಯನ್ನು ಸುಧಾರಿಸಿಕೊಳ್ಳುತ್ತೇನೆ, ನೀವು ಕೂಡ ಸಾಧ್ಯವಾದರೆ ಅದೇ ರೀತಿ ಮಾಡಿ” ಎಂದಿದ್ದಾರೆ.
ಇದನ್ನೂ ಓದಿ: ಗಾಂಧೀಜಿಯನ್ನೆ ಹತ್ಯೆ ಮಾಡಿದವರು ನಾವು, ಇನ್ನು ನೀವು ಯಾವ ಲೆಕ್ಕ?: ಹಿಂದೂ ಮಹಾಸಭಾ ಮುಖಂಡನ ಪ್ರಚೋದನಾಕಾರಿ ಹೇಳಿಕೆ!
ಉಮಾಭಾರತಿ ಇತ್ತಿಚೆಗೆ “ಅಧಿಕಾರಶಾಹಿಗಳು ರಾಜಕಾರಣಿಗಳನ್ನು ನಿಯಂತ್ರಿಸುತ್ತಾರೆ ಎಂದು ನೀವು ಭಾವಿಸುತ್ತೀರಾ? ಇಲ್ಲ. ಅವರು ನಮ್ಮ ಚಪ್ಪಲಿ ಎತ್ತಲಷ್ಟೇ ಯೋಗ್ಯರು. ನಮ್ಮ ಚಪ್ಪಲಿ ಎತ್ತುತ್ತಾರೆ. ಮೊದಲು ಖಾಸಗಿಯಾಗಿ ಚರ್ಚೆಗಳು ನಡೆಯುತ್ತವೆ ಮತ್ತು ನಂತರ ಅಧಿಕಾರಶಾಹಿ ಒಂದು ಕಡತವನ್ನು ತಯಾರಿಸುತ್ತದೆ. ನನ್ನನ್ನು ಕೇಳಿ, 11 ವರ್ಷಗಳಿಂದ ನಾನು ಕೇಂದ್ರ ಸಚಿವೆ ಮತ್ತು ಮುಖ್ಯಮಂತ್ರಿಯಾಗಿದ್ದೇನೆ. ಮೊದಲು ನಾವು ಚರ್ಚೆ ನಡೆಸುತ್ತೇವೆ ಮತ್ತು ನಂತರ ಫೈಲ್ ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ” ಎಂದಿದ್ದರು.
ಮುಂದುವರಿದು, “ಅಧಿಕಾರಶಾಹಿ ರಾಜಕಾರಣಿಗಳನ್ನು ನಿಯಂತ್ರಿಸುವುದು ಎಲ್ಲಾ ಅಸಂಬದ್ಧ. ಅವರಿಗೆ ಸಾಧ್ಯವಿಲ್ಲ … ಅವರ ನಿಲುವು ಏನು? ನಾವು ಅವರಿಗೆ ಸಂಬಳ ನೀಡುತ್ತಿದ್ದೇವೆ, ನಾವು ಅವರಿಗೆ ಪೋಸ್ಟಿಂಗ್ ನೀಡುತ್ತಿದ್ದೇವೆ, ನಾವು ಅವರಿಗೆ ಬಡ್ತಿ ಮತ್ತು ಪದವಿಯನ್ನು ನೀಡುತ್ತಿದ್ದೇವೆ. ಅವರು ಏನು ಮಾಡಬಹುದು? ಸತ್ಯವೆಂದರೆ ನಾವು ಅವರನ್ನು ನಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತೇವೆ” ಎಂದು ಹೇಳಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ब्यूरोक्रेसी कुछ नहीं होती,चप्पल उठाने वाली होती है..चप्पल उठाती है हमारी @umasribharti का बयान @ndtv @ndtvindia @manishndtv@GargiRawat @sanket @alok_pandey@vinodkapri pic.twitter.com/IRBQNA9vVe
— Anurag Dwary (@Anurag_Dwary) September 20, 2021
ಇದನ್ನೂ ಓದಿ: ಅಧಿಕಾರಿಗಳು ನಮ್ಮ ಚಪ್ಪಲಿ ಎತ್ತಲಷ್ಟೇ ಯೋಗ್ಯರು: ಬಿಜೆಪಿ ನಾಯಕಿ ಉಮಾಭಾರತಿ ವಿವಾದಾತ್ಮಕ ಹೇಳಿಕೆ