ಹವಾಮಾನ ಬದಲಾವಣೆ ಕಾರಣದಿಂದಾಗಿ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾವು ಮುಳುಗುತ್ತಿದೆ. ಹೀಗಾಗಿ, ರಾಜಧಾನಿಯನ್ನು ಬೊರ್ನಿಯೊ ದ್ವೀಪದ ಪೂರ್ವ ಕಾಲಿಮಂಟನನ್ಗೆ ಸ್ಥಳಾಂತರಿಸಲಾಗುತ್ತಿದೆ. ದೇಶದ ಹೊಸ ರಾಜಧಾನಿಯನ್ನು ನುಸಂತಾರಾ ಎಂದು ಕರೆಯಲಾಗುವುದು.
ಇಂಡೋನೇಷ್ಯಾದ ಸಂಸತ್ತು ರಾಷ್ಟ್ರದ ರಾಜಧಾನಿಯನ್ನು ಜಕಾರ್ತದಿಂದ ಬೊರ್ನಿಯೊದ ಕಾಲಿಮಂಟನ್ಗೆ ಸ್ಥಳಾಂತರಿಸುವ ಮಸೂದೆಯನ್ನು ಅಂಗೀಕರಿಸಿದೆ ಎಂದು ಹೌಸ್ ಸ್ಪೀಕರ್ ಪುವಾನ್ ಮಹಾರಾಣಿ ಮಂಗಳವಾರ ಹೇಳಿದ್ದಾರೆ. ಅಧ್ಯಕ್ಷ ಜೊಕೊ ವಿಡೋಡೊ ಅವರ ಮಹತ್ವಾಕಾಂಕ್ಷೆಯ ಪ್ರಸ್ತಾವನೆಗೆ ಕಾನೂನು ಚೌಕಟ್ಟನ್ನು ಒದಗಿಸಲಾಗಿದೆ.
ಜಕಾರ್ತಾದ ಪರಿಸರ ಮತ್ತು ಆರ್ಥಿಕ ಸುಸ್ಥಿರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ 2019 ರಲ್ಲಿ ರಾಜಧಾನಿಯನ್ನು ಸ್ಥಳಾಂತರಿಸಲಾಗುವುದು ಎಂದು ಅಧ್ಯಕ್ಷ ಜೋಕೊ ವಿಡೋಡೊ ಘೋಷಿಸಿದ್ದರು.
ಜಕಾರ್ತಾವು ಸಮುದ್ರದ ಸಮೀಪವಿರುವ ಜೌಗು ಪ್ರದೇಶದಲ್ಲಿದ್ದು, ಇದು ಪ್ರವಾಹಕ್ಕೆ ಒಳಗಾಗುತ್ತದೆ. ವಿಶ್ವ ಆರ್ಥಿಕ ವೇದಿಕೆಯ ಪ್ರಕಾರ ಭೂಮಿಯ ಮೇಲೆ ಬೇಗ ಮುಳುಗುವ ನಗರಗಳಲ್ಲಿ ಇದೂ ಒಂದಾಗಿದೆ.
ಇದನ್ನೂ ಓದಿ: ಕೊರೊನಾ ಪರಿಹಾರ ವಿಳಂಬ: ಬಿಹಾರ, ಆಂಧ್ರ ಪ್ರದೇಶ, ಕೇರಳಕ್ಕೆ ಸುಪ್ರೀಂ ತರಾಟೆ
ಜಕಾರ್ತಾವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಪ್ರದೇಶಗಳಲ್ಲಿ ಒಂದಾಗಿದೆ. ಇದು 10 ಮಿಲಿಯನ್ಗಿಂತಲೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ವಿಶ್ವಸಂಸ್ಥೆಯ ಪ್ರಕಾರ, ದೊಡ್ಡ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಅಂದಾಜು 30 ಮಿಲಿಯನ್ ಜನರು ವಾಸಿಸುತ್ತಿದ್ದಾರೆ.
ಮಂಗಳವಾರ, ಇಂಡೋನೇಷ್ಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಧ್ಯಕ್ಷೆ ಪುವಾನ್ ಮಹಾರಾಣಿ ಅವರ ಪ್ರಕಾರ, ರಾಜಧಾನಿಯನ್ನು ಸ್ಥಳಾಂತರಿಸುವ ಮಸೂದೆಯನ್ನು ಎಂಟು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಂದ ಅನುಮೋದನೆ ಪಡೆದು ಅಂಗೀಕರಿಸಲಾಗಿದೆ. ಕೇವಲ ಒಂದು ಪಕ್ಷವು ಮಸೂದೆಯನ್ನು ವಿರೋಧಿಸಿದೆ.
ರಾಷ್ಟ್ರೀಯ ಯೋಜನೆ ಮತ್ತು ಅಭಿವೃದ್ಧಿ ಏಜೆನ್ಸಿಯ ಮಾಹಿತಿಯ ಪ್ರಕಾರ, ಹೊಸ ರಾಜಧಾನಿಯ ಒಟ್ಟು ಭೂಪ್ರದೇಶವು ಸುಮಾರು 2,56,143 ಹೆಕ್ಟೇರ್ಗಳು (ಸುಮಾರು 2,561 ಚದರ ಕಿಲೋಮೀಟರ್ಗಳು) ಬಹುತೇಕ ಎಲ್ಲಾ ಅರಣ್ಯ ಪ್ರದೇಶದಿಂದ ಕೂಡಿದೆ.


