Homeಮುಖಪುಟಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ಎಎಪಿ ರ್‍ಯಾಲಿ; ‘ನಾಳೆ ನಿಮ್ಮ ಸರದಿ’ ಎಂದು ಎಚ್ಚರಿಸಿದ ಕೇಜ್ರೀವಾಲ್

ಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ಎಎಪಿ ರ್‍ಯಾಲಿ; ‘ನಾಳೆ ನಿಮ್ಮ ಸರದಿ’ ಎಂದು ಎಚ್ಚರಿಸಿದ ಕೇಜ್ರೀವಾಲ್

- Advertisement -
- Advertisement -

ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸಿ, ದೆಹಲಿ ಸರ್ಕಾರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸುಗ್ರೀವಾಜ್ಞೆಯನ್ನು ವಿರೋಧಿಸಿ ಇಂದು ದೆಹಲಿಯ ರಾಮ್‌ ಲೀಲಾ ಮೈದಾನದಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ) ರ್‍ಯಾಲಿಯನ್ನು ನಡೆಸಿತು.

ರ್‍ಯಾಲಿಯಲ್ಲಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್, “ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಇದು ಸಂಭವಿಸಬಹುದು” ಎಂದು ಎಚ್ಚರಿಸಿದರು.

“ಸುಗ್ರೀವಾಜ್ಞೆ ಏನು ಹೇಳುತ್ತದೆ? ಮೋದಿಜಿಯವರ ಸುಗ್ರೀವಾಜ್ಞೆಯು ದೆಹಲಿಯಲ್ಲಿ ಪ್ರಜಾಪ್ರಭುತ್ವ ಇರುವುದಿಲ್ಲ ಎಂದು ಹೇಳುತ್ತದೆ. ಸರ್ವಾಧಿಕಾರವಿದೆ. ಜನರು ಇಲ್ಲಿ ಸರ್ವೋಚ್ಚ ಅಲ್ಲ, ಇಲ್ಲಿ ಲೆಫ್ಟನೆಟ್‌ ಜನರಲ್‌ ಸರ್ವೋಚ್ಚರಾಗಿದ್ದಾರೆ” ಎಂದು ಟೀಕಿಸಿದ್ದಾರೆ.

“ಜನರು ಯಾರನ್ನು ಆರಿಸುತ್ತಾರೆ ಎಂಬುದು ಮುಖ್ಯವಲ್ಲ, ನಾನು ದೆಹಲಿಯನ್ನು ನಡೆಸುತ್ತೇನೆ ಎನ್ನುತ್ತಾರೆ ಮೋದಿ. ಇದು ದೆಹಲಿಗೆ ಮಾತ್ರ ಸೀಮಿತವಾಗುತ್ತದೆ ಎಂದು ಭಾವಿಸಬೇಡಿ. ದೇಶದ ಇತರ ಭಾಗಗಳಲ್ಲೂ ಇದೇ ರೀತಿಯ ಸುಗ್ರೀವಾಜ್ಞೆಯನ್ನು ತರಲು ಅವರು ಯೋಜಿಸುತ್ತಿದ್ದಾರೆ ಎಂದು ನಾನು ಕೇಳಿದ್ದೇನೆ. ದೆಹಲಿಗೆ ಬಂದಂತಹ ಸುಗ್ರೀವಾಜ್ಞೆ ಸರ್ವಾಧಿಕಾರದ ಘೋಷಣೆಯಂತಿದೆ. ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್, ಮಧ್ಯಪ್ರದೇಶದಲ್ಲಿ ಇದನ್ನು ತರಲಾಗುತ್ತದೆ” ಎಂದು ಭವಿಷ್ಯ ನುಡಿದಿದ್ದಾರೆ.

“ಕೇಂದ್ರ ಸರ್ಕಾರ ತಂದಿರುವ ಸುಗ್ರೀವಾಜ್ಞೆಯು ಚುನಾಯಿತ ಸರ್ಕಾರವನ್ನು ದುರ್ಬಲಗೊಳಿಸುತ್ತದೆ” ಎಂದು ಎಚ್ಚರಿಸಿದ್ದಾರೆ.

ರಾಜ್ಯಸಭೆಯಲ್ಲಿ ಸುಗ್ರೀವಾಜ್ಞೆಯನ್ನು ಸೋಲಿಸಬೇಕೆಂದು ಬೆಂಬಲವನ್ನು ಕೋರಿ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಿಗೆ ಕೇಜ್ರಿವಾಲ್ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ರ್‍ಯಾಲಿ ನಡೆದಿದೆ.

ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್, ಆಪ್ ಸಂಸದರಾದ ಸಂಜಯ್ ಸಿಂಗ್, ಸಂದೀಪ್ ಪಾಠಕ್, ಸುಶೀಲ್ ಗುಪ್ತಾ, ಶಾಸಕರಾದ ಗೋಪಾಲ್ ರೈ, ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ಮಾಜಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹಾಜರಿದ್ದರು.

2012ರಲ್ಲಿ ರಾಮಲೀಲಾ ಮೈದಾನದಲ್ಲಿ ಎಎಪಿ ಹುಟ್ಟಿದ್ದನ್ನು ಸ್ಮರಿಸಿದ ಕೇಜ್ರಿವಾಲ್, “ಹನ್ನೆರಡು ವರ್ಷಗಳ ಹಿಂದೆ ಭ್ರಷ್ಟಾಚಾರದ ವಿರುದ್ಧ ಇಲ್ಲಿ ಒಟ್ಟುಗೂಡಿದ್ದೆವು. ಇದೊಂದು ಪವಿತ್ರ ವೇದಿಕೆ. ಇಂದು ನಾವು ಸರ್ವಾಧಿಕಾರಿಯನ್ನು ದೇಶದಿಂದ ಕಿತ್ತೊಗೆಯಲು ಒಟ್ಟುಗೂಡಿದ್ದೇವೆ. ಆ ಸಮಯದಲ್ಲಿ ನಮ್ಮ ಚಳವಳಿ ಯಶಸ್ವಿಯಾಗಿತ್ತು. ಇದು ಸರ್ವಾಧಿಕಾರವನ್ನು ಕೊನೆಗೊಳಿಸಿ ಪ್ರಜಾಪ್ರಭುತ್ವವನ್ನು ಮರಳಿ ತರುವ ಆಂದೋಲನವಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ನಮ್ಮ ವಕೀಲ ಅಭಿಷೇಕ್ ಮನು ಸಿಂಘ್ವಿ, ನಮಗಾಗಿ, ನಿಮಗಾಗಿ ವಾದಿಸಿ ಗೆದ್ದಿದ್ದಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ” ಎಂದಿದ್ದಾರೆ.

“ನಾನು ಸುಪ್ರೀಂ ಕೋರ್ಟ್ ಅನ್ನು ಗೌರವಿಸುವುದಿಲ್ಲ ಎಂದು ಪ್ರಧಾನಿ ಹೇಳುತ್ತಾರೆ. ಪ್ರಧಾನಿಯೊಬ್ಬರು ಈ ರೀತಿ ನಡೆದುಕೊಳ್ಳುತ್ತಿರುವುದು ಇದೇ ಮೊದಲು. ದೇಶದ ಜನತೆ ಬೆಚ್ಚಿಬಿದ್ದಿದ್ದಾರೆ. ತಮ್ಮ ಪ್ರಧಾನಿ ತುಂಬಾ ದುರಹಂಕಾರಿ ಎಂಬುದನ್ನು ಅವರು ಒಪ್ಪಲ್ಲ. ಪ್ರಜಾಪ್ರಭುತ್ವವೇ ಸರ್ವೋಚ್ಚ ಎಂದು ಸುಪ್ರೀಕೋರ್ಟ್ ಹೇಳಿದೆ. ಜನರ ಇಚ್ಛೆಯೇ ಸರ್ವಶ್ರೇಷ್ಠ. ಚುನಾಯಿತ ಸರ್ಕಾರಕ್ಕೆ ಯಾವುದೇ ಪಕ್ಷ ಭೇದವಿಲ್ಲದೇ ಕೆಲಸ ಮಾಡುವ ಹಕ್ಕು ಇರಬೇಕು. ನಾನು ಕೇಳಲು ಬಯಸುತ್ತೇನೆ, ಸುಪ್ರೀಂಕೋರ್ಟ್‌ನಿಂದ ತಪ್ಪಾಗಿದೆಯೇ? ಪ್ರಧಾನಿ ಆದೇಶಕ್ಕೆ ಬದ್ಧರಾಗಬೇಕೇ?” ಎಂದು ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದೇನು?

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್‌ ಆದ್ಮಿ ಸರ್ಕಾರದ ಪರವಾಗಿ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಕಟಿಸಿತ್ತು. ದೆಹಲಿ ಸರ್ಕಾರದ ಎಲ್ಲ ನಿರ್ಧಾರಗಳಲ್ಲಿಯೂ ಕೇಂದ್ರ ಸರ್ಕಾರ ಮೂಗು ತೂರಿಸುವಂತಿಲ್ಲ ಎಂದು ಸೂಚಿಸಿತ್ತು.

ಕೇಂದ್ರದಿಂದ ನೇಮಕವಾಗುವ ಲೆಫ್ಟಿನೆಂಟ್ ಗವರ್ನರ್‌ಗೆ ಖಡಕ್ ಸೂಚನೆಗಳನ್ನು ನೀಡಿರುವ ಸರ್ವೋಚ್ಚ ನ್ಯಾಯಾಲಯ, “ದೆಹಲಿ ಸರ್ಕಾರವು ಸೇವೆಗಳ ಮೇಲೆ ನಿಯಂತ್ರಣ ಹೊಂದಿರಬೇಕು, ಲೆಫ್ಟಿನೆಂಟ್ ಗವರ್ನರ್ ಸರ್ಕಾರದ ನಿಯಂತ್ರಣಕ್ಕೆ ಬದ್ಧರಾಗಿರಬೇಕು” ಎಂದು ನಿರ್ದೇಶಿಸಿದೆ.

ಎಎಪಿ ಮತ್ತು ಕೇಂದ್ರ ಸರ್ಕಾರದ ನಡುವೆ ಅಧಿಕಾರದ ತಿಕ್ಕಾಟ ನಡೆಯುತ್ತಿರುವಾಗ ಈ ತೀರ್ಪು ಹೊರಬಿದ್ದಿದೆ. “ಜನರ ಇಚ್ಛೆಯನ್ನು ಪ್ರತಿನಿಧಿಸಿ ಕಾನೂನು ರೂಪಿಸುವ ಅಧಿಕಾರವನ್ನು ದೆಹಲಿ ವಿಧಾನಸಭೆಗೆ ನೀಡಲಾಗಿದೆ” ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಸರ್ವಾನುಮತದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

“ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಡಳಿತದ ನಿಜವಾದ ಅಧಿಕಾರವು ಚುನಾಯಿತ ಸರ್ಕಾರದ ತೋಳಿನ ಮೇಲೆ ನಿಂತಿರಬೇಕು” ಎಂದು ಪೀಠವು ಅಭಿಪ್ರಾಯಪಟ್ಟಿದೆ. ಕೇಂದ್ರ ಮತ್ತು ರಾಜ್ಯಗಳೆರಡೂ ಸೇರಿ ಕಾನೂನು ರಚಿಸಬಹುದಾದ ವಿಷಯಗಳಲ್ಲಿ ಕೇಂದ್ರ ಸರ್ಕಾರವು ದೆಹಲಿ ಚುನಾಯಿತ ಸರ್ಕಾರದೊಂದಿಗೆ ಚರ್ಚಿಸಬಹುದು. ‘ಸದರಿ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಮೀರಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲಷ್ಟೇ ಇದು ಸೀಮಿತವಾಗಿರುತ್ತದೆ’ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಆಡಳಿತ ಸೇವೆಗಳ ಮೇಲೆ ದೆಹಲಿ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಒಪ್ಪದ ನ್ಯಾಯಾಧೀಶರು, “ಸಾರ್ವಜನಿಕ ಸುವ್ಯವಸ್ಥೆ, ಪೊಲೀಸ್ ಮತ್ತು ಭೂಮಿ ವಿಷಯಗಳನ್ನಷ್ಟೇ ಅದರ (ದೆಹಲಿ) ಅಧಿಕಾರ ವ್ಯಾಪ್ತಿಯಿಂದ ಹೊರಗಿಡಲಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: ಸಾಗರದ ದಲಿತ ವಿದ್ಯಾರ್ಥಿನಿ ಪ್ರಕರಣ; ವಸತಿ ಶಾಲೆ ಮುಖ್ಯಸ್ಥನ ವಿರುದ್ಧ ‘ಪೋಕ್ಸೋ’, ‘ಅಟ್ರಾಸಿಟಿ’ ಕೇಸ್‌ ದಾಖಲು

“ಅಧಿಕಾರಿಗಳು ಮಂತ್ರಿಗಳಿಗೆ ವರದಿ ಮಾಡುವುದನ್ನು ನಿಲ್ಲಿಸಿದರೆ ಅಥವಾ ಅವರ ನಿರ್ದೇಶನಗಳನ್ನು ಪಾಲಿಸದಿದ್ದರೆ, ಸಾಮೂಹಿಕ ಜವಾಬ್ದಾರಿಯ ತತ್ವದಲ್ಲಿ ಪರಿಣಾಮ ಕಂಡುಬರುತ್ತದೆ” ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಆದೇಶಿಸಿದ್ದಾರೆ.

ರಾಷ್ಟ್ರದ ರಾಜಧಾನಿಯಲ್ಲಿ ಅಧಿಕಾರಶಾಹಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್‌ಗಳ ಮೇಲೆ ಆಡಳಿತಾತ್ಮಕ ನಿಯಂತ್ರಣವನ್ನು ಯಾರು ಹೊಂದಿದ್ದಾರೆ ಎಂಬ ಪ್ರಶ್ನೆ ಕೋರ್ಟ್ ಮುಂದಿತ್ತು. ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಈ ಪ್ರಕರಣವನ್ನು ಆಲಿಸಿತ್ತು.

ದೆಹಲಿ ಸರ್ಕಾರದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಲೆಫ್ಟಿನೆಂಟ್ ಗವರ್ನರ್, ಆಡಳಿತ ಸೇವೆಗಳ ವಿಚಾರದಲ್ಲಿ ಚುನಾಯಿತ ಸರ್ಕಾರದ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಮಂತ್ರಿಮಂಡಲದ ಸಹಾಯ ಮತ್ತು ಸಲಹೆಗೂ ಲೆಫ್ಟಿನೆಂಟ್ ಗವರ್ನರ್ ಬದ್ಧರಾಗಿರುತ್ತಾರೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...