ಅದಾನಿ ಹಗರಣ ಹೊರಬಂದ ನಂತರ ಷೇರು ಮಾರುಕಟ್ಟೆಯಲ್ಲಿನ ಲೋಪದೋಷಗಳನ್ನು ನಿಯಂತ್ರಿಸಲು, ಅದಾನಿ ಹಗರಣದ ಕುರಿತ ಮೇಲ್ವಿಚಾರಣೆ ನಡೆಸಲು ರಚಿಸಬೇಕಿರುವ ತಜ್ಞರ ಪ್ಯಾನಲ್ನಲ್ಲಿ ಯಾರಿರಬೇಕೆಂಬ ಕೇಂದ್ರದ ಮುಚ್ಚಿದ ಲಕೋಟೆಯ ಪ್ರಸ್ತಾಪಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪಾರ್ದಿವಾಲಾ ಅವರನ್ನೊಳಗೊಂಡ ಪೀಠವು “ನಾವು ಜನಸಾಮಾನ್ಯ ಹೂಡಿಕೆದಾರರ ಹಿತಾಸಕ್ತಿಗಾಗಿ ಪಾರದರ್ಶಕತೆ ಬಯಸುತ್ತೇವೆ. ಹಾಗಾಗಿ ಈ ತಜ್ಞರ ಪ್ಯಾನಲ್ನಲ್ಲಿ ಯಾರಿರಬೇಕೆಂಬ ಸಲಹೆಗಳನ್ನು ಕೇಂದ್ರ ಸರ್ಕಾರದಿಂದಾಗಲಿ, ಅರ್ಜಿದಾರರಿಂದಾಗಲಿ ತೆಗೆದುಕೊಳ್ಳದೆ ನಾವೇ ತೀರ್ಮಾನಿಸುತ್ತೇವೆ” ಎಂದಿದೆ.
ಹಿಂಡೆನ್ಬರ್ಗ್ ವರದಿ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್ ಷೇರುಗಳಲ್ಲಿನ ಷೇರುಗಳ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯ ನಿಯಂತ್ರಣ ಕಾರ್ಯವಿಧಾನಗಳನ್ನು ಬಲಪಡಿಸಲು ತಜ್ಞರ ಸಮಿತಿಯನ್ನು ರಚಿಸುವ ಸುಪ್ರೀಂ ಕೋರ್ಟ್ನ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಈ ಹಿಂದೆ ಸ್ವಾಗತಿಸಿತ್ತು. ಆ ತಜ್ಞರ ಸಮಿತಿಯಲ್ಲಿ ಇಂತವರು ಇರಲಿ ಎಂದು ಮುಚ್ಚಿದ ಲಕೋಟೆಯಲ್ಲಿ ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್ಗೆ ಕಳಿಸಿಕೊಟ್ಟಿತ್ತು. ಆದರೆ ಸುಪ್ರೀಂ ಕೋರ್ಟ್ ಅದನ್ನು ಸ್ವೀಕರಿಸಿದೆ ಹಿಂದಕ್ಕೆ ಕಳಿಸಿದೆ. ಆ ಮೂಲಕ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯುಂಟಾಗಿದೆ.
ಅದಾನಿ ಕಂಪನಿ ವಿರುದ್ಧ ವರದಿ ಪ್ರಕಟಿಸಿರುವ ಹಿಂಡೆನ್ಬರ್ಗ್ ರಿಸರ್ಚ್ ಸಂಸ್ಥೆ ಕುರಿತ ಎರಡು ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದ್ದು ವಿಚಾರಣೆ ನಡೆಸುತ್ತಿದೆ. ಕೇಂದ್ರ ಸರ್ಕಾರವು ವಂಚನೆ ನಡೆಸಿರುವ ಗೌತಮ್ ಅದಾನಿಯವರನ್ನು ರಕ್ಷಿಸಲು ಯತ್ನಿಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಿಸಿವೆ. ಇದರ ಬೆನ್ನಲ್ಲೆ ತಜ್ಞರ ಪ್ಯಾನಲ್ನಲ್ಲಿ ಇಂತವರು ಇರಬೇಕೆಂದು ಕೇಂದ್ರ ಸರ್ಕಾರ ಬಯಸುತ್ತಿರುವುದನ್ನು ಸುಪ್ರೀಂ ಕೋರ್ಟ್ ಟೀಕಿಸಿದೆ.
ಕೇಂದ್ರ ಸರ್ಕಾರ ಷರತ್ತುಗಳ ಅನ್ವಯ ಸಮಿತಿ ರಚಿಸಿದರೆ ಅದು ಅದಾನಿ ಸಮೂಹದ ಕುರಿತು ಸ್ವತಂತ್ರ ಮತ್ತು ಪಾರದರ್ಶಕ ತನಿಖೆ ನಡೆಸುತ್ತದೆ ಎನ್ನುವ ಭರವಸೆ ನಮಗಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
“ಸರ್ಕಾರ ಉಲ್ಲೇಖಿಸಿರುವ ನಿಯಮಗಳ ಅಡಿ ಸಮಿತಿ ರಚಿಸಿದರೆ, ಸರ್ಕಾರ ಮತ್ತು ಅದಾನಿ ಸಮೂಹದ ನಡುವಿನ ಸಂಬಂಧದ ಕುರಿತು ಅದು ಸ್ವತಂತ್ರವಾಗಿ, ಯಾರ ಹಂಗಿಗೂ ಬೀಳದೆ ಪಾರದರ್ಶಕವಾಗಿ ತನಿಖೆ ನಡೆಸುತ್ತದೆ ಎನ್ನುವ ಭರವಸೆ ಇರುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Explainer: ಗೌತಮ್ ಅದಾನಿ ಯಾರು? ದಿಢೀರ್ ಅತಿ ದೊಡ್ಡ ಶ್ರೀಮಂತನಾಗಿದ್ದು ಹೇಗೆ?
This clearly shows that everything is not correct