ಭಾರತದ ನಂಬರ್ ಒನ್ ಶ್ರೀಮಂತ, ಜಗತ್ತಿನ ಎರಡನೇ ಅತಿ ದೊಡ್ಡ ಶ್ರೀಮಂತ ಗೌತಮ್ ಅದಾನಿಯವರ ಸಹೋದರ ವಿನೋದ್ ಶಾಂತಿಲಾಲ್ ಅದಾನಿ ಶ್ರೀಮಂತ ಅನಿವಾಸಿ ಭಾರತೀಯ (NRI) ಎನಿಸಿದ್ದಾರೆ.
ಉದ್ಯಮಿಯಾಗಿರುವ ವಿನೋದ್ ಅದಾನಿಯವರು ದುಬೈನಲ್ಲಿ ನೆಲೆಸಿದ್ದು ಅಲ್ಲಿ ಮತ್ತು ಸಿಂಗಾಪೂರ್, ಜಕರ್ತಾದಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಅವರ ನಿವ್ವಳ ಆಸ್ತಿ 1.69 ಲಕ್ಷ ಕೋಟಿ ಇದೆ ಎನ್ನಲಾಗಿದೆ.
1976ರಲ್ಲಿ ಮುಂಬೈನಲ್ಲಿ ಟೆಕ್ಸ್ಟೈಲ್ ಉದ್ಯಮ ಆರಂಭಿಸಿದ ಅವರು 1994ರಲ್ಲಿ ಮಧ್ಯ ಪ್ರಾಚ್ಯ ದೇಶಗಳಗೆ ಉದ್ಯಮ ವಿಸ್ತರಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅವರ ಆಸ್ತಿಯಲ್ಲಿ 37,400 ಕೋಟಿ ರೂಗಳು ಸೇರ್ಪಡೆಯಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಅಂದರೆ ಅವರು ಪ್ರತಿ ದಿನ 102 ಕೋಟಿ ರೂ ಲಾಭ ಗಳಿಸಿದ್ದಾರೆ. ಅಲ್ಲದೆ ಅವರು ಭಾರತದ 6ನೇ ಅತಿ ದೊಡ್ಡ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ.
ಗೌತಮ್ ಆದಾನಿ ಸದ್ಯಕ್ಕೆ 10,94,400 ಕೋಟಿ ರೂಗಳೊಂದಿಗೆ ಜಗತ್ತಿನ ಎರಡನೇ ಅತಿ ದೊಡ್ಡ ಶ್ರೀಮಂತ ಎನಿಸಿದ್ದಾರೆ. ಕಳದೆ ಒಂದು ವರ್ಷದಿಂದ ಅವರ ಆದಾಯ ದಿನಕ್ಕೆ 1,600 ಕೋಟಿ ರೂಗಳಾಗಿವೆ.
ಇದೇ ವೇಳೆ ಗುಜರಾತ್ ರಾಜ್ಯದ ಕಛ್ ಪ್ರದೇಶದ ಅದಾನಿ ಕೆಮಿಕಲ್ಸ್ ಮತ್ತು ಮುಂದ್ರಾ ಬಂದರು ಯೋಜನೆಗಾಗಿ ಅರಣ್ಯ ಮತ್ತು ಪರಿಸರ ಇಲಾಖೆಯು ಅಕ್ರಮ ರೀತಿಯಲ್ಲಿ ಗೌತಮ್ ಅದಾನಿ ಕಂಪನಿಗೆ ಭೂ ಮಂಜೂರಾತಿ ಮಾಡಿದೆ. ಅದರಿಂದಾಗಿ ಗುಜರಾತ್ ರಾಜ್ಯ ಸರ್ಕಾರಕ್ಕೆ 58.64 ಕೋಟಿ ರೂಗಳಷ್ಟು ನಷ್ಟ ಉಂಟಾಗಿದೆ ಎಂದು ರಾಜ್ಯದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ ಸಲ್ಲಿಸಿದೆ.
ಬುಧವಾರ ರಾಜ್ಯ ವಿಧಾನಸಭೆಯಲ್ಲಿ ತನ್ನ 5ನೇ ವರದಿ ಮಂಡಿಸಿದ ಸಮಿತಿಯು “ಮೂರು ತಿಂಗಳಲ್ಲಿ ಕಂಪನಿಯಿಂದ ಪೂರ್ಣ ಮೊತ್ತವನ್ನು ವಸೂಲಿ ಮಾಡಬೇಕು ಮತ್ತು ಭೂಮಿಯನ್ನು ಅನುಚಿತವಾಗಿ ವರ್ಗೀಕರಿಸಿ, ರಾಜ್ಯ ಸರ್ಕಾರಕ್ಕೆ ನಷ್ಟ ಉಂಟುಮಾಡಿದ ಮತ್ತು ಕಂಪನಿಗೆ ಅನಾವಶ್ಯಕ ಲಾಭ ತಂದುಕೊಡುವಂತೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು” ಶಿಫಾರಸ್ಸು ಮಾಡಿದೆ.
ಇದನ್ನೂ ಓದಿ; ಅದಾನಿ ಸಂಸ್ಥೆಗೆ ಅಕ್ರಮ ಭೂ ಮಂಜೂರಾತಿ: ಗುಜರಾತ್ ಸರ್ಕಾರಕ್ಕೆ 58 ಕೋಟಿ ರೂ ನಷ್ಟ