ಗುಜರಾತ್ನಲ್ಲಿ ನಡೆದ ಕೋಮುಗಲಭೆಗೆ ಕಾರಣರಾದವರಿಗೆ “ಕಠಿಣ ಪಾಠ ಕಲಿಸಲಾಗಿದೆ”, ಹೀಗಾಗಿ 22 ವರ್ಷಗಳಿಂದ ರಾಜ್ಯವು ಶಾಂತಿಯುತವಾಗಿದೆ ಎಂದು ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಗುರುವಾರ ನಡೆದ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದರು. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ, “ಅಪರಾಧಿಗಳನ್ನು ಮುಕ್ತವಾಗಿ ನಡೆಯಲು ಅವಕಾಶ ನೀಡಿದ್ದೇ ಅಮಿತ್ ಶಾ ಕಲಿಸಿದ ‘ಪಾಠ’ಗಳಾಗಿವೆ” ಎಂದು ಹೇಳಿದ್ದಾರೆ.
ಗುಜರಾತ್ನ ಅತಿದೊಡ್ಡ ಮುಸ್ಲಿಂ ಬಾಹುಳ್ಯದ ಪ್ರದೇಶವಾದ ಜುಹಾಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, “ಅಮಿತ್ ಶಾ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡುತ್ತಾ, ‘2002 ರಲ್ಲಿ ಗುಜರಾತ್ನ ಗಲಭೆಕೋರರಿಗೆ ಕಠಿಣ ಪಾಠ ಕಲಿಸಿದ್ದು, ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಶಾಶ್ವತ ಶಾಂತಿ ನೆಲೆಸುವಂತೆ ಮಾಡಿದೆ’ ಎಂದು ಹೇಳಿದ್ದಾರೆ. ಈ ಅಹಮದಾಬಾದ್ ಕ್ಷೇತ್ರದ ಸಂಸದ ಅಮಿತ್ ಶಾ ಅವರಿಗೆ ನಾನು ಹೇಳಲು ಬಯಸುವುದೇನೆಂದರೆ, 2002 ರಲ್ಲಿ ನೀವು ಕಲಿಸಿದ ಪಾಠದಿಂದಾಗಿ ಬಿಲ್ಕಿಸ್ ಅತ್ಯಾಚಾರಿಗಳಿಗೆ ಮುಕ್ತಿ ಸಿಗುತ್ತದೆ, ನೀವು ಕಲಿಸಿದ ಪಾಠದಿಂದಾಗಿ ಬಿಲ್ಕಿಸ್ನ ಮೂರು ವರ್ಷದ ಮಗಳ ಕೊಲೆಗಾರರಿಗೆ ಬಿಡುಗಡೆ ಸಿಗುತ್ತದೆ, ಅಹ್ಸಾನ್ ಜಾಫ್ರಿಯನ್ನು ಕೊಲ್ಲಬಹುದೆಂದು ಎಂಬ ಪಾಠ ಕಲಿಸಿದ್ದೀರಿ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಉದ್ವೇಗಗೊಂಡು ಮಾಡನಾಡಿದ ಓವೈಸಿ, 2002 ರ ಕೋಮು ಗಲಭೆಯಲ್ಲಿ ಸಾವಿರಕ್ಕೂ ಹೆಚ್ಚು ಜನರ ಬಲಿ ಪಡೆದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಮತ್ತು ಬೆಸ್ಟ್ ಬೇಕರಿ ಸುಟ್ಟ ಘಟನೆ ಬಗ್ಗೆ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಇತಿಹಾಸದ ವಿರೂಪ ಸರಿಪಡಿಸುವಾಗ ನಮ್ಮನ್ನು ಈಗ ಯಾರು ತಡೆಯುತ್ತಾರೆ?: ಅಮಿತ್ ಶಾ ಪ್ರಶ್ನೆ
“ಮಿಸ್ಟರ್ ಅಮಿತ್ ಶಾ ಅವರೇ ನಾವು ಎಷ್ಟು ಪಾಠಗಳನ್ನು ನೆನಪಿಸಿಕೊಳ್ಳಬೇಕು? ಆದರೆ ನೆನಪಿಡಿ, ಪಾಠ ಕಲಿಸುವುದರಿಂದ ಏನೂ ಆಗುವುದಿಲ್ಲ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ನೀಡಿದಾಗ ಶಾಂತಿ ಬಲಗೊಳ್ಳುತ್ತದೆ” ಎಂದು ಅವರು ಹೇಳಿದ್ದಾರೆ.
2002 mein Kaunsa sabaq sikhaya tha @amitshah? Naroda Patiya ka sabaq? Gulberg ka sabaq? Best Bakery ka sabaq? Bilqis Bano ka sabaq? pic.twitter.com/aV3hWC2Ab4
— Asaduddin Owaisi (@asadowaisi) November 25, 2022
ಅಮಿತ್ ಶಾ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಓವೈಸಿ, “ಅಧಿಕಾರ ಯಾವತ್ತೂ ಒಬ್ಬ ವ್ಯಕ್ತಿಯ ಬಳಿ ಇರುವುದಿಲ್ಲ. ಮುಂದೊಂದು ದಿನ ಅಧಿಕಾರವನ್ನು ಎಲ್ಲರಿಂದಲೂ ಕಿತ್ತುಕೊಳ್ಳುತ್ತಾರೆ. ಅಧಿಕಾರದ ಅಮಲಿನಲ್ಲಿ ಇಂದು ಗೃಹ ಸಚಿವರು ನಾವು ಪಾಠ ಕಲಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ನೀವು ಏನು ಪಾಠ ಕಲಿಸಿದ್ದೀರಿ? ನೀವು ಇಡೀ ದೇಶಕ್ಕೆ ಕುಖ್ಯಾತಿ ಪಡೆದಿದ್ದೀರಿ. ದೆಹಲಿಯಲ್ಲಿ ಕೋಮುಗಲಭೆಗಳು ನಡೆಯುತ್ತಿವೆ, ಆದರೆ ನೀವು ಯಾವ ಪಾಠ ಕಲಿಸಿದ್ದೀರಿ?” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಅಮಿತ್ ಶಾರನ್ನು ಬಂಧಿಸಿ: ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ ಆಗ್ರಹ
ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ 14 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಚುನಾವಣೆಯು ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ 89 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಉಳಿದ 93 ವಿಧಾನಸಭಾ ಸ್ಥಾನಗಳಿಗೆ ಎರಡನೇ ಹಂತದ ಮತದಾನ ನಡೆಯಲಿದೆ.