ಕಾರ್ಮಿಕ ಸಂಘಟನೆಯಾದ, ‘ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್’ (AICCTU)ದ ಹೋರಾಟಕ್ಕೆ ಮತ್ತೊಂದು ಗೆಲುವು ಸಿಕ್ಕಿದ್ದು, 12,872 ಪೌರಕಾರ್ಮಿಕರನ್ನು ಖಾಯಂಗೊಳಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಸೆಪ್ಟೆಂಬರ್ 2022 ರಲ್ಲಿ 11,000 ಪೌರಕಾರ್ಮಿಕರನ್ನು ರಾಜ್ಯ ಸರ್ಕಾರ ಖಾಯಂಗೊಳಿಸಿತ್ತು.
AICCTU ಪ್ರಕಾರ, ರಾಜ್ಯದಲ್ಲಿ 33 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರಿದ್ದಾರೆ. ರಾಜ್ಯ ಹಣಕಾಸು ಇಲಾಖೆ ನೀಡಿದ ಅನುಮೋದನೆಯು ಮತ್ತಷ್ಟು ಹೆಚ್ಚಿನ ಪೌರಕಾರ್ಮಿಕರನ್ನು ಖಾಯಂಗೊಳಿಸಲು ದಾರಿ ಮಾಡಿಕೊಟ್ಟಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ನ್ಯಾಯಕ್ಕಾಗಿ ಆಗ್ರಹಿಸಿ ಹಲವು ವರ್ಷಗಳಿಂದ ಮುಷ್ಕರ ನಡೆಸಿ ಹೋರಾಟ ನಡೆಸಿದ ಕಾರ್ಮಿಕರಿಗೆ ಸಂದ ಜಯವಾಗಿದೆ, ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ. ರಾಜ್ಯದ ನಗರದ ಸ್ಥಳೀಯ ಸಂಸ್ಥೆಗಳ ತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ನೇರ ವೇತನ ಪಡೆಯುವ ಪೌರಕಾರ್ಮಿಕರು, ತ್ಯಾಜ್ಯ ವಾಹನಗಳ ಚಾಲಕರು, ಕ್ಲೀನರ್ಗಳು, ಲೋಡರ್ಗಳು ಮತ್ತು ಮೇಲ್ವಿಚಾರಕರು ಸೇರಿದಂತೆ ಎಲ್ಲಾ ಪೌರಕಾರ್ಮಿಕರನ್ನು ಕೂಡಾ ಖಾಯಂಗೊಳಿಸಬೇಕು” ಎಂದು ಎಐಸಿಸಿಟಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸ್ತುತ, ಪೌರಕಾರ್ಮಿಕರು 12,000 ರಿಂದ 17,000 ರೂ.ಗಳವರೆಗೆ ವೇತನ ಪಡೆಯುತ್ತಿದ್ದಾರೆ. ಅವರನ್ನು ಖಾಯಂಗೊಳಿಸುವುದರಿಂದ ಗುತ್ತಿಗೆ ಕಾರ್ಮಿಕರಿಗೆ ನೀಡದ ಪಿಂಚಣಿಯಂತಹ ಸೌಲಭ್ಯಗಳಿಗೆ ಅರ್ಹರಾಗುತ್ತಾರೆ.
2022ರ ಜುಲೈ 1 ರಂದು, ಪೌರಕಾರ್ಮಿಕರನ್ನು ಖಾಯಂಗೊಳಿಸುವಂತೆ ಮತ್ತು ಚಾಲಕರು ಮತ್ತು ಸಹಾಯಕರುಗಳಂತಹ ಇತರ ಗುತ್ತಿಗೆ ಕಾರ್ಮಿಕ ಕನಿಷ್ಠ ಮಾಸಿಕ ವೇತನ 30,000 ರೂ. ಏರಿಸುವಂತೆ ಒತ್ತಾಯಿಸಿ AICCTU ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಆಯೋಜಿಸಿತ್ತು.
We have been informed that the Govt. of K'taka will make all directly employed pourakarmikas (sweepers) permanent workers. This is a tremendous victory for the workers who went on strike and struggled for years on end demanding justice. Inquilab Zindabad! pic.twitter.com/mAt0qzp0UA
— AICCTU Karnataka (@aicctukar) January 17, 2023
ಈ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮೂರು ತಿಂಗಳೊಳಗೆ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಆರಂಭದಲ್ಲಿ ರಾಜ್ಯ ಸರ್ಕಾರವು ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಘೋಷಿಸಿದಾಗ, ಅದರಲ್ಲಿ ಬೆಂಗಳೂರಿನ 3,673 ಪೌರಕಾರ್ಮಿಕರು ಸೇರಿದಂತೆ ರಾಜ್ಯದ 11,133 ಪೌರಕಾರ್ಮಿಕರು ಒಳಗೊಂಡಿದ್ದರು. ಈ ವೇಳೆ ಪ್ರತಿಕ್ರಿಯೆ ನೀಡಿದ್ದ ಎಐಸಿಸಿಟಿಯು, “ಇದು ರಾಜ್ಯದ ಪೌರಕಾರ್ಮಿಕರ ಮೂರನೇ ಒಂದು ಭಾಗ ಮಾತ್ರ” ಎಂದು ಹೇಳಿಕೊಂಡಿತ್ತು.
ಎಲ್ಲಾ ಪೌರ ಕಾರ್ಮಿಕರನ್ನು ಖಾಯಂಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸಂಘಟನೆಯು ಮತ್ತೊಂದು ಮುಷ್ಕರವನ್ನು ನಡೆಸಲಿದೆ ಎಂದು 2022ರ ಸೆಪ್ಟೆಂಬರ್ನಲ್ಲಿ ಎಐಸಿಸಿಟಿಯು ಎಚ್ಚರಿಸಿತ್ತು.
ಇದನ್ನೂ ಓದಿ: ‘14 ಶಾಸಕರು, 4 ಸಚಿವರು ನಮ್ಮಲ್ಲಿ ಲಂಚ ಕೇಳಿದ್ದಕ್ಕೆ ದಾಖಲೆ ಇವೆ’: ಗುತ್ತಿಗೆದಾರ ಸಂಘದ ಕಾರ್ಯಾಧ್ಯಕ್ಷ