Homeಕರ್ನಾಟಕ`ವೈರಸ್' ಕಾರಣಕ್ಕೆ ಹೊರಗಿಟ್ಟ ಸಾಬರನ್ನು ಬಿಟ್ಟು ಬದುಕೀತೇ ನಮ್ಮೂರು?

`ವೈರಸ್’ ಕಾರಣಕ್ಕೆ ಹೊರಗಿಟ್ಟ ಸಾಬರನ್ನು ಬಿಟ್ಟು ಬದುಕೀತೇ ನಮ್ಮೂರು?

- Advertisement -
- Advertisement -

ಈರುಳ್ಳಿ ಬೆಳೆಯುವ ಒಂದೂರ ಕಥೆ

ನನ್ನೂರು ತಾಳಿಕಟ್ಟೆ. ನಿಖರವಾಗಿ ಹೇಳಬೇಕೆಂದರೆ ಇಲ್ಲಿಂದ ಒಂದೂವರೆ ಮೈಲಿ ದೂರಕ್ಕೆ ಟಿಸಿಲೊಡೆದ ಪುಟ್ಟ ಕುಗ್ರಾಮ ನನ್ನೂರಾದರು, ನೂರಿಪ್ಪತ್ತು ಮನೆಗಳಿರುವ ನನ್ನ `ಕಾವಲು’ ತನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳೋದು ಹೆಚ್ಚೂಕಮ್ಮಿ ಸಾವಿರ ಮನೆಗಳಿರುವ ಇದೇ ತಾಳಿಕಟ್ಟೆಯ ಮೂಲಕ. ಈ ತಾಳಿಕಟ್ಟೆಯ ಬಗ್ಗೆ, ಈ ಊರಿನ ಸೌಹಾರ್ದ ಪರಂಪರೆಯ ಬಗ್ಗೆ ಇಲ್ಲಿಗೆ ಮೂವತ್ತು ವರ್ಷಗಳ ಹಿಂದೆಯೇ ಲಂಕೇಶ್ ಮೇಷ್ಟ್ರು ತಮ್ಮ ಮರೆಯುವ ಮುನ್ನ ಅಂಕಣದಲ್ಲಿ ಬರೆದಿದ್ದರು. ಕಾಕತಾಳೀಯವೊ ಏನೊ, ಮುಂದೆ ಲಂಕೇಶ್ ಅವರು ಕನ್ನಡದ ಜಾಣಜಾಣೆಯರನ್ನೆ ಮುಂದಿಟ್ಟುಕೊಂಡು `ಪ್ರಗತಿರಂಗ’ ಕಟ್ಟಿದಾಗ ಅದರ ಮೊದಲ ಸಭೆ ನಡೆಸಿದ್ದು ಕೂಡಾ ಇದೇ ತಾಳಿಕಟ್ಟೆಯಲ್ಲಿ. ಇಲ್ಲಿ ಸರ್ ಸೈಯದ್ ಮಹಮದ್ ಇಸ್ಮಾಯಿಲ್ ಖಾದ್ರಿ ಎಂಬ ಸೂಫಿ ಸಂತರ ದರ್ಗಾ ಇದೆ. ಆದರು ಈ ಊರಿನಲ್ಲಿ ಇವತ್ತಿಗು ಒಂದು ಮುಸ್ಲಿಂ ಕುಟುಂಬ ಬಿಟ್ಟರೆ ಎರಡನೆಯ ಮನೆಯಿಲ್ಲ. ಈ ದರ್ಗಾದ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳೋದು ಹಿಂದೂಗಳೆ. ವರ್ಷಕ್ಕೊಮ್ಮೆ ನಡೆಯುವ ಉರುಸಿನ ನೇತಾರಿಕೆ ಕೂಡಾ ಇಲ್ಲಿನ ಶೂದ್ರ ಸಮುದಾಯಗಳದ್ದೆ. ಬೇರೆ ಕಡೆಯಿಂದ ಉರುಸಿಗೆಂದು ಬರುವ ಮುಸ್ಲಿಂ ಜನರ ದೇಖರೇಖಿಯನ್ನು ಹಿಂದೂಗಳು ಮುತುವರ್ಜಿಯಿಂದ ನೋಡಿಕೊಳ್ಳುತ್ತಾರೆ.

ಈ ಸೌಹಾರ್ದತೆಯ ಬಗ್ಗೆ ಬರೆಯುತ್ತಾ ಲಂಕೇಶ್ ಮೇಷ್ಟ್ರು `ಜಾತಿ ಜಗಳದಲ್ಲಿ ಮನುಷ್ಯತ್ವವನ್ನೆ ಬಲಿತೆಗೆದುಕೊಳ್ಳುವ ನೀಚರೆಲ್ಲರು ಈ ಊರಿನ ಕುರುಬರಿಂದ ಕಲಿಯಬೇಕು ಎನ್ನುವುದೇ ನನ್ನ ಅನಿಸಿಕೆ’ ಎಂದು ಹೆಮ್ಮೆಯಿಂದ ದಾಖಲಿಸಿದ್ದರು. ಇಂಥಾ ಸೌಹಾರ್ದತೆಗೆ ಹೆಸರಾಗಿದ್ದ ಈ ಊರು, ಇವತ್ತು ದರ್ಗಾಕ್ಕೆ ಬರುವ ಮುಸ್ಲಿಂ ಭಕ್ತರ ಮಾತು ಒತ್ತಟ್ಟಿಗಿರಲಿ, ಮುಸಲ್ಮಾನ ವ್ಯಾಪಾರಿಗಳನ್ನೂ ತನ್ನೊಳಗೆ ಬಿಡಿಸಿಕೊಳ್ಳಬಾರದೆಂಬ ಅಲಿಖಿತ ಫರ್ಮಾನು ಧರಿಸಿಕೊಂಡು ಕೂತಿದೆ. ಮೂಲತಃ ಮನುಷ್ಯನೆ ಅಲ್ಲದ ಕ್ಷುದ್ರ ಕ್ರಿಮಿಯೊಂದು ತಂದೊಡ್ಡುವ ಕೊರೊನಾ ಎಂಬ ರೋಗದಲ್ಲು ಧರ್ಮದ ನಂಜು ಹುಡುಕಿ ಸಮಾಜವನ್ನೆ ಸೋಂಕುಗೊಳಿಸಿದ `ಪುಣ್ಯಾತ್ಮ?ರ ಪ್ರಭಾವಕ್ಕೆ ಈ ಊರಿನ ಸೌಹಾರ್ದತೆಯೂ ಬಲಿಯಾದುದರ ದ್ಯೋತಕ ಇದು.

ಈ ಕುರಿತಂತೆ ನನಗೆ ನನ್ನ ಜನರ ಬಗ್ಗೆ ಬೇಸರವಿಲ್ಲ, ಆಕ್ಷೇಪಗಳೂ ಇಲ್ಲ. ಯಾಕೆಂದರೆ ಈ ಒಂದು ಕಾರಣಕ್ಕೆ ನನ್ನ ಜನ ಸಂಪೂರ್ಣ ಕೋಮುವಾದಿಗಳಾಗಿಬಿಟ್ಟಿದ್ದಾರೆ, ಮೋದಿ ಭಜನಾ ಮಂಡಳಿ ಸೇರಿಕೊಂಡಿದ್ದಾರೆ, ಹೊಸದಾಗಿ ಅಜ್ಞಾನಿಗಳಾಗಿಬಿಟ್ಟಿದ್ದಾರೆ ಎಂದು ಆರೋಪಿಸಲಾರೆ. ಅಜ್ಞಾನ ಮತ್ತು ಮುಗ್ಧತೆ, ಇವೆರಡೂ ನಮ್ಮ ಜನರ ನಿತ್ಯಾಚರಣೆಗಳು. ಅವಕಾಶ ತಮ್ಮ ಕೈಯಲ್ಲಿದ್ದಾಗ ವಿವೇಕವನ್ನು ಜನರಿಗೆ ತಲುಪಿಸುವ ಹೊಣೆಯನ್ನು ಸಮರ್ಪಕವಾಗಿ ನಿಭಾಯಿಸಲಾಗದ ಈ ದೇಶದ ಜಾತ್ಯತೀತ ವಾರಸುದಾರರು ಇವತ್ತು ಇಂಥಾ ಘಟನೆಗಳನ್ನು ನೆಪ ಮಾಡಿಕೊಂಡು `ಜನ’ರನ್ನು ದೂಷಿಸುವುದರ ಬಗ್ಗೆ ನನಗೆ ಅನೇಕ ಆಕ್ಷೇಪಣೆಗಳಿವೆ. ವಾಸ್ತವಗಳನ್ನು ಧಿಕ್ಕರಿಸಿ ಆದರ್ಶಗಳನ್ನು ಕಟ್ಟಲಾಗುವುದಿಲ್ಲ!

ಇಷ್ಟೆಲ್ಲ ಬದಲಾದ ನಮ್ಮ ಜನ ಮುಂದಿನ ವರ್ಷದಿಂದ ಉರುಸ್ ನಿಲ್ಲಿಸಿಬಿಡುತ್ತಾರೆಯೇ? ಖಂಡಿತ ಇಲ್ಲ. ಯಾಕೆಂದರೆ ಪ್ರತಿವರ್ಷ ತಾವು ಆಚರಿಸುವ ಗುಳ್ಳಮ್ಮ, ಬೀರಪ್ಪ ದೇವರುಗಳ ಉತ್ಸವದಷ್ಟೆ ಕಟಿಬದ್ಧರಾಗಿ ಆ ಉರುಸ್ ನಡೆಸುತ್ತಾರೆ. ಅದು ಅವರಿಗೆ ತಮ್ಮದೇ ಎನ್ನುವಷ್ಟು ಸಹಜವಾಗಿ ಒಗ್ಗಿಹೋಗಿದೆ. ಆದರು ಸಂದರ್ಭ ಮತ್ತು ಸಮೂಹಸನ್ನಿಗೆ ದನಿಗೂಡಿಸುವ ದೌರ್ಬಲ್ಯಕ್ಕೆ ಜನ ಮಾರುಹೋಗಿದ್ದಾರೆ. ನಾವಿಲ್ಲಿ ದೂಷಿಸಲೇಬೇಕೆಂದಿದ್ದರೆ ಅದು ಜನರನ್ನಲ್ಲ, ಸ್ವತಃ ಸೌಹಾರ್ದತೆ ಸ್ವಭಾವದ ನಮ್ಮ ಜನರನ್ನು ಅದಕ್ಕೆ ಕಮಿಟ್ ಮಾಡಿಸುವಲ್ಲಿ ಸೋತುಹೋದ ಇಷ್ಟುದಿನಗಳ ಅಧಿಕಾರಸ್ಥ-ಹೋರಾಟನಿರತ ಜಾತ್ಯತೀತ ವಾರಸುದಾರರನ್ನು ಮತ್ತು ಈ ವಾರಸುದಾರರ ಲೋಪಗಳ ಲಾಭ ಪಡೆದು ಕೋಮುಸನ್ನಿಗಳನ್ನು ಹುಟ್ಟುಹಾಕುತ್ತಿರುವ ಮನುಷ್ಯ ಕ್ರಿಮಿಗಳನ್ನು.

ಕೇವಲ ವಿಚಾರವಂತಿಕೆಗಷ್ಟೆ ಅಲ್ಲ, ಆರ್ಥಿಕತೆಯಲ್ಲು ನಮ್ಮ ಜನ ಇಂಥಾ ಸನ್ನಿಗಳಿಂದಾಗಿ ದೊಡ್ಡ ಗೊಂದಲಕ್ಕೆ ಬಿದ್ದಿದ್ದಾರೆ. ಫಲವತ್ತಾದ ಕಪ್ಪುಮಣ್ಣು ಹೊಂದಿರುವ ನಮ್ಮ ಜನರಿಗೆ ಈರುಳ್ಳಿಯೆ ಪ್ರಧಾನ ಆರ್ಥಿಕ ಬೆಳೆ. ಹೊಲಗಳನ್ನು ಅಣಿಗೊಳಿಸಿಕೊಂಡು ಕೂತಿರುವ ಜನ, ಒಂದೆರಡು ಮಳೆ ಬಿದ್ದು ನೆಲ ಹಸನಾದರೆ ಬಿತ್ತನೆಗೆ ದಿನ ಎಣಿಸುತ್ತಿದ್ದಾರೆ. ಸಾಬರ ಮೇಲಿನ ಈ ಅಘೋಷಿತ ಸಮೂಹಸನ್ನಿಯಂತಹ ಗ್ರಾಮೀಣ ನಿಷೇಧ ಈಗ ಅವರನ್ನು ದೊಡ್ಡ ಸಂಕಟಕ್ಕೆ ತಳ್ಳಿದೆ. ಬೆಳೆದ ಈರುಳ್ಳಿಯನ್ನು ಬೆಂಗಳೂರಿಗೊ, ಹಾಸನಕ್ಕೊ ತಂದು ಮಾರಾಟ ಮಾಡುವ ಪರಿಪಾಟ ಇದೆಯಾದರು, ಈರುಳ್ಳಿ ರೇಟು ಕುಸಿದಂತಹ ಸಂದರ್ಭದಲ್ಲಿ ನಮ್ಮೂರಿನ ರೈತರಿಗೆ ಆಸರೆಯಾಗಿ ನಿಲ್ಲೋದು `ಈರುಳ್ಳಿ ಸಾಬರು’. ಹತ್ತಿರದ ಪಟ್ಟಣಗಳ ಮುಸ್ಲಿಂ ವರ್ತಕರು ಮನೆ ಬಾಗಿಲಿಗೇ ಬಂದು ಒಂದಷ್ಟು ಚೌಕಾಸಿ ನಡೆಸಿ, ಚೂರು ಲಾಭವನ್ನೂ ಇಟ್ಟುಕೊಂಡು ಲೋಡುಗಟ್ಟಲೆ ಈರುಳ್ಳಿ ಖರೀದಿಸಿ ಒಯ್ಯುತ್ತಾರೆ. ಮೊದಲೇ ರೇಟು ಕಡಿಮೆ ಇರುವಾಗ ಖಾಲಿ ಚೀಲ, ಹಮಾಲಿ ಮತ್ತು ಲಾರಿ ಬಾಡಿಗೆಯಂತಹ ಹೆಚ್ಚಿನ ಹೊರೆ ತಪ್ಪಿಸಿಕೊಳ್ಳಲು ಜನ ಈರುಳ್ಳಿ ಸಾಬರಿಗೇ ತಮ್ಮ ಬೆಳೆ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಾರೆ.

ಆದರೆ ಈ ಸಲ ಕೊರೊನಾ ಕಾಯಿಲೆ ಯಾವಾಗ ಸಂಪೂರ್ಣ ಸಮಾಪ್ತಿಯಾಗುತ್ತೆ ಎಂಬ ಖಾತ್ರಿಯಿಲ್ಲ. ಕಳೆದ ಸಲವೇ ಆರಂಭದಲ್ಲಿ ಒಳ್ಳೆಯ ಬೆಲೆ ಸಿಕ್ಕರು, ಆಮೇಲೆ ಏಕಾಏಕಿ ರೇಟು ಕುಸಿದು ಕಣ್ಣೀರಿಟ್ಟ ರೈತರು ಸಾಕಷ್ಟಿದ್ದಾರೆ. ಕೊರೊನಾ ಕಾರಣದಿಂದ ಹೊರ ದೇಶಕ್ಕೆ ಈರುಳ್ಳಿ ಎಕ್ಸ್ಪೋರ್ಟ್ ಅನುಮತಿ ಸಿಗದೆ ಹೋದರೆ ರೇಟು ಕೈಗತ್ತುವುದಿಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಅಂಥಾ ಹೊತ್ತಲ್ಲಿ ಸಾಬರಿಗು ನಾವು ಹೀಗೆ ನಿಷೇಧ ಹೇರಿಕೊಂಡು ಕೂತರೆ ಈರುಳ್ಳಿಯ ಗತಿಯೇನು? ಎಂಬ ಚಿಂತೆಯೂ ಇದೇ ಜನರನ್ನು ಕಾಡುತ್ತಿದೆ. ಬೇರೆ ಬೆಳೆಗಳಂತೆ ಈರುಳ್ಳಿಯನ್ನು ದಾಸ್ತಾನು ಇಡಲಾಗದು.

ಬಿದ್ದ ಆರ್ಥಿಕತೆ, ಕುಂಠಿತಗೊಂಡ ಕೃಷಿ ಚಟುವಟಿಕೆಯಿಂದಾಗಿ ಈರುಳ್ಳಿ ಬೀಜಗಳು ಹಿಂದೆಂದು ಕಂಡರಿಯದಷ್ಟು ದುಬಾರಿಯಾಗಿವೆ. ಪ್ರತಿ ಸೇರಿಗೆ ಏಳುನೂರರಿಂದ ಎಂಟುನೂರು ರೂಪಾಯಿ ಇರುತ್ತಿದ್ದ ಬೀಜ, ಈಗಾಗಲೆ ಒಂದು ಸಾವಿರದ ಮುನ್ನೂರರಿಂದ ಒಂದೂವರೆ ಸಾವಿರ ರೂಪಾಯಿಯಾಗಿದೆ. ಬಿತ್ತನೆ ಕಾಲ ಸಮೀಪಿಸಿದಂತೆ ಅದು ಮತ್ತಷ್ಟು ಹೆಚ್ಚಾಗುವ ಸಂಭವವಿದೆ. ಈ ಸಲ ಕೃಷಿ ಚಟುವಟಿಕೆಯ ಇನ್ನಿತರೆ ಖರ್ಚೂ ದುಬಾರಿಯಾಗುವ ಸಾಧ್ಯತೆ ಇದೆ. ಹೀಗೆ ಎಕರೆಗೆ ಮೂವತ್ತರಿಂದ ನಲವತ್ತು ಸಾವಿರ ಖರ್ಚು ಮಾಡಿ ಕೊಳ್ಳುವವರೇ ಇಲ್ಲವಾದರೆ ಏನು ಗತಿ? ಎಂಬ ಆತಂಕವೂ ಇದೇ ಜನರನ್ನು ಕಾಡುತ್ತಿದೆ.

ಇದು ಕೇವಲ ಒಂದು ಊರಿನ ಕಥೆಯಲ್ಲ. ಹಿಂದೂಗಳು ಮಾತ್ರವಲ್ಲದೇ ಮುಸಲ್ಮಾನರು, ಸಿಖ್ಖರು, ಪಾರಸಿಗಳು, ಜೈನರು, ಬೌದ್ಧರು, ಕಿರಸ್ತಾನರು ಹೀಗೆ ಎಲ್ಲಾ ಧರ್ಮ ವರ್ಗಗಳನ್ನು ತನ್ನವರೆಂದು ಭಾವಿಸಿರುವ ಈ ನಮ್ಮ ದೇಶ ಈ ಎಲ್ಲರ ಆರ್ಥಿಕ ಪಾಲುದಾರಿಕೆಯಿಂದ ತನ್ನ ಆರ್ಥಿಕಶಕ್ತಿಯನ್ನು ಅರ್ಥಾತ್ ಜಿಡಿಪಿಯನ್ನು ಸೃಷ್ಟಿಸಿಕೊಂಡಿದೆ. ಇದೊಂಥರ ಆರ್ಥಿಕ ಸರಪಳಿಯಿದ್ದಂತೆ. ಯಾವುದೊ ರಾಜಕೀಯ ಅಥವಾ ಸೈದ್ದಾಂತಿಕ ದುರುದ್ದೇಶಕ್ಕಾಗಿ ಇವರಲ್ಲಿ ಒಬ್ಬರನ್ನು ಹೊರಗಿಡುವ ಹುನ್ನಾರ ನಡೆಸಿದರು, ಇಡೀ ಆರ್ಥಿಕ ಚಕ್ರವೆ ಕೊಂಡಿ ಕಳಚಿಕೊಂಡ ಸರಪಳಿಯಂತೆ ಅಸ್ತವ್ಯಸ್ತವಾಗಿ ಬಿದ್ದುಹೋಗುತ್ತೆ. ನನ್ನೂರು ಅನುಭವಿಸುತ್ತಿರುವ ಗೊಂದಲ ಇದಕ್ಕೊಂದು ನಿದರ್ಶನವಷ್ಟೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. This is baseless. You haven’t addressed other problems happening around us. Our country remains secular only till Hindu’s are in majority. Please look at what happened in Pak and Bangladesh or even in West Bengal.

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...