Homeಕರ್ನಾಟಕ`ವೈರಸ್' ಕಾರಣಕ್ಕೆ ಹೊರಗಿಟ್ಟ ಸಾಬರನ್ನು ಬಿಟ್ಟು ಬದುಕೀತೇ ನಮ್ಮೂರು?

`ವೈರಸ್’ ಕಾರಣಕ್ಕೆ ಹೊರಗಿಟ್ಟ ಸಾಬರನ್ನು ಬಿಟ್ಟು ಬದುಕೀತೇ ನಮ್ಮೂರು?

- Advertisement -
- Advertisement -

ಈರುಳ್ಳಿ ಬೆಳೆಯುವ ಒಂದೂರ ಕಥೆ

ನನ್ನೂರು ತಾಳಿಕಟ್ಟೆ. ನಿಖರವಾಗಿ ಹೇಳಬೇಕೆಂದರೆ ಇಲ್ಲಿಂದ ಒಂದೂವರೆ ಮೈಲಿ ದೂರಕ್ಕೆ ಟಿಸಿಲೊಡೆದ ಪುಟ್ಟ ಕುಗ್ರಾಮ ನನ್ನೂರಾದರು, ನೂರಿಪ್ಪತ್ತು ಮನೆಗಳಿರುವ ನನ್ನ `ಕಾವಲು’ ತನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳೋದು ಹೆಚ್ಚೂಕಮ್ಮಿ ಸಾವಿರ ಮನೆಗಳಿರುವ ಇದೇ ತಾಳಿಕಟ್ಟೆಯ ಮೂಲಕ. ಈ ತಾಳಿಕಟ್ಟೆಯ ಬಗ್ಗೆ, ಈ ಊರಿನ ಸೌಹಾರ್ದ ಪರಂಪರೆಯ ಬಗ್ಗೆ ಇಲ್ಲಿಗೆ ಮೂವತ್ತು ವರ್ಷಗಳ ಹಿಂದೆಯೇ ಲಂಕೇಶ್ ಮೇಷ್ಟ್ರು ತಮ್ಮ ಮರೆಯುವ ಮುನ್ನ ಅಂಕಣದಲ್ಲಿ ಬರೆದಿದ್ದರು. ಕಾಕತಾಳೀಯವೊ ಏನೊ, ಮುಂದೆ ಲಂಕೇಶ್ ಅವರು ಕನ್ನಡದ ಜಾಣಜಾಣೆಯರನ್ನೆ ಮುಂದಿಟ್ಟುಕೊಂಡು `ಪ್ರಗತಿರಂಗ’ ಕಟ್ಟಿದಾಗ ಅದರ ಮೊದಲ ಸಭೆ ನಡೆಸಿದ್ದು ಕೂಡಾ ಇದೇ ತಾಳಿಕಟ್ಟೆಯಲ್ಲಿ. ಇಲ್ಲಿ ಸರ್ ಸೈಯದ್ ಮಹಮದ್ ಇಸ್ಮಾಯಿಲ್ ಖಾದ್ರಿ ಎಂಬ ಸೂಫಿ ಸಂತರ ದರ್ಗಾ ಇದೆ. ಆದರು ಈ ಊರಿನಲ್ಲಿ ಇವತ್ತಿಗು ಒಂದು ಮುಸ್ಲಿಂ ಕುಟುಂಬ ಬಿಟ್ಟರೆ ಎರಡನೆಯ ಮನೆಯಿಲ್ಲ. ಈ ದರ್ಗಾದ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳೋದು ಹಿಂದೂಗಳೆ. ವರ್ಷಕ್ಕೊಮ್ಮೆ ನಡೆಯುವ ಉರುಸಿನ ನೇತಾರಿಕೆ ಕೂಡಾ ಇಲ್ಲಿನ ಶೂದ್ರ ಸಮುದಾಯಗಳದ್ದೆ. ಬೇರೆ ಕಡೆಯಿಂದ ಉರುಸಿಗೆಂದು ಬರುವ ಮುಸ್ಲಿಂ ಜನರ ದೇಖರೇಖಿಯನ್ನು ಹಿಂದೂಗಳು ಮುತುವರ್ಜಿಯಿಂದ ನೋಡಿಕೊಳ್ಳುತ್ತಾರೆ.

ಈ ಸೌಹಾರ್ದತೆಯ ಬಗ್ಗೆ ಬರೆಯುತ್ತಾ ಲಂಕೇಶ್ ಮೇಷ್ಟ್ರು `ಜಾತಿ ಜಗಳದಲ್ಲಿ ಮನುಷ್ಯತ್ವವನ್ನೆ ಬಲಿತೆಗೆದುಕೊಳ್ಳುವ ನೀಚರೆಲ್ಲರು ಈ ಊರಿನ ಕುರುಬರಿಂದ ಕಲಿಯಬೇಕು ಎನ್ನುವುದೇ ನನ್ನ ಅನಿಸಿಕೆ’ ಎಂದು ಹೆಮ್ಮೆಯಿಂದ ದಾಖಲಿಸಿದ್ದರು. ಇಂಥಾ ಸೌಹಾರ್ದತೆಗೆ ಹೆಸರಾಗಿದ್ದ ಈ ಊರು, ಇವತ್ತು ದರ್ಗಾಕ್ಕೆ ಬರುವ ಮುಸ್ಲಿಂ ಭಕ್ತರ ಮಾತು ಒತ್ತಟ್ಟಿಗಿರಲಿ, ಮುಸಲ್ಮಾನ ವ್ಯಾಪಾರಿಗಳನ್ನೂ ತನ್ನೊಳಗೆ ಬಿಡಿಸಿಕೊಳ್ಳಬಾರದೆಂಬ ಅಲಿಖಿತ ಫರ್ಮಾನು ಧರಿಸಿಕೊಂಡು ಕೂತಿದೆ. ಮೂಲತಃ ಮನುಷ್ಯನೆ ಅಲ್ಲದ ಕ್ಷುದ್ರ ಕ್ರಿಮಿಯೊಂದು ತಂದೊಡ್ಡುವ ಕೊರೊನಾ ಎಂಬ ರೋಗದಲ್ಲು ಧರ್ಮದ ನಂಜು ಹುಡುಕಿ ಸಮಾಜವನ್ನೆ ಸೋಂಕುಗೊಳಿಸಿದ `ಪುಣ್ಯಾತ್ಮ?ರ ಪ್ರಭಾವಕ್ಕೆ ಈ ಊರಿನ ಸೌಹಾರ್ದತೆಯೂ ಬಲಿಯಾದುದರ ದ್ಯೋತಕ ಇದು.

ಈ ಕುರಿತಂತೆ ನನಗೆ ನನ್ನ ಜನರ ಬಗ್ಗೆ ಬೇಸರವಿಲ್ಲ, ಆಕ್ಷೇಪಗಳೂ ಇಲ್ಲ. ಯಾಕೆಂದರೆ ಈ ಒಂದು ಕಾರಣಕ್ಕೆ ನನ್ನ ಜನ ಸಂಪೂರ್ಣ ಕೋಮುವಾದಿಗಳಾಗಿಬಿಟ್ಟಿದ್ದಾರೆ, ಮೋದಿ ಭಜನಾ ಮಂಡಳಿ ಸೇರಿಕೊಂಡಿದ್ದಾರೆ, ಹೊಸದಾಗಿ ಅಜ್ಞಾನಿಗಳಾಗಿಬಿಟ್ಟಿದ್ದಾರೆ ಎಂದು ಆರೋಪಿಸಲಾರೆ. ಅಜ್ಞಾನ ಮತ್ತು ಮುಗ್ಧತೆ, ಇವೆರಡೂ ನಮ್ಮ ಜನರ ನಿತ್ಯಾಚರಣೆಗಳು. ಅವಕಾಶ ತಮ್ಮ ಕೈಯಲ್ಲಿದ್ದಾಗ ವಿವೇಕವನ್ನು ಜನರಿಗೆ ತಲುಪಿಸುವ ಹೊಣೆಯನ್ನು ಸಮರ್ಪಕವಾಗಿ ನಿಭಾಯಿಸಲಾಗದ ಈ ದೇಶದ ಜಾತ್ಯತೀತ ವಾರಸುದಾರರು ಇವತ್ತು ಇಂಥಾ ಘಟನೆಗಳನ್ನು ನೆಪ ಮಾಡಿಕೊಂಡು `ಜನ’ರನ್ನು ದೂಷಿಸುವುದರ ಬಗ್ಗೆ ನನಗೆ ಅನೇಕ ಆಕ್ಷೇಪಣೆಗಳಿವೆ. ವಾಸ್ತವಗಳನ್ನು ಧಿಕ್ಕರಿಸಿ ಆದರ್ಶಗಳನ್ನು ಕಟ್ಟಲಾಗುವುದಿಲ್ಲ!

ಇಷ್ಟೆಲ್ಲ ಬದಲಾದ ನಮ್ಮ ಜನ ಮುಂದಿನ ವರ್ಷದಿಂದ ಉರುಸ್ ನಿಲ್ಲಿಸಿಬಿಡುತ್ತಾರೆಯೇ? ಖಂಡಿತ ಇಲ್ಲ. ಯಾಕೆಂದರೆ ಪ್ರತಿವರ್ಷ ತಾವು ಆಚರಿಸುವ ಗುಳ್ಳಮ್ಮ, ಬೀರಪ್ಪ ದೇವರುಗಳ ಉತ್ಸವದಷ್ಟೆ ಕಟಿಬದ್ಧರಾಗಿ ಆ ಉರುಸ್ ನಡೆಸುತ್ತಾರೆ. ಅದು ಅವರಿಗೆ ತಮ್ಮದೇ ಎನ್ನುವಷ್ಟು ಸಹಜವಾಗಿ ಒಗ್ಗಿಹೋಗಿದೆ. ಆದರು ಸಂದರ್ಭ ಮತ್ತು ಸಮೂಹಸನ್ನಿಗೆ ದನಿಗೂಡಿಸುವ ದೌರ್ಬಲ್ಯಕ್ಕೆ ಜನ ಮಾರುಹೋಗಿದ್ದಾರೆ. ನಾವಿಲ್ಲಿ ದೂಷಿಸಲೇಬೇಕೆಂದಿದ್ದರೆ ಅದು ಜನರನ್ನಲ್ಲ, ಸ್ವತಃ ಸೌಹಾರ್ದತೆ ಸ್ವಭಾವದ ನಮ್ಮ ಜನರನ್ನು ಅದಕ್ಕೆ ಕಮಿಟ್ ಮಾಡಿಸುವಲ್ಲಿ ಸೋತುಹೋದ ಇಷ್ಟುದಿನಗಳ ಅಧಿಕಾರಸ್ಥ-ಹೋರಾಟನಿರತ ಜಾತ್ಯತೀತ ವಾರಸುದಾರರನ್ನು ಮತ್ತು ಈ ವಾರಸುದಾರರ ಲೋಪಗಳ ಲಾಭ ಪಡೆದು ಕೋಮುಸನ್ನಿಗಳನ್ನು ಹುಟ್ಟುಹಾಕುತ್ತಿರುವ ಮನುಷ್ಯ ಕ್ರಿಮಿಗಳನ್ನು.

ಕೇವಲ ವಿಚಾರವಂತಿಕೆಗಷ್ಟೆ ಅಲ್ಲ, ಆರ್ಥಿಕತೆಯಲ್ಲು ನಮ್ಮ ಜನ ಇಂಥಾ ಸನ್ನಿಗಳಿಂದಾಗಿ ದೊಡ್ಡ ಗೊಂದಲಕ್ಕೆ ಬಿದ್ದಿದ್ದಾರೆ. ಫಲವತ್ತಾದ ಕಪ್ಪುಮಣ್ಣು ಹೊಂದಿರುವ ನಮ್ಮ ಜನರಿಗೆ ಈರುಳ್ಳಿಯೆ ಪ್ರಧಾನ ಆರ್ಥಿಕ ಬೆಳೆ. ಹೊಲಗಳನ್ನು ಅಣಿಗೊಳಿಸಿಕೊಂಡು ಕೂತಿರುವ ಜನ, ಒಂದೆರಡು ಮಳೆ ಬಿದ್ದು ನೆಲ ಹಸನಾದರೆ ಬಿತ್ತನೆಗೆ ದಿನ ಎಣಿಸುತ್ತಿದ್ದಾರೆ. ಸಾಬರ ಮೇಲಿನ ಈ ಅಘೋಷಿತ ಸಮೂಹಸನ್ನಿಯಂತಹ ಗ್ರಾಮೀಣ ನಿಷೇಧ ಈಗ ಅವರನ್ನು ದೊಡ್ಡ ಸಂಕಟಕ್ಕೆ ತಳ್ಳಿದೆ. ಬೆಳೆದ ಈರುಳ್ಳಿಯನ್ನು ಬೆಂಗಳೂರಿಗೊ, ಹಾಸನಕ್ಕೊ ತಂದು ಮಾರಾಟ ಮಾಡುವ ಪರಿಪಾಟ ಇದೆಯಾದರು, ಈರುಳ್ಳಿ ರೇಟು ಕುಸಿದಂತಹ ಸಂದರ್ಭದಲ್ಲಿ ನಮ್ಮೂರಿನ ರೈತರಿಗೆ ಆಸರೆಯಾಗಿ ನಿಲ್ಲೋದು `ಈರುಳ್ಳಿ ಸಾಬರು’. ಹತ್ತಿರದ ಪಟ್ಟಣಗಳ ಮುಸ್ಲಿಂ ವರ್ತಕರು ಮನೆ ಬಾಗಿಲಿಗೇ ಬಂದು ಒಂದಷ್ಟು ಚೌಕಾಸಿ ನಡೆಸಿ, ಚೂರು ಲಾಭವನ್ನೂ ಇಟ್ಟುಕೊಂಡು ಲೋಡುಗಟ್ಟಲೆ ಈರುಳ್ಳಿ ಖರೀದಿಸಿ ಒಯ್ಯುತ್ತಾರೆ. ಮೊದಲೇ ರೇಟು ಕಡಿಮೆ ಇರುವಾಗ ಖಾಲಿ ಚೀಲ, ಹಮಾಲಿ ಮತ್ತು ಲಾರಿ ಬಾಡಿಗೆಯಂತಹ ಹೆಚ್ಚಿನ ಹೊರೆ ತಪ್ಪಿಸಿಕೊಳ್ಳಲು ಜನ ಈರುಳ್ಳಿ ಸಾಬರಿಗೇ ತಮ್ಮ ಬೆಳೆ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಾರೆ.

ಆದರೆ ಈ ಸಲ ಕೊರೊನಾ ಕಾಯಿಲೆ ಯಾವಾಗ ಸಂಪೂರ್ಣ ಸಮಾಪ್ತಿಯಾಗುತ್ತೆ ಎಂಬ ಖಾತ್ರಿಯಿಲ್ಲ. ಕಳೆದ ಸಲವೇ ಆರಂಭದಲ್ಲಿ ಒಳ್ಳೆಯ ಬೆಲೆ ಸಿಕ್ಕರು, ಆಮೇಲೆ ಏಕಾಏಕಿ ರೇಟು ಕುಸಿದು ಕಣ್ಣೀರಿಟ್ಟ ರೈತರು ಸಾಕಷ್ಟಿದ್ದಾರೆ. ಕೊರೊನಾ ಕಾರಣದಿಂದ ಹೊರ ದೇಶಕ್ಕೆ ಈರುಳ್ಳಿ ಎಕ್ಸ್ಪೋರ್ಟ್ ಅನುಮತಿ ಸಿಗದೆ ಹೋದರೆ ರೇಟು ಕೈಗತ್ತುವುದಿಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಅಂಥಾ ಹೊತ್ತಲ್ಲಿ ಸಾಬರಿಗು ನಾವು ಹೀಗೆ ನಿಷೇಧ ಹೇರಿಕೊಂಡು ಕೂತರೆ ಈರುಳ್ಳಿಯ ಗತಿಯೇನು? ಎಂಬ ಚಿಂತೆಯೂ ಇದೇ ಜನರನ್ನು ಕಾಡುತ್ತಿದೆ. ಬೇರೆ ಬೆಳೆಗಳಂತೆ ಈರುಳ್ಳಿಯನ್ನು ದಾಸ್ತಾನು ಇಡಲಾಗದು.

ಬಿದ್ದ ಆರ್ಥಿಕತೆ, ಕುಂಠಿತಗೊಂಡ ಕೃಷಿ ಚಟುವಟಿಕೆಯಿಂದಾಗಿ ಈರುಳ್ಳಿ ಬೀಜಗಳು ಹಿಂದೆಂದು ಕಂಡರಿಯದಷ್ಟು ದುಬಾರಿಯಾಗಿವೆ. ಪ್ರತಿ ಸೇರಿಗೆ ಏಳುನೂರರಿಂದ ಎಂಟುನೂರು ರೂಪಾಯಿ ಇರುತ್ತಿದ್ದ ಬೀಜ, ಈಗಾಗಲೆ ಒಂದು ಸಾವಿರದ ಮುನ್ನೂರರಿಂದ ಒಂದೂವರೆ ಸಾವಿರ ರೂಪಾಯಿಯಾಗಿದೆ. ಬಿತ್ತನೆ ಕಾಲ ಸಮೀಪಿಸಿದಂತೆ ಅದು ಮತ್ತಷ್ಟು ಹೆಚ್ಚಾಗುವ ಸಂಭವವಿದೆ. ಈ ಸಲ ಕೃಷಿ ಚಟುವಟಿಕೆಯ ಇನ್ನಿತರೆ ಖರ್ಚೂ ದುಬಾರಿಯಾಗುವ ಸಾಧ್ಯತೆ ಇದೆ. ಹೀಗೆ ಎಕರೆಗೆ ಮೂವತ್ತರಿಂದ ನಲವತ್ತು ಸಾವಿರ ಖರ್ಚು ಮಾಡಿ ಕೊಳ್ಳುವವರೇ ಇಲ್ಲವಾದರೆ ಏನು ಗತಿ? ಎಂಬ ಆತಂಕವೂ ಇದೇ ಜನರನ್ನು ಕಾಡುತ್ತಿದೆ.

ಇದು ಕೇವಲ ಒಂದು ಊರಿನ ಕಥೆಯಲ್ಲ. ಹಿಂದೂಗಳು ಮಾತ್ರವಲ್ಲದೇ ಮುಸಲ್ಮಾನರು, ಸಿಖ್ಖರು, ಪಾರಸಿಗಳು, ಜೈನರು, ಬೌದ್ಧರು, ಕಿರಸ್ತಾನರು ಹೀಗೆ ಎಲ್ಲಾ ಧರ್ಮ ವರ್ಗಗಳನ್ನು ತನ್ನವರೆಂದು ಭಾವಿಸಿರುವ ಈ ನಮ್ಮ ದೇಶ ಈ ಎಲ್ಲರ ಆರ್ಥಿಕ ಪಾಲುದಾರಿಕೆಯಿಂದ ತನ್ನ ಆರ್ಥಿಕಶಕ್ತಿಯನ್ನು ಅರ್ಥಾತ್ ಜಿಡಿಪಿಯನ್ನು ಸೃಷ್ಟಿಸಿಕೊಂಡಿದೆ. ಇದೊಂಥರ ಆರ್ಥಿಕ ಸರಪಳಿಯಿದ್ದಂತೆ. ಯಾವುದೊ ರಾಜಕೀಯ ಅಥವಾ ಸೈದ್ದಾಂತಿಕ ದುರುದ್ದೇಶಕ್ಕಾಗಿ ಇವರಲ್ಲಿ ಒಬ್ಬರನ್ನು ಹೊರಗಿಡುವ ಹುನ್ನಾರ ನಡೆಸಿದರು, ಇಡೀ ಆರ್ಥಿಕ ಚಕ್ರವೆ ಕೊಂಡಿ ಕಳಚಿಕೊಂಡ ಸರಪಳಿಯಂತೆ ಅಸ್ತವ್ಯಸ್ತವಾಗಿ ಬಿದ್ದುಹೋಗುತ್ತೆ. ನನ್ನೂರು ಅನುಭವಿಸುತ್ತಿರುವ ಗೊಂದಲ ಇದಕ್ಕೊಂದು ನಿದರ್ಶನವಷ್ಟೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. This is baseless. You haven’t addressed other problems happening around us. Our country remains secular only till Hindu’s are in majority. Please look at what happened in Pak and Bangladesh or even in West Bengal.

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...