Homeಅಂಕಣಗಳುಮಹಿಳೆಯರ ಈ ಮಹತ್ವದ ಆಂದೋಲನದ ಜೊತೆ ನಾನಿದ್ದೇನೆ

ಮಹಿಳೆಯರ ಈ ಮಹತ್ವದ ಆಂದೋಲನದ ಜೊತೆ ನಾನಿದ್ದೇನೆ

- Advertisement -
- Advertisement -

| ಎಚ್.ಎಸ್. ದೊರೆಸ್ವಾಮಿ |

ಮದ್ಯ ನಿಷೇಧ ಆಂದೋಲನ – ಕರ್ನಾಟಕ ಸಂಸ್ಥೆಯ ಸ್ವರ್ಣಾ ಭಟ್, ವಿದ್ಯಾ ಪಾಟೀಲ್, ಅಭಯ್ ಇವರುಗಳ ನೇತೃತ್ವದಲ್ಲಿ 100 ಆಯ್ದ ಮಹಿಳೆಯರು ನವೆಂಬರ್ 7ನೇ ತಾರೀಖು ಬೆಂಗಳೂರು ನಗರ ರೈಲ್ವೆ ನಿಲ್ದಾಣದಲ್ಲಿ ಬಂದು ಇಳಿದರು. ರಾಯಚೂರು, ಬಳ್ಳಾರಿ, ಬಾಗಲಕೋಟೆ, ಧಾರವಾಡ, ಬೀದರ್, ಕಲಬುರ್ಗಿ, ಗದಗ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳ ಮಹಿಳೆಯರು ಹೋರಾಟದಲ್ಲಿ ಭಾಗವಹಿಸಲು ಬಂದಿದ್ದರು. ಪೊಲೀಸ್ ಅಧಿಕಾರಿಗಳನ್ನು 4-6 ದಿನಗಳ ಹಿಂದೆಯೇ ಕಂಡ ಮಹಿಳೆಯರು ಈ ಹೋರಾಟಕ್ಕೆ ಸ್ಥಳ ಒದಗಿಸಲು ಅರ್ಜಿ ಸಲ್ಲಿಸಿದ್ದರೂ, ಸ್ಥಳ ನಿಗದಿ ಮಾಡಿರಲಿಲ್ಲ. ಹೋರಾಟಗಾರ್ತಿ ಮಹಿಳೆಯರನ್ನು ಪೊಲೀಸರು ತಡೆದರು. ಆದ್ದರಿಂದ ಹೋರಾಟಗಾರರು ಬೆಂಗಳೂರು ನಗರ ರೈಲ್ವೆ ನಿಲ್ದಾಣದ ಹೊರಗೆ, ಆರ್.ಎಂ.ಎಸ್. ಕಚೇರಿಯ ಮುಂಭಾಗದಲ್ಲಿರುವ ಫುಟ್‍ಬಾತ್ ಮೇಲೆ ಕುಳಿತರು. ಪೊಲೀಸರು ‘ನಿಮ್ಮ ಪ್ರತಿಭಟನೆಗೆ ಅವಕಾಶ ಕೊಡುವುದಿಲ್ಲ. ನಿಮ್ಮೂರುಗಳಿಗೆ ಹೋಗಿ’ ಎಂದರು.

ಪ್ರಜಾಪ್ರಭುತ್ವ ನಮಗೆ ಕೆಲವು ಹಕ್ಕುಗಳನ್ನು ಕೊಟ್ಟಿದೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುವುದು ಅದರಲ್ಲಿ ಒಂದು ಎಂದು ಹೋರಾಟಗಾರ್ತಿ ನಾಯಕಿ ಸ್ವರ್ಣಾ ಭಟ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಈ ಮಧ್ಯೆ ರೈಲ್ವೆ ಪೊಲೀಸರು ಇಲ್ಲಿ ಪ್ರತಿಭಟನೆ ಮಾಡಲು ನಾವು ಬಿಡುವುದಿಲ್ಲ. ನೀವು ಇಲ್ಲಿಂದ ಹೊರಟುಹೋಗಿ ಎಂದು ಧಮ್ಕಿ ಹಾಕಿದರು. ಲಾಠಿ ಹಿಡಿದು ಪೊಲೀಸರು ಸಿದ್ಧರಾಗಿದ್ದರು. ಅಶ್ರುವಾಯು ವಾಹನವನ್ನೂ ತಂದು ನಿಲ್ಲಿಸಿದ್ದರು.

ಈ ವೇಳೆಗೆ ಹೋರಾಟಗಾರರನ್ನು ಕೂಡಿಕೊಳ್ಳಲು ನಾನು ಮತ್ತು ಬಾಬು ಹೋದೆವು. ಹೋರಾಟಗಾರ ಮಿತ್ರ ಅಭಯ್ ಪರಿಸ್ಥಿತಿಯನ್ನು ವಿವರವಾಗಿ ಹೇಳಿದರು. ಪೊಲೀಸ್ ಅಧಿಕಾರಿಗಳು ನಾವು ಹೋರಾಟ ಮಾಡಲು ಸ್ಥಳ ನಿಗದಿ ಮಾಡಿಕೊಟ್ಟಿಲ್ಲ. ಅರ್ಜಿ ಕೊಟ್ಟು 4 ದಿನಗಳಾಗಿವೆ. ನಿಮಗೆ ಜಾಗ ಗೊತ್ತು ಮಾಡಿಲ್ಲ. ನೀವು ನಿಮ್ಮ ಊರುಗಳಿಗೆ ಹಿಂದಿರುಗಿ ಎನ್ನುತ್ತಿದ್ದಾರೆ. ನಾವು ಹೋರಾಟ ಮಾಡಲು ಬಂದವರು. ಅದಕ್ಕೆ ಸ್ಥಳ ಗೊತ್ತು ಮಾಡಿಕೊಡುವುದು ಪೊಲೀಸ್ ಅಧಿಕಾರಿಗಳ ಜವಾಬ್ದಾರಿ. ಅವರು ನಿರ್ಲಕ್ಷ್ಯ ತೋರಿದ್ದಾರೆ. ನಾವು ರೈಲ್ವೆ ಆವರಣದಲ್ಲೇ ಕುಳಿತು ಪ್ರತಿಭಟನೆ ಮಾಡುತ್ತೇವೆ. ಮುಖ್ಯಮಂತ್ರಿಗಳು ನಮ್ಮನ್ನು ಕರೆಸಿಕೊಂಡು ನಮ್ಮ ಅಹವಾಲನ್ನು ಕೇಳುವವರೆಗೂ ನಾವು ಈ ಸ್ಥಳ ಬಿಟ್ಟು ಹೋಗುವುದಿಲ್ಲ. ರೈಲ್ವೆ ಪೊಲೀಸರು ನಮ್ಮನ್ನೆಲ್ಲ ಬಂಧಿಸುವುದಾದರೆ ಬಂಧಿಸಲಿ’ ಎಂದು ನಾನು ಸಲಹೆ ಮಾಡಿದೆ.

ಸತ್ಯಾಗ್ರಹಿಗಳು ನನ್ನ ನಿಲುವನ್ನು ಅನುಮೋದಿಸಿದರು.

ಪೊಲೀಸರಿಗೆ ನಮ್ಮ ನಿಲುವು ಅಚಲ ಎಂದು ಮನವರಿಕೆಯಾಗಿ ಪೊಲೀಸರು ಪೆಚ್ಚಾದರು. ಅವರು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರಿಗೆ ವಿಚಾರ ತಿಳಿಸಿದರು. ಅವರು ‘ಹೋರಾಟದ ಪ್ರತಿನಿಧಿಗಳು ಮಾತುಕತೆಗೆ ಬನ್ನಿ. ದೊರೆಸ್ವಾಮಿಯವರನ್ನು ಕರೆತರಬೇಕಾಗಿಲ್ಲ’ ಎಂಬ ಸಂದೇಶ ಕಳಿಸಿದರು. ದೊರೆಸ್ವಾಮಿಯವರನ್ನು ಹೊರತು ಮಾಡಿ ನಿಯೋಗ ಬರಲು ನಾವು ತಯಾರಿಲ್ಲ’ ಎಂದರು ಹೋರಾಟಗಾರ ನೇತಾರರು.

ನಾನು ಬಹಳ ಹೊತ್ತು ಅಲ್ಲಿ ಕೂಡಲು ಸಾಧ್ಯವಿಲ್ಲ; ಮನೆಗೆ ಹೊರಟು ಹೋಗುತ್ತೇನೆ ಎಂದು ಉಪಮುಖ್ಯಮಂತ್ರಿಗಳು ಭಾವಿಸಿದ್ದರು. ಆದರೆ, ನಾನು ತೀರ್ಮಾನ ಮಾಡಿದ್ದೆ. ಇದನ್ನು ತಿಳಿದ ಉಪಮುಖ್ಯಮಂತ್ರಿಗಳು ‘ಈಗ ಬರುತ್ತೇನೆ, ಇಷ್ಟರಲ್ಲೇ ಬರುತ್ತೇನೆ’ ಎಂದು ಹೇಳುತ್ತಾ ಕಾಲ ಕಳೆದರು.

ಹೊಸಕೋಟೆಯ ಹೋರಾಟ ಮಿತ್ರ ‘ನಮ್ಮನ್ನು ಪೊಲೀಸರು ಅರೆಸ್ಟ್ ಮಾಡಲು ತೀರ್ಮಾನಿಸಿದ್ದರು. ಎರಡು ಕೆಎಸ್‍ಆರ್‍ಟಿಸಿ ಬಸ್‍ಗಳನ್ನೂ ಕರೆಸಿದ್ದರು. ನೀವು ಬರುವುದು ಸ್ವಲ್ಪ ತಡವಾಗಿದ್ದರೆ ನಮ್ಮನ್ನೆಲ್ಲ ಅರೆಸ್ಟ್ ಮಾಡಿ ಬಸ್ಸುಗಳಲ್ಲಿ ಕರೆದುಕೊಂಡು ಹೊರಟು ಹೋಗುತ್ತಿದ್ದರು. ನೀವು ಬಂದಿರಿ. ಪೊಲೀಸರ ಆಲೋಚನೆ ಬದಲಾಯಿತು ಎಂದು ಹೇಳಿದರು. ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣರವರು ಕೊನೆಗೂ 8 ಗಂಟೆಗೆ ರೈಲ್ವೆ ನಿಲ್ದಾಣದ ಆವರಣಕ್ಕೆ ಬಂದರು. ಹೋರಾಟಗಾರ್ತಿ ವಿದ್ಯಾ ಪಾಟೀಲ್ ಮಾತನಾಡಿ ‘ನಾವು ಈಗ ಪೂರ್ಣ ಮದ್ಯ ಪ್ರತಿಬಂಧ ಕೇಳಲು ಬಂದಿಲ್ಲ. ಹಂತಹಂತವಾಗಿ ಮದ್ಯ ನಿಷೇಧ ಮಾಡಿ’ ಎಂದು ವಿನಂತಿಸಿಕೊಂಡು ‘ಈ ಕೆಲವು ಕ್ರಮಗಳನ್ನು ಕೂಡಲೇ ಕೈಗೊಳ್ಳಿ ಎಂದು ಮುಖ್ಯಮಂತ್ರಿಯವರನ್ನು ಪ್ರಾರ್ಥಿಸಲು ಬಂದಿದ್ದೇವೆ. ಕೂಡಲೇ ನಿಯೋಗದ ಭೇಟಿಗೆ ಅವಕಾಶ ಮಾಡಿಕೊಡಿ’ ಎಂದು ಪ್ರಾರ್ಥಿಸಿದರು.

ಮದ್ಯ ನಿಷೇಧ ಆಂದೋಲನದವರು ಮುಂಚೆಯೇ ಅವರಿಗೆ ಕಳಿಸಿದ್ದ ಪತ್ರ ಇಂತಿದೆ:

ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪನವರಿಗೆ:

ಮಹಿಳಾ ನೇತೃತ್ವದ ಮದ್ಯ ನಿಷೇಧ ಆಂದೋಲನ ಕರ್ನಾಟಕ, ಸುಮಾರು ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧವಾಗಬೇಕೆಂಬ ಹಕ್ಕೊತ್ತಾಯವನ್ನಿಟ್ಟುಕೊಂಡು ಹೋರಾಟ ನಡೆಸುತ್ತಿದೆ. ಆರು ತಿಂಗಳ ಹಿಂದೆ 3000 ಮಹಿಳೆಯರು ಪಾದಯಾತ್ರೆ ಮೂಲಕ ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು ಮುಟ್ಟಿಸಿದರೂ ಮಹಿಳೆಯರಿಗೆ ಕಿಂಚಿತ್ತೂ ಗೌರವ ನೀಡಲಿಲ್ಲ, ಧ್ವನಿಗೆ ಕಿವಿಗೊಡಲಿಲ್ಲ.

ಹಾಗಾಗಿ ಈಗ ಮಹಿಳೆಯರು ನವೆಂಬರ್ 7ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸಬೇಕೆಂದು ತೀರ್ಮಾನಿಸಿದ್ದಾರೆ. ಈಗ ಈ ಚಳವಳಿ ಕೇವಲ ರಾಜ್ಯದ ಚಳವಳಿಯಾಗಿ ಉಳಿಯದೆ ರಾಷ್ಟ್ರ ಮಟ್ಟದ ಚಿಂತಕರೂ ಈ ಹೋರಾಟವನ್ನು ಬೆಂಬಲಿಸಿ ಭಾಗವಹಿಸಲಿದ್ದಾರೆ.

ಗಾಂಧಿ ಜಯಂತಿಯ 150ನೇ ವರ್ಷಾಚರಣೆ ಸಂದರ್ಭದಲ್ಲಿ ಅವರ ಮದ್ಯ ನಿಷೇಧದ ಕನಸನ್ನು ನನಸು ಮಾಡಿ ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಬೇಕೆಂಬುದೇ ಈ ಮಹಿಳೆಯರ ಬೇಡಿಕೆ.
ನವೆಂಬರ್ 7ರಿಂದ ಈ ಕೆಳಗಿನ ಬೇಡಿಕೆಗಳನ್ನು ಮುಂದಿಷ್ಟು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.

1. ಸಂವಿಧಾನದ 73ನೇ ತಿದ್ದುಪಡಿಯ ಆಶಯವನ್ನು ಅನುಷ್ಠಾನಗೊಳಿಸುವುದು (ಗ್ರಾಮಗಳ ಭವಿಷ್ಯವನ್ನು ನಿರ್ಧರಿಸುವ ಅಧಿಕಾರವನ್ನ ಗ್ರಾಮ ಸಭೆಗೆ ನೀಡುವುದು)
ಉದಾ: ಗ್ರಾಮ ಪಂಚಾಯತಿಗಳು ಗ್ರಾಮ ಸಭೆಯ ಮೂಲಕ ಪಂಚಾಯತಿ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳು ಇರಬಾರದೆಂದು ನಿರ್ಧಾರ ತೆಗೆದುಕೊಳ್ಳಬಹುದು. (ಕಾನೂನು ಬಾಹಿರ, ಖಾಸಗಿ ಅಥವಾ ಸರ್ಕಾರಿ ಮಳಿಗೆಗಳಾಗಿರಬಹುದು) ಈಗಾಗಲೇ ಗ್ರಾಮಸಭೆಗಳಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಗ್ರಾಮ ಪಂಚಾಯತಿಗಳಲ್ಲಿ ತಕ್ಷಣ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಬೇಕು.

2. ರಾಜ್ಯಗಳಲ್ಲಿ ಮದ್ಯ ಸೇವನೆ ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತದ ಸಂವಿಧಾನದ ಅನುಚ್ಛೇದ 47ರಲ್ಲಿ ರಾಜ್ಯಗಳಿಗೆ ನೀಡಲಾದ ನಿರ್ದೇಶನದಂತೆ ಮದ್ಯ ಮುಕ್ತ ಕರ್ನಾಟಕ ನೀತಿಯತ್ತ ಸಾಗುವ ಸಲುವಾಗಿ ಮೂರು ತಿಂಗಳೊಳಗೆ ಸಮಿತಿ ರಚಿಸಿ ಸರ್ಕಾರದ ನೀತಿಯನ್ನು ಜಾರಿಗೊಳಿಸಬೇಕು.
ವಾಸ್ತವದಲ್ಲಿ ಸರ್ಕಾರಗಳು ಹೆಚ್ಚು ಹೆಚ್ಚು ಜನರನ್ನು ಕುಡುಕರನ್ನಾಗಿ ಮಾಡುತ್ತಿವೆ. ಜೊತೆಗೆ ಯುವ ಪೀಳಿಗೆಯನ್ನು ಶ್ರಮಜೀವಿಗಳನ್ನಾಗಿ ಮಾಡುವ ಬದಲು ಕುಟುಂಬಕ್ಕೆ ಮತ್ತು ಸಮಾಜಕ್ಕೆ ಹೊರೆಯಾಗುವಂತೆ ಮಾಡುತ್ತಿವೆ. ಕರ್ನಾಟಕದಲ್ಲಿ ಈಗಾಗಲೇ ಅಬಕಾರಿ ಇಲಾಖೆಗಳಿಗೆ ಸರ್ಕಾರ ಗುರಿ ನಿಗದಿ ಪಡಿಸುವುದನ್ನು ನೋಡಿದ್ದೇವೆ. ಎಂಟು ವರ್ಷದಲ್ಲಿ ಅಬಕಾರಿ ಆದಾಯ ರೂ.9000 ಕೋಟಿಯಿಂದ ರೂ.20000 ಕೋಟಿಗೆ ಏರಿರುವುದೇ ಇದಕ್ಕೆ ನಿದರ್ಶನ.

3. ಕರ್ನಾಟಕದ ಎಲ್ಲ ಹಳ್ಳಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವಾಗುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು. ಕಿರಾಣಿ, ಬೀಡಾ ಅಂಗಡಿ, ಹೋಟೆಲ್, ಮನೆಮನೆಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಹಾಗಾಗಿ ಎಲ್ಲಾ ಜಾತಿಯವರನ್ನೊಳಗೊಂಡ ಶೇ.75ರಷ್ಟು ಮಹಿಳೆಯರು ಇರುವ ಏಳು ಸದಸ್ಯರನ್ನು ಒಳಗೊಂಡ ಸಾಮಾಜಿಕ ನ್ಯಾಯ ಸಮಿತಿಯನ್ನು ಪ್ರತಿ ಹಳ್ಳಿಯಲ್ಲಿ ರಚಿಸಬೇಕು. ಈ ಸಮಿತಿ ಅಕ್ರಮ ಮದ್ಯ ಮಾರಾಟದ ಮೇಲೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ನೀಡಿ ಸಶಕ್ತಗೊಳಿಸಬೇಕು.

ಉದಾ: ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿರುವ ಗ್ರಾಮ ಪಂಚಾಯಿತಿಗಳು, ಅಬಕಾರಿ ಇಲಾಖೆ, ಮತ್ತು ಮಾರಾಟ ಮಾಡುತ್ತಿರುವ ಜನರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ನೀಡಬೇಕು. ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಜನರಿಗೆ ಸರ್ಕಾರಿ ಯೋಜನೆಗಳನ್ನು/ಸೌಲಭ್ಯಗಳನ್ನು ರದ್ದುಗೊಳಿಸುವ ಹಾಗೂ ದಂಡ ವಿಧಿಸುವ ಅಧಿಕಾರ ಇತ್ಯಾದಿ. ಈ ರೀತಿಯ ಆದೇಶವನ್ನು ತಕ್ಷಣ ಜಾರಿಗೊಳಿಸಬೇಕು.

4. ಕುಡಿತದಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ತಕ್ಷಣವೇ ಪರಿಹಾರ ನೀಡಬೇಕು.
ಈ ಬೇಡಿಕೆಗಳನ್ನು ಅವರಿಗೆ ಸಲ್ಲಿಸಲಾಯಿತು ಮತ್ತು ಸಂಕಷ್ಟಕ್ಕೊಳಗಾದ ಕುಟುಂಬಗಳ ಪಟ್ಟಿ ತಯಾರು ಮಾಡಲು ನಮ್ಮ ಹೋರಾಟಗಾರರಿಗೆ ತಿಳಿಸಿದ್ದೇವೆ

ಇವೆಲ್ಲವನ್ನೂ ಉಪಮುಖ್ಯಮಂತ್ರಿಗಳು ಕೇಳಿಸಿಕೊಂಡರು. 10ನೇ ತಾರೀಖಿನೊಳಗೆ ಮುಖ್ಯಮಂತ್ರಿಗಳ ಭೇಟಿಗೆ ನಿಯೋಗಕ್ಕೆ ಅವಕಾಶ ಮಾಡಿಕೊಡುವುದಾಗಿ ಅವರು ಆಶ್ವಾಸನೆ ನೀಡಿದ್ದರಿಂದ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಹೋರಾಟ ಸಮಿತಿ ತೀರ್ಮಾನಿಸಿತು. ಈ ತೀರ್ಮಾನ ತೆಗೆದುಕೊಳ್ಳುವ ಮೊದಲು ಮಾತನಾಡಿದ ನಾನು ‘ಮುಖ್ಯಮಂತ್ರಿಗಳ ಭೇಟಿಗೆ 10ನೇ ತಾರೀಕಿನೊಳಗೆ ಅವಕಾಶ ಸಿಗದಿದ್ದರೆ, ಚಳವಳಿಯನ್ನು ಮತ್ತೆ ಆರಂಭಿಸುವುದು ಅನಿವಾರ್ಯವಾಗುತ್ತದೆ. ಮುಖ್ಯಮಂತ್ರಿಯವರ ಭೇಟಿಯಾದ ಮೇಲೆ ಈ ಕನಿಷ್ಠ ಕಾರ್ಯಾಚರಣೆಯನ್ನು ಸರ್ಕಾರ ನಿರ್ವಹಿಸಲಿಲ್ಲವಾದರೆ ಆಗಲೂ ಚಳವಳಿ ಆರಂಭಿಸಲಾಗುವುದು’ ಎಂದು ಘೋಷಿಸಿದೆ.

ಈ ಹೋರಾಟಕ್ಕೆ ರಾಜ್ಯದ ಜನರು ಬೆಂಬಲವಾಗಿ ನಿಲ್ಲಬೇಕು. ರಾಜ್ಯದ ಮಹತ್ವದ ಹೋರಾಟಗಳಲ್ಲಿ ಇದೂ ಒಂದು ಎಂಬುದು ನನ್ನ ಭಾವನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...