“ಭೂತಕೋಲವು ಹಿಂದೂ ಸಂಪ್ರದಾಯದ ಭಾಗವಲ್ಲ” ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಹೇಳಿದ ಕೆಲವು ದಿನಗಳ ನಂತರ ಬೆಂಗಳೂರು ಪೊಲೀಸರು ಶನಿವಾರ ಪ್ರಕರಣವನ್ನು ದಾಖಲಿಸಿದ್ದಾರೆ.
ಭೂತ ಕೋಲವು ಆದಿವಾಸಿಗಳ ಸಂಸ್ಕೃತಿಯ ಭಾಗವಾಗಿದೆ. ಅದರಲ್ಲಿ ವೈದೀಕರಣ ಇಲ್ಲ ಎಂದು ಚೇತನ್ ಬುಧವಾರ ಹೇಳಿದ್ದರು. “ಭಾರತದಲ್ಲಿ ಹಿಂದೂ ಧರ್ಮ ಅಸ್ತಿತ್ವಕ್ಕೆ ಬರುವ ಮೊದಲೇ ಆದಿವಾಸಿಗಳು ಕಾಡಿನ ಆರಾಧನೆಯನ್ನು ಮಾಡುತ್ತಿದ್ದರು” ಎಂದು ಚೇತನ್ ಹೇಳಿದ್ದರು.
ಹಿಂದಿ ಮತ್ತು ಹಿಂದುತ್ವದ ಹೇರಿಕೆಯನ್ನು ಒಪ್ಪಲಾಗದು ಎಂದೂ ಅವರು ತಿಳಿಸಿದ್ದರು. ಚೇತನ್ ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದೆ.
ಬಿಜೆಪಿ ಬೆಂಬಲಿತ ಸಂಘಟನೆಯಾದ ಬಜರಂಗದಳದ ಬೆಂಗಳೂರು (ಉತ್ತರ) ಸಂಚಾಲಕ ಶಿವಕುಮಾರ್ ಅವರ ದೂರಿನ ಆಧಾರದ ಮೇಲೆ ಚೇತನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದು ಹಿಂದುತ್ವ ಸಂಘಟನೆಯಾದ ಹಿಂದೂ ಜಾಗರಣ ವೇದಿಕೆ ಕೂಡ ಚೇತನ್ ವಿರುದ್ಧ ಉಡುಪಿ ಜಿಲ್ಲೆಯಲ್ಲಿ ದೂರು ದಾಖಲಿಸಿದೆ.
ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505(2) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ವಿಭಿನ್ನ ವರ್ಗಗಳ ನಡುವೆ ದ್ವೇಷವನ್ನುಉತ್ತೇಜಿಸಲು ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.
ಭೂತಕೋಲ ಸಂಪ್ರದಾಯವು ಹಿಂದೂ ಸಂಸ್ಕೃತಿಯ ಭಾಗವಾಗಿದೆ ಎಂಬ ‘ಕಾಂತಾರ’ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಚೇತನ್ ಹೇಳಿಕೆ ನೀಡಿದ್ದರು. ಚಿತ್ರದಲ್ಲಿ ತೋರಿಸಲಾಗಿರುವ ಪಂಜುರ್ಲಿಯು ಹಿಂದೂ ಸಂಪ್ರದಾಯದ ಭಾಗ ಎಂದು ರಿಷಬ್ ಹೇಳಿದ್ದರು.
ರಿಷಬ್ ಹೇಳಿಕೆಗೆ ಹಲವಾರು ಜನ ಆಕ್ಷೇಪ ವ್ಯಕ್ತಪಡಿಸಿದ್ದರು. ಭೂತಕೋಲವು ಹೇಗೆ ಅವೈದಿಕವಾಗಿದೆ ಎಂಬ ವಿಶ್ಲೇಷಣೆಗಳು ಬಂದಿದ್ದವು.
ಚೇತನ್ ವಿರುದ್ಧ ಈ ವರ್ಷ ದಾಖಲಾಗಿರುವ ಎರಡನೇ ಪ್ರಕರಣ ಇದಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ರಾಜ್ಯ ಸರ್ಕಾರ ನಿಷೇಧ ಹೇರಿದ ಬಳಿಕ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಆಲಿಸಿದ ಕರ್ನಾಟಕ ಹೈಕೋರ್ಟ್ ಪೀಠದ ಭಾಗವಾಗಿದ್ದ ನ್ಯಾಯಾಧೀಶರನ್ನು ಟೀಕಿಸಿದ ಆರೋಪದಲ್ಲಿ ಚೇತನ್ ಅವರನ್ನು ಫೆಬ್ರವರಿಯಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದರು.
ನಟ ಚೇತನ್ ತಮ್ಮ ಟ್ವೀಟ್ನಲ್ಲಿ “ಕರ್ನಾಟಕ ಹೈಕೋರ್ಟ್ ತೀರ್ಪಿನ ಬಗ್ಗೆ ನಾನು ಸುಮಾರು ಎರಡು ವರ್ಷಗಳ ಹಿಂದೆ ಬರೆದ ಟ್ವೀಟ್ ಇದು. ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಅತ್ಯಾಚಾರ ಪ್ರಕರಣದಲ್ಲಿ ಇಂತಹ ಗೊಂದಲದ ಕಾಮೆಂಟ್ಗಳನ್ನು ಮಾಡಿದ್ದಾರೆ. ಈಗ ಇದೇ ನ್ಯಾಯಾಧೀಶರು ಸರ್ಕಾರಿ ಶಾಲೆಗಳಲ್ಲಿ #ಹಿಜಾಬ್ ಸ್ವೀಕಾರಾರ್ಹವೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತಿದ್ದಾರೆ. ಇವರಿಗೆ ಅಗತ್ಯವಿರುವ ಸ್ಪಷ್ಟತೆ ಇದೆಯೇ?” ಎಂದು ಪ್ರಶ್ನಿಸಿದ್ದರು.
“ಚೇತನ್ ಅವರು ಸಾಮಾನ್ಯ ಜನರಲ್ಲಿ ಮತ್ತು ಒಂದು ಕೋಮಿನ (ಮುಸ್ಲಿಂ) ಜನಾಂಗದವರಿಗೆ ಕಾನೂನು- ಸುವ್ಯವಸ್ಥೆ, ನ್ಯಾಯಾಂಗ, ಸರ್ಕಾರ ಮತ್ತು ಸಾಂವಿಧಾನಿಕ ವ್ಯವಸ್ಥೆಯ ಮೇಲೆ ಅಪನಂಬಿಕೆ ಮತ್ತು ಆಕ್ರೋಶ ಬರುವ ಹಾಗೇ ಮೇಲ್ಕಂಡಂತೆ ಟ್ವೀಟ್ ಮಾಡಿ ಮುಸ್ಲಿಂ ಕೋಮಿನವರು ಮತ್ತು ಇತರೆ ಜನರು ಪ್ರತಿಭಟನೆ, ಗಲಭೆ, ಇತ್ಯಾದಿಗಳು ಮಾಡುವಂತೆ ಪ್ರಚೋದಿಸಿದ್ದಾರೆ” ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿತ್ತು.