ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಸಾಮಾಜಿಕ ಕಾರ್ಯಕರ್ತರ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ.
ಹೀಗಾಗಿ ಸುಧಾ ಭಾರದ್ವಾಜ್, ವರ್ನಾನ್ ಗೊನ್ಸಾಲ್ವೇಸ್, ಅರುಣ್ ಫೆರಾರಿಯ ಅವರು ಜೈಲಿನಲ್ಲೇ ಉಳಿಯುವಂತಾಗಿದೆ.
2018ರ ಜನವರಿ 1ರಂದು ಮಹಾರಾಷ್ಟ್ರದ ಭೀಮಾಕೊರೆಗಾಂವ್ ನಲ್ಲಿ 1818ರಲ್ಲಿ ಪೇಶ್ವೆಗಳ ವಿರುದ್ಧ ಜಯಗಳಿಸಿದ ನೂರನೇ ವರ್ಷಾಚರಣೆ ಸಂದರ್ಭದಲ್ಲಿ ಘರ್ಷಣೆ ನಡೆದು ಜೀವ ಹಾನಿಯಾಗಿತ್ತು. ಈ ಘಟನೆಗೆ ಸಾಮಾಜಿಕ ಕಾರ್ಯಕರ್ತರೇ ಕಾರಣವೆಂದು ಆರೋಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಆಗಸ್ಟ್ 18, 2018ರಂದು ಸುಧಾಭಾರದ್ವಜ್, ವರ್ನಾನ್ ಗೊನ್ಸಾಲ್ವೇಸ್, ಅರುಣ್ ಫೆರಾಗಿಯ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದರು. ಅವರಿಗೆ ನಿಷೇಧಿತ ಮಾವೋವಾದಿಗಳ ಸಂಪರ್ಕವಿದೆ ಎಂದು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿ ಬಂಧಿಸಲಾಗಿತ್ತು.
ಪೊಲೀಸರ ಆರೋಪವನ್ನು ಸುಧಾಭಾರದ್ವಜ್, ಗೊನ್ಸಾಲ್ವೇಸ್, ಫೆರಾರಿಯಾ ನಿರಾಕರಿಸಿದ್ದಾರೆ. ಸರ್ಕಾರ ಭಿನ್ನ ದನಿಗಳನ್ನು ಅಡಗಿಸಲು ಹೊರಟಿದೆ ಎಂದು ದೂರಿದ್ದಾರೆ.
ವಕೀಲ ಮಿಹರ್ ದೇಸಾಯಿ ನನ್ನ ಕಕ್ಷಿದಾರ ಗೊನ್ಸಾಲ್ವೇಸ್ ಹೆಸರು ಪೊಲೀಸರು ದಾಖಲಿಸಿರುವ ಎಫ್ಐಆರ್ ನಲ್ಲಿ ಇಲ್ಲ. ಒಂದು ವರ್ಷದಿಂದ ಜೈಲಿನಲ್ಲೇ ಇರಿಸಿದ್ದಾರೆ. ಇದು ನ್ಯಾಯ ಸಮ್ಮತವಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಸುಧಾ ಭಾರದ್ವಜ್ ಪರ ವಕೀಲ ಯೂಗ್ ಚೌದರಿ ಅವರು ನನ್ನ ಕಕ್ಷಿದಾರರಿಗೆ ಸಂಬಂಧಿಸಿದಂತೆ ಕೋರ್ಟಿನಲ್ಲಿ ಯಾವುದೇ ಸಾಕ್ಷ್ಯಗಳನ್ನು ಹಾಜರುಪಡಿಸಿಲ್ಲ ಎಂದು ನ್ಯಾಯಾಲಯದ ಗಮನ ಸೆಳೆದರು.
ಅರುಣ್ ಫೆರಾರಿಯಾ ಪರ ವಕೀಲ ಸುಭಾಶ್ ಪಶೋಲ, ಅರುಣ್ ಗೊನ್ಸಾಲ್ವೇಸ್ ಆದಿವಾಸಿ ಹಕ್ಕುಗಳ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆಯೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿ ಬಂಧನವಾಗಿತ್ತು. 5 ವರ್ಷಗಳು ಜೈಲಲ್ಲಿದ್ದರು. ನಂತರ ಎಲ್ಲ ಆರೋಪಗಳಿಂದಲೂ ಮುಕ್ತರಾಗಿ ಹೊರ ಬಂದಿದ್ದಾರೆ ಎಂದು ತಿಳಿಸಿದರು.
ಈ ಮೂವರಿಗೆ ಜಾಮೀನು ದೊರಕದಿರುವುದು ಅನ್ಯಾಯ. ಸಾಮಾಜಿಕ ಕಾರ್ಯಕರ್ತರನ್ನು, ‘ಭಯೋತ್ಪಾದಕ’ರಂತೆ ನಡೆಸಿಕೊಳ್ಳುತ್ತಿರುವುದು ಖಂಡನಾರ್ಹ.