ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಹತ್ಯೆಯ ಆರೋಪಿಗಳಲ್ಲಿ ಒಬ್ಬ ಆರೋಪಿಯೂ ಬಿಜೆಪಿ ಜೊತೆಗೆ ಒಡನಾಟ ಇಟ್ಟುಕೊಂಡಿದ್ದನು ಮತ್ತು ಬಿಜೆಪಿ ಸೇರಲು ಬಯಸಿದ್ದನು ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಅಷ್ಟೆ ಅಲ್ಲದೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯರೊಬ್ಬರು ಆರೋಪಿಯು ಬಿಜೆಪಿ ಸದಸ್ಯ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು. ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಟೈಲರ್ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬರು ‘ಬಿಜೆಪಿ ಸದಸ್ಯ’ ಎಂದು ನೇರಾನೇರ ಆರೋಪಿಸಿದ್ದು, ಪ್ರಕರಣದ ದಿಕ್ಕು ತಪ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆಯೇ ಎಂದು ಪ್ರಶ್ನಿಸಿದೆ. ಆದರೆ ಈ ಎಲ್ಲಾ ಆರೋಪಗಳನ್ನು ಬಿಜೆಪಿ ನಿರಾಕರಿಸಿದೆ.
“ಯಾವುದೇ ಆರೋಪಿಗಳೊಂದಿಗೆ, ಯಾವುದೇ ರೀತಿಯ ಸಂಬಂಧವಿಲ್ಲ” ಎಂದು ರಾಜಸ್ಥಾನ ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥ ಸಾದಿಕ್ ಖಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಈ ಹತ್ಯೆಯು ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವೈಫಲ್ಯ ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಟೈಲರ್ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬರು ‘ಬಿಜೆಪಿ ಸದಸ್ಯ’ ಎಂದು ಕಾಂಗ್ರೆಸ್ ಆರೋಪಿಸಿದ್ದು, ಪ್ರಕರಣವನ್ನು ದಾರಿ ತಪ್ಪಿಸಲು ಬೇಕಾಗಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವರ್ಗಾಯಿಸಲು ಕೇಂದ್ರ ಸರ್ಕಾರ ತರಾತುರಿಯಲ್ಲಿ ಮುಂದಾಗಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನೂ ಓದಿ: ಉದಯಪುರ ಟೈಲರ್ ಹತ್ಯೆ: BJP-RSS ಅಂಗಸಂಸ್ಥೆ ಎಂಆರ್ಎಂ ನಾಯಕನ ಸಂಪರ್ಕದಲ್ಲಿದ್ದ ಕೊಲೆ ಆರೋಪಿ?
ಉದಯಪುರ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳು ಹೊರ ಹಾಕಿರುವ ವರದಿಯನ್ನು ಉಲ್ಲೇಖಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು, “ಕನ್ಹಯ್ಯಾ ಲಾಲ್ನ ಹಂತಕ, ರಿಯಾಜ್ ಅತ್ತಾರಿ ಬಿಜೆಪಿಯ ಸದಸ್ಯ” ಎಂದು ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಬಿಜೆಪಿ ನಾಯಕರಾದ ಇರ್ಷಾದ್ ಚೈನ್ವಾಲಾ ಮತ್ತು ಮೊಹಮ್ಮದ್ ತಾಹಿರ್ ಅವರೊಂದಿಗೆ ಹತ್ಯೆಯ ಆರೋಪಿ ಅತ್ತಾರಿ ಇರುವ ಚಿತ್ರಗಳನ್ನು ಉಲ್ಲೇಖಿಸಿದ್ದಾರೆ.
“ಪ್ರಮುಖ ಆರೋಪಿ ರಿಯಾಜ್ ಅತ್ತಾರಿ ಆಗಾಗ್ಗೆ ರಾಜಸ್ಥಾನದ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಗುಲಾಬ್ಚಂದ್ ಕಟಾರಿಯಾ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು ಎಂಬುದು ಬಹಿರಂಗಪಟ್ಟಿದೆ. ಇದಷ್ಟೇ ಅಲ್ಲ, ಬಿಜೆಪಿಯ ರಾಜಸ್ಥಾನ ಅಲ್ಪಸಂಖ್ಯಾತ ಘಟಕದ ಸಭೆಗಳಲ್ಲಿ ಪ್ರಮುಖ ಆರೋಪಿ ರಿಯಾಜ್ ಅತ್ತಾರಿ ಭಾಗವಹಿಸುತ್ತಿರುವ ಚಿತ್ರಗಳು ಸಹ ಪ್ರಪಂಚದ ಮುಂದೆ ಇವೆ” ಎಂದು ಪವನ್ ಖೇರಾ ಹೇಳಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಉದಯಪುರ ಹತ್ಯೆ ಆರೋಪಿಗಳನ್ನು ರಾಹುಲ್ ಗಾಂಧಿ ಕ್ಷಮಿಸಿದ್ದಾರೆ ಎಂದು ಸುಳ್ಳು ಹಬ್ಬಿಸಿದ ಝೀ ನ್ಯೂಸ್
ಬಿಜೆಪಿ ನಾಯಕ ಇರ್ಷಾದ್ ಚೈನ್ವಾಲಾ ಅವರ ನವೆಂಬರ್ 30, 2018ರ ಫೇಸ್ಬುಕ್ನಲ್ಲಿ ಮತ್ತು ಮೊಹಮ್ಮದ್ ತಾಹಿರ್ ಅವರ ಫೆಬ್ರವರಿ 3, 2019, ಅಕ್ಟೋಬರ್ 27, 2019, ಆಗಸ್ಟ್ 10, 2021, ನವೆಂಬರ್ 28, 2019ರ ಇತರ ಪೋಸ್ಟ್ಗಳಲ್ಲಿ ಅತ್ತಾರಿ ‘ಬಿಜೆಪಿ ನಾಯಕರಿಗೆ ಹತ್ತಿರದವರಾಗಿದ್ದರು’ ಮಾತ್ರವಲ್ಲ, ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದರು ಎಂಬುದು ಸ್ಪಷ್ಟವಾಗಿದೆ” ಎಂದು ಪವನ್ ಖೇರಾ ಆರೋಪಿಸಿದ್ದಾರೆ.
ಇತರ ಕಾಂಗ್ರೆಸ್ ನಾಯಕರು ಕೂಡಾ ಇದೇ ರೀತಿಯ ಆರೋಪಗಳನ್ನು ಮಾಡಿದ್ದಾರೆ.
I'm not surprised.. Are you? pic.twitter.com/jVpmARtBue
— Renuka Chowdhury (@RenukaCCongress) July 1, 2022
ಆದರೆ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಸುದ್ದಿಯನ್ನು, “ನಕಲಿ” ಎಂದು ತಳ್ಳಿಹಾಕಿದ್ದಾರೆ.
“ನೀವು ನಕಲಿ ಸುದ್ದಿಯನ್ನು ಪ್ರಚಾರ ಮಾಡುತ್ತಿದ್ದೀರಿ ಎಂಬುವುದು ನನಗೆ ಆಶ್ಚರ್ಯವಿಲ್ಲ. ಉದಯಪುರದ ಕೊಲೆಗಾರರು ಬಿಜೆಪಿಯ ಸದಸ್ಯರಲ್ಲ. ಪಕ್ಷಕ್ಕೆ ಒಳನುಸುಳಲು ಅವರು ಪ್ರಯತ್ನಿಸಿದ್ದು, ರಾಜೀವ್ ಗಾಂಧಿಯನ್ನು ಕೊಲ್ಲಲು ಬೇಕಾಗಿ ಕಾಂಗ್ರೆಸ್ಗೆ ಪ್ರವೇಶಿಸಿದ ಎಲ್ಟಿಟಿಇ ಹಂತಕನ ಪ್ರಯತ್ನದಂತಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಮಾಧ್ಯಮಗಳಲ್ಲಿ ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ ಭೀಕರ ಹತ್ಯೆ; ಆರೋಪಿಗಳ ಬಂಧನ
ಹತ್ಯೆಗೀಡಾದ ಕನ್ಹಯ್ಯಾ ಲಾಲ್ ಅವರನ್ನು ಮಂಗಳವಾರದಂದು ಇಬ್ಬರು ದುಷ್ಕರ್ಮಿಗಳು ಅವರ ಅಂಗಡಿಯಲ್ಲೇ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದರು. ಅದರ ನಂತರ ಹಂತಕರು ಕೊಲೆಯನ್ನು ಸಮರ್ಥಿಸಿ, ಅದರ ಹೊಣೆಯನ್ನು ಹೊತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದಾರೆ.
ಪೊಲೀಸರು ಇಬ್ಬರು ಆರೋಪಿಗಳಾದ ರಿಯಾಜ್ ಅಖ್ತರಿ ಮತ್ತು ಗೌಸ್ ಮೊಹಮ್ಮದ್ ಅವರನ್ನು ಬಂಧಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.