Homeಮುಖಪುಟವಿಮಾನದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕುಚೇಷ್ಟೆ; ಒಂದು ತಿಂಗಳ ನಂತರ ತನಿಖೆಗೆ ಆದೇಶ

ವಿಮಾನದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕುಚೇಷ್ಟೆ; ಒಂದು ತಿಂಗಳ ನಂತರ ತನಿಖೆಗೆ ಆದೇಶ

ಘಟನೆ ವೇಳೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕೂಡಾ ಇದ್ದರು ಎಂದು ವರದಿ ಉಲ್ಲೇಖಿಸಿದೆ

- Advertisement -
- Advertisement -

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ಅನುಮತಿಯಿಲ್ಲದೆ ತೆರೆದು ವಿಮಾನಯಾನ ನಿಮಯಗಳ ಗಂಭೀರ ಉಲ್ಲಂಘನೆ ಮಾಡಿರುವ ಬಗ್ಗೆ ವರದಿಯಾಗಿದೆ. ಶಿಕ್ಷಾರ್ಹ ಅಪರಾಧ ಎನಿಸಿಕೊಂಡ ಈ ಘಟನೆ ನಡೆದು ಒಂದು ತಿಂಗಳು ಕಳೆದ ನಂತರ ಇಂಡಿಗೋ ಏರ್‌ಲೈನ್ಸ್‌ ಇದೀಗ ಹೇಳಿಕೆ ಬಿಡುಗಡೆ ಮಾಡಿದೆ. ಘಟನೆಯನ್ನು ‘ಆಕಸ್ಮಿಕ’ ಎಂದು ಇಂಡಿಗೋ ಹೇಳಿದೆಯಾದರೂ, ಆರೋಪಿಯ ಹೆಸರನ್ನು ಉಲ್ಲೇಖಿಸಿಲ್ಲ.

ಡಿಸೆಂಬರ್ 10 ರಂದು ಚೆನ್ನೈಯಿಂದ ತಿರುಚ್ಚಿಗೆ ಹೊರಟಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಈ ಘಟನೆ ನಡೆದಿದೆ. ಈ ವೇಳೆ ತೇಜಸ್ವಿ ಸೂರ್ಯ ‘ಏರ್‌ಕ್ರಾಫ್ಟ್ ನಿಯಮ ಕಾಯ್ದೆ-1937’ ಅನ್ನು ಉಲ್ಲಂಘಿಸಿದ್ದಾರೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇಂಡಿಗೋ ನೀಡಿರುವ ಹೇಳಿಕೆಯಲ್ಲಿ,“ಡಿಸೆಂಬರ್ 10 ರಂದು ಚೆನ್ನೈನಿಂದ ತಿರುಚಿರಾಪಳ್ಳಿಗೆ 6E 7339 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು, ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ಆಕಸ್ಮಿಕವಾಗಿ ತುರ್ತು ನಿರ್ಗಮನವನ್ನು ತೆರೆದರು. ಈ ಪ್ರಯಾಣಿಕ ತನ್ನ ನಡೆಗಾಗಿ ಕ್ಷಮೆಯಾಚಿಸಿದ್ದಾರೆ. ಹೀಗಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್‌ ಪ್ರಕಾರ, ವಿಮಾನವು ಕಡ್ಡಾಯ ಎಂಜಿನಿಯರಿಂಗ್ ತಪಾಸಣೆಗೆ ಒಳಗಾಯಿತು. ಇದು ನಿರ್ಗಮನ ವಿಳಂಬಕ್ಕೆ ಕಾರಣವಾಯಿತು” ಎಂದು ಹೇಳಿದೆ.

ತಮಿಳುನಾಡು ವಿದ್ಯುತ್ ಸಚಿವ ವಿ. ಸೆಂಥಿಲ್ ಬಾಲಾಜಿ ಅವರು ಡಿಸೆಂಬರ್ 29, 2022 ರಂದು ಚೆನ್ನೈ-ತಿರುಚಿನಾಪಳ್ಳಿ ವಿಮಾನದಲ್ಲಿ ತುರ್ತು ನಿರ್ಗಮನ ಬಾಗಿಲು ತೆಗೆದ ಬಗ್ಗೆ ಟ್ವೀಟ್ ಮಾಡಿ, ತೇಜಸ್ವಿ ಸೂರ್ಯ ಮತ್ತು ಬಿಜೆಪಿಯ ತಮಿಳುನಾಡು ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಸುಳಿವು ನೀಡಿದ್ದರು. ಈ ವೇಳೆ ಘಟನೆ ಬೆಳಕಿಗೆ ಬಂದಿತ್ತು. ಈ ಘಟನೆಯನ್ನು ಎಎನ್‌ಐ ವರದಿ ಮಾಡಿತ್ತಾದರೂ, ಅದು ತನ್ನ ವರದಿಯಲ್ಲಿ ತಪ್ಪೆಸಗಿದ ಪ್ರಯಾಣಿಕನ ಹೆಸರನ್ನು ಬಹಿರಂಗಪಡಿಸಿರಲಿಲ್ಲ.

ಇದರ ನಂತರ ಇಂಗ್ಲಿಷ್‌ನ ಖ್ಯಾತ ಸುದ್ದಿ ಮಾಧ್ಯಮ ದಿ ನ್ಯೂಸ್‌ ಮಿನಿಟ್‌ ಈ ಬಗ್ಗೆ ಜನವರಿ 17ರ ಮಂಗಳವಾರ ಸುಧೀರ್ಘ ವರದಿಯನ್ನು ಪ್ರಕಟಿಸಿದೆ. ಸುದ್ದಿಯೂ ವೈರಲ್ ಆಗುತ್ತಿದ್ದಂತೆ, ಆರಂಭದಲ್ಲಿ ಈ ಬಗ್ಗೆ ಹೇಳಿಕೆ ನೀಡುವುದಿಲ್ಲ ಎಂದು ಹೇಳಿದ್ದ ಇಂಡಿಗೋ ಏರ್‌ಲೈನ್ಸ್‌ ಇದೀಗ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದೆ.

ತುರ್ತು ಬಾಗಿಲು ತೆರೆದ ಕಾರಣಕ್ಕೆ ವಿಮಾನದಲ್ಲಿದ್ದ ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ, ನಂತರ ಸಂಪೂರ್ಣ ತಪಾಸಣೆಗೆ ಒಳಗಾಗಬೇಕಾಗಿತ್ತು. ಹೀಗಾಗಿ ವಿಮಾನವೂ ಪ್ರಯಾಣವೂ ಎರಡು ಗಂಟೆಗಳ ಕಾಲ ವಿಳಂಬವಾಗಿದೆ ಎಂದು ವರದಿಯಾಗಿದೆ.

ಅನುಮತಿಯಿಲ್ಲದೆ ತುರ್ತು ನಿರ್ಗಮನಗಳನ್ನು ತೆರೆದ ಪ್ರಯಾಣಿಕರ ವಿರುದ್ಧ ವಿಮಾನಯಾನ ಸಂಸ್ಥೆಯು ಪೊಲೀಸ್ ದೂರು ದಾಖಲಿಸಿರುವ ಘಟನೆ ಈ ಹಿಂದೆ ಹಲವು ಬಾರಿ ನಡೆದಿತ್ತು. ಆದರೆ ತೇಜಸ್ವಿ ಸೂರ್ಯ ಪ್ರಕರಣದಲ್ಲಿ ಘಟನೆ ನಡೆದು ಒಂದು ತಿಂಗಳು ಕಳೆದರೂ ಯಾವುದೇ ಪ್ರಕರಣ ದಾಖಲಾಗಿಲ್ಲ.

ತಾನು ಎಸಗಿದ ಕಿಡಿಗೇಡಿತನದ ಬಗ್ಗೆ ನಂತರ ಸಂಸದ ತೇಜಸ್ವಿ ಸೂರ್ಯ ಅವರು ಲಿಖಿತ ಕ್ಷಮಾಪಣೆ ಪತ್ರವನ್ನು ಬರೆದಿದ್ದಾರೆ ಎಂದು ವರದಿಯಾಗಿದೆ. ಆದರೂ ವಿಮಾನಯಾನ ಸಂಸ್ಥೆಯ ಅವರ ವಿರುದ್ಧ ಯಾವುದೇ ಹೆಚ್ಚಿನ ತನಿಖೆಯನ್ನು ನಡೆಸದೆ, ಅದೇ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ.

ಸಂಸದನ ಕುಚೇಷ್ಠೆಯ ಸುದ್ದಿ ವೈರಲ್ ಆಗುತ್ತಿದ್ದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ.

ಏರ್‌ಕ್ರಾಫ್ಟ್ ನಿಯಮ, 1937 ರ ಷರತ್ತು 22 (ಬಿ) ಪ್ರಕಾರ, ವಿಮಾನದ ಸುರಕ್ಷತೆಯನ್ನು ಖಾತ್ರಿಪಡಿಸುವ ಉದ್ದೇಶಕ್ಕಾಗಿ ಹಾಗೂ ವಿಮಾನದಲ್ಲಿ ಉತ್ತಮ ಕ್ರಮ ಮತ್ತು ಶಿಸ್ತನ್ನು ಕಾಪಾಡಿಕೊಳ್ಳುವ ಉದ್ದೇಶಕ್ಕಾಗಿ ವಿಮಾನದಲ್ಲಿ ಪ್ರಯಾಣಿಸುವ ಯಾವುದೇ ವ್ಯಕ್ತಿ, ಪೈಲಟ್-ಇನ್-ಕಮಾಂಡ್ ಪರವಾಗಿ ಸಿಬ್ಬಂದಿ ನೀಡಿದ ಕಾನೂನುಬದ್ಧ ಸೂಚನೆಯನ್ನು ಅನುಸರಿಸಲು ನಿರಾಕರಿಸಬಾರದು.

ಷರತ್ತು 23(1)(ಬಿ), ಯಾವುದೇ ಆಸ್ತಿಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡುವ ಅಥವಾ ನಾಶಪಡಿಸುವ ಮೂಲಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಅಥವಾ ಉತ್ತಮ ಸುವ್ಯವಸ್ಥೆ – ಶಿಸ್ತಿಗೆ ಅಪಾಯವನ್ನುಂಟುಮಾಡುವ ಆಕ್ರಮಣ ಮತ್ತು ಇತರ ಕೃತ್ಯಗಳ ಕುರಿತು ಮಾತನಾಡುತ್ತದೆ.

ಸಂಸದರು ತುರ್ತು ನಿರ್ಗಮನದ ಬಾಗಿಲು ತೆರೆದಾಗ ಪ್ರಯಾಣಿಕರು ಭಯಭೀತರಾಗಿದ್ದರು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ. “ಅದೃಷ್ಟವಶಾತ್ ವಿಮಾನವು ನೆಲದ ಮೇಲೆ ಇದ್ದಾಗ ಇದು ಸಂಭವಿಸಿದೆ. ಈ ರೀತಿಯ ಘಟನೆ ವಿಮಾನ ಹಾರಾಡುತ್ತಾ ಇರಬೇಕಾದರೆ ಏನಾದರೂ ಸಂಭವಿಸಿದ್ದರೆ, ಪರಿಸ್ಥಿತಿ ನಿಜವಾಗಿಯೂ ಕೆಟ್ಟದಾಗಿರುತ್ತಿತ್ತು” ಎಂದು ವಿಮಾನಯಾನ ಸಿಬ್ಬಂದಿ ನಮಗೆ ಹೇಳಿದರು ಎಂದು ಪ್ರಯಾಣಿಕ ಹೇಳಿದ್ದಾರೆ. “ವಿಮಾನದಲ್ಲಿ ಗಾಲಿಕುರ್ಚಿಯ ಸಹಾಯದಿಂದ ಓಡಾಡುವ ಸಾಕಷ್ಟು ವಯಸ್ಸಾದ ಪ್ರಯಾಣಿಕರು ಇದ್ದರು” ಎಂದು ಅವರು ಹೇಳಿದ್ದಾರೆ.

ಅನುಮತಿಯಿಲ್ಲದೆ ತುರ್ತು ನಿರ್ಗಮನ ಬಾಗಿಲನ್ನು ತೆರೆದ ಪ್ರಯಾಣಿಕರನ್ನು ವಿಮಾನಯಾನ ಸಂಸ್ಥೆಯ ದೂರಿನ ಆಧಾರದ ಮೇಲೆ ಪೊಲೀಸರು ಈ ಹಿಂದೆ ಪ್ರಕರಣದ ದಾಖಲಿಸಿದ ಉದಾಹರಣೆಗಳಿವೆ. ಏಪ್ರಿಲ್ 2019 ರಲ್ಲಿ, ಬೆಂಗಳೂರು-ಲಕ್ನೋ ವಿಮಾನದಲ್ಲಿ ತುರ್ತು ನಿರ್ಗಮನದ ಬಳಿ ಕುಳಿತಿದ್ದ ಮೊದಲ ಬಾರಿಗೆ ವಿಮಾನಯಾನ ಮಾಡುವ ಪ್ರಯಾಣಿಕರೊಬ್ಬರು ತುರ್ತು ನಿರ್ಗಮನ ಬಾಗಿಲನ್ನು ಕಿಟಕಿ ಎಂದು ತಪ್ಪಾಗಿ ಗ್ರಹಿಸಿ ಅದನ್ನು ತೆರೆದಿದ್ದರು. ನಂತರ ಅವರನ್ನು ಕೆಳಗಿಳಿಸಿ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಕರೆದೊಯ್ದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಫೆಬ್ರವರಿ 2017 ರಲ್ಲಿ, ಮುಂಬೈನಿಂದ ಚಂಡೀಗಢಕ್ಕೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರು ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ವಿಮಾನ ಟೇಕ್-ಆಫ್ ಮಾಡುವ ಮೊದಲು ತೆರೆದಿದ್ದರು. ಘಟನೆಯ ಹಿನ್ನಲೆ ಇಂಡಿಗೋ ಏರ್‌ಲೈನ್ಸ್ ನೀಡಿದ ದೂರಿನ ಆಧಾರದ ಮೇಲೆ ಇತರ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿತ್ತು.

“ವಿಮಾನದ ತುರ್ತು ನಿರ್ಗಮನವನ್ನು ತೆರೆಯುವುದು ಗಂಭೀರ ಉಲ್ಲಂಘನೆಯಾಗಿದೆ ಮತ್ತು ಇದು ಪ್ರಕರಣ ದಾಖಲಿಸಬಹುದಾದ ಘಟನೆಯಾಗಿದೆ” ಎಂದು ವಾಯುಯಾನ ಸುರಕ್ಷತಾ ತಜ್ಞ ಕ್ಯಾಪ್ಟನ್ ಮೋಹನ್ ರಂಗನಾಥನ್ ಅವರು ಹೇಳಿದ್ದಾರೆ.

“ತುರ್ತು ನಿರ್ಗಮನ ಬಾಗಿಲನ್ನು ಮತ್ತೆ ಹೊಂದಿಸಬೇಕಾಗಿರುವುದರಿಂದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿತ್ತು ಮತ್ತು ದೂರು ಸಲ್ಲಿಸಬೇಕು. ಈ ಬಗ್ಗೆ ಡಿಜಿಸಿಎಗೆ ವರದಿ ಸಲ್ಲಿಸಬೇಕಿತ್ತು. ಪ್ರಯಾಣಿಕ ಕ್ಷಮೆಯಾಚಿಸಿದ ಕಾರಣ ಅಥವಾ ಅವರು ವಿಐಪಿ ಆಗಿರುವ ಕಾರಣ ಅದನ್ನು ಮುಚ್ಚಿಡಬಹುದಾದ ವಿಷಯವಲ್ಲ” ಎಂದು ಮೋಹನ್ ರಂಗನಾಥನ್ ಹೇಳಿದ್ದಾರೆ.

ಇದನ್ನೂ ಓದಿ: ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದು ಕ್ಷಮೆ ಯಾಚಿಸಿದ ಸಂಸದ ತೇಜಸ್ವಿ ಸೂರ್ಯ; ಗಂಭೀರ ಉಲ್ಲಂಘನೆ ನಡೆದರೂ ದಾಖಲಾಗದ ಪ್ರಕರಣ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್: ಪ್ರತಿಭಟನಾಕಾರರ ಮೇಲೆ ನಡೆದ ದಮನ ಕಾರ್ಯಾಚರಣೆಯಲ್ಲಿ ಸಾವಿನ ಸಂಖ್ಯೆ 2571ಕ್ಕೆ ಏರಿಕೆ 

ಇರಾನ್‌ನಲ್ಲಿ ಪ್ರತಿಭಟನೆಗಳ ಮೇಲೆ ನಡೆದ ದಮನ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕನಿಷ್ಠ 2,571 ಕ್ಕೆ ಏರಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಬುಧವಾರ ತಿಳಿಸಿದ್ದಾರೆ. ಈ ಅಂಕಿ ಅಂಶವು ಅಮೆರಿಕ ಮೂಲದ ಮಾನವ ಹಕ್ಕುಗಳ...

ಕಾಂಗ್ರೆಸ್‌ ಮುಖಂಡನ ಗೂಂಡಾವರ್ತನೆ : ಫ್ಲೆಕ್ಸ್‌ ತೆರವುಗೊಳಿಸಿದ್ದಕ್ಕೆ ಪೌರಾಯುಕ್ತೆಗೆ ಧಮ್ಕಿ, ಅವಾಚ್ಯ ಶಬ್ದಗಳಿಂದ ನಿಂದನೆ

ಸಚಿವ ಝಮೀರ್ ಅಹ್ಮದ್ ಅವರ ಮಗ ಝೈದ್ ಖಾನ್ ನಟನೆಯ 'ಕಲ್ಟ್' ಸಿನಿಮಾದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ ವಿಚಾರವಾಗಿ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ, ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ. ಅಮೃತಗೌಡ ಅವರೊಂದಿಗೆ ಗೂಂಡಾವರ್ತನೆ...

ಹಿಂದಿ ಶೈಕ್ಷಣಿಕ ಪದ್ಧತಿ ಹೇರಿಕೆಯಿಂದ ಉತ್ತರದ ಜನರಿಂದ ದಕ್ಷಿಣಕ್ಕೆ ವಲಸೆ: ಮಾರನ್

ಇಂಗ್ಲಿಷ್ ಶಿಕ್ಷಣವನ್ನು ನಿರುತ್ಸಾಹಗೊಳಿಸುತ್ತಾ, ವಿದ್ಯಾರ್ಥಿಗಳು ಹಿಂದಿ ಮಾತ್ರ ಕಲಿಯಲು ಪ್ರೋತ್ಸಾಹಿಸುತ್ತಿದ್ದಾರೆ. ಉತ್ತರ ರಾಜ್ಯಗಳ ಈ ನೀತಿಗಳಿಂದ ಉದ್ಯೋಗ ಸಿಗದೆ ದಕ್ಷಿಣದ ರಾಜ್ಯಗಳಿಗೆ ವಲಸೆ ಬರುತ್ತಿದ್ದಾರೆ ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್ ಉತ್ತರ...

ಚಿಕ್ಕಮಗಳೂರು| ದಲಿತರ ಜಮೀನಿಗೆ ನುಗ್ಗಿ ಬೆಳೆ ನಾಶ; ಪ್ರಬಲ ಜಾತಿ ಜನರಿಂದ ವಿನಾಕಾರಣ ತೊಂದರೆ

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿಯ ಸತ್ತಿಹಳ್ಳಿ ಗ್ರಾಮದ ದಲಿತ ಸಮುದಾಯದ ರೈತರಿಗೆ ಅದೇ ಊರಿನ ಪ್ರಬಲ ಜಾತಿಗೆ ಸೇರಿದ ಜನರು ವಿನಾಕಾರಣ ತೊಂದರೆ ನಿಡುತ್ತಿದ್ದು, ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿದ್ದಾರೆ ಎಂಬ...

ಎಲ್‌ಡಿಎಫ್‌ನ ‘ಕೇರಳಂ’ ಮರುನಾಮಕರಣ ಕ್ರಮ ಬೆಂಬಲಿಸಿದ ರಾಜ್ಯ ಬಿಜೆಪಿ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಮನವಿ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೇರಳ ಘಟಕವು, ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್‌) ಸರ್ಕಾರದ 'ಕೇರಳಂ' ಮರುನಾಕರಣ ಪ್ರಸ್ತಾವನೆಯನ್ನು ಬೆಂಬಲಿಸಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮಧ್ಯಸ್ಥಿಕೆ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಲ್ಲಿ...

ರಾಯಚೂರು ಕೃಷಿ ವಿವಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ತಡೆಗೆ ಸಂಚು ಆರೋಪ: ನಿಗದಿತ ದಿನಾಂಕದಂದು ಪರೀಕ್ಷೆ ನಡೆಸಲು ಒತ್ತಾಯ 

ಬೆಂಗಳೂರು: ರಾಯಚೂರು ಕೃಷಿ ವಿವಿಯಲ್ಲಿನ 75 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ನಿಗದಿತ ದಿನಾಂಕಗಳಾದ ಜನವರಿ.17 ಮತ್ತು ಜನವರಿ.18ರಂದೇ ನಡೆಸಬೇಕು. ಪಟ್ಟಭದ್ರ ಹಿತಾಸಕ್ತಿಗಳ ಒತ್ತಾಯಕ್ಕೆ ಮಣಿದು ಪರೀಕ್ಷೆಯನ್ನು ಮುಂದೂಡಬಾರದು ಎಂದು ಅಭ್ಯರ್ಥಿಗಳು...

ಸಂಭಾಲ್ ಹಿಂಸಾಚಾರ ಪ್ರಕರಣ : ಹಿರಿಯ ಅಧಿಕಾರಿಗಳು ಸೇರಿ 12 ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ

2024ರ ನವೆಂಬರ್‌ನಲ್ಲಿ ಶಾಹಿ ಜಾಮಾ ಮಸೀದಿ ಬಳಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪಾತ್ರವಿದೆ ಎಂಬ ಆರೋಪದ ಮೇಲೆ ಹಿರಿಯ ಅಧಿಕಾರಿಗಳು ಸೇರಿದಂತೆ 12 ಪೊಲೀಸ್ ಸಿಬ್ಬಂದಿಯ ವಿರುದ್ಧ ಕ್ರಿಮಿನಲ್...

ಪಿಎಂ ಕೇರ್ಸ್ ನಿಧಿಗೆ ಆರ್‌ಟಿಐ ಕಾಯ್ದೆಯಡಿ ಗೌಪ್ಯತೆಯ ಹಕ್ಕಿದೆ : ದೆಹಲಿ ಹೈಕೋರ್ಟ್

ಪಿಎಂ ಕೇರ್ಸ್ ನಿಧಿಯು ಕಾನೂನು ಅಥವಾ ಸರ್ಕಾರಿ ಘಟಕವಾಗಿದ್ದರೂ, ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಗೌಪ್ಯತೆಯ ಹಕ್ಕನ್ನು ನಿರಾಕರಿಸಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಮಂಗಳವಾರ (ಜ.13) ಮೌಖಿಕವಾಗಿ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು...

ಬಿಜೆಪಿ-ಆರ್‌ಎಸ್‌ಎಸ್‌ ನಾಯಕರನ್ನು ಭೇಟಿಯಾದ ಚೀನಾ ಕಮ್ಯುನಿಸ್ಟ್ ಪಕ್ಷದ ನಿಯೋಗ

ಗಾಲ್ವಾನ್ ಘರ್ಷಣೆಯ ನಂತರ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಚೀನಾದ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ನಿಯೋಗ ಬಿಜೆಪಿ-ಆರ್‌ಎಸ್‌ಎಸ್‌ ನಾಯಕರನ್ನು ಭೇಟಿ ಮಾಡಿದೆ ಎಂದು ವರದಿಯಾಗಿದೆ. ಸೋಮವಾರ (ಜ.12) ನವದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ...

ಅಪ್ರಾಪ್ತ ಮುಸ್ಲಿಂ ವಿದ್ಯಾರ್ಥಿಗೆ ಎರಡು ತಿಂಗಳ ಜೈಲು ಶಿಕ್ಷೆ: ಇದು ‘ಕಾನೂನುಬಾಹಿರ’ ಎಂದ ಪಾಟ್ನಾ ಹೈಕೋರ್ಟ್: 5 ಲಕ್ಷ ಪರಿಹಾರಕ್ಕೆ ಆದೇಶ

ಬಿಹಾರ ಪೊಲೀಸರು ಎರಡು ತಿಂಗಳಿಗೂ ಹೆಚ್ಚು ಕಾಲ ಮುಸ್ಲಿಂ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಬಂಧಿಸಿದ್ದು, ಕಾನೂನುಬಾಹಿರ ಎಂದು ಪಾಟ್ನಾ ಹೈಕೋರ್ಟ್ ಹೇಳಿದೆ. ಇಂಥ ವಿಚಾರಗಳಲ್ಲಿ ರಾಜ್ಯ ಮೂಕ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ ಎಂದಿರುವ ಕೋರ್ಟ್...