Homeಮುಖಪುಟವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದು ಕ್ಷಮೆ ಯಾಚಿಸಿದ ಸಂಸದ ತೇಜಸ್ವಿ ಸೂರ್ಯ; ಗಂಭೀರ ಉಲ್ಲಂಘನೆ...

ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದು ಕ್ಷಮೆ ಯಾಚಿಸಿದ ಸಂಸದ ತೇಜಸ್ವಿ ಸೂರ್ಯ; ಗಂಭೀರ ಉಲ್ಲಂಘನೆ ನಡೆದರೂ ದಾಖಲಾಗದ ಪ್ರಕರಣ!

ಇಂತಹದೇ ಘಟನೆಯೊಂದರಲ್ಲಿ, ಪ್ರಯಾಣಿಕರ ಜೀವಕ್ಕೆ ಅಪಾಯ ಒಡ್ದಿದ್ದಾಗಿ ಪ್ರಕರಣ ದಾಖಲಿಸಿ ಪ್ರಯಾಣಿಕರೊಬ್ಬರನ್ನು ಬಂಧಿಸಲಾಗಿತ್ತು

- Advertisement -
- Advertisement -

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ಯಾವುದೇ ಅನುಮತಿಯಿಲ್ಲದೆ ತೆರೆದು, ವಿಮಾನಯಾನ ನಿಯಮಗಳ ಗಂಭೀರ ಉಲ್ಲಂಘನೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯ ನಂತರ ವಿಮಾನದಿಂದ ಪ್ರಯಾಣಿಕರನ್ನು ಕೆಳಗೆ ಇಳಿಸಿ, ಸುಮಾರು ಎರಡು ಗಂಟೆಗಳ ಕಾಲ ಪರಿಶೀಲನೆ ನಡೆಸಲಾಗಿದೆ. ಇದರ ನಂತರ ಸಂಸದರು ಲಿಖಿತ ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ ಎಂದು ವರದಿ ಹೇಳಿದೆ.

ಘಟನೆ ಕಳೆದ ವರ್ಷದ ಡಿಸೆಂಬರ್‌ 10 ರಂದು ನಡೆದಿದೆ ಎಂದು ವರದಿಯಾಗಿದೆ. ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ತೆರೆಯುವುದು ಗಂಭೀರ ಉಲ್ಲಂಘನೆಯಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ. ಅದಾಗ್ಯೂ ತೇಜಸ್ವಿ ಸೂರ್ಯ ಅವರ ವಿರುದ್ಧ ಯಾವುದೆ ಪ್ರಕರಣ ದಾಖಲಿಸಲಾಗಿಲ್ಲ ಎಂದು ವರದಿ ಉಲ್ಲೇಖಿಸಿದೆ. ಇಷ್ಟೆ ಅಲ್ಲದೆ, ವಿಮಾನಯಾನ ಸಂಸ್ಥೆ ಇಂಡಿಗೋ ಈ ವಿಷಯದ ಬಗ್ಗೆ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಲು ನಿರಾಕರಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಗಳು ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ಪ್ರಯಾಣಿಕರೊಬ್ಬರು ತೆರೆದಿದ್ದು ನಿಜ ಎಂದು ದೃಢಪಡಿಸಿದ್ದಾರೆ. ಆದರೆ ಆ ಪ್ರಯಾಣಿಕ ಸಂಸದ ತೇಜಸ್ವಿ ಸೂರ್ಯ ಹೌದೇ ಎಂಬ ಬಗ್ಗೆ ಖಚಿತಪಡಿಸಲು ಅವರು ನಿರಾಕರಿಸಿದ್ದಾರೆ.

ಅದಾಗ್ಯೂ ಈ ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರನ್ನು ಖ್ಯಾತ ಇಂಗ್ಲಿಷ್ ಸುದ್ದಿ ಮಾಧ್ಯಮ ‘ದಿ ನ್ಯೂಸ್ ಮಿನಿಟ್‌‌’ ಮಾತನಾಡಿದ್ದು, ತುರ್ತು ನಿರ್ಗಮನ ಬಾಗಿಲನ್ನು ತೆರೆದವರು ಸಂಸದ ತೇಜಸ್ವಿ ಸೂರ್ಯ ಎಂದು ಖಚಿತಪಡಿಸಿದ್ದಾರೆ. ಈ ವೇಳೆ ಅವರೊಂದಿಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕೂಡಾ ಇದ್ದರು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

“ಘಟನೆ ಸಂಭವಿಸಿದಾಗ ಅನುಸರಿಸಬೇಕಾದ ಸುರಕ್ಷತಾ ಪ್ರೋಟೋಕಾಲ್ ಬಗ್ಗೆ ವಿಮಾನದ ಸಿಬ್ಬಂದಿ ಪ್ರಯಾಣಿಕರಿಗೆ ತಿಳಿಸುತ್ತಿದ್ದರು. ಸಂಸದ ತೇಜಸ್ವಿ ಸೂರ್ಯ ಅವರು ತುರ್ತು ನಿರ್ಗಮನ ಬಾಗಿಲಿನ ಬಳಿ ಕುಳಿತಿದ್ದರು. ಅವರಿಗೆ ಕೂಡಾ ಕಡ್ಡಾಯ ತುರ್ತು ಕಾರ್ಯವಿಧಾನಗಳ ಬಗ್ಗೆ ತಿಳಿಸಲಾಯಿತು. ಈ ವೇಳೆ ಅವರು ಅದನ್ನು ಎಚ್ಚರಿಕೆಯಿಂದ ಆಲಿಸುತ್ತಾ, ಕೆಲವು ನಿಮಿಷಗಳ ನಂತರ ಅವರು ಲಿವರ್ ಅನ್ನು ಎಳೆದಿದ್ದು, ಇದರಿಂದಾಗಿ ತುರ್ತು ನಿರ್ಗಮನ ಬಾಗಿಲು ತೆರೆಯಿತು. ತಕ್ಷಣ, ನಮ್ಮೆಲ್ಲರನ್ನೂ ವಿಮಾನದಿಂದ ಕೆಳಗಿಳಿಸಿ ಬಸ್ಸಿನಲ್ಲಿ ಕುಳಿತುಕೊಳ್ಳುವಂತೆ ಮಾಡಲಾಯಿತು” ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

“ಘಟನೆಯ ನಂತರ ಏರ್‌ಲೈನ್ ಅಧಿಕಾರಿಗಳು ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸ್ಥಳಕ್ಕೆ ಧಾವಿಸಿದೆ. ಇದರ ನಂತರ ವಿಮಾನವು ಮತ್ತೆ ಹಾರುವುದನ್ನು ಖಚಿತಪಡಿಸಿಕೊಳ್ಳಲು ಕನಿಷ್ಠ ಎರಡು ಗಂಟೆಗಳನ್ನು ತೆಗೆದುಕೊಂಡಿದೆ. ಇದು ನಿಮಯಗಳ ಉಲ್ಲಂಘನೆಯಾಗಿರುವುದರಿಂದ ಕ್ಷಮೆಯಾಚಿಸಲು ಸಂಸದರನ್ನು ಕೋರಲಾಗಿದ್ದು, ಲಿಖಿತವಾಗಿ ಪತ್ರವನ್ನು ನೀಡಿದ್ದಾರೆ” ಎಂದು ಇಂಡಿಗೋ ಮೂಲಗಳು ತಿಳಿಸಿವೆ.

“ಸಂಸದ ಕ್ಷಮೆಯಾಚಿಸಿದ ನಂತರ, ಅವರಿಗೆ ಅದೇ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಯಿದೆ. ಆದರೆ ವಿಮಾನದ ಸಿಬ್ಬಂದಿ ಅವರ ಆಸನ ವ್ಯವಸ್ಥೆಯನ್ನು ಬದಲಾಯಿಸಲಾಯಿತು. ಅವರನ್ನು ತುರ್ತು ನಿರ್ಗಮನ ಬಾಗಿಲಿನ ಬಳಿಯ ಆಸನಗಳಿಂದ ಸ್ಥಳಾಂತರಿಸಿ, ಹಿಂಭಾಗದಲ್ಲಿ ಕುಳಿತುಕೊಳ್ಳಲು ಕೇಳಲಾಯಿತು” ಎಂದು ಮತ್ತೊಬ್ಬ ಪ್ರಯಾಣಿಕ ತಿಳಿಸಿದ್ದಾರೆ.

ಈ ಹಿಂದೆ ಬಿಜೆಪಿಯಲ್ಲಿದ್ದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ವಕ್ತಾರ ಬಿ.ಟಿ. ಅರಸಕುಮಾರ್ ಕೂಡ ಇದೇ ವಿಮಾನದಲ್ಲಿದ್ದರು. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ವಿಮಾನದ ತುರ್ತು ದ್ವಾರದಲ್ಲಿ ಗಾಳಿ ಸೋರಿಕೆಯಾಗಿದೆ ಎಂದು ವಿಮಾನದ ಪ್ರಯಾಣಿಕರಿಗೆ ಕಾರಣ ನೀಡಲಾಗಿತ್ತು. ಪ್ರಯಾಣಿಕರನ್ನು ಕೆಳಗಿಳಿಯುವಂತೆ ಕೇಳಲಾಯಿತು. ನಮ್ಮನ್ನು ಬಸ್‌ಗೆ ಸ್ಥಳಾಂತರಿಸಿ, ಸಿಐಎಸ್‌ಎಫ್ ಭದ್ರತಾ ತಪಾಸಣೆ ನಡೆಸಿದ ನಂತರವೇ ನಮಗೆ ವಿಮಾನವನ್ನು ಮತ್ತೆ ಹತ್ತಲು ಅನುಮತಿಸಲಾಯಿತು” ಎಂದು ಹೇಳಿದ್ದಾರೆ.

ವಿಮಾನದಲ್ಲಿ ತೇಜಸ್ವಿ ಸೂರ್ಯ ಮತ್ತು ಅಣ್ಣಾಮಲೈ ಅವರನ್ನು ಕಂಡಿರುವುದಾಗಿ ಅರಸಕುಮಾರ್ ಖಚಿತಪಡಿಸಿದ್ದು, ತುರ್ತು ನಿರ್ಗಮನದ ಬಾಗಿಲನ್ನು ಯಾರು ತೆರೆದರು ಎಂಬುದು ಖಚಿತವಾಗಿ ನನಗೆ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಡಿಸೆಂಬರ್ 10, 2022 ರಂದು ಚೆನ್ನೈ-ತಿರುಚಿ ಇಂಡಿಗೋ ವಿಮಾನದಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದ ಈ ಉಲ್ಲಂಘನೆಯ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿದಿರಲಿಲ್ಲ ಎಂದು ಹೇಳಿದ್ದಾಗಿ ನ್ಯೂಸ್ ಮಿನಿಟ್‌ ವರದಿ ಮಾಡಿದೆ.

ಇಂಡಿಗೋ ವಿಮಾನದಿಂದ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿದ ನಂತರ, ತೇಜಸ್ವಿ ಸೂರ್ಯ ಅವರನ್ನು ಲಿಖಿತವಾಗಿ ವಿವರಣೆ ನೀಡುವಂತೆ ಏರ್‌ಲೈನ್ ಅಧಿಕಾರಿಗಳು ಕೇಳಿದ್ದಾರೆ ಎಂದು ಚೆನ್ನೈ ವಿಮಾನ ನಿಲ್ದಾಣದ ಮೂಲಗಳು ಖಚಿತಪಡಿಸಿವೆ. ಆದರೆ ಯಾವುದೇ ಹೆಚ್ಚಿನ ತನಿಖೆ ನಡೆಸದೆ ಸಂಸದರಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ಏರ್‌ಕ್ರಾಫ್ಟ್ ನಿಯಮ, 1937 ರ ಷರತ್ತು 22 (ಬಿ) ಪ್ರಕಾರ, ವಿಮಾನದ ಸುರಕ್ಷತೆಯನ್ನು ಖಾತ್ರಿಪಡಿಸುವ ಉದ್ದೇಶಕ್ಕಾಗಿ ಹಾಗೂ ವಿಮಾನದಲ್ಲಿ ಉತ್ತಮ ಕ್ರಮ ಮತ್ತು ಶಿಸ್ತನ್ನು ಕಾಪಾಡಿಕೊಳ್ಳುವ ಉದ್ದೇಶಕ್ಕಾಗಿ ವಿಮಾನದಲ್ಲಿ ಪ್ರಯಾಣಿಸುವ ಯಾವುದೇ ವ್ಯಕ್ತಿ, ಪೈಲಟ್-ಇನ್-ಕಮಾಂಡ್ ಪರವಾಗಿ ಸಿಬ್ಬಂದಿ ನೀಡಿದ ಕಾನೂನುಬದ್ಧ ಸೂಚನೆಯನ್ನು ಅನುಸರಿಸಲು ನಿರಾಕರಿಸಬಾರದು.

ಷರತ್ತು 23(1)(ಬಿ), ಯಾವುದೇ ಆಸ್ತಿಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡುವ ಅಥವಾ ನಾಶಪಡಿಸುವ ಮೂಲಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಅಥವಾ ಉತ್ತಮ ಸುವ್ಯವಸ್ಥೆ – ಶಿಸ್ತಿಗೆ ಅಪಾಯವನ್ನುಂಟುಮಾಡುವ ಆಕ್ರಮಣ ಮತ್ತು ಇತರ ಕೃತ್ಯಗಳ ಕುರಿತು ಮಾತನಾಡುತ್ತದೆ.

ಸಂಸದರು ತುರ್ತು ನಿರ್ಗಮನದ ಬಾಗಿಲು ತೆರೆದಾಗ ಪ್ರಯಾಣಿಕರು ಭಯಭೀತರಾಗಿದ್ದರು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ. “ಅದೃಷ್ಟವಶಾತ್ ವಿಮಾನವು ನೆಲದ ಮೇಲೆ ಇದ್ದಾಗ ಇದು ಸಂಭವಿಸಿದೆ. ಈ ರೀತಿಯ ಘಟನೆ ವಿಮಾನ ಹಾರಾಡುತ್ತಾ ಇರಬೇಕಾದರೆ ಏನಾದರೂ ಸಂಭವಿಸಿದ್ದರೆ, ಪರಿಸ್ಥಿತಿ ನಿಜವಾಗಿಯೂ ಕೆಟ್ಟದಾಗಿರುತ್ತಿತ್ತು” ಎಂದು ವಿಮಾನಯಾನ ಸಿಬ್ಬಂದಿ ನಮಗೆ ಹೇಳಿದರು ಎಂದು ಪ್ರಯಾಣಿಕ ಹೇಳಿದ್ದಾರೆ. “ವಿಮಾನದಲ್ಲಿ ಗಾಲಿಕುರ್ಚಿಯ ಸಹಾಯದಿಂದ ಓಡಾಡುವ ಸಾಕಷ್ಟು ವಯಸ್ಸಾದ ಪ್ರಯಾಣಿಕರು ಇದ್ದರು” ಎಂದು ಅವರು ಹೇಳಿದ್ದಾರೆ.

ಅನುಮತಿಯಿಲ್ಲದೆ ತುರ್ತು ನಿರ್ಗಮನ ಬಾಗಿಲನ್ನು ತೆರೆದ ಪ್ರಯಾಣಿಕರನ್ನು ವಿಮಾನಯಾನ ಸಂಸ್ಥೆಯ ದೂರಿನ ಆಧಾರದ ಮೇಲೆ ಪೊಲೀಸರು ಈ ಹಿಂದೆ ಪ್ರಕರಣದ ದಾಖಲಿಸಿದ ಉದಾಹರಣೆಗಳಿವೆ. ಏಪ್ರಿಲ್ 2019 ರಲ್ಲಿ, ಬೆಂಗಳೂರು-ಲಕ್ನೋ ವಿಮಾನದಲ್ಲಿ ತುರ್ತು ನಿರ್ಗಮನದ ಬಳಿ ಕುಳಿತಿದ್ದ ಮೊದಲ ಬಾರಿಗೆ ವಿಮಾನಯಾನ ಮಾಡುವ ಪ್ರಯಾಣಿಕರೊಬ್ಬರು ತುರ್ತು ನಿರ್ಗಮನ ಬಾಗಿಲನ್ನು ಕಿಟಕಿ ಎಂದು ತಪ್ಪಾಗಿ ಗ್ರಹಿಸಿ ಅದನ್ನು ತೆರೆದಿದ್ದರು. ನಂತರ ಅವರನ್ನು ಕೆಳಗಿಳಿಸಿ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಕರೆದೊಯ್ದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಫೆಬ್ರವರಿ 2017 ರಲ್ಲಿ, ಮುಂಬೈನಿಂದ ಚಂಡೀಗಢಕ್ಕೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರು ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ವಿಮಾನ ಟೇಕ್-ಆಫ್ ಮಾಡುವ ಮೊದಲು ತೆರೆದಿದ್ದರು. ಘಟನೆಯ ಹಿನ್ನಲೆ ಇಂಡಿಗೋ ಏರ್‌ಲೈನ್ಸ್ ನೀಡಿದ ದೂರಿನ ಆಧಾರದ ಮೇಲೆ ಇತರ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿತ್ತು.

“ವಿಮಾನದ ತುರ್ತು ನಿರ್ಗಮನವನ್ನು ತೆರೆಯುವುದು ಗಂಭೀರ ಉಲ್ಲಂಘನೆಯಾಗಿದೆ ಮತ್ತು ಇದು ಪ್ರಕರಣ ದಾಖಲಿಸಬಹುದಾದ ಘಟನೆಯಾಗಿದೆ” ಎಂದು ವಾಯುಯಾನ ಸುರಕ್ಷತಾ ತಜ್ಞ ಕ್ಯಾಪ್ಟನ್ ಮೋಹನ್ ರಂಗನಾಥನ್ ಅವರು ಹೇಳಿದ್ದಾರೆ.

“ತುರ್ತು ನಿರ್ಗಮನ ಬಾಗಿಲನ್ನು ಮತ್ತೆ ಹೊಂದಿಸಬೇಕಾಗಿರುವುದರಿಂದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿತ್ತು ಮತ್ತು ದೂರು ಸಲ್ಲಿಸಬೇಕು. ಈ ಬಗ್ಗೆ ಡಿಜಿಸಿಎಗೆ ವರದಿ ಸಲ್ಲಿಸಬೇಕಿತ್ತು. ಪ್ರಯಾಣಿಕ ಕ್ಷಮೆಯಾಚಿಸಿದ ಕಾರಣ ಅಥವಾ ಅವರು ವಿಐಪಿ ಆಗಿರುವ ಕಾರಣ ಅದನ್ನು ಮುಚ್ಚಿಡಬಹುದಾದ ವಿಷಯವಲ್ಲ” ಎಂದು ಮೋಹನ್ ರಂಗನಾಥನ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮುಳುಗುತ್ತಿರುವಾಗ ‘ಬೆಣ್ಣೆ ದೋಸೆ ಮಾರಿದ’ ಬಿಜೆಪಿ ಸಂಸದ ತೇಜಸ್ವಿ ಸೂರ್ಯ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. In our country law will not be equal to all. If people in the most responsible positions do something wrong, nobody will correct them, instead every body are trying to justify them by ignoring what ever the offence or mistake they made deliberately or unknowingly. But if the common man did the same, without any hesitation but punished severely. This the blunder of so called democracy I suppose.

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...