“‘ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ’ ಭೂಭಾಗವನ್ನು ಕೇಂದ್ರಾಡಳಿತ ಪ್ರದೇಶವೆಂದು ಕೇಂದ್ರ ಸರ್ಕಾರ ಘೋಷಿಸಬೇಕು” ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಒತ್ತಾಯಿಸಿದ್ದಾರೆ.
ದಶಕಗಳಷ್ಟು ಹಳೆಯದಾದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಮತ್ತೆ ವಿವಾದ ಭುಗೆಲೆದ್ದ ಬೆನ್ನಲ್ಲೇ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕರ ಹೇಳಿಕೆಗಳು ಹೊರಬಿದ್ದಿವೆ.
ಪ್ರಸ್ತುತ ಕರ್ನಾಟಕದಲ್ಲಿರುವ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಸೇರಿದಂತೆ 865 ಗ್ರಾಮಗಳನ್ನು ತನ್ನೊಂದಿಗೆ ವಿಲೀನಗೊಳಿಸಬೇಕು ಎಂಬುದು ಮಹಾರಾಷ್ಟ್ರದ ಬೇಡಿಕೆಯಾಗಿದೆ. ಈ ವಿವಾದವು ಮೇ 1, 1960ರಂದು ಮಹಾರಾಷ್ಟ್ರ ರಚನೆಯಾದಾಗಿನಿಂದಲೂ ಇದೆ. 1956ರಲ್ಲಿ ಭಾಷಾವಾರು ರೇಖೆಗಳ ಮೇಲೆ ನಡೆಸಿದ ಗಡಿರೇಖೆಯೇ ಅಂತಿಮ ಎಂದು ಕರ್ನಾಟಕ ಪ್ರತಿಪಾದಿಸುತ್ತಿದೆ. ಈ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ.
“ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಡಿ ವಿಚಾರದಲ್ಲಿ ಆಕ್ರಮಣಕಾರಿಯಾಗಿದ್ದರೂ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮೌನವಾಗಿದ್ದಾರೆ” ಎಂದು ಉದ್ಧವ್ ಟೀಕಿಸಿದ್ದಾರೆ.
“…ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆ ತೀರ್ಮಾನಿಸುವವರೆಗೆ, ಕರ್ನಾಟಕ ಆಕ್ರಮಿತ ಮಹಾರಾಷ್ಟ್ರದ ಈ ಸಂಪೂರ್ಣ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು. ಪರಿಷತ್ತಿನಲ್ಲಿ ಅಂಗೀಕರಿಸುವ ಪ್ರಸ್ತಾವನೆಯಲ್ಲಿ ಇದನ್ನು ಸೇರಿಸಬೇಕು” ಎಂದಿದ್ದಾರೆ.
ಸೋಮವಾರದ ವಿಧಾನಸಭೆ ಅಧಿವೇಶನದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, “ರಾಜ್ಯ ಸರ್ಕಾರವು ಮಂಗಳವಾರ ಗಡಿ ವಿವಾದದ ಬಗ್ಗೆ ನಿರ್ಣಯವನ್ನು ಮಂಡಿಸಲಿದೆ” ಎಂದು ಹೇಳಿದರು. “ನಾವು ಪ್ರತಿ ಇಂಚಿಗೂ ಹೋರಾಡುತ್ತೇವೆ” ಎಂದಿದ್ದರು.
“ಕರ್ನಾಟಕದಲ್ಲಿ ಮರಾಠಿ ಮಾತನಾಡುವ ಜನರಿಗೆ ನ್ಯಾಯ ದೊರಕಿಸಲು ಅಗತ್ಯವಿರುವ ಎಲ್ಲವನ್ನೂ ನಾವು ಕೇಂದ್ರ ಸರ್ಕಾರ ಅಥವಾ ಸುಪ್ರೀಂ ಕೋರ್ಟ್ ಮುಂದೆ ಇಡುತ್ತೇವೆ” ಎಂದಿದ್ದರು.
ಮಹಾರಾಷ್ಟ್ರದೊಂದಿಗೆ ನಡೆಯುತ್ತಿರುವ ಗಡಿ ವಿವಾದದ ನಡುವೆ ರಾಜ್ಯದ ಹಿತಾಸಕ್ತಿಗಳನ್ನು ರಕ್ಷಿಸುವ ನಿರ್ಣಯವನ್ನು ಕರ್ನಾಟಕ ವಿಧಾನಸಭೆಯು ಡಿಸೆಂಬರ್ 22ರಂದು ಅಂಗೀಕರಿಸಿತ್ತು. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ಣಯವನ್ನು ಮಂಡಿಸಿದರು. ಧ್ವನಿ ಮತದ ಮೂಲಕ ಅದನ್ನು ಅಂಗೀಕರಿಸಲಾಯಿತು.
“ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡುವವರೆಗೆ ಬಿಜೆಪಿ ಅಧಿಕಾರದಲ್ಲಿರುವ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಈ ಕುರಿತು ಯಾವುದೇ ಹಕ್ಕನ್ನು ಪ್ರತಿಪಾದಿಸುವುದಿಲ್ಲ” ಎಂದು ಡಿಸೆಂಬರ್ 14ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದರು.