ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಮುಂದೆ ಅರವಿಂದ್ ಕೇಜ್ರಿವಾಲ್ ವಾದಿಸಿದ್ದಕ್ಕೆ ಸಂಬಂಧಿಸಿದ ಅನಧಿಕೃತ ವಿಡಿಯೋಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ ಎಂದು ಕಾನೂನು ಸುದ್ದಿ ಸಂಸ್ಥೆ barandbench.com ವರದಿ ಮಾಡಿದೆ.
ಹೈಕೋರ್ಟ್ನ ಅಧಿಕಾರಿಯೊಬ್ಬರು ಈ ವಿಷಯವನ್ನು ದೃಢಪಡಿಸಿದ್ದು, ನ್ಯಾಯಾಲಯದ ಪ್ರಕ್ರಿಯೆಗಳ ಅನಧಿಕೃತ ರೆಕಾರ್ಡಿಂಗ್ ಅನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿರುವುದಾಗಿ ವರದಿ ಹೇಳಿದೆ.
ಆನ್ಲೈನ್ ವಿಚಾರಣೆಗಳ ಕುರಿತ ದೆಹಲಿ ಹೈಕೋರ್ಟ್ನ ನಿಯಮಗಳು ನ್ಯಾಯಾಲಯದ ಕಲಾಪಗಳ ವಿಡಿಯೋಗಳನ್ನು ರೆಕಾರ್ಡ್ ಮಾಡುವುದು ಮತ್ತು ಪ್ರಕಟಿಸುವುದನ್ನು ನಿಷೇಧಿಸುತ್ತವೆ.
ಅಂತಹ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಆನ್ಲೈನ್ನಲ್ಲಿ ಹಾಕಿರುವ “ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿರುವ ಪ್ರತಿಯೊಬ್ಬರ” ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ ಎಂದು barandbench.com ವರದಿ ಉಲ್ಲೇಖಿಸಿದೆ.
ಹೈಕೋರ್ಟ್ ಈ ಹಿಂದೆಯೂ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಕೇಜ್ರಿವಾಲ್ ಅವರ ವಿಡಿಯೋ ಹೈಕೋರ್ಟ್ ಗಮನಕ್ಕೆ ತೆಗೆದುಕೊಂಡ ವಿಡಿಯೋಗಳಲ್ಲಿ ಒಂದಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
“ನಾವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಅದು [ಕೇಜ್ರಿವಾಲ್ ವಿಡಿಯೋ] ವಿಡಿಯೋಗಳಲ್ಲಿ ಒಂದಾಗಿದೆ. ಹಿಂದೆಯೂ ನಾವು ಕ್ರಮ ಕೈಗೊಂಡಿದ್ದೇವೆ ಮತ್ತು ಅಂತಹ ಪ್ರಕರಣಗಳು ನಮಗೆ ತಿಳಿದಾಗಲೆಲ್ಲಾ, ಕ್ರಮ ಕೈಗೊಳ್ಳುವಂತೆ ನಾವು ಅವರಿಗೆ [ಕಾನೂನು ಜಾರಿ ಸಂಸ್ಥೆಗಳಿಗೆ] ಬರೆಯುತ್ತೇವೆ” ಎಂದು ಅಧಿಕಾರಿ ವಿವರಿಸಿದ್ದಾರೆ ಎಂದಿದೆ.
ಏಪ್ರಿಲ್ 13ರಂದು ದೆಹಲಿ ಹೈಕೋರ್ಟ್ ಮುಂದೆ ಕೇಜ್ರಿವಾಲ್ ಖುದ್ದಾಗಿ ಹಾಜರಾಗಿ, ದೆಹಲಿ ಅಬಕಾರಿ ನೀತಿ ಪ್ರಕರಣದ ವಿಚಾರಣೆಯಿಂದ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಹಿಂದೆ ಸರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ತಮ್ಮ ವಾದ ಮಂಡಿಸಿದ್ದರು.
ಕೇಜ್ರಿವಾಲ್ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾದ ಮಂಡಿಸಿದ್ದು, ವಿಚಾರಣೆ ಮುಗಿದ ಕೂಡಲೇ, ನ್ಯಾಯಾಲಯದ ಮುಂದೆ ಅವರು ವಾದ ಮಂಡಿಸಿದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
Courtesy : barandbench.com


