ದೆಹಲಿಯ ಉಪಹಾರ್ ಥಿಯೇಟರ್ನಲ್ಲಿ 1997 ರಲ್ಲಿ ನಡೆದ ಅಗ್ನಿ ದುರಂತದಲ್ಲಿ 59 ಜನರು ಧಾರುಣವಾಗಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಗಳಾದ ಸುಶೀಲ್ ಅನ್ಸಾಲ್ ಮತ್ತು ಗೋಪಾಲ್ ಅನ್ಸಾಲ್ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ತೀರ್ಪು ನೀಡಿದೆ.
1997 ರಲ್ಲಿ ಬಿಡುಗಡೆಯಾಗಿದ್ದ ’ಬಾರ್ಡರ್’ ಸಿನಿಮಾ ಪ್ರದರ್ಶನದ ವೇಳೆ ಉಪಹಾರ್ ಥಿಯೇಟರ್ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಲ್ಲಿ 59 ಜನರು ಸಾವನ್ನಪ್ಪಿದ್ದರು. 100 ಜನರು ಗಾಯಗೊಂಡಿದ್ದರು.
ಉಪಹಾರ್ ಥಿಯೇಟರ್ ಅಗ್ನಿ ದುರಂತ ಪ್ರಕರಣದಲ್ಲಿ ಸಾಕ್ಷ್ಯವನ್ನು ತಿರುಚಿದ್ದಕ್ಕಾಗಿ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಸುಶೀಲ್ ಅನ್ಸಾಲ್ ಮತ್ತು ಗೋಪಾಲ್ ಅನ್ಸಾಲ್ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಕೋರ್ಟ್, ಇಬ್ಬರಿಗೂ ತಲಾ 2.25 ಕೋಟಿ ರೂ ದಂಡ ವಿಧಿಸಿದೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಆಶಿಶ್ ಮಿಶ್ರಾ, ಅಂಕಿತ್ ದಾಸ್ ಗನ್ಗಳಿಂದ ಗುಂಡು ಹಾರಿಸಲಾಗಿದೆ- ಪ್ರಯೋಗಾಲಯದ ವರದಿ
ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಂಕಜ್ ಶರ್ಮಾ ಅವರು ತಮ್ಮ 15 ಪುಟಗಳ ಆದೇಶದಲ್ಲಿ ಅಪರಾಧಿಗಳು ಶಿಕ್ಷೆಗೆ ಅರ್ಹರು ಎಂದು ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 201 (ಸಾಕ್ಷ್ಯಗಳನ್ನು ಹಾಳುಮಾಡುವುದು), 409 (ಸಾರ್ವಜನಿಕ ಸೇವಕರಿಂದ ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಮತ್ತು 120 ಬಿ (ಅಪರಾಧದ ಪಿತೂರಿ) ಅಡಿಯಲ್ಲಿ ಅಪರಾಧಿಗಳು ಎಂದು ಘೋಷಿಸಿದೆ.
ಅಲ್ಲದೆ, ಪ್ರಕರಣದಲ್ಲಿ ಇತರ ಆರೋಪಿಗಳಾದ ನ್ಯಾಯಾಲಯದ ಮಾಜಿ ಸಿಬ್ಬಂದಿ ಸೇರಿದಂತೆ ದಿನೇಶ್ ಚಂದ್ರ ಶರ್ಮಾ, ಪ್ರೇಮ್ ಪ್ರಕಾಶ್ ಬಾತ್ರಾ ಮತ್ತು ಅನೂಪ್ ಸಿಂಗ್ಗೆ ತಲಾ 3 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಜುಲೈ 20, 2002 ರಂದು ಮೊದಲ ಬಾರಿಗೆ ಪ್ರಕರಣದಲ್ಲಿ ಅಕ್ರಮವನ್ನು ಪತ್ತೆಹಚ್ಚಿ, ನ್ಯಾಯಾಲಯದ ಮಾಜಿ ಸಿಬ್ಬಂದಿ ದಿನೇಶ್ ಚಂದ್ರಶರ್ಮಾ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಗಿತ್ತು. ಜೂನ್ 25, 2004 ರಂದು ಅವರನ್ನು ಅಮಾನತುಗೊಳಿಸಿ ಸೇವೆಯಿಂದ ವಜಾಗೊಳಿಸಲಾಗಿತ್ತು.
ಇದನ್ನೂ ಓದಿ: ದೆಹಲಿ ಹೋರಾಟಕ್ಕೆ 1 ವರ್ಷ: ನವೆಂಬರ್ 29 ರಂದು ಸಂಸತ್ತಿನ ಕಡೆಗೆ ರೈತರ ಮೆರವಣಿಗೆ