ಆತ್ಮಹತ್ಯೆಗೆ ಶರಣಾದ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪನವರು ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬೆನ್ನಲ್ಲೇ ಸ್ಪೋಟಕ ಆರೋಪಗಳನ್ನು ಹೊತ್ತ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಬಿಜೆಪಿ ಪರ ಪ್ರಚಾರ ಮಾಡಲು ಮತ್ತು ಕುಸುಮಾ ವಿರುದ್ಧ ಮಾತನಾಡಲು ಡಿ.ಕೆ.ರವಿ ಅವರ ತಾಯಿ ಗೌರಮ್ಮನವರು 80 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ವಿಡಿಯೊ ಹಂಚಿಕೆಯಾಗುತ್ತಿದೆ. ಸದರಿ ವಿಡಿಯೊವನ್ನು ‘ಪೀಪಲ್ ಮೀಡಿಯಾ’ ಯೂಟ್ಯೂಬ್ ಚಾನೆಲ್ನಲ್ಲಿಯೂ ಪ್ರಕಟ ಮಾಡಲಾಗಿದೆ.
ಬಿಜೆಪಿ ಪರ ಪ್ರಚಾರ ಮಾಡುವಂತೆ ಹಾಗೂ ಕುಸುಮಾ ವಿರುದ್ಧ ಮಾತನಾಡುವಂತೆ ಇಬ್ಬರು ವ್ಯಕ್ತಿಗಳು ಕೇಳಿಕೊಳ್ಳುತ್ತಿರುವಾಗ ಡಿ.ಕೆ.ರವಿ ತಾಯಿ ಗೌರಮ್ಮ ಈ ರೀತಿ ಮಾತನಾಡಿದ್ದಾರೆಂದು ಆರೋಪಿಸಲಾಗಿದೆ. ಈ ವಿಡಿಯೊವನ್ನು ಸೆರೆ ಹಿಡಿದಿರುವವರು ಯಾರೆಂದು ಪತ್ತೆಯಾಗಿಲ್ಲ. ಇಬ್ಬರು ಪುರುಷರು ಈ ವಿಡಿಯೊದಲ್ಲಿ ಮಾತನಾಡಿದ್ದಾರೆ. ಇದು ಹಳೆಯ ವಿಡಿಯೊವೆಂದೂ ಹೇಳಲಾಗುತ್ತಿದೆ. ಆದರೆ ಚುನಾವಣೆ ಹೊತ್ತಿನಲ್ಲಿ ವೈರಲ್ ಆಗುತ್ತಿದೆ.
ಸಂಭಾಷಣೆಯಲ್ಲಿ ಏನಿದೆ?
ಮಹಿಳೆ: ಏನ್ ಮಾಡೋಕೆ ಮಾಡಿದ್ದೀರಪ್ಪ?
ಪುರುಷ 1: ಕುಸುಮಾ ವಿರುದ್ಧ ಕ್ಯಾನ್ವಾಸ್ ಮಾಡುತ್ತಿದ್ದೇವೆ. ನೀವು ಬಂದು ನಮ್ಮ ಪಕ್ಷಕ್ಕೆ ವೋಟ್ ಮಾಡುವಂತೆ ಸೆಂಟಿಮೆಂಟ್ನಲ್ಲಿ ಮಾತನಾಡಬೇಕು. ನಮ್ಮದೇ ಚಾನೆಲ್ ಬರುತ್ತದೆ. ಟಿವಿಯವರು ಹೇಳಿಕೊಡುತ್ತಾರೆ. ಅವರು ಹೇಳಿದಂತೆ ಅತ್ತು, ನೋವುಗಳನ್ನು ಹೇಳಿಕೊಂಡು, ಕುಸುಮಾ ಬಗ್ಗೆ ಕೆಟ್ಟದ್ದಾಗಿ ಮಾತನಾಡಬೇಕು. ನೀವು ಮಾತನಾಡಿದರೆ ಜನ ಕನ್ವಿನ್ಸ್ ಆಗ್ತಾರೆ.
ಮಹಿಳೆ: ನೀವು ಹೇಳಿದಂತೆ ಮಾಡಿದಾಗ ತಾನೇ, ನಾವು ಮಾಡೋದು?
ಪುರುಷ 1: ನೀವು ಬಾಯಿ ಬಿಟ್ಟು ಹೇಳಿ. ನೀವು ಹೇಳಿದಂತೆ ಮಾಡೋಣ.
ಮಹಿಳೆ: ಅವತ್ತೇ ಹೇಳಿದೆವಲ್ಲ.
ಪುರುಷ 1: ಈಗ ಸಡನ್ನಾಗಿ ರಿಜಿಸ್ಟ್ರೇಷನ್ ಮಾಡಿಸೋದು ಕಷ್ಟವಾಗುತ್ತದೆ.
ಮಹಿಳೆ: ಎಲ್ಲಾ ಒಂದೇ ದಿನಕ್ಕೆ ಆಗುತ್ತದೆ.
ಪುರುಷ 1: ಈಗ ನಾವು ಒಂದು ಮನೆ ನೋಡಬೇಕು.
ಮಹಿಳೆ: ಮೂರು ದಿನದಿಂದ ನೀವು ಮಾಡಿದ್ದು ಅದೇ ಕೆಲಸ ತಾನೇ?
ಪುರುಷ 1: ಅಣ್ಣನವರ ಹತ್ತಿರ ಒಂದು ಸಲ ಕೇಳಿಬಿಡೋಣ, ಏನ್ ಹೇಳ್ತಾರೆ…
(ಮಧ್ಯದಲ್ಲಿ ಮತ್ತೊಬ್ಬ ವ್ಯಕ್ತಿ ಮಾತನಾಡುತ್ತಾರೆ)
ಪುರುಷ 2: ಅಷ್ಟರಲ್ಲಿ ಮಾಡ್ತೀವಿ, ಇಲ್ಲ ಅಂತ ಹೇಳೋಲ್ಲ. ಆಗಲಿಲ್ಲ ಅಂದ್ರೆ ದುಡ್ಡು ಕೊಟ್ಟಿರುತ್ತೇವಲ್ಲ. ರಿಟರ್ನ್ ಮಾಡಿ, ಆಮೇಲೆ ರಿಜಿಸ್ಟರ್ ಮಾಡಿಸಿಕೊಳ್ಳಿ ಅಷ್ಟೇ. ಅಷ್ಟರೊಳಗೆ ಆದ್ರೆ ಮಾಡಿಸೋಣ, ತೊಂದರೆ ಇಲ್ಲ.
ಮಹಿಳೆ: ಹದಿನಾರನೇ ತಾರೀಖಿನೊಳಗೆ ಆದ್ರೆ ಮಾಡಿ, ಆಗಲಿಲ್ಲ ಅಂದ್ರೆ ಮನೆಗೆ ಆಗುವಷ್ಟು ಅಮೌಂಟ್ ತಲುಪಿಸಿ.
ಪುರುಷ 1: ಅಮೌಂಟ್ ಅಂದ್ರೆ ಎಷ್ಟು ಕೊಡಬೇಕು ಅಂತ ನೀವು ಹೇಳಬೇಕಲ್ಲವಾ?
ಮಹಿಳೆ: ನಿಮಗೆ ಹೇಳಬೇಕೇ ನಾವು? ನಿಮಗೆ ಗೊತ್ತಾಲ್ಲವಾ?
ಪುರುಷ 1: ನಾವು ಅಮೌಂಟ್ ತಲುಪಿಸಬೇಕಲ್ಲ, ಅದಕ್ಕೆ. ಎಷ್ಟು ಲಕ್ಷ ಅಂತ ಹೇಳಿಬಿಟ್ರೆ…
ಮಹಿಳೆ: ಮನೆಗೆಯೇ ನಲವತ್ತು, ಐವತ್ತು ಆಗುತ್ತದೆ. ಸೈಟ್ಗೆ ನಲವತ್ತು ಆಗುತ್ತದೆ. ಕಟ್ಟೋಕೆ ನಲವತ್ತು, ಐವತ್ತು ಬೇಕಾಗುತ್ತದೆ. ನಾವು ಹೆಂಗೆ ಮಾಡ್ತೀವಿ, ಹಂಗೆಲ್ಲ ಇರುತ್ತದೆ. ಗೊತ್ತಗದೆ ಏನಿಲ್ಲ.
ಪುರುಷ 1: ನಾಮಿನೇಷನ್ ಆಗುವುದಕ್ಕಿಂತ ಮುಂಚೆ ನಾವು ನಲವತ್ತು ಲಕ್ಷ ನೀಡಬೇಕು.
ಮಹಿಳೆ: ಏನ್ ಮಾಡಬೇಕು ಮಾಡಿ. ನೀವು ಹೇಳಿದ ದಿನ ರೆಡಿಯಾಗಿ ನಾನು ಬರ್ತಿನಿ.
ಪುರುಷ 1: ನೀವು ಬಿಜೆಪಿ ಪಕ್ಷಕ್ಕೆ ಮಾತ್ರ ಮಾಡಬೇಕು, ಪಕ್ಷೇತರರಿಗೆ, ಇನ್ಯಾರಿಗೂ ಮಾಡುವಂತಿಲ್ಲ. ನಿಮ್ಮ ಪಾಸ್ಬುಕ್ ಕೊಡಿ. ನಾವೀಗ ಟೋಕನ್ ಅಡ್ವನ್ಸ್ ಅಂತ ಕೊಟ್ಟಿರುತ್ತೇವೆ. ನಿಮ್ಮ ಅಕೌಂಟಿಗೆ ಡೈರೆಕ್ಟಾಗಿ ಹಣ ಹಾಕುತ್ತೇವೆ.
(ಹಣ ಎಣಿಸಿ ಕೊಡುತ್ತಿರುವುದು ವಿಡಿಯೊದಲ್ಲಿ ಬ್ಲರ್ ಆಗಿದೆ.)
ಪುರುಷ 1: 25,000 ಇದೆ. ಇದನ್ನು ಅಡ್ವಾನ್ಸ್ ಅಂತ ಕೊಟ್ಟಿರುತ್ತೇವೆ.
ಪುರುಷ 2: ನೀವು ಮತ್ತೆ ಇನ್ಯಾರಿಗೂ ಒಪ್ಪಿಕೊಳ್ಳಬಾರದು ಅಷ್ಟೆ.
ಮಹಿಳೆ: ಜಾಸ್ತಿ ಕೊಡಿ ಅಂತಾನೂ ನಾನು ಕೇಳಲ್ಲ. ಒಂದು ಮನೆಗೆ, ಒಂದು ಸೈಟಿಗೆ ಏನಾಗುತ್ತದೆ, ಅಷ್ಟು ಕೊಟ್ಟುಬಿಡಿ ಸಾಕು.
ಪುರುಷ 1: ನೀವು ಆದಷ್ಟು ಕುಸುಮಾ ಅವರ ಇಮೇಜ್ ಡ್ಯಾಮೇಜ್ ಆಗುವಂತೆ ಸ್ಟೇಟ್ಮೆಂಟ್ ಕೊಡಬೇಕು. ಆಮೇಲೆ ನಾವು ಕ್ಲಿಯರ್ ಮಾಡುತ್ತೇವೆ.
ಮಹಿಳೆ: ಅದನ್ನೇ ನಾನು ಮಾಡೋದು. ನೀವು ನಮಗೆ ಮಾಡಿ, ನಾನು ನಿಮಗೆ ಮಾಡ್ತೀನಿ ಅಷ್ಟೇ….
ಪುರುಷ 1: ನೀವು ಈಗ ಏನ್ ಹೇಳಿದ್ದೀರೋ ಅದನ್ನು ಮಾಡೋಕೆ ನಾವು ಒಪ್ಪಿಕೊಂಡಿದ್ದೇವೆ. ಕ್ಲಿಯರ್ ಮಾಡಿ ಕೊಡುತ್ತೇವೆ. ನಿಮ್ಮ ಪಾಸ್ಬುಕ್ಗೆ ಹಣ ಟ್ರಾನ್ಸ್ಫರ್ ಮಾಡ್ತೀವಿ. ನಾವು ಹೇಳೋ ಥರ ನೀವು ಅವರ ವಿರುದ್ಧವಾಗಿ ಸ್ಟೇಟ್ಮೆಂಟ್ ಕೊಡಬೇಕು.
ಮಹಿಳೆ 1: ನೋಡಪ್ಪ 40 ಮತ್ತು 40 ಕೊಡಿ.
ಪುರುಷ 1: ಅಂದ್ರೆ 40 ಲಕ್ಷ.
ಮಹಿಳೆ: ಸೈಟಿಗೆ 40, ಕಟ್ಟೋಕೆ 40.
ಪುರುಷ 2: 80 ಪೂರ್ತಿ ಈಗಲೇ ಹಾಕಬೇಕಾ? 40 ಈಗ ಹಾಕಿ, ಇನ್ನುಳಿದ 40 ಆಮೇಲೆ ಹಾಕಬಹುದಾ? ಎಲೆಕ್ಷನ್ ಆದಮೇಲೆ ಹಾಕ್ಬೋದಾ?
ಮಹಿಳೆ: ಎಲೆಕ್ಷನ್ ಆದಮೇಲೆ ಹಾಕ್ತೀನಿ ಅನ್ನೋದು ಆಗೋ ಕೆಲ್ಸನಾ?
ಪುರುಷ 2: ಸರಿಯಮ್ಮ ಆಯ್ತು.
ಪುರುಷ 1: ಸರಿಯಮ್ಮ ಆಯ್ತು. ಇನ್ನೆರಡು ದಿನಗಳಲ್ಲಿ ನಿಮ್ಮ ಅಕೌಂಟಿಗೆ ಹಣ ಜಮಾ ಮಾಡಿಸಿ, ಆಮೇಲೆ ಟಿವಿಯವರನ್ನು ಕರೆದುಕೊಂಡು ಬಂದು ನಿಮ್ಮಿಂದ ಮಾತನಾಡಿಸುತ್ತೇವೆ. ಬೇರೆ ಚಾನೆಲ್ನವರು ಇಂಟರ್ವ್ಯೂಗೆ ಕಳಿಸಿದಾಗ ನಾವೇ ಕಾರು ಕಳಿಸುತ್ತೇವೆ. ನಾವು ಏನು ಬರೆದುಕೊಡುತ್ತೇವೆಯೋ ಅದನ್ನು ನೀವು ಟಿವಿಯವರಿಗೆ ಹೇಳಿ.
ಮಹಿಳೆ: ಅದನ್ನು ನೀವು ಏನು ಹೇಳಿಕೊಡುವುದು ಬೇಕಿಲ್ಲ ಅಂತ ನಾನು ಹೇಳುತ್ತಿದ್ದೇನೆಲ್ಲವೇ? ಅಮ್ಮ ಹೆಂಗ್ ಮಾತನಾಡ್ತಾರೆ ಅನ್ನೋದನ್ನು ಆವಾಗಾದರೂ ನೋಡಿಕೊಳ್ಳಿ. ಸರಿಯೇ? ಎಲ್ಲವನ್ನೂ ನನ್ನ ಅಕೌಂಟಿಗೆ ಹಾಕಬೇಡಿ. (ಇನ್ನೊಬ್ಬರ) ಅಕೌಂಟ್ ನಂಬರ್ ಕೂಡ ಕೊಡುತ್ತೇನೆ. ಇಬ್ಬರ ಅಕೌಂಟಿಗೂ ಹಾಕ್ಬಿಡಿ.
ಪುರುಷ 2: ಸರಿಯಮ್ಮ.
ಪುರುಷ 1: ಪಾಸ್ಬುಕ್ ಕೊಡಿ, ಫೋಟೋ ತೆಗೆದುಕೊಳ್ತೀನಿ. ಬ್ಯಾಂಕ್ನಿಂದ ಆರ್ಟಿಜಿಎಸ್ ಮಾಡಿಬಿಟ್ಟು ನಿಮಗೆ ಫೋನ್ ಮಾಡ್ತೀವಿ.
ಮಹಿಳೆ: ಇದ್ದರೆ 40* 50 ಸೈಟ್ನೇ ಕೊಟ್ಟುಬಿಡಿ. ಮಿಕ್ಕಿದ್ದು ಅಕೌಂಟಿಗೆ ಹಾಕಿಬಿಡಿ.
ಪುರುಷ 1: ನಾವು ಅಮೌಂಟ್ ಕೊಟ್ಟಾದ ಮೇಲೆ ನಾವು ಕರೆದಲ್ಲಿಗೆ ನೀವು ಕ್ಯಾನ್ವಸ್ಗೆ ಬರಬೇಕಮ್ಮ.
ಮಹಿಳೆ: ಸೌಲಭ್ಯ ಮಾಡಿ, ಇವತ್ತೇ ಕರೆದುಕೊಂಡು ಹೋಗಿ, ನನಗೇನು?
ಪುರುಷ 1: ಹೊರಗಡೆ ಏನೂ ಗೊತ್ತಾಗಬಾರದಮ್ಮ. ದುಡ್ಡು ಇಸ್ಕೊಂಡು ಸೊಸೆ ವಿರುದ್ಧ ಹೀಗೆ ಮಾತನಾಡುತ್ತಿದ್ದಾರೆಂದು.
ಮಹಿಳೆ: ಏನೂ ಗೊತ್ತಾಗಲ್ಲ.
-ಹೀಗೆ ಮಾತನಾಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿಯ ಮುನಿರತ್ನ ಅವರ ವಿರುದ್ಧ ಕುಸುಮಾ ಸ್ಪರ್ಧಿಸಿದ್ದಾರೆ.