Homeಕರ್ನಾಟಕರಂಗಾಯಣದ ಗೌರವ ಹಾಳುಮಾಡದಿರಿ: ಹಿರಿಯ ಸಾಹಿತಿಗಳು, ರಂಗಕರ್ಮಿಗಳು, ಚಿಂತಕರ ಆಗ್ರಹ

ರಂಗಾಯಣದ ಗೌರವ ಹಾಳುಮಾಡದಿರಿ: ಹಿರಿಯ ಸಾಹಿತಿಗಳು, ರಂಗಕರ್ಮಿಗಳು, ಚಿಂತಕರ ಆಗ್ರಹ

- Advertisement -
- Advertisement -

ಮೈಸೂರು ರಂಗಾಯಣ ಮತ್ತು ಬಹುರೂಪಿಯ ಗೌರವವನ್ನು ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ.ಕಾರ್ಯಪ್ಪ ಅವರು ಹಾಳುಮಾಡಬಾರದು ಎಂದು ಆಗ್ರಹಿಸಿರುವ ಹಿರಿಯ ಕಲಾವಿದರು, ಸಾಹಿತಿಗಳು, ರಂಗಕರ್ಮಿಗಳು ಬಹಿರಂಗ ಪತ್ರ ಬರೆದಿದ್ದಾರೆ.

ರಂಗಾಯಣದ ನಿರ್ದೇಶಕರು ಬಹುರೂಪಿ ಕಾರ್ಯಕ್ರಮವನ್ನು ರಾಜಕೀಯಗೊಳಿಸುತ್ತಿರುವ ಕುರಿತು ವಿಷಾದ ವ್ಯಕ್ತಪಡಿಸಿರುವ ಕಲಾವಿದರು, ರಂಗಾಯಣ ನಿರ್ದೇಶಕರ ಇತ್ತೀಚಿನ ಹೇಳಿಕೆಗಳನ್ನು ಕಟುವಾಗಿ ಟೀಕಿಸಿದ್ದಾರೆ. ನಿರ್ದೇಶಕರಿಗೆ ಬರೆದ ಪೂರ್ಣ ಪತ್ರ ಇಲ್ಲಿದೆ.

ರಂಗಾಯಣ: ಒಂದು ಸದಾಗ್ರಹ

ಈ ಬಾರಿಯ ‘ಬಹುರೂಪಿ ನಾಟಕೋತ್ಸವ’ ತನ್ನ ಬಣ್ಣವನ್ನು ಬದಲಾಯಿಸುತ್ತಿರುವುದಕ್ಕೆ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಕೆಲವು ಕಾರಣಗಳನ್ನು ನೀಡಿದ್ದಾರೆ. ಬಹುರೂಪಿಯ ಸಮಾರಂಭಕ್ಕೆ ರಂಗಾಯಣ ಆಯ್ಕೆಮಾಡಿರುವ ಇಬ್ಬರು ಅತಿಥಿಗಳ ಬಗ್ಗೆ ಮೈಸೂರಿನ ರಂಗಭೂಮಿ ಕಲಾವಿದರು, ಬರಹಗಾರರು ಮತ್ತು ಧೀಮಂತರು ಎತ್ತಿರುವ ಆಕ್ಷೇಪದ ಹಿನ್ನೆಲೆಯಲ್ಲಿ ಕಾರ್ಯಪ್ಪ ಈ ಮಾತುಗಳನ್ನು ಆಡಿದ್ದಾರೆ. ಹಾಗೆಯೇ ರಂಗಾಯಣದ ಕಿರಿಯ ಕಲಾವಿದರು ಆಡಿರುವ ಮಾತುಗಳು ಮತ್ತು ಹಂಚಿಕೊಂಡಿರುವ ಅಭಿಪ್ರಾಯಗಳ ಬಗ್ಗೆಯೂ ಈ ನಿರ್ದೇಶಕರು ಮಾತನಾಡಿದ್ದಾರೆ.
ಬಹುರೂಪಿಯ ಈ ಇಬ್ಬರು ಅತಿಥಿಗಳ ಬಗ್ಗೆ ಆಕ್ಷೇಪ ಹೊರಬಿದ್ದಾಗ ಕಾರ್ಯಪ್ಪನವರು ಇದನ್ನು ʼಎಡಚರʼ ಅಡ್ಡಗಾಲು, ಕಿರುಕುಳ ಎಂದು ಭಾವಿಸಿದರು. ಈ ಸಂದರ್ಭವನ್ನು ಬಳಸಿಕೊಂಡು ಎಡಚರು ಮತ್ತು ಬಲಚರು ಎಂದೆಲ್ಲ ಹೇಳಿ ಎಡಚರನ್ನು ಕಟುವಾಗಿ ಟೀಕಿಸಿದ್ದಾರೆ.

ಮೈಸೂರಿನ ರಂಗಪ್ರಿಯರಾಗಲಿ, ಕರ್ನಾಟಕದ ರಂಗಾಸಕ್ತರಾಗಲಿ, ರಂಗಾಯಣವನ್ನು ಒಂದು ಗಂಭೀರ ರಂಗಭೂಮಿಯ ಸಂಸ್ಥೆ ಎಂದು ಪರಿಭಾವಿಸಿ ದಶಕಗಳೇ ಕಳೆದಿವೆ. ರಂಗಾಯಣವನ್ನು ಕಟ್ಟಿಬೆಳಸಿದ ಈವರೆಗಿನ ರಂಗಕಲೆಯ ಅಧ್ಯಾಪಕರಾಗಲಿ, ರಂಗಾಯಣದ ನಿರ್ದೇಶಕರಾಗಲಿ, ರಂಗಾಸಕ್ತರಾಗಲಿ ಎಂದೂ ರಂಗಾಯಣವನ್ನು ಎಡಚ, ಬಲಚ ಸಂಸ್ಥೆ ಎಂದು ಭಾವಿಸಲೇ ಇಲ್ಲ. ಯಾರ ಒಲವು ಯಾವುದೇ ಇರಲಿ, ರಂಗಭೂಮಿ, ಅಥವಾ ಬಹುರೂಪಿ ಉತ್ಸವ ಎಂದಾಗ, ಇದೆಲ್ಲವನ್ನು ಮೀರಿದ ಒಂದು ಸಾಂಸ್ಕೃತಿಕ ಹಬ್ಬ, ಇಡೀ ರಾಷ್ಟ್ರದ ಭಿನ್ನ ಭಾಷೆಗಳ, ಸಂಸ್ಕೃತಿಗಳ ಮೇಳ, ಹೊಸ ಹೊಸ ಪ್ರಯೋಗಗಳ, ಸಾಧನೆಗಳ ವೇದಿಕೆ ಎಂದು ಗೌರವಿಸಿದರು. ಈ ಕಾರಣಕ್ಕಾಗಿಯೇ ʼಬಹುರೂಪಿʼ ಎಂದರೆ ಇಡೀ ಕರ್ನಾಟಕದ ಜನತೆ ಕುತೂಹಲದಿಂದ, ಆಸಕ್ತಿಯಿಂದ ನೋಡುತ್ತ, ಭಾಗವಹಿಸುತ್ತ ಈ ಹಬ್ಬಕ್ಕೆ ಆಸರೆಯಾಗಿ ನಿಂತಿದ್ದಾರೆ.
ಇದು ಒಬ್ಬರ ಸಾಧನೆಯಲ್ಲ; ರಂಗಾಯಣದ ನಿರ್ದೇಶಕರು, ರಂಗಕಲೆಯ ಅಧ್ಯಾಪಕರು, ಕಲಾವಿದರು, ಕಲಾರಸಿಕರು ಎಲ್ಲ ಸೇರಿದ ಸಾಮೂಹಿಕ ಪ್ರಯತ್ನದ ಫಲ. ಹಾಗೆಯೇ ಈ ಬಹುರೂಪಿ ಉತ್ಸವಕ್ಕೆ ಸರ್ಕಾರ, ಖಾಸಗೀ ಸಂಸ್ಥೆಗಳು ಮತ್ತು ಸಾರ್ವಜನಿಕರು ಆರ್ಥಿಕ ಬಲವನ್ನೂ ಒದಗಿಸುತ್ತ ಬಂದಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಲು ಅವಕಾಶವೇ ಇಲ್ಲದಂತೆ ಈ ಹಬ್ಬ ಎರಡು ದಶಕಗಳ ಕಾಲ ನಡೆದುಕೊಂಡು ಬಂದಿದೆ.

ಇದನ್ನೂ ಓದಿರಿ: ಬಹುರೂಪಿಗೆ ಸೂಲಿಬೆಲೆ, ಮಾಳವಿಕಾಗೆ ಆಹ್ವಾನ ವಿರೋಧಿಸಿ ‘ಪರ್ವ’ ಕಿರಿಯ ಕಲಾವಿದರಿಂದ ರಂಗಾಯಣಕ್ಕೆ ಪತ್ರ

ಕಾರ್ಯಪ್ಪನವರು ತಾವೇ ಸರ್ಕಾರದಿಂದ ಹಣತಂದಿರುವುದಾಗಿ ಹೇಳಿಕೊಂಡಿದ್ದಾರೆ. ಅವರು ತಾವೇ ಹೇಳಿಕೊಂಡಿರುವಂತೆ, ಕಾರ್ಯಪ್ಪನವರು ಆರ್‌‌ಎಸ್‌ಎಸ್‌ನಿಂದ ಬಂದವರು. ಆರ್‌‌ಎಸ್‌ಎಸ್‌ನ ಬಿಗಿಹಿಡಿತದಲ್ಲಿರುವ ಸರ್ಕಾರ ಕಾರ್ಯಪ್ಪನವರು ಕೇಳಿದಷ್ಟು ಹಣವನ್ನು ಕೊಟ್ಟಿರಬಹುದು. ಆದರೆ ಈ ಹಣ ಯಾವುದೇ ಪಕ್ಷದ ಅಥವಾ ಸಂಸ್ಥೆಯ ಹಣವಲ್ಲ. ಇದು ಜನರ ಹಣ. ನಾಡಿನ ಜನರು ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಈ ಹಣದ ಮೂಲಕ ಬೆಳೆಸುತ್ತ ಬಂದಿದ್ದಾರೆ. ಸರ್ಕಾರ ಈ ಹಣವನ್ನು ಕೊಡುವುದು ಅದರ ಕರ್ತವ್ಯಭಾಗ. ಇಲ್ಲಿ ಕಾರ್ಯಪ್ಪನವರ ಓಡಾಟ, ಶ್ರಮ ಇದ್ದರೆ ಅದಕ್ಕಾಗಿ ಅವರಿಗೆ ವಂದನೆ ಹೇಳೋಣ. ಆದರೆ ಹಣ ಸಾರ್ವಜನಿಕ ಹಣ ಎಂಬ ಎಚ್ಚರ ಮಾನ್ಯ ಕಾರ್ಯಪ್ಪನರಿಗೆ ಮತ್ತು ಆರ್‌‌ಎಸ್‌ಎಸ್‌ ಅಥವಾ ಬಿಜೆಪಿಗೆ ಇರಬೇಕಾಗುತ್ತದೆ.

ರಂಗಾಯಣದ ಕಿರಿಯ ಕಲಾವಿದರ ಬಗ್ಗೆ ಕಾರ್ಯಪ್ಪನವರು ಆಡಿರುವ ಮಾತುಗಳು ಈಗ ಗಾಳಿಯಲ್ಲಿ ಹರಿದಾಡುತ್ತಿವೆ. ಆ ಮಾತುಗಳನ್ನು ಇಲ್ಲಿ ಬಳಸದೆ, ಅದರ ಧ್ವನಿ ಮತ್ತು ಅರ್ಥವನ್ನಷ್ಟೆ ಬಳಸಿಕೊಂಡು ಹೇಳುವುದಾದರೆ: ರಂಗಾಯಣವಾಗಲಿ, ಅದು ಪ್ರಸ್ತುತ ಪಡಿಸುವ ವಿಭಿನ್ನ ಬಗೆಯ ನಾಟಕಗಳಾಗಲಿ ಕೇವಲ ರಂಜನೆಗಾಗಿ ಇರುವ ಸಾಧನಗಳಲ್ಲ. ಯಾವುದೇ ನಾಡಿನ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಸಮಾಜದ ಚಿಂತನೆಯನ್ನು ಬೆಳೆಸುತ್ತ, ವೈಚಾರಿಕ ಎಚ್ಚರವನ್ನು ಜಾಗೃತವಾಗಿಡುತ್ತ, ಜನತಂತ್ರ ವ್ಯವಸ್ಥೆಯ ಜೀವನಾಡಿಯಾಗಿ ಕ್ರಿಯಾಶೀಲವಾಗಿರುತ್ತವೆ. ಕಲಾವಿದರು ಮುಕ್ತವಾಗಿ ಮಾತನಾಡುವ, ಪ್ರಬುದ್ಧವಾಗಿ ಚಿಂತಿಸುವ ಅವಕಾಶವೂ ಇಲ್ಲಿರುತ್ತದೆ. ಇಂಥ ಅವಕಾಶ ಬಳಕೆಯಾಗುತ್ತಿದ್ದರೆ ನಾವೆಲ್ಲ ಸಂತೋಷಪಡಬೇಕು. ಜನತೆಯ ಹಣ ಸರಿಯಾದ ರೀತಿಯಲ್ಲಿ ಉಪಯೋಗವಾಗುತ್ತಿದೆ ಎಂದುಕೊಳ್ಳಬೇಕು. ಅದು ಬಿಟ್ಟು, ʼಸರ್ಕಾರದ ಹಣವನ್ನು ತಿಂದು, ಸರ್ಕಾರಕ್ಕೆ ದ್ರೋಹ ಬಗೆಯುತ್ತಿದ್ದಾರೆʼ ಇತ್ಯಾದಿ ನಮೂನೆಯ ಮಾತನಾಡುವುದು ರಂಗಾಯಣದಂಥ ಸ್ವಾಯತ್ತ ಸಂಸ್ಥೆಯ, ಜನ ಸಂಸ್ಥೆಯ ಘನತೆಯನ್ನು ಕೆಳಗಿಳಿಸಿದಂತಾಗುತ್ತದೆ. ರಂಗಾಯಣದ ನಿರ್ದೇಶಕ ಸ್ಥಾನದಲ್ಲಿರುವವರು ಇಂಥ ಕೆಲಸಕ್ಕೆ ಮುಂದಾಗಬಾರದು.

ಇದಲ್ಲದೆ, ಕಾರ್ಯಪ್ಪನವರು ‘ಸಂವಾದ’ (SAMVADA) ಎಂಬ ಯೂಟ್ಯೂಬ್ ವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ, ಬಿ.ವಿ.ಕಾರಂತರನಂತರ ರಂಗಾಯಣಕ್ಕೆ ನಿರ್ದೇಶಕರಾಗಿ ಬಂದವರಲ್ಲಿ ಒಬ್ಬರನ್ನು ಬಿಟ್ಟರೆ ಉಳಿದವರೆಲ್ಲ ‘ಮಾವೋವಾದಿಗಳ ಸಿದ್ಧಾಂತಗಳನ್ನು ಸ್ವೀಕರಿಸುವವರು’ ಎಂದು ಇಲ್ಲಸಲ್ಲದ ಮಾತಾಡಿದ್ದಾರೆ. ಆ ಸಿದ್ಧಾಂತವನ್ನು, ತನಗಿಂತ ಮುಂಚೆ ರಂಗಾಯಣದಲ್ಲಿದ್ದು ಆ ಸಂಸ್ಥೆಗೆ ಜವಾಬ್ದಾರರಾಗಿದ್ದವರ ತಲೆಗೆ ಮೇಲಿಂದಮೇಲೆ ಕಟ್ಟಿದ್ದಾರೆ. ಆದರೆ, ಆ ಸಂಬಂಧ ಅವರು ಆಡಿರುವುದೆಲ್ಲ ಶುದ್ಧ ಅಬದ್ಧವಾದ ಮಾತು. ವಿಶ್ವವಿದ್ಯಾಲಯಗಳೂ ಸೇರಿದಂತೆ ಕರ್ನಾಟಕದ ಯಾವುದೇ ಶಿಕ್ಷಣ ಸಂಸ್ಥೆ ಮತ್ತು ಕಲಾಸಂಸ್ಥೆಯ ಮುಖ್ಯಸ್ಥರು ಕಾರ್ಯಪ್ಪನವರ ತರಹ ಅಬದ್ಧಗಳನ್ನು, ಕೀಳು ಮಾತುಗಳನ್ನು ಎಂದೂ ಆಡಿದ್ದಿಲ್ಲವೆಂದೇ ಹೇಳಬೇಕು.

ಈವರೆಗೆ ರಂಗಾಯಣ ನಡೆದುಬಂದ ದಾರಿಯನ್ನು ನೋಡಿದರೆ, ನಿರ್ದೇಶಕ ಸ್ಥಾನದಲ್ಲಿದ್ದು ಕೆಲಸ ಮಾಡಿರುವ ಗಣ್ಯರು, ಮತ್ತು ಅಲ್ಲಿ ಅದರ ಆರಂಭದ ದಿನಗಳಿಂದ ಕೆಲಸಮಾಡಿ ಅದರ ಆರೋಗ್ಯಪೂರ್ಣ ಕಾಯಕಕ್ಕೆ ಬುನಾದಿಹಾಕಿದ ರಂಗಕಲೆಯ ಅಧ್ಯಾಪಕರು, ವಿಭಿನ್ನ ಚಿಂತನೆಯ, ತಾತ್ವಿಕ ನಿಲುವಿನ, ದೃಷ್ಟಿ ಧೋರಣೆಯ ಗಂಭೀರ ವ್ಯಕ್ತಿಗಳು. ಇವರು ತಮ್ಮ ವ್ಯಕ್ತಿಗತ ಅಭಿಪ್ರಾಯಗಳನ್ನು ಬದಿಗಿಟ್ಟು ರಂಗಭೂಮಿಯ ಘನತೆಗೆ ಕುಂದುಬರದಂತೆ ನೋಡಿಕೊಂಡಿದ್ದಾರೆ. ತಮ್ಮ ಕೈಲಾದ ಮಟ್ಟಿಗೆ ರಂಗಾಯಣವನ್ನು ಬೆಳಸಿ, ಉಳಿಸಿ ಹೋಗಿದ್ದಾರೆ. ಇವತ್ತು ಕರ್ನಾಟಕದಲ್ಲಿ ಮತ್ತು ಕನ್ನಡಿಗರ ಮನಸ್ಸಿನಲ್ಲಿ ರಂಗಾಯಣ ಮತ್ತು ಬಹುರೂಪಿಗಳು ಉಳಿದಿದ್ದರೆ ಅದಕ್ಕೆ ಕಾರಣ ಈ ಎಲ್ಲ ಗಣ್ಯರು. ಅವರನ್ನು ಯಾರೂ ʼಎಡಚರುʼ ʼಬಲಚರುʼ ಎಂದು ಗುರುತಿಸಲಿಲ್ಲ. ಅವರು ರಂಗಭೂಮಿಯವರು. ಅಲ್ಲಿಯೇ ಚಿಂತಿಸಿ, ದುಡಿದು, ರಂಗಭೂಮಿಯನ್ನು ಬೆಳಸಿದವರು; ಕರ್ನಾಟಕವನ್ನು ಮುನ್ನಡೆಸಿದವರು.
ಕಾರ್ಯಪ್ಪನವರು ಮತ್ತು ಅವರಂಥವರು ರಂಗಾಯಣವನ್ನು ಮತ್ತು ಬಹುರೂಪಿಯನ್ನು ಹಗುರವಾಗಿ ನೋಡಬಾರದು; ಅವುಗಳ ಗೌರವವನ್ನು ಹಾಳುಮಾಡಬಾರದು ಎಂಬ ಸದಾಗ್ರಹ ನಮ್ಮದು.

ಇಂತೀ:
ಪಂಡಿತ ರಾಜೀವ ತಾರಾನಾಥ್, ಸರೋದ್ ವಾದಕ
ಪ. ಮಲ್ಲೇಶ್, ಸಮಾಜವಾದಿ ಕಾರ್ಯಕರ್ತ
ಎಂ. ಸಿ. ಕೃಷ್ಣಪ್ರಸಾದ್, ನಟ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ
ಎಸ್. ರಾಮು, ನಟ, ರಂಗನಿರ್ದೇಶಕ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ.
ಸಂತೋಷಕುಮಾರ್ ಕುಸನೂರು, ನಟ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ
ನೂರ್ ಅಹಮದ್ ಶೇಖ್, ನಟ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ
ಮೈಮ್ ರಮೇಶ್, ನಟ, ರಂಗನಿರ್ದೇಶಕ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ
ರಘುನಂದನ, ಕವಿ, ರಂಗನಿರ್ದೇಶಕ, ಮಾಜಿ ಅಭಿನಯ ಪ್ರಶಿಕ್ಷಕ, ರಂಗಾಯಣ, ಮೈಸೂರು
ಬಸವಲಿಂಗಯ್ಯ, ರಂಗನಿರ್ದೇಶಕ, ಮತ್ತು ಮತ್ತು ಮಾಜಿ ನಿರ್ದೇಶಕ, ರಂಗಾಯಣ, ಮೈಸೂರು
ಭಾಗೀರಥಿಬಾಯಿ ಕದಂ, ಬಹುಭಾಷಾ ನಟಿ, ರಂಗನಿರ್ದೇಶಕಿ, ಮತ್ತು ಮಾಜಿ ನಿರ್ದೇಶಕಿ, ರಂಗಾಯಣ, ಮೈಸೂರು
ವೆಂಕಟರಮಣ ಐತಾಳ, ರಂಗನಿರ್ದೇಶಕ, ನೀನಾಸಮ್ ರಂಗಶಿಕ್ಷಣ ಕೇಂದ್ರದ ನಿವೃತ್ತ ಪ್ರಾಂಶುಪಾಲ,
ಇಕ್ಬಾಲ್ ಅಹ್ಮದ್ , ರಂಗ ನಿರ್ದೇಶಕ ಹಾಗೂ ನಟ, ಮತ್ತು ಚಿತ್ರಕಾರ
ಎಸ್. ಸುರೇಂದ್ರನಾಥ್, ಕತೆಗಾರ, ನಾಟಕಕಾರ, ರಂಗನಿರ್ದೇಶಕ
ಐ. ಕೆ. ಬೊಳುವಾರು, ರಂಗನಿರ್ದೇಶಕ, ನಿರತನಿರಂತ, ಪುತ್ತೂರು
ಪ್ರಕಾಶ್ ಗರುಡ, ರಂಗನಿರ್ದೇಶಕ, ಮತ್ತು ಮಾಜಿ ನಿರ್ದೇಶಕ, ರಂಗಾಯಣ, ಧಾರವಾಡ
ರಜನಿ ಗರುಡ, ರಂಗನಿರ್ದೇಶಕಿ, ಗೊಂಬೆಮನೆ, ಧಾರವಾಡ
ವಸಂತ ಬನ್ನಾಡಿ, ರಂಗನಿರ್ದೇಶಕ, ಬರಹಗಾರ
ಬಿ. ಸುರೇಶ, ರಂಗಕರ್ಮಿ, ಚಲನಚಿತ್ರ ನಿರ್ಮಾಪಕ, ನಿರ್ದೇಶಕ
ಶಂಕರಯ್ಯ ಆರ್ ಘಂಟಿ, ರಂಗ ನಿರ್ದೇಶಕ, ಸಂಘಟಕ, ಕಲಬುರಗಿ
ಅಚ್ಯುತಕುಮಾರ್ ಎಚ್ ಕೆ, ನಟ
ಎಚ್ ಎಸ್ ರಾಘವೇಂದ್ರರಾವ್, ವಿಮರ್ಶಕ, ಅನುವಾದಕ
ಎನ್. ಮನು ಚಕ್ರವರ್ತಿ, ಸಾಹಿತ್ಯ ಮತ್ತು ಚಲನಚಿತ್ರ ವಿಮರ್ಶಕ
ಓ. ಎಲ್. ನಾಗಭೂಷಣಸ್ವಾಮಿ, ಅನುವಾದಕ, ವಿಮರ್ಶಕ
ಜಿ. ಪಿ. ಬಸವರಾಜು, ಕವಿ
ಜಿ. ರಾಜಶೇಖರ್, ಬರಹಗಾರ
ರಾಜೇಂದ್ರ ಚೆನ್ನಿ, ಲೇಖಕ
ಬೊಳುವಾರು ಮಹಮದ್ ಕುಂಞಿ, ಬರಹಗಾರ, ಹಾಗೂ ಗೌರವಾಧ್ಯಕ್ಷ, ಸಮುದಾಯ, ಕರ್ನಾಟಕ.
ಕೇಶವ ಶರ್ಮ, ಬರಹಗಾರ
ಡಿ. ಎಸ್. ನಾಗಭೂಷಣ, ಲೇಖಕ, ಮತ್ತು ಸಂಪಾದಕ, ಹೊಸ ಮನುಷ್ಯ
ಬಿ.ಟಿ.ಜಾಹ್ನವಿ, ಕತೆಗಾರ್ತಿ
ಅಮರೇಶ ನುಗಡೋಣಿ, ಕತೆಗಾರ
ಪಿ.ಮಹಮ್ಮದ್‌, ವ್ಯಂಗ್ಯಚಿತ್ರಕಾರ
ಆರ್‌.ವಿಜಯರಾಘವನ್‌, ಬರಹಗಾರ
ಟಿ. ಎಸ್. ವೇಣುಗೋಪಾಲ್, ಅರ್ಥಿಕ ಚಿಂತಕ-ಲೇಖಕ, ಪುಸ್ತಕ ಪ್ರಕಾಶಕ
ಡಾ.ವಿ.ಲಕ್ಷ್ಮೀನಾರಾಯಣ, ಸಾಮಾಜಿಕ ಕಾರ್ಯಕರ್ತ
ಇ.ರತಿರಾವ್‌, ಸಾಮಾಜಿಕ ಕಾರ್ಯಕರ್ತೆ
ನಾ. ದಿವಾಕರ, ಬರಹಗಾರ, ಸಾಮಾಜಿಕ ಕಾರ್ಯಕರ್ತ
ಪ್ರೊ. ಪಂಡಿತಾರಾಧ್ಯ, ಬರಹಗಾರ, ನಿವೃತ್ತ ಪ್ರಾಧ್ಯಾಪಕ
ರವಿಕುಮಾರ್ ಕಾಶಿ, ಸಮಕಾಲೀನ ಕಲಾವಿದ
ವಿ. ಎನ್. ಲಕ್ಷ್ಮೀನಾರಾಯಣ, ಬರಹಗಾರ, ನಿವೃತ್ತ ಪ್ರಾಧ್ಯಾಪಕ
ಶೈಲಜ, ಸಂಗೀತಜ್ಞೆ, ಲೇಖಕಿ, ಪುಸ್ತಕ ಪ್ರಕಾಶಕಿ
ಸಚ್ಚಿದಾನಂದ ಕೆ. ಜೆ., ವರ್ಣಚಿತ್ರ ಕಲಾವಿದ
ಸವಿತಾ ನಾಗಭೂಷಣ, ಕವಯಿತ್ರಿ
ಪ್ರಶಾಂತ್ ಪಂಡಿತ್, ಚಲನಚಿತ್ರ ಸಂಕಲನಕಾರ


ಇದನ್ನೂ ಓದಿರಿ: ರಂಗಾಯಣ ನಿರ್ದೇಶಕರ ವಜಾಕ್ಕೆ ಪ್ರಗತಿಪರ ಚಿಂತಕರ ಆಗ್ರಹ; ಬಹುರೂಪಿ ಬಹಿಷ್ಕರಿಸಲು ನಿರ್ಧಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...