Homeರಾಷ್ಟ್ರೀಯಕಲೆಯನ್ನು (ಸಿನೆಮಾ) ಅರ್ಥ ಮಾಡಿಕೊಳ್ಳಬೇಕಾ ಅಥವಾ?

ಕಲೆಯನ್ನು (ಸಿನೆಮಾ) ಅರ್ಥ ಮಾಡಿಕೊಳ್ಳಬೇಕಾ ಅಥವಾ?

- Advertisement -
- Advertisement -

ಒಂದು – ನನ್ನ ಒಬ್ಬ ಮಿತ್ರ ಹೇಳಿದ ಘಟನೆ. ಅವನು ಮೊದಲ ಸಲ ಮುಂಬಯಿಗೆ ಹೋಗಿದ್ದಾಗ ಅವನಿಗಿದ್ದ ಒಂದು ಆಸೆ; ಮಲ್ಟಿಪ್ಲೆಕ್ಸ್‍ನಲ್ಲಿ ಒಂದು ಸಿನೆಮಾ ನೋಡಬೇಕು ಅಂತ. ಆಯ್ತು ಹೋದ, ಯಾವುದೋ ಒಂದು ದೊಡ್ಡ ಹೀರೋನ ಚಿತ್ರದ ಟಿಕೆಟ್ ತೊಗೊಂಡು, ಒಂದು ಹಾಲ್‍ನಲ್ಲಿ ಕುಳಿತ. ಅಲ್ಲಿ ಆ ದೊಡ್ಡ ಹೀರೋನ ಸಿನಿಮಾ ಶುರುವಾಗುವ ಬದಲಿಗೆ ಯಾವುದೋ ಸಾಕ್ಷಚಿತ್ರ ಶುರುವಾಯಿತು. ಆಯಿತು, ಕೆಲನಿಮಿಷ ಇದನ್ನು ತೋರಿಸಿ ಸಿನೆಮಾ ಶುರು ಮಾಡ್ತಾರೆ ಎಂದು ಕುಳಿತವನಿಗೆ ತಾನು ತಪ್ಪಾಗಿ ಬೇರೊಂದು ಹಾಲ್‍ಗೆ ಬಂದಿದ್ದೇನೆ ಎಂದು ತಿಳಿಯುವಷ್ಟರಲ್ಲಿ ತುಂಬಾ ತಡವಾಗಿತ್ತು.

“ಥೋ, ಅದ್ಹೆಂತದೋ ಮುಂಬಯಿಯಲ್ಲಿ ಇಲಿ ಹಿಡಿಯುವವರ ಚಿತ್ರ ಇತ್ತು ಮಾರಾಯಾ, ಒಂದು ಇಲಿ ಹೊಡೆದುಕೊಟ್ಟರೆ ಇಂತಿಷ್ಟು ರೂಪಾಯಿ ಕೊಡ್ತಾರೆಂತೆ, ದಿನಾ ರಾತ್ರಿ 12 ಗಂಟೆ ನಂತರ ಇವರೆಲ್ಲಾ ಕೆಲಸ ಶುರು ಹಚ್ಕೋತಾರೆ, ಹೆಂಗೆ ಹಿಡಿತಾರೆ ಗೊತ್ತಾ ಇಲೀನಾ, ಅವರ ಜೀವನ ಹೆಂಗಿರುತ್ತೆ ಗೊತ್ತಾ…” ಎಂದೆಲ್ಲಾ ಅವನು ಆ ಚಿತ್ರದ ಬಗ್ಗೆ ಸವಿಸ್ತಾರವಾಗಿ ಕಣ್ಣುಮುಂದೆ ಬರುವಂತೆ ಆ ಘಟನೆಯಾದ ಐದಾರು ವರ್ಷಗಳ ನಂತರವೂ ನಿನ್ನೆಯೇ ನೋಡಿದ ಸಿನೆಮಾದಂತೆ ಹೇಳುತ್ತಿದ್ದ; ಅದರೊಂದಿಗೆ ಎಂಥಾ ಡಬ್ಬಾ ಸಿನೆಮಾ, ಹೀರೋನ ಸಿನೆಮಾ ನೋಡೋಕ್ ಹೋಗಿ ಅದನ್ನು ನೋಡಬೇಕಾಯಿತು ಎನ್ನುವ ಕಡುಬೇಸರವನ್ನೂ ವ್ಯಕ್ತಪಡಿಸುತ್ತಿದ್ದ.

ಎರಡು – ಮುಂಬಯಿಯಲ್ಲಿ ಪಂಡಿತ್ ಪ್ರದೀಪ್ ಚಟರ್ಜಿಯವರ ಬಳಿ ಹಿಂದುಸ್ತಾನಿ ಸಂಗೀತ ಕಲಿಯುತ್ತಿದ್ದೆ. ನನ್ನ ಜೊತೆಗೆ ಕಲಿಯುತ್ತಿದ್ದ ಒಬ್ಬ ಶಿಷ್ಯೆ ಏನೋ ಹೇಳುತ್ತ “ಅವರು (ಒಬ್ಬ ಹಿಂದುಸ್ತಾನಿ ಗಾಯಕರನ್ನು ಹೆಸರಿಸಿ) ಹಾಡೋದು ನಮಗೆ ಅರ್ಥಾನೇ ಆಗೋಲ್ಲ” ಎಂದು ಬಿಟ್ಟಳು. ಅದನ್ನು ಕೇಳಿ ಸಿಟ್ಟಿಗೆದ್ದ ನಮ್ಮ ಗುರುಗಳು “ಏನ್ರೀ, ಯಾರದೋ ಮನೆಗೆ ಹೋದಾಗ, ಅಲ್ಲಿ ಒಳ್ಳೇ ಊಟ ಬಡಿಸಿದ ಮೇಲೆ, ಅದನ್ನು ಹೇಗೆ ಮಾಡಿದ್ರು, ಯಾವ್ಯಾವ ಪದಾರ್ಥಗಳನ್ನು ಹಾಕಿದ್ರು ಅಂತಾ ತಿಳಕೊಳ್ಳೋಕೆ ಹೋಗ್ತೀರಾ? ಆ ಊಟ ಎಂಜಾಯ್ ಮಾಡೋಕೆ ಅದೆಲ್ಲಾ ತಿಳಿಯೋದು ಅವಶ್ಯಕವಾ? ಅವೆಲ್ಲಾ ಏನೂ ತಿಳಿಯದೇ ಊಟ ಮಾಡಿದ್ರೆ ಸಮಾಧಾನ ಆಗಲ್ವಾ?… ಇಂಥಾ ಮಾತುಗಳು (ಆ ಶಿಷ್ಯೆ ಕೇಳಿದ್ದು) ನಿಮ್ಮ ಬಾಯಿಂದ ಬರಲೇಬಾರದು.” ಎಂದರು.
ಮೂರು – ಮನೆಯಲ್ಲಿ ಟಿವಿ ಆನ್ ಆಗಿತ್ತು, ಟೊರಂಟೀನೋನ ಕಿಲ್ ಬಿಲ್ 1 ಚಿತ್ರ ಬರುತ್ತಿತ್ತು. ಯಾರೂ ನೋಡುತ್ತಿರಲಿಲ್ಲ. ಆ ಚಿತ್ರದಲ್ಲಿ ವಿವಿಕಾ ಫಾಕ್ಸ್‍ಳನ್ನು ಕೊಲ್ಲುವ ಉದ್ದೇಶದಿಂದ ಊಮಾ ಥರ್ಮನ್ ಬಂದಾಗ ಹೊಡೆದಾಟದ ದೃಶ್ಯವೊಂದಿದೆ. ಏನೋ ಮಾಡುತ್ತಿದ್ದ ನನ್ನ ಅಮ್ಮ ಆ ದೃಶ್ಯವನ್ನು ನೋಡುತ್ತ ನಿಂತುಬಿಟ್ಟರು, “ಇದೇನಿದು, ಹೆಂಗೆ ಹೊಡೆದಾಡ್ತಾರೆ, ಓಹ್, ಸುಮ್ಮನಾದ್ರಲ್ಲ, ಹೊಡೆದಾಟ ಮುಗಿಸಿದ್ರಾ, ಓ… ಆ ಮಗು ಬಂತು ಅಂತ ಸುಮ್ಮನಾದ್ರಾ, ಅಯ್ತೋ ಆ ಮಗು ಹೋದ ಕೂಡಲೇ ಮತ್ತೇ ಶುರುಮಾಡಿಬಿಟ್ರಲ್ಲ…ಹಾಹಹಾಹಾ…” ಜೀವನದಲ್ಲಿ ಎಂದು ಹೊಡೆದಾಟದ ಸಿನೆಮಾಗಳನ್ನು ನೋಡದ ಅವರು ಪ್ರತಿಕ್ರಿಯಿಸಿದ್ದು ಹೀಗೆ. ಅಷ್ಟರಲ್ಲಿ ಕಲಾತ್ಮಕ ಸಿನೆಮಾಗಳನ್ನು ನೋಡುವ ಅಭಿರುಚಿ ಹೊಂದಿರುವ ಅಪ್ಪ ಅದನ್ನು ನೋಡಿ, “ಇದೇನು, ಮಕ್ಕಳ ತರಾ ಹೊಡೆದಾಟದ ಸಿನೆಮಾ ನೋಡ್ತೀರಿ…” ಎಂದು ಗದರಿಸಿದರು.
ನಾಲ್ಕು – ಹಲವಾರು ಬಾರಿ ಕೇಳಿದ್ದು; ಆವಯ್ಯನ ಸಿನೆಮಾಗಳು ಅರ್ಥಾನೇ ಆಗಲ್ಲ..
ಐದು – “ಗಾಡ್‍ಫಾದರ್ ಚಿತ್ರವನ್ನು ಮೊದಲ ಸಲ ನೋಡಿದಾಗ ಏನೂ ತಿಳೀಲಿಲ್ಲ, ಎರಡನೇ ಸಲ ನೋಡಿದಾಗಲೂ ತಿಳಿಯಲಿಲ್ಲ, ಆನಂತರ ಗಾಡ್‍ಫಾದರ್ ಪುಸ್ತಕ ಓದಿ ಸಿನೆಮಾ ನೋಡಿದೆ; ಎಂತಹ ಅದ್ಭುತ ಸಿನೆಮಾ” ಒಬ್ಬ ಗೆಳೆಯ ಹೇಳಿದ್ದು.
ರೋಮನ್ ಪೋಲನ್ಸ್ಕಿ ಅವರ ಅತ್ಯಂತ ಸುಪ್ರಸಿದ್ಧ ಸಿನೆಮಾ ರೋಸ್‍ಮೇರಿ’ಸ್ ಬೇಬಿ ಯನ್ನು ಮತ್ತು ಸ್ಟ್ಯಾನ್ಲಿ ಕ್ಯುಬರಿಕ್ ಅವರ ಶೈನಿಂಗ್ ಚಿತ್ರಗಳನ್ನು ಹೇಗೆ ಅರ್ಥೈಸಬೇಕು?
ದಕ್ಷಿಣ ಭಾರತದ ಸ್ಟಾರ್‍ಗಳ ಅಭಿಮಾನಿಗಳು ಆಯಾ ಸ್ಟಾರ್‍ನ ಎಲ್ಲಾ ಸಿನೆಮಾಗಳನ್ನು ಆನಂದಿಸುತ್ತಾರಾ? ಹೇಗೆ?
ಒಂದು ಸಿನೆಮಾ ಅನ್ನು ಆನಂದಿಸಲು ಅರ್ಥ ಮಾಡಿಕೊಳ್ಳಲೇಬೇಕೆ?


ಸುಲಭ ಉತ್ತರಗಳಿಲ್ಲ.

ಸಿನೆಮಾಗಳು ಮತ್ತು ಆ ಸಿನೆಮಾಗಳನ್ನು ಆಸ್ವಾದಿಸುವುದು ವೈಯಕ್ತಿಕ ಅಭಿರುಚಿಗಳೊಂದಿಗೆ ಆಯಾ ಪ್ರದೇಶದ ಸಾಮಾಜಿಕ ಪರಿಸ್ಥಿತಿಗಳ ಮೇಲೆ ಕೂಡ ಅವಲಂಬಿಸಿರುತ್ತದೆ. ಹಲವಾರು ಸಿನೆಮಾಗಳು ಸರ್ವಕಾಲದಲ್ಲೂ ಪ್ರಸ್ತುತವಾಗಿದ್ದರೆ ಕೆಲವು ಸಿನೆಮಾಗಳನ್ನು ಕೇವಲ ಒಂದು ದಶಕದ ನಂತರ ನೋಡಲಾಗುವುದಿಲ್ಲ. ಹೌದು ಸಿನೆಮಾಗೂ ಮತ್ತು ಕಲೆಯ ಇತರ ಪ್ರಕಾರಗಳಿಗೂ ಖಂಡಿತವಾಗಿಯೂ ವ್ಯತ್ಯಾಸಗಳಿವೆ. ಒಂದು ಮಾಡರ್ನ್ ಪೇಂಟಿಂಗ್‍ಗೂ ಒಂದು ‘ಕಲಾತ್ಮಕ’(ನಾನು ತುಂಬಾ ದ್ವೇಷಿಸುವ ಪದ) ಚಿತ್ರಕ್ಕೂ ಸಾಮ್ಯತೆಗಳಿವೆಯೆ? ಅವೆರಡನ್ನೂ ಹೋಲಿಸಬಹದಾ? ಅನೇಕರು ಮಾಡರ್ನ್ ಪೇಂಟಿಂಗ್ ಎಂದಕೂಡಲೇ ಮೂಗು ಮುರಿಯುತ್ತಾರೆ; ಸುಮ್ಮನೇ ಏನೋ ಗೀರಿದ್ದು ಎಂದುಕೊಳ್ಳುತ್ತಾರೆ (ಅನೇಕ ಕವಿತೆಗಳಿಗೂ ಇದೇ ತೆರನಾದ ಅಭಿಪ್ರಾಯ ಬಂದಿದ್ದನ್ನು ಕೇಳಿದ್ದೇವೆ.) ಆ ಪೇಂಟಿಂಗ್‍ಅನ್ನು ಅರ್ಥಮಾಡಿಕೊಳ್ಳಲೇಬೇಕಾ? ಒಂದು ಅದ್ಭುತ ಪೇಂಟಿಂಗ್ ನಮ್ಮನ್ನು ಅದನ್ನೇ ನೋಡುತ್ತ ಕೆಲಸಮಯ ನಿಲ್ಲಿಸಿದರೆ ಸಾಕಲ್ಲವೇ? ಪೇಂಟಿಂಗ್‍ನ ಯಾವ ಜ್ಞಾನವೂ ಇಲ್ಲದ ಒಬ್ಬನ ಎದುರಿಗೆ ಒಂದು ಅದ್ಭುತವೆಂದು ಪರಿಗಣಿಸಲಾದ ಪೇಂಟಿಂಗ್ ಮತ್ತು ಇನ್ನೊಂದು ಕೆಟ್ಟ ಪೇಂಟಿಂಗ್ ತಂದಿಟ್ಟರೆ ಅವನು ಯಾವ ಪೇಂಟಿಂಗ್ ಅನ್ನು ನೋಡುತ್ತಾನೆ? ಅವನು ಎರಡೂ ಪೇಂಟಿಂಗ್‍ಗಳನ್ನು ಇಷ್ಟಪಡದೇ ಹೋದರೂ ಅವೆರಡರಲ್ಲಿ ಆ ಅದ್ಭುತವಾದ ಕಲೆಯ ಕೆಲಸದ ಎದುರಿಗೆ ಖಂಡಿತವಾಗಿಯೂ ಹೆಚ್ಚು ಸಮಯ ಕಳೆಯುತ್ತಾನೆ. ಅವನು ಏಕೆ ಆ ಅದ್ಭುತ ಕಲಾಕೃತಿಯನ್ನು ಹೆಚ್ಚು ಸಮಯ ನೋಡುತ್ತ ನಿಂತ ಎನ್ನುವುದು ವಿಶ್ಲೇಷಣೆಯನ್ನು ವಿಮರ್ಶಕರೆಂದು ಕರೆದುಕೊಳ್ಳುವವರ ಕೆಲಸ.
ಒಂದು ಕಲಾಕೃತಿ, ಸಂಗೀತ ಅಥವಾ ಉತ್ಕøಷ್ಟ ಅಡುಗೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದೇ ಆಸ್ವಾದಿಸಬಹುದಾದರೆ, ಅದು ಸಿನೆಮಾಗೆ ಅನ್ವಯವಾಗುವುದೇ?

ಇಲಿಗಳನ್ನು ಕೊಲ್ಲುವವರ ಚಿತ್ರವನ್ನು ನೋಡಿದ ಆ ಗೆಳೆಯನಿಗೆ ಆ ಚಿತ್ರ ಅಷ್ಟೊಂದು ತಟ್ಟಿದ್ದರೂ (ಐದಾರೂ ವರ್ಷಗಳ ನಂತರವೂ ನೆನಪಿಟ್ಟುಕೊಂಡು ಅಷ್ಟೊಂದು ಉತ್ಸಾಹದಿಂದ ಮಾತನಾಡುತ್ತಾನೆ ಎಂದರೆ) ಅವನ ಬೇಸರ ತಣಿದಿದ್ದಿಲ್ಲ. ಆಗ ಅವನನ್ನು ಪೂರ್ವಗ್ರಹಪೀಡಿತನೆಂದು ಕರೆಯಬಹುದಲ್ಲವೇ? ಒಂದು ಚಿತ್ರ ನಮ್ಮನ್ನು ಆಳವಾಗಿ ತಟ್ಟಿದರೆ ಸಾಕಲ್ಲವೇ? ಆದರೆ ಒಂದು ಚಿತ್ರದಲ್ಲಿ ಏನಾಗುತ್ತದೆ ಎನ್ನುವುದು ತಿಳಿಯದೇ ಆ ಚಿತ್ರ ನೋಡುಗನಿಗೆ ತಟ್ಟಬಲ್ಲದೇ? ಹೌದು ಮತ್ತು ಇಲ್ಲ. ಟಾರ್ಕೊವ್‍ಸ್ಕಿ ಅವರ ಸ್ಟಾಕರ್ ಎನ್ನವ ಚಿತ್ರಗಳಿಗೆ ಅರ್ಥವಾಗಲೇಬೇಕು ಎನ್ನುವ ಷರತ್ತುಗಳಿಲ್ಲ. ಆದರೆ ಈ ಹಿಂದೆಯೇ ಹೇಳಿದಂತೆ ಚಲನಚಿತ್ರ ರಚನೆ/ಚಿತ್ರಕಥೆ ಬರಹ ಎನ್ನುವುದು ಒಂದು ಸಂಕೀರ್ಣ ಕಲೆ. ಬರಹಗಾರನು ಅಥವಾ ನಿರ್ದೇಶಕನು ಮಾಡಿದ ತಪ್ಪಿನಿಂದ ನೋಡುಗನಿಗೆ ಚಿತ್ರ ಅಥವಾ ಕತೆಯು ಅರ್ಥವಾಗದಿದ್ದಲ್ಲಿ ಇದು ಅನ್ವಯಿಸುವುದಿಲ್ಲ.

ಇನ್ನು ಕೆಲವು ಸಲ ನಮ್ಮ ನಮ್ಮ ಸಾಮಾಜಿಕ ಕಾರಣಗಳಿಂದಾಗಿಯೋ ಅಥವಾ ವೈಯಕ್ತಿಕ ಕಾರಣಗಳಿಂದಾಗಿಯೋ, ಆಯಾ ಪ್ರದೇಶಗಳಲ್ಲಿ ಅಂತಹ ವಿಷಯಗಳು ಮುನ್ನೆಲೆಗೆ ಬಾರದ ಕಾರಣಗಳಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಒಂದು ಒಳ್ಳೆಯ ಚಿತ್ರವೂ ಇಷ್ಟವಾಗದೇ ಹೋಗಬಹುದು.

ಇವೆಲ್ಲವುಗಳೂ ಇನ್ನೊಂದು ಮೂಲಭೂತ ಪ್ರಶ್ನೆಗೆ ಎಡೆಮಾಡಿಕೊಡುತ್ತವೆ. ಅಂತಿಮವಾಗಿ ಕಲೆಯ ಉದ್ದೇಶವಾದರೂ ಏನು? ಮನರಂಜನೆ ಎಂದರೇನು? ಮೇಲೆ ಹೆಸರಿಸಿದ ಸೈಕಾಲಾಜಿಕಲ್ ಹಾರರ್ ಚಿತ್ರವಾದ ಶೈನಿಂಗ್ ಮತ್ತು ರೋಸ್‍ಮೆರಿ’ಸ್ ಬೇಬಿ ಚಿತ್ರಗಳು ನಮಗೆ ಮನರಂಜನೆ ನೀಡುತ್ತವೆಯೇ? ಆ ಚಿತ್ರಗಳನ್ನು ನೋಡಿದ ನಂತರ ನಮ್ಮ ಮನದಲ್ಲಿ ಉಳಿಯುವ ಭಾವನೆಗಳಾದರೂ ಯಾವುವು? ಒಂದು ಚಿತ್ರ ಪ್ರಾರಂಭದಿಂದ ಅಂತ್ಯದವರೆಗೆ ನಮ್ಮನ್ನು ಹಿಡಿದಿಟ್ಟುಕೊಂಡರೆ ಆ ಚಿತ್ರ ನಮಗೆ ಮನರಂಜನೆ ನೀಡಿದಂತೆಯೇ? ಕೆಲವು ಸಲ ಕೆಟ್ಟ ಚಿತ್ರಗಳೂ ನಮ್ಮನ್ನು ನೋಡಿಸಿಕೊಂಡು ಹೋಗುತ್ತವೆ, ಚಿತ್ರ ನೋಡಿದ ನಂತರ ಇದನ್ಯಾಕೆ ನೋಡಿದೆ ಎನ್ನುವ ಸಿಟ್ಟು ಮಾತ್ರ ಉಳಿದಿರುತ್ತೆ. ಹಾಗಾದರೆ ಏನು ಮನರಂಜನೆಯ ಅರ್ಥ? ಸುಖಾಂತದ ಕಥೆಗಳಷ್ಟೇ ಮನರಂಜನೆ ಎಂದಂತೂ ಯಾರೂ ಹೇಳುವುದಿಲ್ಲ. ದುರಂತ ಕಥೆಗಳನ್ನೂ ಅಷ್ಟೇ ಆಸ್ವಾದಿಸುತ್ತೇವೆ.

ಈ ಪ್ರಶ್ನೆಗಳಿಗೆ ಹಲವಾರು ಉತ್ತರಗಳಿರಬಹುದು; ನನಗೆ ನೆನಪಾಗುವುದು ಲಂಕೇಶ್ ಹೇಳುತ್ತಿದ್ದ ಪದ, ವಾಸನೆ. ಕೆಟ್ಟ ಸಿನೆಮಾಗಳ ವಾಸನೆ ಕೆಟ್ಟದಾಗಿರುತ್ತೆ, ಅವುಗಳ ವಾಸನೆ ಕಂಡುಹಿಡಿಯಲು ನಾವು ಚಿತ್ರ ನೋಡಲೇಬೇಕಂತಿಲ್ಲ, ಅದಕ್ಕೂ ಮುಂಚೆಯೇ ವಾಸನೆ ಹೊಡೆಯುತ್ತವೆ. ಒಳ್ಳೇ ಚಿತ್ರಗಳು ಅರ್ಥವಾಗದಿದ್ದರೂ ವಾಸನೆ ಚೆನ್ನಾಗಿತ್ತು ಎಂದರೆ ಸಂತೋಷಪಡುವ. ಸದ್ಯಕ್ಕೆ ವಾಸನೆಯೊಂದಿಗೆ ಮುಗಿಸುತ್ತೇನೆ; ಮುಂದೆ ನೋಡುವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...