ಒಕ್ಕೂಟ ಸರ್ಕಾರ ಬುಧವಾರ ಸಂಪುಟ ಪುನರ್ರಚನೆ ಮಾಡಿದ್ದು, ಆರೋಗ್ಯ ಇಲಾಖೆ ಸೇರಿದಂತೆ ಹಲವು ಸಚಿವರನ್ನು ಬದಲಾಯಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಇದರಿಂದ ಏನಾದರೂ ಬದಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಆರೋಗ್ಯ ಇಲಾಖೆಗೆ ಹೊಸ ಸಚಿವರ ನೇಮಕವಾಗಿದ್ದು, ರಾಹುಲ್ ಗಾಂಧಿ ಟ್ವೀಟ್ ಮಾಡಿ ಒಕ್ಕೂಟ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ‘ಚೇಂಜ್’ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಇದರ ಅರ್ಥ ಇನ್ನು ಮುಂದೆ ವ್ಯಾಕ್ಸೀನ್ ಕೊರತೆಯಾಗುವುದಿಲ್ಲವೆ?” ಎಂದ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಒಕ್ಕೂಟ ಸರ್ಕಾರದ ಹೊಸ ‘ಸಹಕಾರ ಸಚಿವಾಲಯ’ ಅಮಿತ್ ಶಾ ತೆಕ್ಕೆಗೆ!
ಕೊರೊನಾ ಲಸಿಕಾ ಅಭಿಯಾನವು ನಿಧಾನಗತಿಯಲ್ಲಿ ಸಾಗುತ್ತಿದ್ದು, ಅದರ ವೇಗವನ್ನು ಹೆಚ್ಚಿಸಬೇಕು ಎಂದು ಕಾಂಗ್ರಸ್ ಪಕ್ಷವು ಒಕ್ಕೂಟ ಸರ್ಕಾರದ ವ್ಯಾಕ್ಸಿನೇಷನ್ ನೀತಿಯನ್ನು ನಿರಂತರವಾಗಿ ಟೀಕಿಸುತ್ತಿದೆ.
Does this mean no more vaccine shortage?#Change
— Rahul Gandhi (@RahulGandhi) July 8, 2021
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ರಾಹುಲ್ ಗಾಂಧಿಯನ್ನು “ಬೇಜವಾಬ್ದಾರಿ” ಎಂದು ಕರೆದಿದ್ದಾರೆ. “ಆದಾಗ್ಯೂ, ಅವರ ರಚನಾತ್ಮಕ ಟೀಕೆಗಳನ್ನು ನಾವು ಸ್ವಾಗತಿಸುತ್ತೇವೆ” ಎಂದು ಗೌರವ್ ಭಾಟಿಯಾ ಹೇಳಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರವು ಅಧಿಕಾರಕ್ಕೆ ಬಂದ ಎರಡು ವರ್ಷಗಳ ಬಳಿಕ ಸಂಪುಟ ಪುನರ್ರಚನೆ ಪೂರ್ಣಗೊಳಿಸಿದೆ. ಕ್ಯಾಬಿನೆಟ್ ಮಂತ್ರಿಗಳ ಸಂಖ್ಯೆಯನ್ನು 21 ರಿಂದ 30 ಕ್ಕೆ ಮತ್ತು ಕಿರಿಯ ಮಂತ್ರಿಗಳ ಸಂಖ್ಯೆಯನ್ನು 23 ರಿಂದ 45 ಕ್ಕೆ ಹೆಚ್ಚಿಸಿದೆ. ನಲವತ್ತನಾಲ್ಕು ಸಚಿವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಅವರಲ್ಲಿ ಹದಿನೈದು ಮಂದಿ ಕೇಂದ್ರ ಸಚಿವ ಸಂಪುಟದ ಭಾಗವಾದರು.
ಇದನ್ನೂ ಓದಿ: ಸಂಪುಟ ಪುನರ್ರಚನೆಗೆ ಕಾರ್ಯನಿರ್ವಹಣೆಯೆ ಮಾನದಂಡವಾದರೆ ಮೋದಿಯನ್ನೇ ಮೊದಲು ತೆಗೆಯಬೇಕು: ಸಿದ್ದರಾಮಯ್ಯ