ಪಾಕಿಸ್ತಾನದ ಬೇಹುಗಾರಿಕೆ ಆರೋಪದ ಮೇಲೆ ಇತ್ತೀಚೆಗೆ ಬಂಧನಕ್ಕೊಳಗಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ಅಧಿಕಾರಿಯೊಬ್ಬರು ಹಲವು ವರ್ಷಗಳಿಂದ ಆರ್ಎಸ್ಎಸ್ ಸ್ವಯಂಸೇವಕರಾಗಿದ್ದಾರೆ ಮತ್ತು ಅವರ ಕುಟುಂಬವು ನಾಲ್ಕು ತಲೆಮಾರುಗಳಿಂದ ಸಂಘದೊಂದಿಗೆ ಸಂಬಂಧ ಹೊಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಬುಧವಾರ, ಡಿಆರ್ಡಿಒದ ಅಧಿಕಾರಿಯಾಗಿರುವ ಪ್ರದೀಪ್ ಕುರುಲ್ಕರ್ ಅವರ ಯೂಟ್ಯೂಬ್ ಸಂದರ್ಶನವನ್ನು ಎಐಸಿಸಿ ಪ್ರದರ್ಶಿಸಿತು, ಇದರಲ್ಲಿ ಕುರುಲ್ಕರ್ ಅವರು ಮತ್ತು ಅವರ ಕುಟುಂಬ ಸಂಘದೊಂದಿಗಿನ ಸಂಪರ್ಕಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಪುಸ್ತಕ ಬಿಡುಗಡೆ ಕಾರ್ಯಕ್ರಮದ ಮತ್ತೊಂದು ವಿಡಿಯೋ ಕ್ಲಿಪ್ಪಿಂಗ್, ವೇದಿಕೆಯ ಮೇಲೆ ಕುಳಿತಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ಕುರುಲ್ಕರ್ ಸಭೆಯನ್ನು ಉದ್ದೇಶಿಸಿ ಮಾತನಾಡುವುದನ್ನು ತೋರಿಸಿದೆ. ಇನ್ನೊಂದು ಫೋಟೋದಲ್ಲಿ ಕುರುಲ್ಕರ್ ಅವರು ಸಾವರ್ಕರ್ ಪ್ರತಿಮೆಗೆ ನಮಸ್ಕರಿಸುತ್ತಿರುವುದನ್ನು ತೋರಿಸಿದೆ.
“ಡಿಆರ್ಡಿಒದ ‘ಪಾಕಿಸ್ತಾನಿ ಗೂಢಚಾರ’ ವಿಜ್ಞಾನಿ ಮತ್ತು ದೇಶದ್ರೋಹಿ ಪ್ರದೀಪ್ ಕುರುಲ್ಕರ್ ಆರೆಸ್ಸೆಸ್ ನ ನಿಕಟ ಸಂಪರ್ಕ ಹೊಂದಿದ್ದಾರೆ. ಆರ್ಎಸ್ಎಸ್ನೊಂದಿಗಿನ ಕುರುಲ್ಕರ್ ಅವರ ಒಡನಾಟವು ತಲೆಮಾರುಗಳ ಹಿಂದಿನದು ಎಂದು ಅವರು ಕಳೆದ ವರ್ಷ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ” ಎಂದು ಎಐಸಿಸಿ ವಕ್ತಾರ ಪವನ್ ಖೇರಾ ಅಧಿಕೃತ ಬ್ರೀಫಿಂಗ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ, ಆರ್ಎಸ್ಎಸ್ನಿಂದ ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿ: ರಾಹುಲ್ ವಾಗ್ದಾಳಿ
”ಅವರ ತಾತ ಆರ್ಎಸ್ಎಸ್ ಕಾರ್ಯಕರ್ತರಾಗಿದ್ದರು, ಅವರು ಗಣಿತಶಾಸ್ತ್ರಜ್ಞರಾಗಿ ಕೆಲಸ ಮಾಡಿದರು ಮತ್ತು ಅವರ ತಂದೆ ಸಂಘಕ್ಕಾಗಿ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದರು. ಅವರು ಪುಣೆಯ ಆರ್ಎಸ್ಎಸ್ ಶಾಖೆಯ ಖಜಾಂಚಿಯಾಗಿದ್ದರು. ಕುರುಲ್ಕರ್ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿದ್ದರು ಮತ್ತು ಅವರು ಐದು ವರ್ಷದವರಾಗಿನಿಂದಲೂ ಶಾಖೆಗೆ ಹೋಗುತ್ತಿದ್ದರು. ಅವರಿಗೆ ಶಾಖೆಯು ದೈನಂದಿನ ದಿನಚರಿಯ ಅವಿಭಾಜ್ಯ ಅಂಗವಾಗಿತ್ತು. ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ, ಇದು ಬಿಜೆಪಿ-ಆರ್ಎಸ್ಎಸ್ನ ದೇಶವಿರೋಧಿ ಮುಖವನ್ನು ಬಹಿರಂಗಪಡಿಸುತ್ತದೆ. ಈ ಪ್ರಕರಣವು ಭಾರತದ ರಾಷ್ಟ್ರೀಯ ಭದ್ರತೆಗೆ ನೇರವಾಗಿ ಅಪಾಯವನ್ನುಂಟುಮಾಡುವ ಆರ್ಎಸ್ಎಸ್ ನಾಯಕನಿಗೆ ಸಂಬಂಧಿಸಿದ ವಿಚಾರವಾಗಿದೆ” ಎಂದು ಪವನ್ ಖಾರಾ ಹೇಳಿದರು.
”ಕುರುಲ್ಕರ್ ಮತ್ತು ಆರ್ಎಸ್ಎಸ್ ನಡುವಿನ ಸಂಬಂಧವೇನು ಎಂಬುದನ್ನು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಬೇಕು. ಅನೇಕ ಬಾರಿ ವಿದೇಶಕ್ಕೆ ಹೋಗಿದ್ದ ಕುರುಲ್ಕರ್ ಆರ್ಎಸ್ಎಸ್ ಅಥವಾ ಪಾಕಿಸ್ತಾನಕ್ಕೆ ಸ್ವಂತ ಬೇಹುಗಾರಿಕೆಗೆ ಹೋಗಿದ್ದಾರಾ? ಇದು ‘ಟೂಲ್ಕಿಟ್’ನ ಭಾಗವೇ? ಭಾರತ ವಿರೋಧಿ ಚಟುವಟಿಕೆಗಳಲ್ಲಿ ಆರ್ಎಸ್ಎಸ್-ಬಿಜೆಪಿಯ ಟೂಲ್ಕಿಟ್ ಏನು?” ಖೇರಾ ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.