‘ವಿಕಸಿತ್ ಭಾರತ್ ಸಂಪರ್ಕ್’ ಖಾತೆಯಿಂದ ಪ್ರಧಾನಿ ನರೇಂದ್ರ ಮೋದಿಯವರ ಪತ್ರವನ್ನು ವಾಟ್ಸಾಪ್ ಬಳಕೆದಾರರಿಗೆ ಕಳುಹಿಸುವುದನ್ನು ತಕ್ಷಣವೇ ನಿಲ್ಲಿಸುವಂತೆ ಚುನಾವಣಾ ಆಯೋಗವು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಸೂಚನೆ ನೀಡಿದೆ.
ಚುನಾವಣಾ ಆಯೋಗವು, ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿಅನುಸರಣೆ ವರದಿಯನ್ನು ತಕ್ಷಣವೇ ಸಲ್ಲಿಸುವಂತೆ ಸಚಿವಾಲಯವನ್ನು ಕೇಳಿದೆ. ಮಾರ್ಚ್ 15ರಂದು ಚುನಾವಣೆ ಘೋಷಣೆಯಾಗುವ ಮೊದಲು ವಾಟ್ಸಾಪ್ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ಸಚಿವಾಲಯ ಮಾರ್ಚ್ 16ರಂದು ಚುನಾವಣಾ ಆಯೋಗಕ್ಕೆ ತಿಳಿಸಿತ್ತು. ಕೆಲವೊಂದು ತಾಂತ್ರಿಕ ಕಾರಣಗಳಿಂದ ಕೆಲವರಿಗೆ ಸಂದೇಶ ತಡವಾಗಿ ರವಾನೆಯಾಗಿದೆ ಎಂದು ಚುನಾವಣಾ ಆಯೋಗಕ್ಕೆ ತಿಳಿಸಿದೆ.
ಇಂತಹ ಸಂದೇಶಗಳು ನಾಗರಿಕರಿಗೆ ಫೋನ್ ಮೂಲಕ ರವಾನೆಯಾಗುತ್ತಿದೆ ಎಂದು ಹಲವು ದೂರುಗಳನ್ನು ಸ್ವೀಕರಿಸಲಾಗಿದೆ. ಈ ಕುರಿತು ಅನುಸರಣೆ ವರದಿಯನ್ನು ತಕ್ಷಣವೇ ಕಳುಹಿಸಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ.
ಮಾರ್ಚ್ 18ರಂದು ತೃಣಮೂಲ ಕಾಂಗ್ರೆಸ್ ಈ ವಿಷಯವನ್ನು ಪ್ರಸ್ತಾಪಿಸಿದೆ, ಮಾರ್ಚ್ 16ರಂದು ಲೋಕಸಭೆ ಚುನಾವಣೆ ಘೋಷಣೆ ಬಳಿಕ ಮಾದರಿ ನೀತಿ ಸಂಹಿತೆಯ ಜಾರಿಗೆ ಬರಲಿದೆ. ಈ ಬಗ್ಗೆ ಟಿಎಂಸಿ ಸಂಸದ ಸಾಕೇತ್ ಗೋಖಲೆ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಎಸ್. ಕೃಷ್ಣನ್ ಅವರಿಗೆ ಪತ್ರ ಬರೆದಿದ್ದು, ಪತ್ರದಲ್ಲಿ “ವಿಕಸಿತ್ ಭಾರತ್ ಸಂಪರ್ಕ್” ಹೆಸರಿನ ಖಾತೆಯಿಂದ ಲಕ್ಷಾಂತರ ವಾಟ್ಸಾಪ್ ಬಳಕೆದಾರರು ಪತ್ರವನ್ನು ಸ್ವೀಕರಿಸಿದ್ದಾರೆ. ಪತ್ರವನ್ನು ಪ್ರಸಾರ ಮಾಡಲು ಯಾವ ಡೇಟಾಬೇಸ್ನ್ನು ಬಳಸಲಾಗಿದೆ ಎಂಬುವುದನ್ನು ತಿಳಿಸಲು ಅವರು ಕಾರ್ಯದರ್ಶಿಗೆ ಆಗ್ರಹಿಸಿದ್ದಾರೆ, ಏಕೆಂದರೆ ಭಾರತದ ಹೊರಗಿನ ಬಳಕೆದಾರರು ಸಹ ಪತ್ರವನ್ನು ಇದೇ ರೀತಿ ಸ್ವೀಕರಿಸಿದ್ದಾರೆಂದು ಉಲ್ಲೇಖಿಸಿದ್ದಾರೆ.
ಸಂದೇಶವು, ಪ್ರಧಾನಿ ಮೋದಿಯವರ ಪತ್ರವನ್ನು ಒಳಗೊಂಡಿದೆ ಮತ್ತು ಮೋದಿ ಮತ್ತು ಬಿಜೆಪಿಗೆ ಮುಕ್ತ ಮತ್ತು ನಿರ್ಲಜ್ಜ ಪ್ರಚಾರವನ್ನು ನೀಡುತ್ತದೆ. ಮಾರ್ಚ್ 16ರಂದು ಸಂಜೆ 4:30ರ ನಂತರ ಹೆಚ್ಚಿನ ಜನರು ಈ ರೀತಿ ಸಂದೇಶಗಳನ್ನು ಸ್ವೀಕರಿಸಿದ್ದಾರೆ. ಇದು ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಸಮಯ ಎಂದು ಗೋಖಲೆ ಹೇಳಿದ್ದಾರೆ.
ಇದನ್ನು ಓದಿ: ಯೋಗಿ ಆದಿತ್ಯನಾಥ್ಗೆ ಶ್ಲಾಘಿಸಿ, ಮುಸ್ಲಿಮರ ವಿರುದ್ಧ ದ್ವೇಷ ಪೂರಿತ ಹೇಳಿಕೆ: ಬರೇಲಿ ಕೋರ್ಟ್ ಜಡ್ಜ್ಗೆ ಹೈಕೋರ್ಟ್ ತರಾಟೆ