Homeಮುಖಪುಟವಿಡಿಯೊ| ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ ಎಲ್ಲ ಅರಾಮು; ಎಲ್ಲಾ ಆರಾಮು.

ವಿಡಿಯೊ| ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ ಎಲ್ಲ ಅರಾಮು; ಎಲ್ಲಾ ಆರಾಮು.

- Advertisement -
- Advertisement -

ಎಲ್ಲಾ ಆರಾಮು

ಪಾಮರರಿಗೆ: ಈ ಹಾಡನ್ನು ಬರೆದ ಕಾಲದ ಬಗ್ಗೆ ಕಾಳಿದಾಸನ ಕಾಲದೇಶದ ಬಗ್ಗೆಯಿರುವಷ್ಟೇ ಗೊಂದಲಗಳಿವೆ. ಮೂಲದ ಬಗ್ಗೆ ನದಿಮೂಲದಷ್ಟೆ ಕುತೂಹಲವಿದೆ. ಇದನ್ನು ಬರೆದವರು ಯಾರು ಎಂಬುದು ಇದರ ಕತೃಗಳ ಜಗಳಾನಂತರವೂ ನಿರ್ಧಾರವಾಗಲಿಲ್ಲ. ೧೮೯೩ ಡಿಸೆಂಬರ್ ೧೬ ರಂದು ಆಡಲ್ಪಟ್ಟ “ಲಾಟ್ರೆಕ್ ನ ಎಚ್” ಎಂಬ ಒಂದು ಇಂಗ್ಲೀಷ್ ಕಾಮಿಡಿಯಲ್ಲಿದ್ದ ಒಂದು ಸಂಭಾಷಣೆಯ ತುಣುಕನ್ನಿಟ್ಟುಕೊಂಡು ೧೯೩೬ ರಲ್ಲಿ ಪೌಲ್ ಮಿಸ್’ರಕಿ ಎಂಬುವವನು ಈ ಹಾಡು ಬರೆದನಂತೆ ಎಂಬ ಇನ್ನೊಂದು ಉಹಾಪೋಹವೂ ಇದೆ.  ಇದೆಲ್ಲದರ ನಂತರ ರೇ ವೆಂಟ್ಯುರಾ ಎಂಬ ಫ್ರೆಂಚ್ ಸಂಗೀತದ ಅಪೂರ್ವನೂ, ಜಾಝ್‌ಅನ್ನು ಫ್ರಾನ್ಸಿನಲ್ಲಿ ಸಮೃದ್ಧವಾಗಿ ಬೆಳೆಸಿದವನೂ ಈ ಹಾಡಿಗೆ ಸಂಗೀತ ನೀಡಿದ. ಫ್ರೆಂಚ್ ಗೀತೆಗಳಲ್ಲಿ ಅಬ್ಬರವೆನ್ನುವುದು ಇಲ್ಲವೇ ಇಲ್ಲ. ಬಾಯಿಯಿಂಬ ಹೊರಟ ಹೊಗೆ ಸುರುಳಿಗಳನ್ನು ವರ್ಣಿಸುತ್ತ ಮಗುವನ್ನು ಮಲಗಿಸುವ ಜೋಗುಳದಂಥ ಹಾಡುಗಳಿವೆ ಅಲ್ಲಿ. ತೀರಾ ಸರಳ. ಈ ಕೆಳಗಿನ ಹಾಡಿನಲ್ಲಿ ಬಹುತೇಕ ಸಾಲುಗಳು ಪುನರಾವರ್ತಿತ. ನಿಜವಾಗಿ ಇರುವುದು ನಾಲ್ಕೋ ಐದೋ ಸಾಲುಗಳಷ್ಟೇ. ಬಿಡುಗಡೆಗೊಂಡಾಗ ಈ ಹಾಡು ಯೂರೋಪಿನ ತುಂಬ ಎಷ್ಟು ಪ್ರಿಯವಾದ ಗೀತೆಯಾಗಿ ಹೋಯಿತೆಂದರೆ ರೇ ವೆಂಟ್ಯುರಾ ಮತ್ತು ಪೌಲ್ ಮಿಸ್’ರಕಿ “ಎಲ್ಲಾ ಆರಾಮು” ನ ಕತೃಗಳಾಗಿಯೇ ಇವತ್ತಿಗೂ ಉಳಿದಿದ್ದಾರೆ.

ನಮ್ಮಲ್ಲೂ ಈ ಹಾಡಿನ ಲಾಜಿಕ್ಕಿನ ಥರದವುಗಳು ಇಲ್ಲವೆಂದಲ್ಲ. ಇಂಗ್ಲೀಷ್, ಫ್ರೆಂಚ್, ಸ್ಪಾನಿಷ್, ಆಸ್ಟ್ರಿಯನ್ ಗಳಲ್ಲಿ ಇದೇ ರೀತಿಯ ಸಂಭಾಷಣೆಗಳು ತುಂಬ ಸಿಗುತ್ತವೆ. ಆದರೆ ಈ ಹಾಡಿನ ವ್ಯಂಗ್ಯ ಮತ್ತು ತಿಳಿ ಹಾಸ್ಯಗಳು ಆಗಿನ ಭಯಗ್ರಸ್ಥ ಯೂರೋಪಿನಲ್ಲಿ ಶೀಘ್ರವಾಗಿ ಹರಡಿತೆಂದರೆ ೧೯೩೬ ರಲ್ಲಿ ಇದೇ ಹೆಸರಿನ ಒಂದು ಸಿನೆಮಾ ಕೂಡ ತೆರೆಕಂಡಿತು.  ನನ್ನ ಅನುವಾದದಲ್ಲಿ ಎರಡು ಬದಲಾವಣೆ ಮಾಡಿಕೊಂಡಿದ್ದೇನೆ ನಾನು. ಮೂಲದಲ್ಲಿ ಕುದುರೆ ಸಾಯುತ್ತದೆ; ಇಲ್ಲಿ ಎಮ್ಮೆ. ಮತ್ತು ಅಲ್ಲಿ ಮನೆ ಕುಸಿದ ಮೇಲೆ ಗಂಡ ಸಾಯುತ್ತಾನೆ. ಇಲ್ಲಿ ಅದನ್ನು ಉಲ್ಟಾ ಮಾಡಿಕೊಂಡೆ- ಫ್ರೆಂಚಿನ ಮತ್ತು ಕನ್ನಡದ ವಾಕ್ಯರಚನೆಗಳ ಭಿನ್ನತೆಯ ಕಾರಣದಿಂದ. ಹಾಡಿನ ಮೂಲ ಲಯ ಮತ್ತು ತಾಳದಲ್ಲಿಯೇ ಈ ಅನುವಾದವೂ ಇದೆ. ಹಾಗಾಗಿ ಈ ಕೆಳಗಿನ ಲಿಂಕ್ ನಲ್ಲಿ ಹಾಡು ಕೇಳಿ ಅದೇ ರಿದಮ್ ಅನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಹಾಡನ್ನು ಕನ್ನಡದಲ್ಲಿ ಹಾಡಿಕೊಳ್ಳಬಹುದು. ಇದೊಂದು “ಗೀತೆ” ಎನ್ನುವುದು ಮನಸ್ಸಿನಲ್ಲಿರಲಿ ಎಂದು ಕೋರಿಕೆ.

ವಿಡಿಯೊ ನೋಡಿ.

ಪಂಡಿತರಿಗೆ: ’ರಾಜಕೀಯ ಮತ್ತು ಸಾಮಾಜಿಕವಾಗಿ’ ಈ ಹಾಡು ಹೊರಗೆ ಬಂದು, ಮೆಡಿಟರೇನಿಯನ್ ದೇಶಗಳಾದ್ಯಂತ ಪ್ರಸಿದ್ಧವಾದ ಕಾಲ ನಾಝೀಸಂ ನ ಬರ್ಭರತೆ ಯೂರೋಪಿನ ಮನಸ್ಸನ್ನು ಕೊರೆಯತೊಡಗಿದಂತದ್ದು- ಎಂಬುದಾಗಿ ಯೂಟ್ಯೂಬಿನಲ್ಲಿ ಫ್ರೆಂಚ್ ಗೀತೆಗಳ ಬಗ್ಗೆ ಆಳವಾದ ಗ್ರಹಿಕೆಗಳನ್ನು ದಾಖಲಿಸುವವಳೊಬ್ಬಳು ಬರೆಯುತ್ತಾಳೆ. ಮುಖ್ಯವಾದ್ದನ್ನು ನಿರ್ಲಕ್ಷಿಸುವ ಅಥವಾ ಲಕ್ಷಿಸಲು ಭಯಪಡುವ ಕಾಲವನ್ನು ಗೇಲಿ ಮಾಡಲು ರೇ ವೆಂಟ್ಯುರಾ ಇದನ್ನು ಅಳವಡಿಸಿಕೊಂಡನಂತೆ. ವಾಸ್ತವದಲ್ಲಿ ಫ್ರೆಂಚ್ ಕಾವ್ಯದಷ್ಟೇ ತೀವ್ರವಾಗಿ ರಾಜಕೀಯವನ್ನು ವಿಮರ್ಶಿಸಿದವು ಈ ಫ್ರೆಂಚ್ ಗೀತೆಗಳು. ಈ ಸರಳ ಹಾಡು ಎಷ್ಟು ಚೂಪಾದ ಒಂದು ರಾಜಕೀಯ ಹಾಡೂ ಆಯಿತೆಂದರೆ- ಯೂರೋಪಿನ ಪತ್ರಿಕೆಗಳು “ಎಲ್ಲಾ ಅರಾಮು ಮುಸಲೋನಿ ಮಹಾಶಯ” ಎಂದು ಇಟಲಿ-ಇಥಿಯೋಪಿಯನ್ ಯುದ್ಧದ ಸಮಯದಲ್ಲಿಯೂ, “ಎಲ್ಲಾ ಅರಾಮು ಸ್ಟಾಲಿನ್ ಮಹಾಶಯ” ಎಂದು ಸ್ಪಾನಿಷ್ ಅಂತರ್ಯುದ್ಧದ. ಸಮಯದಲ್ಲೂ ತಮಾಷೆ ಮಾಡಲು ಶುರುಮಾಡಿದ್ದವು. ತಣ್ಣನೆಯ ರಾಜಕೀಯ ಫ್ರೆಂಚ್ ಗೀತೆಗಳಿಗೆ ಇನ್ನೊಂದು ದೊಡ್ಡ ಉದಾಹಾರಣೆಯೆಂದರೆ ಬೋರಿಸ್ ವಿಯಾಂ ಎಂಬಾತ ಬರೆದು ಹಾಡಿದ “ಲ್ ಡೆಸರ್ಟರ್” ಎಂಬ ರಚನೆ. ಸರ್ವಾಧಿಕಾರದ ವಿರುದ್ಧ ದುಃಖ ಮತ್ತು ಸ್ಪಷ್ಟತೆಯಲ್ಲಿ ದನಿಯೆತ್ತುವ ಈ ಹಾಡನ್ನು ಅಪಾರ ವಿನಯ ಹಾಗೂ ದೃಢತೆಯಲ್ಲಿ ಹಾಡುತಾನೆ ಬೋರಿಸ್. ಹಾಡಿದು ಕೇವಲ ಫ್ರೆಂಚ್ ಭಾಷೆಯೊಂದರಲ್ಲೇ ಮೂವತ್ತಕ್ಕಿಂತ ಹೆಚ್ಚಿನ ರೂಪಗಳಲ್ಲಿ ಅಫ್ರಿಕಾದ ಅನೇಕ ಸರ್ವಾಧಿಕಾರೀ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿತು. ಸಾಹಿತ್ಯ ಬೇರೆಯಾದರೂ ಧ್ವನಿ, ದೃಢತೆ ಮತ್ತು ವಿನಯಗಳು ಈ ಹಾಡಿನ ಎಲ್ಲ ರೂಪಗಳಲ್ಲೂ ಹಾಗೆಯೇ ಇದ್ದವು ಎಂಬುದು ಈ ಗೀತೆಗಳ ವ್ಯಾಪಕತೆಯನ್ನು ತೊರಿಸುತ್ತವೆ ಅಂದುಕೊಂಡಿದ್ದೇನೆ.

೨೦೧೦ರಲ್ಲಿ ಕೆಂಡಸಂಪಿಗೆ ಗೆ ಮಾಡಿದ್ದ ಮೂಲ ಹಾಡಿನ ನಿಷ್ಟ ಅನುವಾದ ಇಲ್ಲಿದೆ. ಈಗಿನ ವೀಡಿಯೋ ಹಾಡು ಸಧ್ಯದ ಪರಿಸ್ಥಿತಿಗೆ ಬದಲಿಸಿ ಬರೆದದ್ದು.

“ಹಲೋ ಹಲೋ ಕಿಟ್ಟಿ

ಎನಪ್ಪಾ ವಿಶೇಷ?

ಇರಲಿಲ್ಲ ಊರಲ್ಲಿ; ಹದಿನೈದು ದಿನದಿಂದ

ನಾ ಮರಳಿ ಬಂದಾಗ

ಏನೇನು ಕಂಡೇನು?

ಏನಾಯಿತಲ್ಲಿ; ಹದಿನೈದು ದಿನದಿಂದ?”

“ಅಂಥಾದ್ದೇನಿಲ್ಲ; ಏನಿಲ್ಲ ಪದ್ಮಕ್ಕ

ಎಲ್ಲ ಆರಾಮು; ಎಲ್ಲಾ ಅರಾಮು.

ಅದ್ರೂನೂ ನಾಮಿಮ್ಗೆ ಹೇಳೋದು ಹೇಳ್ತೀನಿ

ಸಣ್ಣ್-ಪುಟ್ಟ ಮಾತಷ್ಟೇ; ತಲೆ ಹೋಗೋದೇನಿಲ್ಲ.

ನಿಮ್ ಮುದ್ದು ಎಮ್ಮೆ-ಬೆಳ್ಳಿ ಇತ್ತಲ್ಲ?

ಅದೊಂದು ಸತ್ತೋಯ್ತು. ಅದು ಬಿಟ್ರೆ ಪದ್ಮಕ್ಕ

ಇನ್ನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು.”

“ಹಲೋ ಹಲೋ ಕಿಟ್ಟಿ!

ಎಂಥಾ ಮಾತಂದೇ?

ನನ್ನೆಮ್ಮೆ ಸತ್ತೋಯ್ತಾ

ಓ ನನ್ನ ಬಂಗಾರ!

ಹೇಳಪ್ಪಾ ನಂಗೆ-

ಇದಾಗಿದ್ ಹೆಂಗೆ?”

“ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ

ಎಲ್ಲ ಅರಾಮು; ಎಲ್ಲಾ ಆರಾಮು.

ಅದ್ರೂನೂ ನಾಮಿಮ್ಗೆ ಹೇಳೋದು ಹೇಳ್ತೀನಿ

ಸಣ್ಣ್-ಪುಟ್ಟ ಮಾತಷ್ಟೇ; ತಲೆ ಹೋಗೋದೇನಿಲ್ಲ.

ನಿಮ್ ಕೊಟ್ಗೇಗ್’ ಮೊನ್ನೆ

ಬೆಂಕಿ ಬಿತ್ತಲ್ಲ?- ಅದ್ರಲ್ಲಿ ಬೆಳ್ಳಿ

ಸಿಕ್ಕೊಂಡಳಲ್ಲ? ಅಷ್ಟೇನೆ ಪದ್ಮಕ್ಕ

ಅದು ಬಿಟ್ರೆ ಏನಿಲ್ಲ

ಏನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು”

“ಹಲೋ ಹಲೋ ಕಿಟ್ಟಿ!

ಎಂಥಾ ಮಾತಂದೇ?

ನನ್ ಕೊಟ್ಗೆ ಸುಟ್ಟೋಯ್ತಾ

ಓ ಹಾಳು ದೇವ್ರೆ!

ಹೇಳಪ್ಪಾ ನಂಗೆ-

ಇದಾಗಿದ್ ಹೇಂಗೆ?”

“ಅಯ್ಯಯ್ಯೊ ಪದ್ಮಕ್ಕ; ಅಂಥಾದ್ದೇನಾಗಿಲ್ಲ

ಎಲ್ಲ ಅರಾಮು; ಎಲ್ಲಾ ಆರಾಮು.

ಅದ್ರೂನೂ ನಾಮಿಮ್ಗೆ ಹೇಳೋದು ಹೇಳ್ತೀನಿ

ಸಣ್ಣ್-ಪುಟ್ಟ ಮಾತಷ್ಟೇ; ತಲೆ ಹೋಗೋದೇನಿಲ್ಲ.

ನಿಮ್ಮನೆಗ್’ ಮೊನ್ನೆ ಬೆಂಕಿ ಬಿತ್ತಲ್ಲ?

ಅದೊಂಚೂರ್ ಕೊಟ್ಗೆಗೆ

ಹತ್ಕೊಂಡಿತ್ತಷ್ಟೇ! ಅಷ್ಟೇನೆ ಪದ್ಮಕ್ಕ

ಅದು ಬಿಟ್ರೆ ಏನಿಲ್ಲ

ಏನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು.”

“ಹಲೋ ಹಲೋ ಕಿಟ್ಟಿ!

ಎಂಥಾ ಮಾತಂದೇ?

ನಮ್ಮನೆ ಬಿದ್ದೋಯ್ತಾ?

ಓ ನನ್ನ ಗೋಳೇ!

ಹೇಳಪ್ಪಾ ನಂಗೆ-

ಇದಾಗಿದ್ ಹೆಂಗೆ?”

“ಅದಿಷ್ಟೇ ಪದ್ಮಕ್ಕಾ; ಹೆಚ್ಚೇನು ಇಲ್ಲ.

ನಿನ್ ಗಂಡ ರಾಮಣ್ಣ

ಕುಡ್ಕೊಂಡು ಬಂದ್’ನಲ್ಲಾ.

ಏನ್ ಬೇಜಾರೋ ಏನೋ; ನೇಣಾಕ್ಕೊಂಡ್’ಬಿಟ್ನಲ್ಲ.

ಆಗವ್ನ ಕಾಲಿಗೆ ತಾಗಿತು ಚಿಮಣಿ

ಹತ್ಗೊಂತು ಬೆಂಕಿ- ಸುಟ್ಟೋಯ್ತು ನಿಮ್ಮನೆ.

ಆಗಂತೂ ಏನ್ ಗಾಳಿ, ತುಂಬಾನೇ ಪದ್ಮಕ್ಕಾ!

ಅಂಟಿತು ಬೆಂಕಿ-ಉರಿದೋಯ್ತು ಕೊಟ್ಟಿಗೆ.

ನಿಮ್ಮನೆ ಎಮ್ಮೆ ಸತ್ತಿದ್ದು ಹಿಂಗೆ. ಅಷ್ಟೇನೆ ಪದ್ಮಕ್ಕ

ಅದು ಬಿಟ್ರೆ ಏನಿಲ್ಲ

ಏನೇನು ಇಲ್ಲ; ಎಲ್ಲ ಆರಾಮು, ಎಲ್ಲಾ ಅರಾಮು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...