‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ಎಂಬ ಹೆಸರಿನ ಬ್ಯಾನರ್ ಮುಂದೆ ಕುಳಿತು ನಾಲ್ಕೈದು ಮಂದಿ ಸುದ್ದಿಗೋಷ್ಠಿ ನಡೆಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘East Bangalore Congress Sevadal’ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, “ದೇಶ ಮತ್ತು ಸಂವಿಧಾನವನ್ನು ಉಳಿಸಬೇಕು, ಮೋದಿಯನ್ನು ತೊಲಗಿಸಬೇಕು: ಆರ್.ಎಸ್.ಎಸ್” ಎಂದು ಬರೆದುಕೊಳ್ಳಲಾಗಿದೆ.
ಇತರ ಕೆಲ ಎಕ್ಸ್ ಬಳಕೆದಾರರು ಕೂಡ ಸುದ್ದಿಗೋಷ್ಠಿಯ ವಿಡಿಯೋ ಹಂಚಿಕೊಂಡು, ಆರ್ ಎಸ್ ಎಸ್ ಕಾಂಗ್ರೆಸ್ಗೆ ಬೆಂಬಲ ಘೋಷಿಸಿದೆ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು ಕಾಂಗ್ರೆಸ್ ಪರವಾಗಿ ಮಾತನಾಡಿದ್ದಾರೆ. ಅಲ್ಲದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿದ್ದಾರೆ.
ಫ್ಯಾಕ್ಟ್ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿದುಕೊಳ್ಳುವ ಸಲುವಾಗಿ ನಾವು ಕೀ ವರ್ಡ್ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದ್ದೇವೆ. ಈ ವೇಳೆ ಅನೇಕ ಸುದ್ದಿ ವೆಬ್ಸೈಟ್ಗಳು ಈ ಕುರಿತು ವರದಿ ಮಾಡಿರುವುದು ಕಂಡು ಬಂದಿದೆ.
‘The Quint’ ವೆಬ್ಸೈಟ್ ವರದಿಯ ಪ್ರಕಾರ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಆರ್ಎಸ್) ಎಂಬ ಹೆಸರಿನ ಸಂಘಟನೆ ಸುದ್ದಿಗೋಷ್ಠಿ ನಡೆಸಿದೆ. ಆದರೆ, ಇದು ಮೋಹನ್ ಭಾಗವತ್ ನೇತೃತ್ವದ ಆರ್ಎಸ್ಎಸ್ ಅಲ್ಲ.
ಸಾಮಾಜಿಕ ಕಾರ್ಯಕರ್ತ ಮತ್ತು ಮಾಜಿ ಕಾರ್ಪೊರೇಟರ್ ಜನಾರ್ದನ್ ಮೂನ್ ಅವರು ನಾಗಪುರದಲ್ಲಿ ಆರ್ಎಸ್ಎಸ್ ಎಂಬ ಹೆಸರಿನ ಮತ್ತೊಂದು ಸಂಘಟನೆಯನ್ನು ಪ್ರಾರಂಭಿಸಿದ್ದಾರೆ. ಅವರು ತಮ್ಮ ಸಂಘಟನೆಯನ್ನು ಆರ್ಎಸ್ಎಸ್ ಹೆಸರಿನಲ್ಲಿ ನೋಂದಾಯಿಸಲು ಪ್ರಯತ್ನಿಸಿದ್ದಾರೆ. ಮೋಹನ್ ಭಾಗವತ್ ನೇತೃತ್ವದ ಆರ್ಎಸ್ಎಸ್ ನೋಂದಾಯಿತ ಸಂಘಟನೆ ಅಲ್ಲ. ಹಾಗಾಗಿ, ಆ ಹೆಸರನ್ನು ಯಾರು ಬೇಕಾದರು ಬಳಸಬಹುದು ಎಂಬುವುದು ಜನಾರ್ದನ್ ಮೂನ್ ಅವರ ವಾದವಾಗಿದೆ.
ಸುದ್ದಿಗೋಷ್ಠಿ ನಡೆಸಿದ ಸಂಘಟನೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ಸುದ್ದಿಗೋಷ್ಠಿಯ ವಿಡಿಯೋ ಪ್ರಸಾರ ಮಾಡಿದ ಯೂಟ್ಯೂಬ್ ಚಾನೆಲ್ ಆವಾಝ್ ಇಂಡಿಯಾವನ್ನು ಹುಡುಕಿದ್ದೇವೆ. ಈ ವೇಳೆ ಆ ಯೂಟ್ಯೂಬ್ ಚಾನೆಲ್ನಲ್ಲಿ ಮಾರ್ಚ್ 24,2024ರಂದು ಸುದ್ದಿಗೋಷ್ಠಿಯ ಸಂಪೂರ್ಣ ವಿಡಿಯೋ ಪೋಸ್ಟ್ ಮಾಡಿರುವುದು ಕಂಡು ಬಂದಿದೆ. ವಿಡಿಯೋಗೆ “ನಾಗ್ಪುರ: ಆರ್ಎಸ್ಎಸ್ ಕಾಂಗ್ರೆಸ್ಗೆ ಬೆಂಬಲ ನೀಡಿದ್ದು, ಆರ್ಎಸ್ಎಸ್ ಮುಖ್ಯಸ್ಥ ಜನಾರ್ದನ್ ಮೂನ್, ಅಬ್ದುಲ್ ಪಾಷಾ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದಾರೆ” ಎಂದು ಶೀರ್ಷಿಕೆ ಕೊಡಲಾಗಿದೆ.
ವಿಡಿಯೋದ ಡಿಸ್ಕ್ರಿಪ್ಶನ್ನಲ್ಲಿ ” ಆರ್ಎಸ್ಎಸ್ ಇಂಡಿಯಾ ಮೈತ್ರಿಕೂಟವನ್ನು ಹೇಗೆ ಬೆಂಬಲಿಸಿತು ಎಂದು ಆಶ್ಚರ್ಯಪಡುವವರಿಗೆ, ದೇಶದಲ್ಲಿ ಎರಡು ಆರ್ಎಸ್ಎಸ್ಗಳಿವೆ. ಒಂದು ಕಾಂಗ್ರೆಸ್ ಅನ್ನು ಬೆಂಬಲಿಸಿದ ಆನ್ಲೈನ್ ನೋಂದಣಿಯದ್ದು. ಇನ್ನೊಂದು ನೋಂದಣಿಯಾಗದ್ದು, ಅದರ ಸರ ಸಂಘಚಾಲಕ ಮೋಹನ್ ಭಾಗವತ್. ದಯವಿಟ್ಟು ಎಚ್ಚರಿಕೆ ವಹಿಸಿ ಗೊಂದಲಕ್ಕೊಳಗಾಗಬೇಡಿ” ಎಂದು ಬರೆಯಲಾಗಿದೆ.
ನಾವು ಜನಾರ್ದನ್ ಮೂನ್ ಅವರ ಹೆಸರನ್ನು ಗೂಗಲ್ ಸರ್ಚ್ ಮಾಡಿದಾಗ ಅವರು ಪ್ರತ್ಯೇಕ ಆರ್ಎಸ್ಎಸ್ ಎಂಬ ಸಂಘಟನೆ ಹೊಂದಿರುವುದು ಗೊತ್ತಾಗಿದೆ. ಜನಾರ್ದನ್ ಅವರು ತಮ್ಮ ಅರ್ಎಸ್ಎಸ್ ಸಂಘಟನೆಯನ್ನು ನೋಂದಣಿ ಮಾಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸುವ ಬಗ್ಗೆ ಜನವರಿ 22, 2019ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯೊಂದು ಪ್ರಕಟಗೊಂಡಿರುವುದು ಲಭ್ಯವಾಗಿದೆ.
ಸುದ್ದಿ : ಆರ್ಎಸ್ಎಸ್ ಸಂಘಟನೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಅಥವಾ ಕಾಂಗ್ರೆಸ್ಗೆ ಬೆಂಬಲ ಘೋಷಿಸಿದೆ.
ಸತ್ಯ : ದೇಶದಲ್ಲಿ ಎರಡು ಆರ್ಎಸ್ಎಸ್ ಸಂಘಟನೆಯಿದೆ. ಮೋಹನ್ ಭಾಗವತ್ ನೇತೃತ್ವದ ಆರ್ಎಸ್ಎಸ್ ಕಾಂಗ್ರೆಸ್ ಬೆಂಬಲಿಸಿಲ್ಲ. ಜನಾರ್ದನ್ ಮೂನ್ ಎಂಬವರ ನೇತೃತ್ವದಲ್ಲಿರುವ ಮತ್ತೊಂದು ಆರ್ಎಸ್ಎಸ್ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ಗೆ ಬೆಂಬಲ ಘೋಷಿಸಿದೆ.
ಇದನ್ನೂ ಓದಿ : Fact Check: ಕರ್ನಾಟಕದಲ್ಲಿ ಮಂದಿರವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂಬುವುದು ಸುಳ್ಳು