ವಾರ್ತಾಭಾರತಿ ಕನ್ನಡ ದಿನಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆಯವರ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ಮಾಡಿ ಜನರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಸ್ವತಃ ಅಬ್ದುಸ್ಸಲಾಮ್ ಪುತ್ತಿಗೆಯವರೇ ಹೇಳಿಕೊಂಡಿದ್ದಾರೆ. “ನನ್ನ ಹೆಸರು, ಫೋಟೋ ದುರ್ಬಳಕೆ ಮಾಡಿ ನನ್ನ ಹೆಸರಿನ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ, ನನ್ನ ಪರಿಚಿತರಿಗೆ ಮೆಸೆಂಜರ್ ಮೂಲಕ ಮೆಸೇಜು ಕಳಿಸಿ, ಹಣ ಕಳಿಸಲು ಬೇಡಿಕೆ ಇಡುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಇಂತಹ ಯಾವುದೇ ಮೆಸೇಜನ್ನು ನಾನು ಯಾರಿಗೂ ಕಳಿಸಿಲ್ಲ. ಹಾಗಾಗಿ ಯಾರೂ ನನ್ನ ಹೆಸರಲ್ಲಿ ಬರುವ ಇಂತಹ ಮೆಸೇಜುಗಳನ್ನು ನಂಬಬೇಡಿ. ಹೀಗೆ ನನ್ನ ಹೆಸರಲ್ಲಿ ವಂಚಿಸುತ್ತಿರುವುದರ ವಿರುದ್ಧ ಬೆಂಗಳೂರು ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ದಾಖಲಿಸುತ್ತಿದ್ದೇನೆ” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಫೇಸ್ ಬುಕ್ ನಲ್ಲಿರುವ ಎ.ಎಸ್ ಪುತ್ತಿಗೆಯವರ ಫೋಟೋ, ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಂಡು ಈ ಹೊಸ ನಕಲಿ ಖಾತೆ ಸೃಷ್ಟಿಸಲಾಗಿದೆ. ನಂತರ ಪುತ್ತಿಗೆಯವರ ಪರಿಚಿತರಿಗೆ ಫೇಸ್ಬುಕ್ ಮೆಸೆಂಜರ್ ಮೂಲಕ ಮೆಸೇಜ್ ಮಾಡಿ, ಕುಶಲ-ಕ್ಷೇಮ ಮಾತನಾಡಿನ ನಂತರ ತುರ್ತಾಗಿ ಹಣದ ಅವಶ್ಯಕತೆ ಇದೆ. ಫೋನ್ ಪೇ ಅಥವಾ ಗೂಗಲ್ ಪೇ ಮೂಲಕ ಕೂಡಲೇ ಪಾವತಿಸಿ ಎಂದು ಒಂದು ಮೊಬೈಲ್ ನಂಬರ್ ಕೊಡಲಾಗಿದೆ. ಜಾಗೃತ ಬಳಕೆದಾರರು ಕೂಡಲೇ ಇದನ್ನು ವಾರ್ತಾಭಾರತಿ ಗಮನಕ್ಕೆ ತಂದಿದ್ದು, ಬೆಂಗಳೂರು ಸೈಬರ್ ಕ್ರೈಮ್ ವಿಭಾಗಕ್ಕೆ ಈ ಬಗ್ಗೆ ದೂರು ಸಲ್ಲಿಸಲಾಗಿದೆ.
ಇದನ್ನೂ ಓದಿ: ಹರಿಯಾಣದ ಎಲ್ಲಾ ಬಿಜೆಪಿ, ಜೆಜೆಪಿ ಮುಖಂಡರ ಸಾಮಾಜಿಕ ಬಹಿಷ್ಕಾರಕ್ಕೆ ರೈತರ ನಿರ್ಧಾರ