ಜಮ್ಮು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿ ಭಾನುವಾರ ನಡೆದ ಎನ್ಕೌಂಟರ್ನಲ್ಲಿ ಹಿಜ್ಬುಲ್ ಮುಹಾಜಿದೀನ್ (ಎಚ್ಎಂ) ಮುಖ್ಯಸ್ಥ ಸೈಫುಲ್ಲಾ ಹತ್ಯೆಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದ ಸೈಫುಲ್ಲಾ, ಕಾಶ್ಮೀರ ಕಣಿವೆಯಲ್ಲಿ ಮೋಸ್ಟ್ ವಾಂಟೆಡ್ ಉಗ್ರರಲ್ಲಿ ಒಬ್ಬರಾಗಿದ್ದರು ಮತ್ತು ಭದ್ರತಾ ಪಡೆಗಳ ಮೇಲೆ ಹಲವಾರು ದಾಳಿಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಇದು ಪೊಲೀಸ್ ಮತ್ತು ಭದ್ರತಾ ಪಡೆಗಳಿಗೆ ದಕ್ಕಿದ ದೊಡ್ಡ ಯಶಸ್ಸು. ಇದು ಸಣ್ಣ ಸಾಧನೆಯಲ್ಲ” ಎಂದು ಕಾಶ್ಮೀರದ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಐಜಿಪಿ) ವಿಜಯ್ ಕುಮಾರ್ ಎನ್ಕೌಂಟರ್ ನಡೆದ ಸ್ಥಳದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸೈಫುಲ್ಲಾ ಇತ್ತೀಚೆಗೆ ಹತ್ಯೆಯಾದ ಬಿಜೆಪಿ ಕಾರ್ಯಕರ್ತರ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿದೆ. ಇನ್ನು ಕಾರ್ಯಾಚರಣೆ ಮುಂದುವರೆದಿದ್ದು ಭದ್ರತಾ ಪಡೆಗಳು ಮತ್ತೋರ್ವ ಉಗ್ರನನ್ನು ಬಂಧಿಸಿದ್ದಾರೆ. ಘಟನೆ ವೇಳೆ ಯುವಕರ ಗುಂಪೊಂದು ರಕ್ಷಣಾ ಪಡೆ ಮೇಲೆ ಕಲ್ಲು ಎಸೆದ ಘಟನೆಯೂ ನಡೆದಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ಭಯೋತ್ಪಾದಕರ ಗುಂಡೇಟಿಗೆ 3 ಬಿಜೆಪಿ ಕಾರ್ಯಕರ್ತರು ಬಲಿ!
ಸ್ಥಳದಲ್ಲಿ ಉಗ್ರರು ಇರುವ ಬಗ್ಗೆ ನಿರ್ದಿಷ್ಟ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಹಳೆಯ ವಾಯುನೆಲೆಯ ಸಮೀಪ ರಂಗ್ರೆತ್ ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಪರಸ್ಪರ ಘರ್ಷಣೆ ಉಂಟಾಗಿ ಗುಂಡಿನ ದಾಳಿಯಲ್ಲಿ ಉಗ್ರನನ್ನು ಕೊಲ್ಲಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದ ಪೊಲೀಸರ ಜಾಲವು ಬಲಶಾಲಿಯಾಗಿದೆ. ನಗರಕ್ಕೆ ಪ್ರವೇಶಿಸುವ ಯಾವುದೇ ಉಗ್ರರ ಬಗ್ಗೆ ಪೊಲೀಸರಿಗೆ ತಕ್ಷಣ ಮಾಹಿತಿ ಸಿಗುತ್ತದೆ ಎಂದು ಐಜಿಪಿ ಕುಮಾರ್ ಹೇಳಿದರು. ಬಂಧಿಸಲಾಗಿರುವ ಉಗ್ರನನ್ನು ವಿಚಾರಣೆ ಮಾಡಲಾಗುತ್ತದೆ ಎಂದರು.
ಕುಲ್ಗಂ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಸ್ಥಳೀಯ ಯುವ ವಿಭಾಗದ ಮುಖಂಡ ಸೇರಿದಂತೆ ಮೂವರು ಬಿಜೆಪಿ ಕಾರ್ಯಕರ್ತರು ಗುರುವಾರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಕಾರ್ಯಕರ್ತರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ವೈ.ಕೆ ಪೊರಾ ಪ್ರದೇಶದಲ್ಲಿ ಭಯೋತ್ಪಾದಕರು ಗುಂಡು ಹಾರಿಸಿದ್ದರು.