ಫೆಬ್ರುವರಿ 14 ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದೆ. ಅದೇ ದಿನ “ಹಸು ತಬ್ಬಿಕೊಳ್ಳುವ ದಿನ” ಆಚರಿಸಲು ಕೇಂದ್ರೀಯ ಪಶು ಕಲ್ಯಾಣ ಮಂಡಳಿ ಮನವಿ ಮಾಡಿದೆ.
“ಅನಿಮಲ್ ವೆಲ್ಫೇರ್ ಆಫ್ ಇಂಡಿಯಾ”ದ ಅಧಿಕೃತ ವೆಬ್ಸೈಟ್ನಲ್ಲಿಈ ಕುರಿತು ಪ್ರಕಟಿಸಲಾಗಿದ್ದು, ಮಂಡಳಿಯ ಕಾರ್ಯದರ್ಶಿ ಎಸ್.ಕೆ.ದುತ್ತ ಅವರು ಇದಕ್ಕೆ ಸಹಿ ಮಾಡಿದ್ದಾರೆ.
ಮನವಿಯಲ್ಲಿ ಏನಿದೆ?
“ಗೋವು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಎಂದು ನಮಗೆಲ್ಲರಿಗೂ ತಿಳಿದಿದೆ, ಗೋವು ನಮ್ಮ ಜೀವನವನ್ನು ಉಳಿಸಿಕೊಳ್ಳುತ್ತದೆ, ಸಂಪತ್ತು ಮತ್ತು ಜೀವವೈವಿಧ್ಯತೆಯನ್ನು ಪಶುಗಳು ಪ್ರತಿನಿಧಿಸುತ್ತವೆ. ತಾಯಿಯಂತೆ ಪೋಷಿಸುವ ಸ್ವಭಾವದಿಂದಾಗಿ, ಮನುಷ್ಯನ ಶ್ರೀಮಂತಿಕೆಗೆ ಎಲ್ಲವನ್ನೂ ನೀಡುವ ಕಾರಣದಿಂದಾಗಿ ಹಸುವನ್ನು ‘ಕಾಮಧೇನು’ ಮತ್ತು ‘ಗೋ ಮಾತಾ’ ಎಂದು ಕರೆಯಲಾಗುತ್ತದೆ” ಎಂದು ಮಂಡಲಿಯ ಮನವಿಯಲ್ಲಿ ಉದ್ದೇಶಿಸಲಾಗಿದೆ.
“ಕಾಲಾನಂತರದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಬೆಳವಣಿಗೆಯಿಂದಾಗಿ ವೈದಿಕ ಸಂಪ್ರದಾಯಗಳು ಬಹುತೇಕ ಅಳಿವಿನ ಅಂಚಿನಲ್ಲಿವೆ. ಪಾಶ್ಚಿಮಾತ್ಯ ನಾಗರಿಕತೆಯ ಬೆರಗು ನಮ್ಮ ಭೌತಿಕ ಸಂಸ್ಕೃತಿ ಮತ್ತು ಪರಂಪರೆಯನ್ನು ಬಹುತೇಕ ಮರೆತುಹೋಗುವಂತೆ ಮಾಡಿದೆ” ಎಂದಿದೆ.
“ಹಸುಗಳಿಂದಾಗುವ ಅಪಾರ ಪ್ರಯೋಜನದ ದೃಷ್ಟಿಯಿಂದ, ಹಸುವಿನ ಜೊತೆ ಅಪ್ಪಿಕೊಳ್ಳುವುದು ಭಾವನಾತ್ಮಕ ಶ್ರೀಮಂತಿಕೆಯನ್ನು ತರುತ್ತದೆ. ಆದ್ದರಿಂದ ನಮ್ಮ ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷ ಹೆಚ್ಚಿಸುತ್ತದೆ. ಎಲ್ಲಾ ಗೋ ಪ್ರೇಮಿಗಳು ಫೆಬ್ರವರಿ 14 ಅನ್ನು ಕೌ ಹಗ್ ಡೇ (ಗೋವು ತಬ್ಬಿಕೊಳ್ಳುವ ದಿನ) ಆಚರಿಸಬಹುದು. ಗೋಮಾತೆಯ ಮಹತ್ವವನ್ನು ಗಮನದಲ್ಲಿಟ್ಟುಕೊಳ್ಳಿ. ಜೀವನವನ್ನು ಸಂತೋಷದಾಯಕವಾಗಿಸಿ. ಸಕಾರಾತ್ಮಕ ಶಕ್ತಿ ತುಂಬಿಕೊಳ್ಳಿ” ಎಂದು ಸಲಹೆ ನೀಡಲಾಗಿದೆ.
ಅಪಹಾಸ್ಯಕ್ಕೀಡಾದ ಹಸು ಅಪ್ಪುವ ಕರೆ
‘ಹಸು ತಬ್ಬುವ ದಿನ ಆಚರಣೆ’ ಮಾಡಬೇಕೆಂದು ಪಶು ಕಲ್ಯಾಣ ಮಂಡಳಿ ನೀಡಿರುವ ಕರೆಗೆ ಟೀಕೆಗಳು ವ್ಯಕ್ತವಾಗಿವೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ಗಳನ್ನು ಮಾಡುವ ಮೂಲಕ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡ ಪರ ಹೋರಾಟಗಾರ ಎಸ್.ಸಿ.ದಿನೇಶ್ ಕುಮಾರ್, “ಪ್ರೇಮಿಗಳ ದಿನಕ್ಕೆ ಕೇಂದ್ರ ಸರ್ಕಾರದ ಕೌಂಟರ್. ಕೌ ಹಗ್ ಡೇ ಅಂತೆ. ದನ ತಬ್ಬಿಕೊಳ್ಳೋ ದಿನ! ಬಹುಶಃ ಮೋದಿಯವರೇ ಒಂದು ದನ ತಬ್ಕೊಂಡು ಉದ್ಘಾಟನೆ ಮಾಡಬಹುದು. ಆದರೆ ದನ ತಬ್ಕೊಳ್ಳೋದು ಹೆಂಗೆ? ಇದೊಂಥರ ಬಡಪಾಯಿ ದನಗಳಿಗೆ ಲೈಂಗಿಕ ಕಿರುಕುಳದ ಥರ ಅನ್ನಿಸಲ್ವಾ? ತೀರ್ಮಾನ ತೆಗೆದುಕೊಳ್ಳೋದಕ್ಕೆ ಮುಂಚೆ ದನಗಳಿಗೂ ಒಂದು ಮಾತು ಕೇಳಬೇಕಿತ್ತು ಅಲ್ವಾ? ನಿಮಗೇನನ್ನಿಸುತ್ತೆ?” ಎಂದು ಪ್ರಶ್ನಿಸಿದ್ದಾರೆ.
ಬರಹಗಾರ ಚಂದ್ರಪ್ರಭ ಕಠಾರಿ ಅವರು, “ಪ್ರೇಮಿಗಳ ದಿನಾಚರಣೆ (Valentines day) ಬಂದರೆ ಸಾಕು, ಈ ಮತಾಂಧರಿಗೆ ಯಾಕೊ ಮೈಯೆಲ್ಲ ತುರಿಕೆ ಶುರುವಾಗುತ್ತೆ. ಸಾಲದಕ್ಕೆ ಎಲೆಕ್ಷನ್ ಬೇರೆ ಹತ್ತಿರ ಇದೆ. 40% ಕಮಿಷನ್ ಭ್ರಷ್ಟ ಸರ್ಕಾರ ಅನ್ನೋ ಇಮೇಜ್ ಇನ್ನೂ ಅಳಿಸಲಾಗಿಲ್ಲ. ಏನೋ ಒಂದು ಡೈವರ್ಷನ್ ಟ್ಯಾಕ್ ಟಿಕ್ಸ್ ಮಾಡ್ಬೇಕಲ್ಲ. ಅದಕ್ಕೆ ಫೆಬ್ರವರಿ 14ರಂದು ಹಸುಗಳನ್ನು ತಬ್ಬಿಕೊ ಬೇಕಂತೆ (ಅದು ಎಗರಿಸಿ ಒದಿದಿದ್ರೆ ಸಾಕು). ಅವತ್ತೇ ಏಕೆ ದಿನಾ ತಬ್ಕೊಂಡು ಕೊಟ್ಟಿಗೆಯಲ್ಲೇ ಮಲಗಿ…ಯಾರು ಬೇಡ ಅಂದದ್ದು” ಎಂದು ಕುಟುಕಿದ್ದಾರೆ.
ಮುಂದುವರಿದು, “ಅದಿರಲಿ, ಸಾರ್ವಜನಿಕವಾಗಿ ಈ ಕೇಸರಿಗಳು ಇಂಥ ಹೇಳಿಕೆ ಕೊಟ್ರೆ ಆಶ್ಚರ್ಯವೇನಿಲ್ಲ. ಆದರೆ ಅನಿಮಲ್ ವೇಲ್ಫೇರ್ ಬೋರ್ಡ್ ಆಫ್ ಇಂಡಿಯಾದಂತಹ ಸರ್ಕಾರಿ ಸಂಸ್ಥೆಯ ಮೂಲಕ ಆರ್ಡರ್ ಮಾಡುವಷ್ಟು ಲಜ್ಜೆಗೇಡಿತನ ಈ ಫ್ಯಾಶಿಸ್ಟ್ ಮೋದಿ ಸರ್ಕಾರದ್ದು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.