Homeಕರ್ನಾಟಕಅಬಕಾರಿ ಇಲಾಖೆಯಿಂದ ಜನಾರೋಗ್ಯ ಕಡೆಗಣನೆ: ಮದ್ಯದಂಗಡಿ ತೆರವಿಗೆ ನೂರಾರು ಮಹಿಳೆಯರ ನಿರಂತರ ಧರಣಿ

ಅಬಕಾರಿ ಇಲಾಖೆಯಿಂದ ಜನಾರೋಗ್ಯ ಕಡೆಗಣನೆ: ಮದ್ಯದಂಗಡಿ ತೆರವಿಗೆ ನೂರಾರು ಮಹಿಳೆಯರ ನಿರಂತರ ಧರಣಿ

ಕೂಲಿ ಕಾರ್ಮಿಕರಾಗಿರುವ ಇಲ್ಲಿನ ಜನರು ಜೀವನೋಪಾಯಕ್ಕೆ ಕೂಲಿ ನಂಬಿದ್ದಾರೆ. ಮದ್ಯದಂಗಡಿಯಿಂದ ಬಡ ಜನರ ಜೀವನ ಬೀದಿಗೆ ಬೀಳಲಿದೆ ಎಂಬ ಆತಂಕ ಅವರದು..

- Advertisement -
- Advertisement -

ನೂರಾರು ಮಹಿಳೆಯರು ಮದ್ಯದಂಗಡಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಸಿಂಗಟಗೆರೆ ಹೋಬಳಿಯ ಅಂಚೆ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಳೆದ ಮೂರು ದಿನಗಳಿಂದ ಮಹಿಳೆಯರು ಮತ್ತು ಗ್ರಾಮಸ್ಥರು ಮಳೆಯನ್ನೂ ಲೆಕ್ಕಿಸಿದೇ ಪ್ರತಿಭಟನೆ ನಡೆಸುತ್ತಿದ್ದಾರೆ.

ಬಹುತೇಕ ಸುಡಗಾಡು ಸಿದ್ದ ದಲಿತ ಸಮುದಾಯದಿಂದ ಕೂಡಿದ ಅಂಚೆ ಸೋಮನಹಳ್ಳಿ ಒಂದು ಚಿಕ್ಕ ಗ್ರಾಮ. ಗ್ರಾಮಸ್ಥರ ವಿರೋಧದ ನಡುವೆಯೇ ಏಕಾಏಕಿ ಊರಿನಲ್ಲಿ ಮದ್ಯದಂಗಡಿ ತೆರೆದಿರುವುದು ಮಹಿಳೆಯ ಆಕ್ರೋಶಕ್ಕೆ ಕಾರಣವಾಗಿದೆ. ಕೂಲಿ ಕಾರ್ಮಿಕರಾಗಿರುವ ಇಲ್ಲಿನ ಜನರು ಜೀವನೋಪಾಯಕ್ಕೆ ಕೂಲಿಯಿಂದ ಬರುವ ಅಲ್ಪ ಆದಾಯವನ್ನೇ ನಂಬಿದ್ದಾರೆ. ಮದ್ಯದಂಗಡಿಯಿಂದ ಬಡ ಜನರ ಜೀವನ ಬೀದಿಗೆ ಬೀಳಲಿದೆ ಎಂಬ ಆತಂಕದಿಂದ ಮಹಿಳೆಯರು ಸತತ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಮದ್ಯದಂಗಡಿ ತೆರವಿಗೆ ಮಹಿಳೆಯರ ಜೊತೆ ಗ್ರಾಮ ಪಂಚಾಯತಿ ಸದಸ್ಯರಾದ ಸವಿತಾ ಪ್ರಸನ್ನ, ಸ್ಥಳೀಯ ಹೋರಾಟಗಾರ ಮಂಜುನಾಥ್‌ ಮುಂತಾದವರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಗ್ರಾಮ ಪಂಚಾಯತಿಯಿಂದ ಯಾವುದೇ ಅನುಮತಿಯನ್ನು ಪಡೆಯದೇ ನಿಯಮವನ್ನು ಉಲ್ಲಂಘಿಸಿ ಮದ್ಯದಂಗಡಿ ತೆರೆಯಲಾಗಿದೆ ಎಂದು ಆರೋಪಿಸಿದ್ದಾರೆ.

ಅಂಚೆ ಸೋಮನಹಳ್ಳಿ ಗ್ರಾಮದ ಮಹಿಳೆಯರಿಂದ ಪ್ರತಿಭಟನೆ

ಅಂಚೆ ಸೋಮನಹಳ್ಳಿಯ ಬಹುತೇಕ ಜನರು ಅವಿದ್ಯಾವಂತ ಕೂಲಿ ಕಾರ್ಮಿಕರು. ಜನರ ಕಾನೂನಿನ ಅಜ್ಞಾನವನ್ನು ಅಸ್ತ್ರ ಮಾಡಿಕೊಂಡು ಕೆಲವರು ತಮ್ಮ ಲಾಭಕ್ಕಾಗಿ ಊರಿನ ಆರೋಗ್ಯವನ್ನು ಬಲಿಕೊಡಲು ಹೊರಟಿದ್ದಾರೆ ಎಂಬುದು ಹೋರಾಟ ನಿರತ ಮಹಿಳೆಯರ ಆರೋಪ.

ಇದನ್ನೂ ಓದಿ: ಮದ್ಯಸೇವನೆಗೆ ವಯೋಮಿತಿ: 25 ರಿಂದ 21ಕ್ಕೆ ಇಳಿಸಿದ ದೆಹಲಿ ಸರ್ಕಾರ

ಅತ್ತ ಮದ್ಯದಂಗಡಿ ಮಾಲೀಕ ಎ.ಜಿ.ಗಿರೀಶ್ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಪ್ರತಿಭಟನೆಯ ಕಾರಣಕ್ಕೆ ಎರಡು ಮೂರು ದಿನಗಳಿಂದ ಅಂಗಡಿಯನ್ನು ಮುಚ್ಚಿ ಸಿಬ್ಬಂದಿಗಳೂ ಕೂಡ ಕಾಣಿಸುತ್ತಿಲ್ಲ. ತಾತ್ಕಾಲಿಕವಾಗಿ ಮದ್ಯದಂಗಡಿ ಬಂದಾಗಿದೆ ನಿಜ. ಪ್ರತಿಭಟನೆ ನಿಂತ ತಕ್ಷಣ ಮತ್ತೆ ಅಂಗಡಿ ತೆರಯುತ್ತಾರೆ. ನಿತ್ಯ ಕೂಲಿ ಕೆಲಸ ಬಿಟ್ಟು ಜನರು ಧರಣಿ ನಡೆಸಲು ಸಾಧ್ಯವಿಲ್ಲ. ಮದ್ಯದಂಗಡಿ ತೆರೆಯಲೇ ಬೇಕೆಂದಿದ್ದರೆ ಜನವಸತಿ ಪ್ರದೇಶದಿಂದ ದೂರದಲ್ಲಿ ಎಲ್ಲಾದರೂ  ತೆರೆಯಲಿ ಎಂಬುದು ಅಂಚೆ ಸೋಮನಹಳ್ಳಿಯ ಬಹುತೇಕರ ಅಭಿಪ್ರಾಯ.

ಜನ ಸಾಮಾನ್ಯರ ವಿರೋಧವನ್ನು ಕಡೆಗಣಿಸಿ ಸರ್ಕಾರ ಮತ್ತು ಮದ್ಯೋದ್ಯಮಿಗಳು ಶಾಲೆ,ಆಸ್ಪತ್ರೆ ಮತ್ತು ಬುಡಕಟ್ಟು ಜನರಿರುವ ಪ್ರದೇಶದಲ್ಲಿ ವೈನ್‌ ಶಾಪ್ ತೆರೆಯಲು ಮುಂದಾಗಿದ್ದಾರೆ. ಕರ್ನಾಟಕ ಅಬಕಾರಿ ಅಧಿನಿಯಮ, 1967 ರ ರೂಲ್‌ 5 ರ ಪ್ರಕಾರ ಶಾಲೆ, ಧಾರ್ಮಿಕ ಸ್ಥಳ, ಆಸ್ಪತ್ರೆ, ಎಸ್‌ಸಿ ಎಸ್‌ಎಸ್‌ಟಿ ಸಮುದಾಯದ ಜನವಸತಿಯಿಂದ 100 ಮಿ. ಅಂತರದಲ್ಲಿ ಮದ್ಯದಂಗಡಿಯನ್ನು ತೆರೆಯುವಂತಿಲ್ಲ. ಕರ್ನಾಟಕ ವೈನ್‌ ಮರ್ಚೆಂಟ್ಸ್‌ vs ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಹೈಕೋರ್ಟ್ ಜನವಸತಿ, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸಂಸ್ಥೆ, ಧಾರ್ಮಿಕ ಸ್ಥಳದ ಸಮೀಪ ಮದ್ಯದಂಗಡಿಯನ್ನು ತೆರೆಯಬಾರದು ಎಂದು ಆದೇಶ ನೀಡಿದೆ. ಜನ ವಿರೋಧವಿದ್ದಾಗ 100 ಮೀ. ಎಂಬ ಸರ್ಕಾರಿ ಮಾನದಂಡಕ್ಕೆ ಕಟ್ಟು ಬಿದ್ದು ಮದ್ಯದಂಗಡಿ ತೆರೆಯುವುದು ಸೂಕ್ತವಲ್ಲ ಎಂದು ಮಾನ್ಯ ಕರ್ನಾಟಕ ಹೈಕೋರ್ಟ್‌ 1997 ರಲ್ಲಿ ಅಭಿಪ್ರಾಯ ಪಟ್ಟಿದೆ.

ಇದನ್ನೂ ಓದಿ: ಗಾಂಧಿ ಪ್ರತಿಮೆ ಇರುವ ಪ್ರದೇಶ ಧಾರ್ಮಿಕ ಸ್ಥಳವಲ್ಲ: ಕರ್ನಾಟಕ ಹೈಕೋರ್ಟ್

ಅಬಕಾರಿ ಪರವಾನಗೆಯನ್ನು ನೀಡುವ ಮುನ್ನ 100 ಮೀ. ಅಂತರ ಎಂಬ ನಿಯಮ 5 ಕ್ಕೆ ಬದ್ಧರಾಗಿ ಜನಸಾಮಾನ್ಯರ ಸಾಮಾಜಿಕ ಸ್ಥಿತಿಗತಿಗಳನ್ನು ಕಡೆಗಣಿಸಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿರುತ್ತದೆ. ಸರ್ಕಾರ ನ್ಯಾಯಾಲಯದ ಆದೇಶ, ಜನ ಸಾಮಾನ್ಯರ ಜೀವನ, ಆರೋಗ್ಯ ಎಲ್ಲವನ್ನೂ ಕಡೆಗಣಿಸಿ  ಅಂಚೆ ಸೋಮನಹಳ್ಳಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸುಡುಗಾಡು ಸಿದ್ದರ ಓಣಿಯ ಸಮೀಪ ಮದ್ಯದಂಗಡಿಯನ್ನು ತೆರೆಯಲು ಅವಕಾಶ ನೀಡಿರುವುದು ಈಗಾಗಲೇ ಮಹಿಳೆಯರ ಮತ್ತು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.

ಪೊಲೀಸರಿಂದ ಪ್ರತಿಭಟನೆ ತೆರವಿಗೆ ಯತ್ನ

ವೈನ್‌ ಶಾಪ್ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಮದ್ಯದಂಗಡಿಗೆ ಪರವಾನಗಿ ಕೂಡ ಮಂಜೂರಾಗಿದೆ. ಅಂಗಡಿ ಮಾಲೀಕರು ಸರ್ಕಾರಕ್ಕೆ ನೀಡಬೇಕಾದ ಹಣವನ್ನು ಸಂದಾಯ ಮಾಡಿದ್ದಾರೆ. ಎಲ್ಲವೂ ಕಾನೂನು ಪ್ರಕಾರವೇ ಅಂಗಡಿಯನ್ನು ತೆರೆಯಲಾಗಿದ್ದು ನಿಯಮಾವಳಿಯನ್ನು ಉಲ್ಲಂಘನೆ ಮಾಡಲಾಗಿಲ್ಲ ಎಂದು ಕಡೂರು ವಿಭಾಗದ ಅಬಕಾರಿ ಇನ್ಸ್‌ಪೆಕ್ಟರ್ ಶ್ರೀಕಾಂತ್ ಮಾಹಿತಿ ನೀಡಿದ್ದಾರೆ. ಮದ್ಯದಂಗಡಿಯನ್ನು ವಿರೋಧಿಸುವವರು ನ್ಯಾಯಾಲಯದ ಮೊರೆ ಹೋಗಲಿ. ಸರ್ಕಾರದ ಕಾನೂನಿನ ವ್ಯಾಪ್ತಿಯಲ್ಲಿ ತೆರೆಯಲಾಗಿರುವ ಮದ್ಯದಂಗಡಿ ಮುಚ್ಚಲು ಸಾಧ್ಯವಿಲ್ಲ. ಸರ್ಕಾರ ನೇರವಾಗಿ ಅಬಕಾರಿ ಪರವಾನಗಿಯನ್ನು ನೀಡುತ್ತದೆ. ಇಲಾಖೆಯಲ್ಲಿ ಸಚಿವರ ಮಟ್ಟದಲ್ಲಿ ಮಂಜೂರಾದ ಪರವಾನಗಿಯನ್ನು ಕೆಳ ಹಂತದ ಅಧಿಕಾರಿಗಳು ರದ್ದು ಮಾಡಲು ಸಾಧ್ಯವಿಲ್ಲ. ನ್ಯಾಯಾಲಯ ಅಥವಾ ಸರ್ಕಾರಕ್ಕೆ ಮಾತ್ರ ಮದ್ಯದಂಗಡಿ ತೆರವು ಮಾಡುವ ಅಧಿಕಾರ ಇದೆ ಎಂದು ಅವರು ನಾನುಗೌರಿಗೆ ತಿಳಿಸಿದ್ದಾರೆ.

ಅಷ್ಟೇನು ವಿದ್ಯಾವಂತರಲ್ಲದ ಗ್ರಾಮಸ್ಥರು ಸರ್ಕಾರ ಮತ್ತು ಮದ್ಯದಂಗಡಿ ಮಾಲೀಕರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿ ಹೋರಾಡುವಷ್ಟು ಶಕ್ತಿವಂತರಲ್ಲ. ಅಂಚೆಹಳ್ಳಿ ಗ್ರಾಮಸ್ಥರ ಈ ದೌರ್ಬಲ್ಯವನ್ನೇ ಅಸ್ತ್ರವನ್ನಾಗಿಸಿಕೊಂಡು ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವುದು ದುರದೃಷ್ಟದ ಸಂಗತಿ ಮತ್ತು ಇದರಿಂದ ಜನರ ಜೀವನಕ್ಕೆ ತೊಂದರೆಯಾಗಲಿದೆ.

ಈಗಾಗಲೇ ಅಬಕಾರಿ ಇಲಾಖೆಯಲ್ಲಿ ಲಂಚಾವತಾರದ ಆರೋಪಗಳು ಕೇಳಿಬಂದಿವೆ. ಅಬಕಾರಿ ಸಚಿವರ ವಿರುದ್ಧವೇ ಭ್ರಷ್ಟಾಚಾರದ ಹಗರಣದ ಆರೋಪವಿದೆ. ಇದೆಲ್ಲದರ ನಡುವೆ ಅಬಕಾರಿ ಇಲಾಖೆ ಸರ್ಕಾರಕ್ಕೆ ಆದಾಯವನ್ನು ತರುವ ದೃಷ್ಟಿಯಿಂದ ಗ್ರಾಮೀಣ ಪ್ರದೇಶಗಳಿಗೆ ಮದ್ಯದಂಗಡಿಗಳನ್ನು ವಿಸ್ತರಿಸುತ್ತಿರುವುದು ಯಾರ ಒಳಿತಿಗಾಗಿ ಎಂದು ಅಂಚೆ ಸೋಮನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಸವಿತಾ ಪ್ರಸನ್ನ ಪ್ರಶ್ನಿಸುತ್ತಾರೆ. ಒಂದೆಡೆ ಗಾಂಧೀಜಿಯವರ 150 ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಬೇಕು ಎಂದು ಗ್ರಾಮ ಪಂಚಾಯತಗಳಿಗೆ ಆದೇಶಿಸುವ ಸರ್ಕಾರ ಮತ್ತೊಂದೆಡೆ ಮಹಾತ್ಮ ಗಾಂಧಿಯವರ ಸಂದೇಶಕ್ಕೆ ವಿರುದ್ಧವಾಗಿ ಜನರನ್ನು ಕುಡಿತಕ್ಕೆ ಪ್ರಚೋದಿಸುತ್ತಿದೆ. ಗ್ರಾಮದಲ್ಲಿ ಕುಂಟುಂಬಗಳು ಉಳಿಯಬೇಕಾದರೆ ಮದ್ಯದಂಗಡಿ ತೆರವಾಗಬೇಕು. ಅಲ್ಲಿಯವರೆಗೆ ಹೋರಾಟ ಮುಂದುವರೆಯುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

-ರಾಜೇಶ್ ಹೆಬ್ಬಾರ್‌


ಇದನ್ನೂ ಓದಿ: ಮದ್ಯ ಹೋಂ ಡೆಲೆವರಿ ಮಾಡುವಂತೆ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸಲಹೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತಮಿಳುನಾಡಿನ ಬಗ್ಗೆ ಸುಳ್ಳು ಸುದ್ದಿ ಹರಡಿ ಬಂಧಿಸಲ್ಪಟ್ಟಿದ್ದ ಯೂಟ್ಯೂಬರ್ ಕಶ್ಯಪ್ ಬಿಜೆಪಿಗೆ ಸೇರ್ಪಡೆ

0
ಯೂಟ್ಯೂಬರ್ ಮನೀಶ್ ಕಶ್ಯಪ್ ಇಂದು ಬಿಜೆಪಿ ಸಂಸದ ಮನೋಜ್ ತಿವಾರಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಹಾರ ಮೂಲದ ಯೂಟ್ಯೂಬರ್ ಕಶ್ಯಪ್ ಕಳೆದ ವರ್ಷ ನಕಲಿ ಮಾಹಿತಿ ಹರಡಿದ್ದಕ್ಕಾಗಿ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ...