Homeಮುಖಪುಟಬಯಲುಸೀಮೆ ಅಭಿವೃದ್ಧಿ ಕಡೆಗಣನೆ : ಬಹುತೇಕ ಬಜೆಟ್ ಬೆಂಗಳೂರಿಗೆ ಮೀಸಲು

ಬಯಲುಸೀಮೆ ಅಭಿವೃದ್ಧಿ ಕಡೆಗಣನೆ : ಬಹುತೇಕ ಬಜೆಟ್ ಬೆಂಗಳೂರಿಗೆ ಮೀಸಲು

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಆಯ್ಕೆಯಾದ ಶಾಸಕ ಡಾ.ಸುಧಾಕರ್ ಮುಖ್ಯಮಂತ್ರಿಯನ್ನು ಕರೆತಂದು ಜನರಿಗೆ ಕೆಲವು ಭರವಸೆ ನೀಡಿದ್ದರು. ನೂತನ ಶಾಸಕರು ಸಲ್ಲಿಸಿದ ಬೇಡಿಕೆಗಳಿಗೂ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸಿಲ್ಲ. 

- Advertisement -
- Advertisement -

ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ ಬಜೆಟ್ ಬಯಲುಸೀಮೆ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಿಗೆ ಬಜೆಟ್ ನಲ್ಲಿ ಅಭಿವೃದ್ದಿಗೆ ಪೂರಕ ಯೋಜನೆಗಳನ್ನು ಘೋಷಿಸಿಲ್ಲ. ನೀರಾವರಿ, ಕೈಗಾರಿಕೆ ಕ್ಷೇತ್ರದಲ್ಲಿ ತೀವ್ರ ಹಿಂದುಳಿದಿರುವ ಈ ಜಿಲ್ಲೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಸಕ್ತ ಬಜೆಟ್ ವಿಫಲವಾಗಿದೆ.

ಕುಡಿಯುವ ನೀರು ಯೋಜನೆಗಳಿಗೆ ಒತ್ತು ನೀಡುವ ಯಾವ ಕ್ರಮಗಳನ್ನು ಕೈಗೊಂಡಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ನಲ್ಲಿ ಬಯಲು ಪ್ರದೇಶದ ಅಭಿವೃದ್ಧಿಗೆ, ಏನಾದರೂ ಕೊಡಬಹುದು ಎಂಬ ಜನರ ನಂಬಿಕೆಗೆ ಪೆಟ್ಟು ಬಿದ್ದಿದೆ.

ಬಯಲುಸೀಮೆಯಲ್ಲಿ ಬಹುವಾಗಿ ಕಾಡುತ್ತಿರುವ ಕುಡಿಯುವ ನೀರು ಪೂರೈಕೆ ಮತ್ತು ನೀರಾವರಿಗೆ ಸಂಬಂಧಪಟ್ಟಂತೆ ಬಜೆಟ್ ಮೌನ ವಹಿಸಿದೆ. ಕುಡಿಯುವ ನೀರು ಪೂರೈಕೆ ಯೋಜನೆಗಳು ಕುಂಟುತ್ತಾ ಸಾಗಿವೆ. ಭದ್ರ ಮೇಲ್ದಂಡೆ ಮತ್ತು ಎತ್ತಿಹೊಳೆ ಯೋಜನೆಗಳ ಕಾಮಗಾರಿ ಚುರುಕುಗೊಳಿಸುವ ಬಗ್ಗೆ ಬಜೆಟ್‌ನಲ್ಲಿ ಅಷ್ಟಾಗಿ ಗಮನಹರಿಸಿದಂತೆ ಕಾಣುತ್ತಿಲ್ಲ. ಬಯಲುಸೀಮೆ ಪ್ರದೇಶಗಳಿಗೆ ಶುದ್ದ ಕುಡಿಯುವ ನೀರು ಒದಗಿಸುವುದು ಪ್ರಮುಖ ಮತ್ತು ಆದ್ಯತೆಯ ವಿಷಯವಾಗಬೇಕಿತ್ತು. ಆದರೆ ಬಜೆಟ್ ಶಾಶ್ವತ ನೀರಾವರಿ ಮತ್ತು ಕುಡಿಯುವ ನೀರಿಗೆ ಅಷ್ಟೊಂದು ಪ್ರಾಮುಖ್ಯತೆ ಕೊಟ್ಟಿಲ್ಲ.

ಬಯಲುಸೀಮೆಯಲ್ಲಿ 10ಕ್ಕೂ ಹೆಚ್ಚು ಜಿಲ್ಲೆಗಳು ಬರುತ್ತವೆ. ಈ ಜಿಲ್ಲೆಗಳು ಯಾವುದೇ ಕ್ಷೇತ್ರದಲ್ಲೂ ಸಮರ್ಪಕ ಅಭಿವೃದ್ಧಿ ಕಂಡಿಲ್ಲ. ಆದ್ದರಿಂದ ರೈಲ್ವೆ, ಹೆದ್ದಾರಿ, ಕೈಗಾರಿಕಾ ಕಾರಿಡಾರ್ ಹೀಗೆ ಯಾವುದೇ  ಕ್ಷೇತ್ರಕ್ಕೂ ಸಿಎಂ ಯಡಿಯೂರಪ್ಪ ಆದ್ಯತೆ ನೀಡದೇ ಇರುವುದು ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಸರ್ಕಾರ ಅಧ್ಯತೆಯ ವಿಷಯವಾದ ಮತ್ತು ಬಹುದಿನಗಳ ಬೇಡಿಕೆಗೆ ಸ್ಪಂದಿಸಿಲ್ಲ. ಇದರಿಂದ ನೀರಾವರಿ ಹೋರಾಟ ಗಾರರು ಆಕ್ರೋಶಗೊಂಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್‌.ಆಂಜನೇಯರೆಡ್ಡಿ “ಬಜೆಟ್ ಬಯಲುಸೀಮೆ ಪಾಲಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಕಡೆಗಣಿಸಿದೆ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ವರದಿ ಆಧಾರಿತ ಪಶ್ಚಿಮವಾಹಿನಿ ನದಿಗಳಿಂದ ನೀರನ್ನು ಬಯಲು ಸೀಮೆಗೆ ಹರಿಸುವ ಕಾರ್ಯಯೋಜನೆಗೆ ಹಣ ಮೀಸಲಿಡದೇ ಇರುವುದು ನಿರಾಸೆ ತಂದಿದೆ. ಬಯಲುಸೀಮೆ ರೈತರಿಗೆ ರಾಡರ್ ಆಧಾರಿತ ವ್ಯವಸ್ಥೆಗೆ ಹವಾಮಾನ ಮುನ್ಸೂಚನೆ ಕೇಂದ್ರ ತೆರೆದಿದ್ದರೆ, ನೀರಿನ ನಿರ್ವಹಣೆ, ಬರ ನಿರ್ವಹಣೆ ಮತ್ತು ರೋಗ ನಿರ್ವಹಣೆಗೆ ಅನುಕೂಲವಾಗುತ್ತಿತ್ತು” ಎಂದು ಹೇಳಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಆಯ್ಕೆಯಾದ ಶಾಸಕ ಡಾ.ಸುಧಾಕರ್ ಮುಖ್ಯಮಂತ್ರಿಯನ್ನು ಕರೆತಂದು ಜನರಿಗೆ ಕೆಲವು ಭರವಸೆ ನೀಡಿದ್ದರು. ನೂತನ ಶಾಸಕರು ಸಲ್ಲಿಸಿದ ಬೇಡಿಕೆಗಳಿಗೂ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸಿಲ್ಲ.

ತುಮಕೂರು ಜಿಲ್ಲೆಗೆ ತಿಪಟೂರಿನಲ್ಲಿ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್ ಮತ್ತು ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಸ್ಥಾಪಿಸುವ ಘೋಷಣೆ ಮಾಡಿರುವುದನ್ನು ಬಿಟ್ಟರೆ ಬೇರೆ ಯಾವುದೇ ಜನೋಪಯೋಗಿ ಯೋಜನೆಗಳನ್ನು ಪ್ರಕಟಿಸಿಲ್ಲ. ತುಮಕೂರು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿದೆ. ಬಜೆಟ್‌ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಹಣವನ್ನು ಮೀಸಲಿಟ್ಟಿಲ್ಲ. ತುಮಕೂರು ಬೆಂಗಳೂರಿನ ಉಪನಗರವಾಗಿ ಅಭಿವೃದ್ಧಿಪಡಿಸುವುದಾಗಿ ಹೇಳುತ್ತಲೇ ಬರುತ್ತಿದ್ದರೂ, ಹಲವು ಕೈಗಾರಿಕಾ ಕಾರಿಡಾರ್‌ಗಳ ನಗರವಾಗಿ ಹೊರ ಹೊಮ್ಮುತ್ತಿರುವ ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಕ್ರಮ ವಹಿಸಿಲ್ಲ.

ಒನಕೆ ಓಬವ್ವ ಮತ್ತು ಮದಕರಿ ನಾಯಕನನ್ನು ನೆನಪಿಸುವ ಚಿತ್ರದುರ್ಗದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಬಜೆಟ್ ನಲ್ಲಿ ಹೇಳಿದ್ದರೂ ಶಾಶ್ವತ ನೀರಾವರಿ ಮತ್ತು ಶುದ್ಧ ಕುಡಿಯುವ ನೀರಿನ ಯೋಜನೆಗಳಿಗೆ ಸಂಬಂಧಿಸಿದಂತೆ ಬಜೆಟ್ ಮಾತನಾಡಿಲ್ಲ. ಆದರೆ ಚಿತ್ರದುರ್ಗದ ಮುರುಘಾಮಠಧ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರಮಥರ ಗಣಮೇಳವನ್ನು ಆಯೋಜಿಸಿದ್ದಕ್ಕಾಗಿ ಮುರುಘಾಶರಣರ ಋಣ ತೀರಿಸುವ ಹಿನ್ನೆಲೆಯಲ್ಲಿ 325 ಅಡಿ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ 20 ಕೋಟಿ ಹಣ ಮೀಸಲಿಡಲಾಗಿದೆ. ಇದನ್ನು ಬಿಟ್ಟರೆ ಚಿತ್ರದುರ್ಗದ ಮೂಲಸಮಸ್ಯೆಗಳ ನಿವಾರಣೆಗೆ ಒತ್ತು ನೀಡಿಲ್ಲ.

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬೆಂಗಳೂರು ನಗರದ ಬಗ್ಗೆ ವಿಶೇಷ ಪ್ರೀತಿ ಇರುವುದು ಈ ಬಜೆಟ್ ನಲ್ಲಿ ವ್ಯಕ್ತವಾಗಿದೆ. ಮೆಟ್ರೋ ವಿಸ್ತರಣೆ, ಕಲಾಕ್ಷೇತ್ರಗಳ ನಿರ್ಮಾಣ, ಫಿಲಂ ಸಿಟಿ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳಿಗೆ ಸುಮಾರು ಹತ್ತಿರ ಹತ್ತಿರ 700 ಕೋಟಿ ರೂಪಾಯಿ ಹಣ ಮೀಸಲಿಟ್ಟಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದ್ದಾರೆ. ತಮಗೆ ಬೇಕಾದ ಸಚಿವರ ಕ್ಷೇತ್ರಗಳಿಗೆ ಕೆಲವೊಂದು ಯೋಜನೆಗಳನ್ನು ಘೋಷಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೂ ಸಮರ್ಪಕ ಹಣವನ್ನು ಮೀಸಲಿಟ್ಟಿಲ್ಲ. ಗ್ರಾಮೀಣ ಭಾಗದ ಯುವಕ-ಯುವತಿಯರು ನಗರ ಪ್ರದೇಶಗಳಿಗೆ ವಲಸೆ ಬರುವುದನ್ನು ತಪ್ಪಿಸುವಂತಹ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ.

ಕೇವಲ ಬೆಂಗಳೂರು ನಗರವನ್ನು ಕೇಂದ್ರೀಕರಿಸಿರುವ ಬಜೆಟ್ ಬಯಸಲು ಸೀಮೆಯ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವುದು ಎದ್ದುಕಾಣುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read