ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ತಮ್ಮ ಮೊದಲ ಪಾಡ್ ಕಾಸ್ಟ್ ಸಂಚಿಕೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದಾರೆ. ಪ್ರಧಾನಿ ಮೋದಿ ಭರವಸೆ ನೀಡಿದ್ದ 15 ಲಕ್ಷ ರೂ.ವನ್ನು ಬ್ಯಾಂಕ್ ಎಕೌಂಟ್ಗಳಿಗೆ ಜಮೆ ಮಾಡಿಲ್ಲ. ಮುಂದಿನ ಚುನಾವಣೆಯಲ್ಲಿ INDIA ಒಕ್ಕೂಟ ಗೆಲ್ಲದಿದ್ದರೆ ಇಡೀ ದೇಶ ಹರ್ಯಾಣ, ಮಣಿಪುರದಂತಾಗುತ್ತದೆ ಎಂದು ಹೇಳಿದ್ದಾರೆ.
ಇಂದು ಸಿಎಂ ಎಂ.ಕೆ.ಸ್ಟಾಲಿನ್ ಪ್ರಾರಂಭಿಸಿದ ಪಾಡ್ ಕಾಸ್ಟ್ನ ಮೊದಲ ಸಂಚಿಕೆ ಮಲಯಾಳಂ, ತೆಲುಗು, ಹಿಂದಿ, ಕನ್ನಡ, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಕಳೆದ 9 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಚುನಾವಣೆಗೆ ಮೊದಲು ನೀಡಿದ್ದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಭರವಸೆಯನ್ನು ಈಡೇರಿಸಿಲ್ಲ ಎಂದು ಹೇಳಿದ್ದಾರೆ.
ಜನರಿಗೆ ಭರವಸೆ ನೀಡಿದ 15 ಲಕ್ಷವನ್ನು ಎಕೌಂಟ್ಗೆ ಜಮೆ ಮಾಡಿಲ್ಲ. ರೈತರ ಆದಾಯ ದ್ವಿಮುಖವಾಗಿಲ್ಲ. 2 ಕೋಟಿ ಉದ್ಯೋಗ ವಾರ್ಷಿಕವಾಗಿ ಸೃಷ್ಟಿ ಮಾಡವ ಭರವಸೆ ನೀಡಲಾಗಿತ್ತು, ಆದರೆ ಅದನ್ನು ಈಡೇರಿಸಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿಗಳು ತನ್ನ ಪಾಡ್ ಕಾಸ್ಟ್ ಸಂಚಿಕೆಯ ಲೈವ್ನಲ್ಲಿ ಹೇಳಿದ್ದಾರೆ.
ಭಾರತ, ಹರ್ಯಾಣ ಅಥವಾ ಮಣಿಪುರದಂತೆ ಆಗದಿರಲು INDIA ಒಕ್ಕೂಟದ ಗೆಲುವು ಅನಿವಾರ್ಯವಾಗಿದೆ ಎಂದು ಮೇ ತಿಂಗಳಿನಲ್ಲಿ ನಡೆದ ಮಣಿಪುರದ ಹಿಂಸಾಚಾರ ಮತ್ತು ಇತ್ತೀಚೆಗೆ ನಡೆದ ಹರ್ಯಾಣ ಹಿಂಸಾಚಾರದ ಬಗ್ಗೆ ಸ್ಟಾಲಿನ್ ಮಾತಿನಲ್ಲಿ ಉಲ್ಲೇಖಿಸಿದ್ದಾರೆ.
ಬಹುಸಂಸ್ಕೃತಿ ಮತ್ತು ವೈವಿಧ್ಯಮಯ ಭಾರತವನ್ನು ರೂಪಿಸಿ ಎಂದು ಎಂಕೆ ಸ್ಟಾಲಿನ್ ಜನರಿಗೆ ಕರೆ ನೀಡಿದ್ದು, ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಣ, ಏರ್ ಇಂಡಿಯಾ ಮಾರಾಟ, ವಿಮಾನ ನಿಲ್ದಾಣಗಳು ಮತ್ತು ಬಂದರುಗಳನ್ನು ಬಿಜೆಪಿಯ ನಿಕಟವರ್ತಿಗಳಿಗೆ ಹಸ್ತಾಂತರ ಕಾರ್ಯವನ್ನು ಮುಚ್ಚಿಡಲು ಬಿಜೆಪಿ ಕೋಮುವಾದವನ್ನು ಆಶ್ರಯಿಸುತ್ತದೆ ಎಂದು ಆರೋಪಿಸಿದ್ದಾರೆ.
ಸ್ಟಾಲಿನ್ ಅವರು ತಮ್ಮ ಭಾಷಣದಲ್ಲಿ ಗುಜರಾತ್ ಗಲಭೆಯನ್ನು ಉಲ್ಲೇಖಿಸಿದ್ದಾರೆ. ದ್ವೇಷವನ್ನು 2002ರಲ್ಲಿ ಗುಜರಾತ್ನಲ್ಲಿ ತೋರಿಸಲಾಗಿದೆ. ಇದೇ ಕಾರಣದಿಂದ 2023ರಲ್ಲಿ ಹರ್ಯಾಣ ಮತ್ತು ಮಣಿಪುರದಲ್ಲಿ ಹಿಂಸಾಚಾರ ನಡೆದಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಸಾಮಾಜಿಕ ನ್ಯಾಯ, ಶಾಂತಿ ಪುನಸ್ಥಾಪನೆ, ಜಾತ್ಯತೀತತೆ ಮತ್ತು ಸಮಾಜವಾದವನ್ನು ಪುನಃಸ್ಥಾಪಿಸಲು INDIA ಒಕ್ಕೂಟವನ್ನು ರಚಿಸಲಾಗಿದೆ. ಒಕ್ಕೂಟ ವ್ಯವಸ್ಥೆಗೆ ಅಪಾಯ ಬಂದಾಗಲೆಲ್ಲಾ ಡಿಎಂಕೆ ಯಾವಾಗಲೂ ಮುಂಚೂಣಿಯಲ್ಲಿದೆ ಎಂದು ಎಂಕೆ ಸ್ಟಾಲಿನ್ ಹೇಳಿದರು.
ಇದನ್ನು ಓದಿ: ಜನ ಆಶೀರ್ವಾದ ಯಾತ್ರೆಗೆ ಆಹ್ವಾನಿಸಿದರೂ ಹೋಗುತ್ತಿರಲಿಲ್ಲ; ಬಿಜೆಪಿ ವಿರುದ್ಧ ತಿರುಗಿಬಿದ್ದ ಉಮಾಭಾರತಿ