144 ಸೆಕ್ಷನ್ ಹಾಕಿ ಬೀದಿಗೆ ಬಂದವರನ್ನೆಲ್ಲಾ ಪೊಲೀಸರು ಹೊಡೆಯೋದು ಸರಿಯಲ್ಲ, ಜನರ ಮೇಲೆ ಲಾಠಿ ಚಾರ್ಜ್ ಮಾಡೋದು ಸರಿಯಲ್ಲ. ಹಬ್ಬ ಇದೆ, ಅಗತ್ಯ ವಸ್ತುಗಳನ್ನ ಮಾರಾಟ ಮಾಡಲು ಮತ್ತು ಖರೀದಿ ಮಾಡಲು ಅವಕಾಶ ಕೊಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯನವರು, ನಾನು ಪೊಲೀಸ್ ಆಯುಕ್ತರ ಜೊತೆ ಮಾತಾಡಿದ್ದೇನೆ ಎಂದಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೊನಾ ದೇಶದಲ್ಲಿ ಹಾಗೂ ರಾಜ್ಯದಲ್ಲಿ ವೇಗವಾಗಿ ಹರಡುತ್ತಿರುವ ಕಾರಣ ವಿಧಾನಸಭೆ ಅಧಿವೇಶನ ಮುಂದೂಡಬೇಕು, ಸದನ ನಡೆಸುವುದು ಸಾದುವಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಪರೀಕ್ಷಾ ಕೇಂದ್ರಗಳನ್ನ ತೆರೆದಿಲ್ಲ.. ಕ್ವಾರಂಟೈನ್ ಕೇಂದ್ರಗಳನ್ನು ತೆರೆದೇ ಇಲ್ಲ. ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ನಡುವೆ ಹೊಂದಾಣಿಕೆ ಇಲ್ಲ. ಕೊರೊನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕ್ವಾರಂಟೈನ್ ಮಾಡೋ ಕೆಲಸವನ್ನ ಪೊಲೀಸ್ ಇಲಾಖೆಗೆ ನೀಡಿದ್ರೆ ಹೇಗೆ? ಪೊಲೀಸ್ ಇಲಾಖೆ ಇದನ್ನೆಲ್ಲಾ ಮಾಡೊಕ್ಕಾಗುತ್ತಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಂಸತ್ತನ್ನು ಮುಂದೂಡಿದ್ದಾರೆ. ಹಾಗಾಗಿ ಇಲ್ಲಿಯೂ ಮುಂದೂಡಿ ಅಂತಾ ಸದನ ಸಲಹಾ ಸಮಿತಿಲಿ ಹೇಳಿದ್ದೇವೆ ಆದರೆ ಇದೇ 27,28ರವರೆಗೂ ನಡೆಸಬೇಕು ಅಂತಾ ಸರ್ಕಾರ ವಾದಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲೂ ಕೊರೊನಾ ವ್ಯಾಪಕವಾಗಿ ಹಬ್ತಾ ಇದೆ. ಸಾಮಾಜಿಕ ಕಳಕಳಿಯೂ ಬಹಳಮುಖ್ಯ. ಆದ್ದರಿಂದ ಬಜೆಟ್ ಮೇಲೆ ಚರ್ಚೆ ಆಗದಿದ್ದರೂ ಪರವಾಗಿಲ್ಲ. ಒಪ್ಪಿಗೆ ನೀಡ್ತೇವೆ, ಎಲ್ಲದಕ್ಕೂ ಸಹಕಾರ ಕೊಡ್ತೇವೆ ಎಂದು ತಿಳಿಸಿದ್ದಾರೆ.
ಫೈನಾನ್ಸ್ ಬಿಲ್ ಬಿಟ್ಟು ಯಾವ ಬಿಲ್ ನ್ನು ಎತ್ತಿಕೊಳ್ಳೋದು ಬೇಡ ಅಂತಾನೂ ಹೇಳಿದ್ವಿ. ಪಂಚಾಯತ್ ರಾಜ್ ವ್ಯವಸ್ಥೆಯನ್ನ ದುರ್ಬಲ ಮಾಡಲು ಒಂದು ವಿಧೇಯಕ ತಂದ್ರು. ಅಂತಹ ಬಿಲ್ ಗಳ ಬಗ್ಗೆ ಚರ್ಚೆ ಆಗ್ಲಿ ಅನ್ನೊದು ನಮ್ಮ ವಾದ. ಹಾಗಾಗಿ ಹಣಕಾಸು ಬಿಲ್ ಬಿಟ್ಟು ಬೇರಾವ ಬಿಲ್ ತರೋದು ಬೇಡ ಅಂತಾ ಹೇಳಿದ್ವಿ. ಸಿಎಂಗೆ ನಾವು ಇಷ್ಟೊಂದು ಸಪೋರ್ಡ್ ಮಾಡಿದ್ದೀವಿ. ಸದನ ಮುಂದೂಡಿ ಅಂತಾ ಹೇಳಿದ್ದಿವಿ. ಹಣಕಾಸು ಬಿಲ್ ಗೆ ಒಪ್ಪಿಗೆ ನೀಡ್ತಿವಿ ಅಂದಿದ್ದೀವಿ. ಅಗತ್ಯ ಬಿದ್ರೆ ಸುಗ್ರೀವಾಜ್ಞೆ ಹೊರಡಿಸಿ ಅಂತಾ ಹೇಳಿದ್ದೀವಿ, ಸಿಎಂ ಕೂಡ ಇದಕ್ಕೆ ಒಪ್ಪಿದ್ರು. ಇಷ್ಟೆಲ್ಲಾ ಆದ್ಮೇಲೆಯೂ ಕಲಾಪ ಆರಂಭವಾಗುತ್ತಿದ್ದಂತೆ ಕಾನೂನು ಸಚಿವರು ಸದನದ ಮುಂದೆ ಬಿಲ್ ತಂದೇ ಬಿಟ್ರು. ನಾವು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ವಿ. ಮಾನಗೆಟ್ಟ ಸರ್ಕಾರ ಇದು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಹಣಕಾಸು ಸ್ಥಿತಿ ದಿವಾಳಿಯಾಗಿದೆ. ಜನ ನಮಗೆ ಫುಲ್ ಮೆಜಾರಿಟಿ ಕೊಟ್ಟಿದ್ದಾರೆ ಅಂತಾ ಅನ್ಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದ ನಾವು ಕಲಾಪವನ್ನ ಬಹಿಷ್ಕರಿಸಿದ್ದೇವೆ ಎಂದರು.