Homeಅಂಕಣಗಳುಶ್ರೀನಿವಾಸ್ ಪ್ರಸಾದ್‌ಗೆ ನಿರ್ಮಲಾ ನೀತಿ ಬೋಧೆ!

ಶ್ರೀನಿವಾಸ್ ಪ್ರಸಾದ್‌ಗೆ ನಿರ್ಮಲಾ ನೀತಿ ಬೋಧೆ!

- Advertisement -
- Advertisement -

ಆಡಳಿತ ಪಕ್ಷವೊಂದು ಸರಿಯಾಗಿ ಕೆಲಸ ಮಾಡಬೇಕಾದರೆ ಸಮರ್ಥ ವಿರೋಧ ಪಕ್ಷವೂ ಬೇಕಂತೆ. ಹಾಗಾಗಿ ಕರ್ನಾಟಕದಲ್ಲಿ ಸಮರ್ಥವಾಗಿಯೇ ಕೆಲಸ ಮಾಡುತ್ತಿದ್ದ ಕಾಂಗೈ ಪಾರ್ಟಿಯ ಯಾವ ಮಾತಿಗೂ ಕಿವಿಗೊಡದೆ ನಡೆದಿದ್ದ ಬಿಜೆಪಿ ಸರಕಾರ, ರಾಹುಲ್‌ಗಾಂಧಿ ಮಾಡುತ್ತಿರುವ ಜಾಥಕ್ಕೆ ಜನ ಮುತ್ತಿಗೊಳ್ಳುತ್ತಿರುವುದನ್ನು ನೋಡಿ ಗಾಬರಿಗೊಂಡು, ತನ್ನ ಮೀಸಲಾತಿ ವಿರೋಧವನ್ನು ಬದಿಗಿಟ್ಟು ಮೀಸಲಾತಿಯನ್ನು ಜಾರಿಗೆ ತಂದುಬಿಟ್ಟಿತಲ್ಲಾ. ಈ ಕ್ರಾಂತಿಕಾರಿ ತೀರ್ಮಾನದ ಹಿಂದಿರುವ ಹಿಕಮತ್ತೇನೆಂದರೆ ಈ ಮೀಸಲಾತಿ ಜಾರಿಗೆ ಮುನ್ನ ಸದನದಲ್ಲಿ ಚರ್ಚೆಯಾಗಬೇಕು; ಆ ನಂತರ ಲೋಕಸಭೆಗೂ ಸದರಿ ಮಸೂದೆ ಹೋಗಬೇಕು; ಆ ನಂತರ ರಾಷ್ಟ್ರಪತಿಯವರ ಅಂಕಿತಕ್ಕೆ ಕಾಯಬೇಕು; ಇದೆಲ್ಲಾ ಆಗುವುದರಲ್ಲಿ ಕರ್ನಾಟಕದ ಚುನಾವಣೆಯೇ ಮುಗಿದು ಲೋಕಸಭೆ ಚುನಾವಣೆಯೂ ಬರಬಹುದು. ಆದರೆ ಯಾವ ಸಾಧನೆಯನ್ನೂ ಮಾಡದೆ ಬರಿಗೈಲಿ ಚುನಾವಣೆಗೆ ಹೊರಟಿದ್ದ ಬಿಜೆಪಿ ಕೈಗೆ ಮೀಸಲಾತಿ ಸೌಟು ಸಿಕ್ಕಿದೆ. ಬಕೇಟು ಕೂಡ ಪೂರ್ತಿ ಖಾಲಿಯಿದೆ; ಉದ್ಯೋಗವನ್ನೇ ಸೃಷ್ಟಿಸದ ಖಾಲಿ ಹುದ್ದೆ ತುಂಬದ ಬಿಜೆಪಿ ಸಂಚಿಗೆ ದಲಿತರು ಮೋಸ ಹೋಗುತ್ತಾರೋ ಇಲ್ಲವೋ ಕಾದುನೋಡಬೇಕಂತಲ್ಲಾ, ಥೂತ್ತೇರಿ.

*****

ಬೊಮ್ಮಾಯಿ ಮೀಸಲಾತಿ ಬುಟ್ಟಿಗೆ ಕೈ ಹಾಕಿದ ಕೂಡಲೇ ಎಲ್ಲಾ ಜಾತಿಗಳು ಜೇನು ಬುಟ್ಟಿಯಿಂದ ಎದ್ದ ಜೇನುಹುಳುಗಳಂತೆ ಝೇಂಕಾರದ ಶಬ್ದ ಮಾಡುತ್ತ ಬೊಮ್ಮಾಯಿಯವರನ್ನು ಮುತ್ತಿಕೊಂಡವಲ್ಲಾ. ಈ ಮೊದಲು ಜನಾಂಗದ ಮುಖಂಡರಿದ್ದರೆ ಈಗ ಎಲ್ಲ ಜಾತಿಗಳಲ್ಲೂ ಸುಖ ಸಂತೋಷದ ಸುಪ್ಪತ್ತಿಗೆಯಲ್ಲಿರುವ ಜಗದ್ಗುರುಗಳೇ ಜಾತಿ ನಾಯಕರಾಗಿದ್ದಾರೆ. ಈ ಪೈಕಿ ಕರ್ನಾಟಕದ ಎರಡನೇ ದೊಡ್ಡ ಸಮುದಾಯವಾದ ಒಕ್ಕಲಿಗರ ಜಗದ್ಗುರು ನಿರ್ಮಲಾನಂದರು ಮೀಸಲಾತಿಗೆ ಕೈಯೊಡ್ಡಿ ನಮಗೆ ಕೊಡುವ ನಾಲ್ಕು ಪರಸೆಂಟು ಯಾತಕ್ಕೂ ಸಾಲುತ್ತಿಲ್ಲ ನಾವು ಹದಿನಾರು ಪರಸೆಂಟ್ ಇರುವುದರಿಂದ, ಅಷ್ಟೂ ಪರಸೆಂಟ್ ಮೀಸಲಾತಿ ಏನೂ ಬೇಡ, ಹನ್ನೆರಡು ಪರಸೆಂಟ್ ಕೊಡಿ; ಇಲ್ಲವಾದರೆ ಬೆಂಗಳೂರು ಸುತ್ತ ಭೂಮಿ ಮಾರಿಕೊಂಡು ಬೆಂಗಳೂರಿನ ಬಾರು ಕ್ಲಬ್ಬು ಹೋಟೆಲುಗಳಲ್ಲಿ ಕಳೆದುಹೋಗಿರುವ ಒಕ್ಕಲಿಗರನ್ನು ಒಟ್ಟಿಗೆ ಸೇರಿಸಿ ವಿಜಯನಗರದಿಂದ ಭೂಮಿ ಮಾರಿಕೊಂಡ ಜಾಗಕ್ಕೆ ಜಾಥ ತೆಗೆಯುತ್ತೇವೆ ಎಂದಿದ್ದಾರಲ್ಲಾ. ಬೆಂಗಳೂರು ಸುತ್ತಮುತ್ತ ಒಕ್ಕಲಿಗರು ಭೂಮಿ ಮಾರಿಕೊಂಡಿದ್ದಕ್ಕೆ ಕಾರಣ ಅಂದು ಮುಖ್ಯಮಂತ್ರಿಗಳಾಗಿದ್ದ ದೇವೇಗೌಡರು. ಭೂಮಿ ಮಾರಿಕೊಂಡ ಜನಾಂಗ ಮುಂದೇನು ಮಾಡಬೇಕೆಂಬ ಕಸುಬಿನ ಪಟ್ಟಿಯನ್ನ ಅವರೇ ತಯಾರಿಸಿ ಕೊಡಬೇಕಿತ್ತು, ಕೊಟ್ಟಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ ನಿರ್ಮಲಾನಂದರು ಒಕ್ಕಲಿಗರ ಇತಿಹಾಸದ ಪಥ ಬಿಟ್ಟು ಉತ್ತರಪ್ರದೇಶದ ದಾರಿ ಹಿಡಿದಿದ್ದಾರೆ. ಉತ್ತರದ ಶಾ ಆದಿತ್ಯರು ಮೀಸಲಾತಿ ವಿರೋಧಿಗಳು. ನಿರ್ಮಲಾನಂದರು ಎಬ್ಬಿಸುವ ಮೀಸಲಾತಿ ಗಲಭೆ ತೀವ್ರಗೊಂಡು ಮೀಸಲಾತಿಯೇ ರದ್ದಾಗುವ ಅಪಾಯವನ್ನು ಬಿಜೆಪಿಗಳೇ ತಯಾರಿಸಿರಬಾರದೇಕೆ ಎಂದು ಶ್ರೀನಿವಾಸ್ ಪ್ರಸಾದರ ಕಡೆ ಜನ ಗುಮಾನಿ ಪಟ್ಟಿದ್ದಾರಂತಲ್ಲಾ, ಥೂತ್ತೇರಿ.

*****

ಅರ್ಧ ಶತಮಾನದ ಹಿಂದೆ ಮೈಸೂರು ಕಡೆಯಿಂದ ಮೇಲೆದ್ದು ಬಂದ ದಲಿತ ನಕ್ಷತ್ರ ಶ್ರೀನಿವಾಸ ಪ್ರಸಾದ್ 2024ರಿಂದ ನಿವೃತ್ತಿಯಾಗುತ್ತಾರಂತಲ್ಲಾ. ಹಾಗೆ ನೋಡಿದರೆ ಅವರು ನಿವೃತ್ತಿಯಾಗಿದ್ದುದು ಸಿದ್ದರಾಮಯ್ಯನ ಸಂಪುಟದಲ್ಲಿ ಸಚಿವರಾದಾಗಲೇ. ಬಹುಮುಖ್ಯವಾದ ರೆವಿನ್ಯೂ ಖಾತೆ ಪಡೆದು ರಗ್ಗು ಹೊದ್ದು ಮಲಗಿದ್ದನ್ನು ನೋಡಿದ ಸಿದ್ದು ಖಾತೆ ಬದಲಿಸಿದರು. ಸಿಟ್ಟುಗೊಂಡ ಶ್ರೀನಿವಾಸ್ ಎದ್ದುಹೋಗಿ ಬಿಜೆಪಿ ಕದ ಬಡಿದರು. ಅವರು ಕದಬಡಿಯುತ್ತಿದ್ದಾಗ ಉತ್ತರ ಕನ್ನಡದವನೊಬ್ಬ ’ನಾವು ಸಂವಿಧಾನ ಬದಲಿಸುತ್ತೇವೆ’ ಎಂದ ವಿಕೃತ ಮಾತು ಶ್ರೀನಿವಾಸರ ಕಿವಿಗೆ ಬೀಳಲೇಯಿಲ್ಲ. ಅವರು ರಾಜಕಾರಣಕ್ಕೆ ಬಂದಾಗ ದಲಿತರು ಗುಡಿಸಲಲ್ಲಿದ್ದು ಬಡತನದಲ್ಲಿದ್ದರಂತೆ ಈಗಲೂ ಹಾಗೇ ಇರುವುದನ್ನು ನೋಡಿ ಮೋದಿಯವರಿಗೆ ತಿಳಿಸಿದರಂತೆ; ಆಗ ಅಲ್ಲೇ ಇದ್ದ ನಿರ್ಮಲಾಸೀತಾರಾಂ ಕೂಡಲೇ ಸಾರ್ ಗುಡಿಸಲಲ್ಲಿರುವ ದಲಿತರು ಅದನ್ನು ಒಳ್ಳೆಮನೇಯಲ್ಲಿದ್ದೇವೆ ಅಂದುಕೊಂಡರಾಯ್ತು. ಇನ್ನ ನಮಗೆ ಬಡತನವೇಇಲ್ಲ; ಎಳೆ ಬಾಳೆದೆಲೆಯ ಮೇಲೆ ಈಗ ತಾನೆ ಸಣ್ಣಕ್ಕಿ ಅನ್ನವನ್ನು ಹುಳಿಯಲ್ಲಿ ಕಲೆಸಿ ತುಪ್ಪ ಹಾಕಿಕೊಂಡು ಚಪ್ಪರಿಸುತ್ತ ಹಪ್ಪಳ ಸೊಂಡಿಗೆ ಪತ್ರೊಡೆ ಕಡ್ಳೆ ಪಾಯಸದೊಂದಿಗೆ ಉಂಡಿದ್ದೇವೆ ಎಂದುಕೊಂಡರಾಯ್ತು ಸಾರ್, ನಮ್ಮ ಭಾವನೆಗಳೇ ಬದಲಾಗುತ್ತವೆ. ಈಚೆಗೆ ಬಿಜೆಪಿಗೆ ಬರುತ್ತಿರುವ ಬಡವರಿಗೆ ನಾವು ಹೀಗೆಯೇ ಹೇಳುತ್ತಿದ್ದೇವೆ ಎಂದರಂತಲ್ಲಾ, ಥೂ ಥೂ ಥೂತ್ತೇರಿ.


ಇದನ್ನೂ ಓದಿ: ಪೇಸಿಎಮ್ಮಲ್ಲೂ ಜಾತಿ ಬಂತಲ್ಲಾ, ನೋಡಿದಿರಾ..!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...