ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಹಾಗೂ ಸಿಪಿಐ ನಾಯಕ ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರುತ್ತಾರೆಂಬ ಸುದ್ದಿ ನಿಜವಾಗಿದ್ದು, ಕಾಂಗ್ರೆಸ್ ಸೇರ್ಪಡೆಯ ದಿನಾಂಕವನ್ನು ಜಿಗ್ನೇಶ್ ಮೇವಾನಿ ತಿಳಿಸಿದ್ದಾರೆ.
’ನಾನು ಹಾಗೂ ಸಿಪಿಐ ನಾಯಕ ಕನ್ಹಯ್ಯ ಕುಮಾರ್ ಸೆ.28ರಂದು ಕಾಂಗ್ರೆಸ್ ಸೇರಲಿದ್ದೇವೆ’ ಎಂದು ಜಿಗ್ನೇಶ್ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
“ಎಲ್ಲ ವಿಷಯಗಳನ್ನು ಕಾಂಗ್ರೆಸ್ ಸೇರಿದ ಬಳಿಕ ಮಾತನಾಡುತ್ತೇವೆ” ಎಂದು ತಿಳಿಸಿದ್ದಾರೆ.
ಮೇವಾನಿ 2017ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ವಡ್ಗಾಮ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ವಿದ್ಯಾರ್ಥಿ ನಾಯಕನಾಗಿ ಮುಂಚೂಣಿಗೆ ಬಂದ ಕನ್ಹಯ್ಯ ಕುಮಾರ್ 2019ರ ಲೋಕಸಭಾ ಚುನಾವಣೆಯಲ್ಲಿ ಬೇಗುಸರಾಯ್ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು.
2017ರ ವಿಧಾನಸಭಾ ಚುನಾವಣೆಯಲ್ಲಿ ಮೇವಾನಿ ಪ್ರಮುಖ ದಲಿತ ನಾಯಕನಾಗಿ ಹೊಮ್ಮಿದರು. ಪಾಟಿದಾರ್ ಸಮುದಾಯದ ಹಾರ್ದಿಕ್ ಪಟೇಲ್, ಠಾಕೂರ್ ಸಮುದಾಯದ ಅಲ್ಫೇಶ್ ಠಾಕೂರ್ ಹಾಗೂ ಜಿಗ್ನೇಶ್ ಎಂಬ ಮೂವರು ಯುವಕರು ಇಡೀ ಚುನಾವಣೆಯನ್ನು ಬೇರೊಂದು ದಿಕ್ಕಿನತ್ತ ತಿರುಗಿಸಿದ್ದರು. ಬಿಜೆಪಿ ವಿರುದ್ಧ ಈ ಮೂವರು ಯುವಕರು ನಡೆಸಿದ ತೀವ್ರ ವಾಗ್ದಾಳಿಯಿಂದಾಗಿ ಬಿಜೆಪಿ ಗೆಲುವಿನ ದಡ ತಲುಪಲು ತಿಣುಕಾಡಬೇಕಾಯಿತು.
ಜವಾಹರಲಾಲ್ ವಿ.ವಿ.ಯ ವಿದ್ಯಾರ್ಥಿ ಮುಖಂಡರಾಗಿದ್ದ ಕನ್ಹಯ್ಯ ಕುಮಾರ್ ಅವರ ಮೇಲೆ 2016ರಲ್ಲಿ ದೇಶದ್ರೋಹ ಪ್ರಕರಣವನ್ನು ದಾಖಲಿಸಿದ ಬಳಿಕ ಕನ್ಹಯ್ಯ, ರಾಷ್ಟ್ರಮಟ್ಟದಲ್ಲಿ ಕೇಳಿ ಬಂದಿತು. ಸರ್ಕಾರವನ್ನು ಕಟು ವಿಮರ್ಶೆಗೆ ಒಳಪಡಿಸುವ ಕನ್ಹಯ್ಯ ಯುವಜನರ ಮಾದರಿಯಾಗಿ ಹೊಮ್ಮಿದ್ದರು.
ಇದನ್ನೂ ಓದಿ: ‘ಕೊರೊನಾ ದುರಾಡಳಿತಕ್ಕಾಗಿ ರಾಜೀನಾಮೆ ನೀಡಿದ್ದರೆ ಗುಜರಾತಿನ ಜನ ಮೆಚ್ಚುತ್ತಿದ್ದರು’ – ಜಿಗ್ನೇಶ್ ಮೇವಾನಿ