’ನನಗೆ ಚರಂಡಿ ಕ್ಲೀನ್ ಮಾಡುವವರ ಪಾತ್ರ ಮಾಡಬೇಕು ಎನ್ನುವ ಆಸೆ ಇದೆ. ಏಕೆಂದರೆ ಸಮಾಜದಲ್ಲಿ ಕ್ಲೀನ್ ಮಾಡುವುದು ಬಹಳಷ್ಟಿದೆ’ ಎಂದು ನಟ ಶಿವರಾಜ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಟ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ’ಸಲಗ’ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಶಿವರಾಜಕುಮಾರ್ ಅತಿಥಿಯಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿ ಮಾತನಾಡಿದ್ದಾರೆ.
ಈ ವೇಳೆ ಮಾತನಾಡಿರುವ ಅವರು, “ಈಗ ಮಾಡುತ್ತಿರುವುದೆಲ್ಲ ಬಿಟ್ಟು ಬೇರೆ ಏನಾದರೂ ವಿಭಿನ್ನವಾದ ಪಾತ್ರ ಮಾಡಬೇಕು. ಒಂದು ಲೋಕಲ್ ಕ್ಯಾರೆಕ್ಟರ್….ಅಂದರೆ, ಎಲ್ಲೂ ಕಾಣಿಸಿಕೊಳ್ಳದಿರುವ ಪಾತ್ರ. ಒಬ್ಬ ತೋಡಿಯ ಪಾತ್ರ ಅಂದರೆ, ಕಸ ಕ್ಲೀನ್ ಮಾಡುವ ಡ್ರೈನೇಜ್ ಕ್ಲೀನ್ ಮಾಡುವವರ ಒಂದು ಪಾತ್ರ ಮಾಡಬೇಕು ಎಂಬ ಆಸೆ ಇದೆ. ಏಕೆಂದರೆ…ಸಮಾಜದಲ್ಲಿ ಕ್ಲೀನ್ ಮಾಡಬೇಕಿರುವುದು ಬಹಳಷ್ಟಿದೆ. ಬರೀ ಅದನ್ನು ಕ್ಲೀನ್ ಮಾಡುವುದಲ್ಲ..ಅದಕ್ಕೆ ರಿಲವೆಂಟ್ ಆಗಿ ಪಾತ್ರ ಮಾಡಿದಾಗ ತುಂಬಾ ಚೆನ್ನಾಗಿರುತ್ತದೆ” ಎಂದಿದ್ದಾರೆ.
ಇದನ್ನೂ ಓದಿ: ರೈತ ಇದ್ರೇನೆ ದೇಶ: ರೈತ ಹೋರಾಟಕ್ಕೆ ನಟ ಶಿವರಾಜ್ಕುಮಾರ್ ಬೆಂಬಲ
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಟ ಪುನೀತ್ ರಾಜ್ಕುಮಾರ್, ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಮುಖ್ಯ ಅಥಿತಿಗಳಾಗಿದ್ದರು.
ಸಂಜನಾ ಆನಂದ್, ಡಾಲಿ ಧನಂಜಯ್, ಕಾಕ್ರೋಚ್ ಸುಧೀರ್ ಸೇರಿದಂತೆ ಬಹುದೊಡ್ಡ ತಾರಾಂಗಣವನ್ನು ಹೊಂದಿರುವ ಸಲಗಕ್ಕೆ ಕೆ.ಪಿ. ಶ್ರೀಕಾಂತ್ ನಿರ್ಮಾಪಕರಾಗಿದ್ದಾರೆ. ಅಕ್ಟೋಬರ್ 14ರಂದು ಸಿನಿಮಾ ತೆರೆ ಕಾಣಲಿದೆ.
ಈ ಹಿಂದೆ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಹೋರಾಡುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದರು. “ರೈತರು ಬೀದಿಯಲ್ಲಿ ಕೂತು ಊಟ ಮಾಡ್ತಿರೋದು ನೋಡಿದ್ರೆ ಹೊಟ್ಟೆ ಉರಿಯುತ್ತೆ. ಅವರಿಗೆ ನಮ್ಮ ಸಪೋರ್ಟ್ ಖಂಡಿತಾ ಇದ್ದೇ ಇರುತ್ತೆ. ಮನುಷ್ಯ ಮನುಷ್ಯನಿಗೆ ಸಪೋರ್ಟ್ ಮಾಡದೇ ಇರಲು ಸಾಧ್ಯವಿಲ್ಲ. ಆದ್ರೆ ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ” ಎಂದು ಅವರು ಒತ್ತಾಯಿಸಿದ್ದರು.
ಇದನ್ನೂ ಓದಿ: ರೈತರ ಸ್ಥಿತಿ ನೋಡಿದರೆ ಹೊಟ್ಟೆ ಉರಿಯುತ್ತೆ: ರೈತ ಹೋರಾಟಕ್ಕೆ ನಟ ಶಿವರಾಜ್ಕುಮಾರ್ ಬೆಂಬಲ