Homeಕರ್ನಾಟಕಶ್ರದ್ಧಾಂಜಲಿ; ಕೃಷ್ಣ ಹೆಸರಿನ ಧರ್ಮರಾಯ!

ಶ್ರದ್ಧಾಂಜಲಿ; ಕೃಷ್ಣ ಹೆಸರಿನ ಧರ್ಮರಾಯ!

- Advertisement -
- Advertisement -

ಕೆ.ಆರ್ ಪೇಟೆಯ ಕೃಷ್ಣ ನಿಧನರಾಗಿದ್ದಾರೆ. ಈ ತಲೆಮಾರಿನ ರಾಜಕಾರಣಿಗಳು ಅನುಸರಿಸಲಾಗದ ಕೆಲವು ಮೌಲ್ಯಗಳನ್ನು ಬಿಟ್ಟುಹೋಗಿದ್ದಾರೆ. ಕೃಷ್ಣ ಮಂಡ್ಯ ಜಿಲ್ಲೆ ಕಂಡ ಅಪರೂಪದ ರಾಜಕಾರಣಿಗಳಾದ ಕೆ.ವಿ ಶಂಕರೇಗೌಡರು, ಎಚ್.ಟಿ ಕೃಷ್ಣಪ್ಪ, ಬಂಡಿ ಸಿದ್ದೇಗೌಡ, ಪಾಂಡವಪುರದ ಕೆಂಪಣ್ಣ, ಎಸ್.ಎಂ ಲಿಂಗಪ್ಪ ಇಂತಹವರ ಸಾಲಿಗೆ ಸೇರಿದವರು ಕೃಷ್ಣ. ಅವರು ಮೊದಲು ಮೇಷ್ಟರಾಗಿದ್ದವರು. ಆ ಹುದ್ದೆ ತೊರೆದು ರಾಜಕಾರಣಕ್ಕೆ ಬಂದರೂ ಕಡೆಯವರೆಗೂ ಬಡ ಮೇಷ್ಟರಂತೆಯೇ ಕಾಣುತ್ತಿದ್ದರು. ಅವರನ್ನು ಭೇಟಿಯಾಗಲು ಬಂದವರು ಹೇಳುವುದನ್ನ ಪೂರ್ಣ ಕೇಳಿಸಿಕೊಳ್ಳುವುದು, ಹೇಳಿದ್ದರಲ್ಲಿ ತಪ್ಪಾಗಿದ್ದರೆ ತಿದ್ದಿ ಬುದ್ಧಿ ಹೇಳುವ ಮೇಷ್ಟರ ಗುಣವನ್ನು ಬಿಡಲೇ ಇಲ್ಲ. ಅವರು 1983ರ ಕಾಂಗ್ರೆಸ್ ವಿರೋಧಿ ಅಲೆಯಿಂದ ಗೆದ್ದು ಬಂದವರು. ಆದರೆ ಕೆ.ಆರ್ ಪೇಟೆ ಜನಮನಗೆದ್ದು ಮೂರು ಬಾರಿ ಶಾಸಕರಾಗಿ, ಒಮ್ಮೆ ಮಂತ್ರಿಯಾಗಿ, ಲೋಕಸಭಾ ಸದಸ್ಯರಾಗಿ, ಕಡೆಗೆ ವಿಧಾನಸಭೆಯ ಸ್ಪೀಕರ್ ಆದರೂ ಸರಳ ಸಜ್ಜನಿಕೆಯ ಮೇಷ್ಟರಾಗಿ ಉಳಿದರು. ಕೃಷ್ಣರಿಗೆ ಎಲ್ಲ ಅವಕಾಶಗಳೂ ಒದಗಿಬರುವಂತೆ ಮಾಡಿದ ದೇವೇಗೌಡರು ಕೃಷ್ಣ ಅಲಂಕರಿಸಿದ್ದ ಸ್ಪೀಕರ್ ಸ್ಥಾನವನ್ನು ಬಹಳ ಚೆನ್ನಾಗಿ ಬಳಸಿಕೊಂಡರು. ಸ್ಪೀಕರ್ ಸ್ಥಾನದಲ್ಲಿ ಕುಳಿತು ಸಂವಿಧಾನಾತ್ಮಕವಾಗಿ ನಡೆದುಕೊಳ್ಳಲಾರದ ಯಾತನೆ ಅವರಿಗೆ ಕಡೆಯವರೆಗೂ ಉಳಿದಿತ್ತು. ಸಜ್ಜನ ರಾಜಕಾರಣಿಗಳಿಗೆ ಮುಖ ತೋರದಂತ ಕೀಳರಿಮೆ ಅನುಭವಿಸಿದ್ದರು.

ಜನಾಭಿಪ್ರಾಯವಿಲ್ಲದ ನಾಯಕನನ್ನು ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪಿಸುವ ಸಮಯದಲ್ಲಿ ಕೃಷ್ಣ, ದೇವೇಗೌಡರ ಸೂಚನೆಯಂತೆ ನಡೆದುಕೊಂಡರು. ಇದರ ಫಲವಾಗಿ ಆ ಮುಂದಿನ ಚುನಾವಣೆಯಲ್ಲಿ ಸೋತರು. 2013ರಲ್ಲಿ ಮತ್ತೆ ಚುನಾವಣೆ ಎದುರಾದಾಗ ಜೆಡಿಎಸ್ ವರಿಷ್ಠರು ಟಿಕೆಟ್ ನೀಡಲಿಲ್ಲ. ನಿಜಕ್ಕೂ ಕೃಷ್ಣ ಮಾಡಿದ ಉಪಕಾರಕ್ಕೆ ಜೆಡಿಎಸ್ ಕಡೆಯವರೆಗೂ ಅವರಿಗೆ ಟಿಕೆಟ್ ನೀಡಬೇಕಿತ್ತು. ಆದರೆ ಆ ಸಮಯಕ್ಕಾಗಲೇ ಅವರು ಉಪಯೋಗಿಸಿ ಬಿಸಾಕಿದ ವಸ್ತುವಿನಂತಾಗಿದ್ದರು. ಏಕೆಂದರೆ ಬಾಂಬೆಯಿಂದ ಸೂಟ್‌ಕೇಸ್ ಹಿಡಿದು ಬಂದ ನಾರಾಯಣಗೌಡರು ಆಗಲೇ ಲಕಲಕ ಹೊಳೆಯುತ್ತಿದ್ದರು. ಇಂತಹವರ ಎದುರು ನಿವೃತ್ತ ಉಪಾಧ್ಯಾಯನಂತೆ ಕಾಣುವ ಕೃಷ್ಣ ಯಾರಿಗೆ ಬೇಕು! ಈ ಮೊದಲು ಅವರು ಚುನಾವಣೆಗೆ ನಿಂತಾಗ ಜನಗಳೇ ಚಂದಾ ಎತ್ತಿ ಚುನಾವಣೆಯಲ್ಲಿ ಗೆಲ್ಲಿಸಿದ್ದರು. ಆದರೆ ಈಗ ಅಂತಹ ಮೌಲ್ಯಗಳೇ ಪತನಗೊಂಡು ಮತದಾರನೆ ರಾಜಕಾರಣಿ ಕೈಯಿಂದ ಚಂದಾ ವಸೂಲಿಗಿಳಿಯುತ್ತಿದ್ದಾನೆ. ಆದ್ದರಿಂದ ಕೃಷ್ಣ ಮೂಲೆಗುಂಪಾದರು. ಅವರು ಕಡೆಯಲ್ಲಿ ಕಾಂಗ್ರೆಸ್ ಸೇರಿದರೂ ನಾರಾಯಣಗೌಡರೆದುರಿಗೆ ನಿಲ್ಲಲಾಗಲಿಲ್ಲ. ಕೃಷ್ಣರಂತಹ ಸಜ್ಜನ ರಾಜಕಾರಣಿಯನ್ನ ಬೆಂಬಲಿಸಿದ್ದ ಕೆ.ಆರ್ ಪೇಟೆ ಈಗ ಬಿಜೆಪಿ ಪಾಲಾಗಿದೆ. ಈ ಅನಾಹುತಕ್ಕೆ ಕಾರಣ ಕೃಷ್ಣರನ್ನ ದುರುಪಯೋಗಪಡಿಸಿಕೊಂಡವರು.

ಕೃಷ್ಣ ಅಜಾತಶತ್ರು. ಅವರನ್ನ ಟೀಕಿಸಲು ಮತ್ತು ವಿರೋಧಿಸಲು ಕಾರಣಗಳೇ ಇಲ್ಲದಂತೆ ಬದುಕಿದವರು. ಅವರೊಮ್ಮೆ ನಾಗಮಂಗಲ ಐಬಿಗೆ ಬಂದಾಗ ಜನತಾದಳದ ಕಾರ್ಯಕರ್ತನೊಬ್ಬ ಕೇಳಿಸಿಕೊಳ್ಳಲು ಅಸಹ್ಯವಾಗುವ ಬೈಗುಳದಿಂದ ಬೈದ. ಕೃಷ್ಣ ನಗುತ್ತಲೇ ಅದನ್ನ ಸಹಿಸಿಕೊಂಡರು. ಅಂತಹ ಅಸಮಾನ್ಯ ತಾಳ್ಮೆ ಹೊಂದಿದ್ದರು. ಆದರೆ, ಸಾವಿರಾರು ರೂಪಾಯಿ ಸಂಬಳ ಎಣಿಸುವ ಅಧಿಕಾರಿಗಳು ಜನಗಳ ಕೆಲಸ ಮಾಡಿಕೊಡದಿದ್ದರೆ ಅಧಿಕಾರಿಗೆ ಭೂತ ಬಿಡಿಸುತ್ತಿದ್ದರು. ಇದು ಯಾರಿಗೂ ಗೊತ್ತಾಗುತ್ತಿರಲಿಲ್ಲ, ಯಾಕೆಂದರೆ ಅಧಿಕಾರಿಯನ್ನು ತಮ್ಮ ಛೇಂಬರಿಗೆ ಕರೆದು, ಬಾಗಿಲು ಹಾಕಿಕೊಂಡು, ಏರುದನಿಯಲ್ಲಿ ಬೈಯ್ಯುತ್ತಾ, “ಜನಗಳನ್ನು ನನ್ನವರೆಗೂ ಬುಟ್ಟಿದ್ದೀಯಾ, ನೀನ್ಯಾಕ್ಲ ಇರದು? ವಸಿ ಸಂಬ್ಳ ತಗತಿಯೇನೂ” ಎಂದು ಮಂಗಳಾರತಿ ಮಾಡಿ, ಎಚ್ಚರಿಸಿ, ರಿಪೇರಿ ಕೆಲಸ ಮುಗಿಸಿದಂತೆ ಈಚೆ ಬಂದು, ನಂತರ ಎಂದಿನ ಪ್ರಸನ್ನತೆ ಮತ್ತು ಸಮಾಧಾನದಿಂದ “ಸಾಯಬ್ರಿಗೇಳಿದ್ದೀನಿ, ಅವುರು ಮಾಡಿಕೊಡ್ತಾರೆ ಹೋಗ್ರಪ್ಪ ಎಂದು ಕಳಿಸುತ್ತಿದ್ದರು. ಇದು ಈ ಲೋಕಕ್ಕೆ ಗೊತ್ತಿಲ್ಲದಂತೆ ನಡೆದ ವ್ಯವಹಾರ.

ಕೃಷ್ಣ ಶಾಸಕ, ಮಂತ್ರಿ, ಸ್ಪೀಕರ್ ಹೀಗೆ ಹಲವಾರು ಹುದ್ದೆ ನಿಭಾಯಿಸಿದವರು. ದುಡ್ಡು ಮಾಡಿದವರಲ್ಲ. ಅದಾಗಿ ಬಂದುದನ್ನು ಬಡವರಿಗೆ, ಅನಾರೋಗ್ಯದವರಿಗೆ ಹಂಚುತ್ತಿದ್ದರು. ಮಹಾರಾಜ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದ ಪತ್ನಿ ಇಂದಿರಮ್ಮ ಮತ್ತು ಸಾಕುಮಗಳು ಮಂಜುಳ ಇದಿಷ್ಟೆ ಅವರ ಸಂಸಾರವಾಗಿದ್ದರೂ ಇಡೀ ತಾಲೂಕನ್ನೇ ಬಂಧು ಬಳಗವಾಗಿ ಪರಿಗಣಿಸಿದ್ದರು. ಸಾಮಾನ್ಯರಂತೆ ಸರಕಾರಿ ಬಸ್ಸಿನಲ್ಲಿ, ಆಟೋದಲ್ಲಿ ಓಡಾಡುತ್ತಿದ್ದರು. ಸದ್ಯಕ್ಕೆ ಈ ತರಹ ರಾಜಕಾರಣಿ ಮಂಡ್ಯ ಜಿಲ್ಲೆಯಲ್ಲಿ ಯಾರೂ ಇಲ್ಲ ಎಂಬುದೇ ನೋವಿನ ಸಂಗತಿ.


ಇದನ್ನೂ ಓದಿ: ಶ್ರದ್ಧಾಂಜಲಿ; ಗಾಂಧಿವಾದಿ ಚಳುವಳಿಯ ಪಿತಾಮಹ ಎಚ್ ಎಸ್ ದೊರೆಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಕೊಲೆಗೆ ರಾಜಕೀಯ ಬಣ್ಣ ಬಳಿದ ಅಣ್ಣಾಮಲೈ: ಪ್ರಕರಣ ದಾಖಲು

0
ಮಹಿಳೆಯೋರ್ವರ ಸಾವಿಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮಾಹಿತಿ ಪೋಸ್ಟ್ ಮಾಡಿದ ಆರೋಪದ ಮೇಲೆ ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡಿನ ಕಡಲೂರು ಜಿಲ್ಲೆಯ ಪಕ್ಕಿರಿಮಣಿಯಂ...