ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂದು ಪ್ರಧಾನಿ ಮೋದಿಯವರ ಮೇಲೆ ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆಂದು ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ. ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ರವರ ಜನ್ಮ ದಿನಾಚರಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರಧಾನಿ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿದಂತೆ ನಾನು ಮುಖ್ಯಮಂತ್ರಿಯಾಗಿ ಅಮಾಯಕ ಜನರನ್ನು ಕೊಂದಿಲ್ಲ’ ಎಂದು ಹೇಳಿದ್ದಾರೆ; ‘ನಾನು ಮೋದಿಯವರಿಂದ ಕಲಿಯಬೇಕಿಲ್ಲ’ವೆಂದು ಕಿಡಿಕಾರಿದ್ದಾರೆ.
ನ್ಯೂಸ್ ಏಜೆನ್ಸಿ ಎಎನ್ಐನಿಂದ ಪಡೆದುಕೊಂಡಿರುವ ಮಾಹಿತಿಯನ್ನಾಧರಿಸಿ ಡೆಕ್ಕನ್ ಕ್ರಾನಿಕಲ್ ಈ ವರದಿ ಮಾಡಿದೆ. ಇನ್ನೂ ಹಲವಾರು ಇಂಗ್ಲಿಷ್ ಪತ್ರಿಕೆಗಳು ಈ ಕುರಿತು ವರದಿ ಮಾಡಿವೆ. ಅದರ ಜೊತೆಗೆ, ರಾಜ್ಯದಲ್ಲಿ ಐಟಿ ರೇಡುಗಳ ನಡೆಯುತ್ತಿರುವ ವಿಧಾನದ ಕುರಿತೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ದೇವೇಗೌಡರು ಯಾರೋ ಒಬ್ಬರ ಮನೆಗೆ ಊಟಕ್ಕೆ ಹೋದರೆ, ಅವರ ಮನೆ ಮೇಲೆ ರೇಡ್ ನಡೆಯುತ್ತದೆಂದರೆ, ಇದು ಯಾವ ರೀತಿಯ ಪರಿಸ್ಥಿತಿ’ ಎಂಬುದು ಅವರ ಆಕ್ಷೇಪವಾಗಿತ್ತು.
ಮುಖ್ಯಮಂತ್ರಿಯವರು 2002ರಲ್ಲಿ ಗುಜರಾತ್ನಲ್ಲಿ ನಡೆದ ನರಮೇಧವನ್ನು ಮನಸ್ಸಿನಲ್ಲಿಟ್ಟುಕೊಂಡು ಮಾತಾಡಿರುವುದು ಸ್ಪಷ್ಟ. ಮೋದಿಯವರು ಸಾವಿರಾರು ಜನರ ನರಮೇಧಕ್ಕೆ ಕುಮ್ಮಕ್ಕು ಕೊಟ್ಟರೆಂಬ ಆರೋಪ ಅವರ ಮೇಲಿದೆ. ಅದರ ನಂತರ 2006ರಲ್ಲಿ ಬಿಜೆಪಿಯ ಜೊತೆಗೆ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರವನ್ನು ರಚಿಸಿದ್ದರು.
ಈ ಸಾರಿ ಮತ್ತೊಮ್ಮೆ ಬಿಜೆಪಿ ಜೊತೆ ಸೇರಿ ಜಂಟಿ ಸರ್ಕಾರ ರಚಿಸಲು ಕುಮಾರಸ್ವಾಮಿ ಒಪ್ಪಿರದಿರುವುದರಿಂದಲೇ ರಾಜಕೀಯ ದ್ವೇಷವನ್ನು ಸಾಧಿಸಲಾಗುತ್ತಿದೆಯೆಂದು ಇತ್ತೀಚೆಗೆ ದೇವೇಗೌಡರೂ ಹೇಳಿದ್ದರು.