ಲೋಕಸಭೆ ಕಲಾಪ ನಡೆಯುತ್ತಿರುವಾಗಲೇ ಯುವಕರಿಬ್ಬರು ವೀಕ್ಷಕರ ಗ್ಯಾಲರಿ ಮೂಲಕ ಸದನಕ್ಕೆ ಜಿಗಿದಿದ್ದರು. ಸದನದ ಡಯಾಸ್ಗಳ ಮೇಲೆ ಓಡಾಡಿದ ಅವರನ್ನು ಸಂಸದರು ಹಿಡಿದು ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದರು.
ಸಂಸತ್ತಿನಲ್ಲಿ ಇಂದು ನಡೆದ ಪ್ರಕರಣದಲ್ಲಿ ಬಂಧಿತರಾಗಿರುವ ಯುವಕರಲ್ಲಿ ಒಬ್ಬ ತನ್ನ ಮಗ ಮನೋರಂಜನ್ ಎಂದು ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ. ದೇವರಾಜ್ ಎಂಬ ವ್ಯಕ್ತಿ ಟಿವಿಯಲ್ಲಿನ ದೃಶ್ಯಗಳನ್ನು ನೋಡಿ ಆತನನ್ನು ಗುರುತಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮನೋರಂಜನ್ ಮೈಸೂರು ನಿವಾಸಿಯಾಗಿದ್ದು, ಮೂರು ದಿನಗಳ ಹಿಂದೆ ಬೆಂಗಳೂರಿಗೆ ಹೋಗುವುದಾಗಿ ಹೇಳಿ ತೆರಳಿದ್ದರು ಎನ್ನಲಾಗಿದೆ. ತನಗೆ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ’ ಎಂದು ಆತನ ತಂದೆ ಹೇಳಿಕೊಂಡಿದ್ದಾರೆ. ‘ಆತ ಇಂಜಿನಿಯರಿಂಗ್ ಮುಗಿಸಿದ್ದು, ಎಲ್ಲಿಯೂ ಕೆಲಸ ಮಾಡುತ್ತಿರಲಿಲ್ಲ’ ಎಂದು ಮನೋರಂಜನ್ ಕುಟುಂಬದವರು ದೂರಿದ್ದಾರೆ.
ಇತರ ಇಬ್ಬರನ್ನು ಸಂಸತ್ತಿನ ಹೊರಗೆ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಹರ್ಯಾಣದ ಹಿಸಾರ್ನ ನೀಲಂ (42) ಮತ್ತು ಮಹಾರಾಷ್ಟ್ರದ ಲಾತೂರ್ ಪ್ರದೇಶದ ಅಮೋಲ್ ಶಿಂಧೆ (25) ಎಂದು ಗುರುತಿಸಲಾಗಿದೆ.
ಇಬ್ಬರು ಒಳ ನುಗ್ಗಿದ್ದು, ಒಬ್ಬನ ಬಳಿ ಲಕ್ನೋ ವಿಳಾಸ ಹೊಂದಿರುವ ಆಧಾರ್ ಕಾರ್ಡ್ ಅನ್ನು ಭದ್ರತಾ ಸಿಬ್ಬಂದಿ ಪತ್ತೆ ಮಾಡಿದ್ದಾರೆ ಎಂದು ಬಿಎಸ್ಪಿ ಸಂಸದ ರಾಮ್ ಶಿರೋಮಣಿ ವರ್ಮಾ ಹೇಳಿದ್ದಾರೆ. ಘಟನೆ ಕುರಿತು ವಿವರಿಸಿದ ಅವರು, ಒಬ್ಬ ವ್ಯಕ್ತಿ ಹಳದಿ ಹೊಗೆಯನ್ನು ಹೊರಸೂಸುವ ಡಬ್ಬಿಯನ್ನು ತೆರೆದಿದ್ದರಿಂದ ಇಡೀ ಸಂಸತ್ತು ಹೊಗೆಯಿಂದ ಆವೃತವಾಗಿತ್ತು. ಎಲ್ಲ ಸಂಸದರು ಆತನನ್ನು ಥಳಿಸಿ ಹಿಡಿದು ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ ಎಂದು ಅವರು ಹೇಳಿದರು.
‘ನಾವು ಇಬ್ಬರಲ್ಲಿ ಒಬ್ಬನನ್ನು ಹಿಡಿದಾಗ, ಅವನು ತನ್ನ ಶೂನಿಂದ ಯಾವುದೋ ಡಬ್ಬಿಯನ್ನು ಹೊರತೆಗೆದನು. ಅದರಿಂದ ಹಳದಿ ಬಣ್ಣದ ಹೊಗೆಯು ಹೊರಹೊಮ್ಮಿತು. ನಂತರ ಎರಡನೆಯ ವ್ಯಕ್ತಿಯೂ ಸಹ ಸಿಕ್ಕಿಬಿದ್ದನು’ ಎಂದು ಅವರನ್ನು ಹಿಡಿದವರಲ್ಲಿ ಮೊದಲಿಗರಾದ ಕಾಂಗ್ರೆಸ್ ಸಂಸದ ಹನುಮಾನ್ ಬೇನಿವಾಲ್ ಹೇಳಿದರು.
ಇದನ್ನೂ ಓದಿ; ಲೋಕಸಭೆ ಭದ್ರತಾ ಲೋಪ: ಸಂಸದ ಪ್ರತಾಪ್ ಸಿಂಹರಿಂದ ಪಾಸ್ ಪಡೆದಿದ್ದರೇ ಆಗಂತುಕರು?