ಒಕ್ಕೂಟ ಸರ್ಕಾರದ ನೀತಿಗಳು, ಕೇಂದ್ರಿಕರಣ, ನಿರುದ್ಯೋಗ, ಬಡತನ ಸೇರಿದಂತೆ ಹಲವು ವಿಷಯಗಳ ಮೇಲೆ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ, “ಈಗ ಎರಡು ವಿಭಿನ್ನ ಭಾರತಗಳಿವೆ, ಒಂದು ಶ್ರೀಮಂತರ ಭಾರತ ಮತ್ತು ಇನ್ನೊಂದು ಬಡವರದ್ದು. ಇವೆರಡರ ನಡುವಿನ ಅಂತರ ಹೆಚ್ಚುತ್ತಿದೆ. ಬಿಜೆಪಿಯು ಭಾರತವನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
“ನೀವು ಮೇಕ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎಂದು ಮಾತನಾಡುತ್ತಲೇ ಇರುತ್ತೀರಿ. ಮೇಕ್ ಇನ್ ಇಂಡಿಯಾ ಎಂಬುದು ಇನ್ನು ಸಾಧ್ಯವಿಲ್ಲ. ‘ಮೇಡ್ ಇನ್ ಇಂಡಿಯಾ’ ಎಂಬುದನ್ನು ನಾಶ ಮಾಡಿದ್ದೀರಿ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಬೆಂಬಲ ನೀಡಬೇಕು, ಇಲ್ಲದಿದ್ದರೆ ‘ಮೇಕ್ ಇನ್ ಇಂಡಿಯಾ’ ಸಾಧ್ಯವಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮಾತ್ರ ಉದ್ಯೋಗಗಳನ್ನು ಸೃಷ್ಟಿಸಬಲ್ಲವು. ನೀವು ಮೇಡ್ ಇನ್ ಇಂಡಿಯಾ, ನ್ಯೂ ಇಂಡಿಯಾ, ಸ್ಟಾರ್ಟ್-ಅಪ್ ಇಂಡಿಯಾ ಇತ್ಯಾದಿಗಳ ಬಗ್ಗೆ ಮಾತನಾಡುತ್ತಲೇ ಇರುತ್ತೀರಿ. ಆದರೆ, ನಿರುದ್ಯೋಗ ಹೆಚ್ಚುತ್ತಿದೆ” ಎಂದು ದೇಶದ ನಿರುದ್ಯೋಗದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಮರ್ ಜವಾನ್ ಜ್ಯೋತಿ ವಿಲೀನ: ಕೆಲವರಿಗೆ ದೇಶಭಕ್ತಿ, ತ್ಯಾಗ ಅರ್ಥವಾಗುವುದಿಲ್ಲ ಎಂದ ರಾಹುಲ್
ಆಡಳಿತಾರೂಢ ಬಿಜೆಪಿಯು ಭಾರತದಲ್ಲಿ “ರಾಜ” ಎಂಬ ಕಲ್ಪನೆಯನ್ನು ಮರಳಿ ತಂದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. “ನಾವು 1947 ರಲ್ಲಿ ರಾಜನ ಕಲ್ಪನೆಯನ್ನು ಒಡೆದು ಹಾಕಿದ್ದೇವೆ. ಈಗ ರಾಜನ ಕಲ್ಪನೆ ಮತ್ತೆ ಬಂದಿದೆ. ಒಬ್ಬ ರಾಜ, ಒಬ್ಬ ಶೆಹನ್ ಶಾ, ಒಬ್ಬ ಆಡಳಿತಗಾರರ ಯಜಮಾನ, ಒಬ್ಬ ಯಜಮಾನರ ಯಜಮಾನ ಆಗಿದೆ. ಇದು ರಾಜ್ಯಗಳ ಒಕ್ಕೂಟದ ಕಲ್ಪನೆ ಮತ್ತು ರಾಜನ ಕಲ್ಪನೆಯ ನಡುವಿನ ಘರ್ಷಣೆ” ಎಂದು ಮೋದಿಯವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.
“ಭಾರತದ ಪ್ರತಿಯೊಂದು ಬಂದರು, ಪ್ರತಿ ವಿಮಾನ ನಿಲ್ದಾಣ, ಟವರ್, ಪ್ರಸರಣ, ಗಣಿಗಾರಿಕೆ, ಹಸಿರು ಇಂಧನ, ಅನಿಲ ವಿತರಣೆ, ಖಾದ್ಯ ತೈಲ ಎಲ್ಲಾ ಒಬ್ಬ ವ್ಯಕ್ತಿ ಪಡೆಯುತ್ತಿದ್ದಾರೆ. ಎಲ್ಲೆಡೆ ಕೇವಲ ಅದಾನಿ ಇದ್ದಾರೆ. ದೇಶದ ಸಂಪೂರ್ಣ ಸಂಪತ್ತು ಆಯ್ದ ಕೆಲವರಿಗೆ ಮಾತ್ರ ಹೋಗುತ್ತಿದೆ. ಬಿಜೆಪಿ ಸರ್ಕಾರದಿಂದ ಕೆಲವೇ ಕೆಲವು ಕೈಗಾರಿಕೋದ್ಯಮಿಗಳು ಲಾಭ ಪಡೆಯುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಆರ್ಎಸ್ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ದೇಶದ ಅಡಿಪಾಯವನ್ನು ದುರ್ಬಲಗೊಳಿಸುತ್ತಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಮುಂದುವರಿದು, “ಗಣರಾಜ್ಯೋತ್ಸವದಂದು ನಿಮಗೆ ಅತಿಥಿಯನ್ನು ಕರೆತರಲು ಸಾಧ್ಯವಾಗುತ್ತಿಲ್ಲ ಎಂದು ನೀವೇ ಕೇಳಿಕೊಳ್ಳಿ. ನಾವು ಸಂಪೂರ್ಣವಾಗಿ ಪ್ರತ್ಯೇಕಿಸಲ್ಪಟ್ಟಿದ್ದೇವೆ ಮತ್ತು ಸುತ್ತುವರೆದಿದ್ದೇವೆ. ನೀವು (ಬಿಜೆಪಿ) ಪಾಕಿಸ್ತಾನ ಮತ್ತು ಚೀನಾವನ್ನು ಒಟ್ಟಿಗೆ ತಂದಿದ್ದೀರಿ, ಇದು ದೇಶದ ಜನರಿಗೆ ನೀವು ಮಾಡಿದ ಅತಿ ದೊಡ್ಡ ಅಪರಾಧವಾಗಿದೆ” ಎಂದಿದ್ದಾರೆ.
“ರಾಷ್ಟ್ರವು ಹೊರಗಿನಿಂದಲೂ ಅಪಾಯದಲ್ಲಿದೆ, ರಾಷ್ಟ್ರವು ಒಳಗಿನಿಂದಲೂ ಅಪಾಯದಲ್ಲಿದೆ. ಇದು ತುಂಬಾ ಅಪಾಯಕಾರಿ ಸ್ಥಿತಿ. ನನ್ನ ದೇಶ ಹೊರಗೆ ಸಂಪೂರ್ಣವಾಗಿ ಪ್ರತ್ಯೇಕವಾಗಿದೆ. ಒಳಗೆ ಹೋರಾಡುತ್ತಿದೆ. ರಾಜ್ಯಗಳು ಒಬ್ಬರಿಗೊಬ್ಬರು ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿವೆ. ಇವೆಲ್ಲ ನನಗೆ ಚಿಂತೆಗೆ ದೂಡುತ್ತವೆ” ಎಂದು ಗಂಭೀರವಾದ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ: ಯುಪಿ ಚುನಾವಣೆ-2022: ಯುವಜನರಿಗೆ ವಿಶೇಷ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ!
ರಾಹುಲ್ ಮಾತುಗಳು ನಿಜಕ್ಕೂ ಅವರ ವಿವೇಚನೆಯನ್ನು ಪಣಕ್ಕಿಟ್ಟು ಬಂದ ಅಂತರಾಳದ ಮಾತುಗಳು ಎನ್ನಿಸಿದೆ! ಸರ್ಕಾರದ ವೈಫಲ್ಯವನ್ನು ಪ್ರಬುದ್ದ ಮಾತುಗಳಿಂದ ತೆರೆದಿಟ್ಟ ಅವರನ್ನು, ಅವರ ನಡೆಗಳನ್ನು ಮುಂದೆ ಗಮನಿಸಿ!
That is true present India problem