ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪ್ರೇಮಪ್ರಕರಣಗಳೇ ಕಾರಣ ಎಂದು ರಾಜಸ್ಥಾನದ ಸಚಿವ ಶಾಂತಿ ಧಾರಿವಾಲ್ ಹೇಳಿದ್ದಾರೆ. ಆದರೆ ಪೋಷಕರು ಸಚಿವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಹಾಸ್ಟೆಲ್ ನಲ್ಲಿ ಸಾವನ್ನಪ್ಪಿದ 16 ವರ್ಷದ ಬಾಲಕಿ ಸೇರಿದಂತೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಪ್ರೇಮ ಪ್ರಕರಣಗಳು ಕಾರಣ ಎಂದು ರಾಜಸ್ಥಾನದ ಸಚಿವ ಶಾಂತಿ ಧಾರಿವಾಲ್ ಹೇಳಿದ್ದಾರೆ. ಇದಕ್ಕೆ ಸಾಕ್ಷ್ಯ ಇದ್ದರೆ ಅದನ್ನು ನನಗೆ ನೀಡಿ ಎಂದು ಮೃತ ಬಾಲಕಿಯ ತಂದೆ ರವೀಂದ್ರ ಸಿನ್ಹಾ ಒತ್ತಾಯಿಸಿದ್ದಾರೆ.
ಈ ಬಗ್ಗೆ ಬುಧವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ”ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪ್ರೇಮ ಪ್ರಕರಣವೇ ಕಾರಣ ಎಂದು ಬಾಲಕಿ ಬಿಟ್ಟುಹೋದ ಪತ್ರದಲ್ಲಿದೆ” ಎಂದು ಹೇಳಿಕೊಂಡಿದ್ದಾರೆ.
”ಇವತ್ತು ಒಬ್ಬ ಹುಡುಗಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲು ಬೇಸರವಾಗುತ್ತದೆ. ಅಕ್ರಮ ಸಂಬಂಧದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಬಾಲಕಿ ಪತ್ರವನ್ನು ಬರೆದಿದ್ದಾಳೆ … ಇಲ್ಲಿ ಕೋಚಿಂಗ್ ವಿದ್ಯಾರ್ಥಿಗಳು ಮಾಡಿದ ಎಲ್ಲಾ ಆತ್ಮಹತ್ಯೆಗಳಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಸಂಪೂರ್ಣವಾಗಿ ತನಿಖೆ ಮಾಡಬೇಕಾಗಿದೆ” ಎಂದು ಧಾರಿವಾಲ್ ಸುದ್ದಿಗಾರರಿಗೆ ತಿಳಿಸಿದರು.
ಬಾಲಕಿಯು ಮಂಗಳವಾರ ರಾತ್ರಿ ನೇಣು ಬಿಗಿದುಕೊಂಡದ್ದು, ಆಕೆಯ ಕೊಠಡಿಯಲ್ಲಿ ಯಾವುದೇ ಪತ್ರ ಅಥವಾ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿನಿ ರಿಚಾ NEET ಆಕಾಂಕ್ಷಿಯಾಗಿದ್ದರು. ಅವರ ಮೃತದೇಹವನ್ನು ಸ್ವೀಕರಿಸಲು ಗುರುವಾರ ಬೆಳಿಗ್ಗೆ ರಾಂಚಿಯಿಂದ ಕೋಟಾ ತಲುಪಿದ ರಿಚಾ ಅವರ ತಂದೆ, ಸಚಿವ ಧಾರಿವಾಲ್ ಅವರ ಹೇಳಿಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಹಾಗೂ ಅವರ ಹೇಳಿಕೆಯನ್ನು ಸಾಬೀತುಪಡಿಸಲು ಸಾಕ್ಷ್ಯ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
”ನನ್ನ ಮಗಳಿಗೆ ಯಾವುದೇ ಅಕ್ರಮ ಸಂಬಂಧ ಇರಲಿಲ್ಲ. ಅವರ ಬಳಿ (ಧಾರಿವಾಲ್) ಅಂತಹ ಯಾವುದೇ ಪುರಾವೆಗಳಿದ್ದರೆ, ಅದನ್ನು ಅವರು ನನ್ನೊಂದಿಗೆ ಹಂಚಿಕೊಳ್ಳಬೇಕು’’ ಎಂದು ಹುಡುಗಿಯ ತಂದೆ ರವೀಂದ್ರ ಸಿನ್ಹಾ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.
ಕೋಟಾದ ಕೆಲವು ಹುಡುಗರು ಕೋಚಿಂಗ್ ಇನ್ಸ್ಟಿಟ್ಯೂಟ್ ಗೆ ಹೋಗುವಾಗ ಮತ್ತು ಬರುವಾಗ ಚುಡಾಯಿಸುತ್ತಾರೆ ಎಂದು ಮಗಳು ದೂರು ನೀಡಿದ್ದರು ಎಂದು ಸಿನ್ಹಾ ಹೇಳಿದರು.