ಒಂದು ಪತ್ರ
‘ಪೌರತ್ವ’ ಕಾಯ್ದೆಯನ್ನು ವಿರೋಧಿಸಿ ಇತ್ತೀಚೆಗೆ ಮಂಗಳೂರಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ನಿಂದ ಇಬ್ಬರು ಮೃತಪಟ್ಟು ಅನೇಕರು ಗಾಯಗೊಂಡಿರುವ ಸುದ್ದಿಯ ಗಂಭೀರತೆಯನ್ನು ತಗ್ಗಿಸಲು ಕೆಲವೂಂದು ಟಿ.ವಿ. ವಾಹಿನಿಗಳು ಪ್ರಯತ್ನಿಸುತ್ತಿದೆ. ಉತ್ತರಪ್ರದೇಶದಲ್ಲಿ ಸಂಘಪರಿವಾರದ ಜನರು ಹಾಡುಹಗಲೇ ಪೊಲೀಸರನ್ನು ಅಟ್ಟಾಡಿಸಿಕೊಂಡು ಕೊಂದ ಹಾಗೂ ಅವರ ಜೀಪಿನಲ್ಲಿಯೇ ಹತ್ಯೆಮಾಡಿದಾಗ ಜಾಗ್ರತಗೊಳ್ಳದ ಪೊಲೀಸ್ಪ್ರೇಮ ಈಗ ಯಡಿಯೂರಪ್ಪರವರ ನೆಚ್ಚಿನ ಪದದಲ್ಲಿ ಹೇಳುವುದಾದರೆ ನೂರಕ್ಕೆ ನೂರು ಜಾಗೃತವಾಗಿದೆ. ಅದಿರಲಿ.
ಪ್ರತಿಭಟನೆಯ ದೃಶ್ಯಾವಳಿಯ ತುಣುಕುಗಳನ್ನು ಪೋಣಿಸಿ ಪ್ರತಿಭಟನಾಕಾರರನ್ನೇ ಅಪರಾಧಿಗಳು ಎಂಬಂತೆ ಬಿಂಬಿಸುತ್ತಿರುವ ಹಿನ್ನೆಲೆಯಲ್ಲಿರುವ ಕನ್ನಡದ ಕೆಲವು ವಾಹಿನಿಗಳ ಮನೋಸ್ಥಿತಿ ಇಲ್ಲಿಯ ಮುಸ್ಲಿಮರಿಗೆ ಅಜ್ಞಾತವಲ್ಲ.
ಪಬ್ಲಿಕ್ ಟಿ.ವಿ. ಎಂಬ ಒಂದು ವಾಹಿನಿ ಪೊಲೀಸರ ಮೇಲಿನ ದಾಳಿಯನ್ನು ಪ್ರಸಾರಗೂಳಿಸಿದ ದೃಶ್ಯಾವಳಿಗಳ ಕುರಿತು ನಡೆಸಿದ ಪ್ಯಾನಲ್ ಚರ್ಚೆಯಲ್ಲಿ ಆ್ಯಂಕರ್ನೊಬ್ಬ ಪ್ರತಿಭಟನೆಗಾರರ ಪರವಾಗಿ ಭಾಗವಹಿಸಿದ ಅಶ್ರಫ್ ಎಂಬವರಿಗೆ ಎನ್.ಆರ್.ಸಿ, ಸಿ.ಎ.ಎ. ಎಂದರೇನೆಂದು ಎಂಬ ಪ್ರಶ್ನೆಯನ್ನು ಕೀ ಕೊಟ್ಟ ಗೊಂಬೆಯಂತೆ ಪುನರಾವರ್ತಿಸಿ ಅತನ ಚಾನಲ್ ಪ್ರಸಾರಗೊಳಿಸಿದ ದೃಶ್ಯಾವಳಿಯ ಸಾಚಾತನವನ್ನು ಪ್ರಶ್ನಿಸಲು ಅವಕಾಶವನ್ನೇ ಕೊಡಲಿಲ್ಲ. ಚರ್ಚೆಯ ನಡುವೆ ಅದರ ತುಣುಕುಗಳನ್ನು ಪ್ರಸಾರಗೊಳಿಸುತ್ತಲೂ ಇದ್ದರು. ಆದರೆ ಕ್ಯಾಪ್ಟನನ ಚಾನೆಲ್ ನೈಜಸಂಗತಿ ಹೊರಬಾರದಂತೆ ಪೌರತ್ವದ ಬೇಲಿ ಹಾಕಿತು. ಚಾಣಕ್ಯರಾದ ಅಶ್ರಫ್ ಬಾರಿಬಾರಿಗೂ ಚರ್ಚೆಯ ದಿಕ್ಕು ತಪ್ಪಿಸಬೇಡಿ ಎಂದು ವಿನಂತಿಸಿದರೂ ಪ್ರಯೋಜನವಾಗಲಿಲ್ಲ. ಪೊಲೀಸರ ಮೇಲಿನ ದಾಳಿಯನ್ನು ಪ್ರಸಾರಗೊಳಿಸಿದಂತೆ ಅವರು ನಡೆಸಿದ ದೌರ್ಜನ್ಯದ ದೃಶ್ಯಾವಳಿಗಳು ಲೋಕವನ್ನೆಲ್ಲ ಜಾಲಾಡುವ ಈ ಚಾನಲ್ಗೆ ಲಭ್ಯವಾಗದೆ ಹೋಯಿತೇ? ಸಂಘರ್ಷಪೀಡಿತ ಸಿರಿಯಾದ ಪಟ್ಟಣವಾದ ‘ಇದ್ಲಿಬ್’ಅನ್ನು ‘ಇದ್ರಿಸ್’ ಎಂದು ಉಚ್ಚರಿಸುವ ವಾಹಿನಿಯ ಕ್ಯಾಪ್ಟನ್ (ಹೀಗೆಂದು ಅಕ್ಕರೆಯಿಂದ ಕರೆಯುತ್ತಿದ್ದ ಒಬ್ಬ ಆ್ಯಂಕರ್ ಈಗ ಬೇರೊಂದು ಚಾನೆಲ್ನಲ್ಲಿದ್ದಾರೆ) ಮುಸ್ಲಿಮರ ಪರವಾಗಿ ಪ್ರಕಟಿಸದಿರಲು (ಎಲ್ಲಾ ಚಾನೆಲ್ಗಳು ಹಾಗೆ ಪ್ರಸಾರಗೊಳಿಸಿದ ನಂತರ) ಅಸಾಧ್ಯವಾದಾಗ ಒಂದು ಔದಾರ್ಯವೆಂಬಂತೆ ಪ್ರಸಾರಗೊಳಿಸುತ್ತಿರುವುದನ್ನು ಮುಸ್ಲಿಮರು ಬಲ್ಲರು. ಆತನ ಹಾವಭಾವ, ಮಾತಿನ ಶೈಲಿ, ಸ್ವರಗಳ ಏರಿಳಿತದಿಂದ ಇದನ್ನು ಗಮನಿಸಬಹುದಾಗಿದೆ. ಬಾರಿಬಾರಿಗೂ ತನ್ನನ್ನು ಚೆಡ್ದಿ ಎಂದು ಕರೆಯುತ್ತಾರೆಂದು ಅವಲತ್ತುಕೊಳ್ಳುವ ಅಥವಾ ಸಂತೋಷಪಡುವ ಕ್ಯಾಪ್ಟನ್ ಈಗ ಪ್ಯಾಂಟ್ ಬಂದಿರುವುದರಿಂದ ಚೆಡ್ಡಿ ಕಾಲಹರಣಗೊಂಡಿದೆಯೆಂದು ನೆನಪಿಸಿ ಕೊಡುವುದನ್ನು ಮರೆಯುವುದಿಲ್ಲ.
ಕೆಲವು ಚಾನೆಲ್ಗಳು ಮುಸ್ಲಿಮರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವಾಗ ಒಂದಿಬ್ಬರು ಕಾಯಂ ಗಿರಾಕಿಗಳನ್ನು ಪ್ಯಾನೆಲ್ನಲ್ಲಿ ಕೂರಿಸಿ ಪೂರ್ವ ನಿರ್ಧರಿತವಾದಂತೆ ಸೋಲಿಸಿ ಹಿಂದೆ ಕಳುಹಿಸಿಬಿಡುತ್ತವೆ. ಜಿಲ್ಲೆಯ ವಿದ್ಯಾವಂತ, ಬುದ್ಧಿವಂತ ಮುಸ್ಲಿಮ್ ಪ್ರತಿಭೆಗಳನ್ನು ಪ್ಯಾನಲ್ ಚರ್ಚೆಗೆ ಕೂರಿಸುವ ಧೈರ್ಯ ತೆಗೆದುಕೊಳ್ಳುವುದಿಲ್ಲ. ಏಕೆಂದರೆ, ಮುಸ್ಲಿಮರ ನೈಜ ಸಮಸ್ಯೆಗಳು ಹೊರಬರುವುದು ಅವರಿಗೆ ಬೇಕಿಲ್ಲ.
ಪೌರತ್ವ ಕಾಯ್ದೆಯ ಪ್ರಕಾರ ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನದಿಂದ ಬರುವ ಮುಸ್ಲಿಮೇತರ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ಲಭಿಸುತ್ತದೆ. ಅಕ್ರಮ ವಲಸಿಗನಾದ ಓರ್ವ ಮುಸ್ಲಿಮ್ ಹಿಂದೂಧರ್ಮಕ್ಕೆ ಮತಾಂತರವಾದರೆ ಅವನಿಗೆ ಪೌರತ್ವ ಲಭಿಸುತ್ತದೆಯೇ? ಹಾಗೆಯೇ ಓರ್ವ ಹಿಂದೂ ಇಸ್ಲಾಮಿಗೆ ಮತಾಂತರವಾದರೆ ಅವನ ಪೌರತ್ವ ರದ್ದಾಗುತ್ತದೆಯೇ? ಒಟ್ಟಾರೆಯಗಿ ಧರ್ಮಾಧಾರಿತ ಪೌರತ್ವ ಸಂವಿಧಾನದ ಮೂಲಭೂತ ಸ್ವರೂಪಕ್ಕೆ ವಿರುದ್ಧವಾಗಿದೆ.
ಕನ್ನಡದ ಚಾನೆಲ್ಗಳು ದಿನಬೆಳಗಾದರೆ ಪ್ರಸಾರಗೊಳಿಸುತ್ತಿರುವ ಜ್ಯೋತಿಷ್ಯ, ಫಲ ಜ್ಯೋತಿಷ್ಯ, ವಾಸ್ತು, ಹೀಗೂ ಉಂಟೇ? ಮುಂತಾದ ಕಾರ್ಯಕ್ರಮದ ಪ್ರಕಾರ ಈ ಲೋಕ ಅದೆಷ್ಟೋ ಸಲ ನಿರ್ನಾಮವಾಗಬೇಕಿತ್ತು| ಕರಾವಳಿಯಂತೂ ನೂರಾರುಬಾರಿ ಸುನಾಮಿಗೆ ಕೊಚ್ಚಿಹೋಗಬೇಕಿತ್ತು| ಮಲೆಯಾಳಂ ಚಾನೆಲ್ಗಳು ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸಲು ಪ್ರಯತ್ನಿಸುವಾಗ ನಮ್ಮ ಕೆಲವು ಚಾನೆಲ್ಗಳು ಜನರನ್ನು ಮೂಢನಂಬಿಕೆ, ಕಂದಾಚಾರಗಳ ಕೂಪಕ್ಕೆ ತಳ್ಳುತ್ತಿದೆ. ನಮ್ಮ ಚಾನೆಲ್ಗಳು ಹತ್ತಿಪ್ಪತ್ತು ಮಂದಿಯನ್ನು ಗುಡ್ಡೆ ಹಾಕಿಕೊಂಡು ಚಾನೆಲನ್ನು ಮೀನು ಮಾರುಕಟ್ಟೆಯಾಗಿ ಮಾರ್ಪಡಿಸಿರುವ ಸುಳ್ಳಿನ ಸರದಾರ ಅರ್ನಾಬ್ ಗೋಸ್ವಾಮಿಯನ್ನು ಅನುಸರಿಸುವ ಬದಲು ಎನ್.ಡಿ.ಟಿ.ವಿ.ಯ ರವೀಶ್ಕುಮಾರ್ ಹಾಗೂ ಇಂಡಿಯಾ ಟುಡೆಯ ರಾಜ್ದೀಪ್ ಸರ್ದೇಸಾಯಿ ಅವರನ್ನು ಅನುಸರಿಸಲಿ. ಬಿ.ಬಿ.ಸಿ, ಸಿ.ಎನ್.ಎನ್, ಅಲ್ ಜಝೀರ ಪ್ರಸಾರಗೊಳಿಸುವ ಅಂತರ್ ರಾಷ್ಟ್ರೀಯ ಸುದ್ದಿಗಳನ್ನು ಮರುಪ್ರಸಾರಗೊಳಿಸಿ (ಮೌಢ್ಯ ಬಿತ್ತರಿಸುವ ಬದಲಿಗೆ) ತಮ್ಮ ಚಾನೆಲ್ಗಳ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಲಿ. ರಿಮೋಟ್ ಜನರ ಕೈಯಲ್ಲಿಯೇ ಇರುವುದರಿಂದ ಜನರು ತಾವು ಹೇಳಿದ್ದನ್ನೇ ಪರಮಸತ್ಯವೆಂದು ನಂಬುತ್ತಾರೆ ಎಂಬ ಭ್ರಮೆ ಯಾರಿಗೂ ಬೇಡ.
ಜಿಲ್ಲೆಯಮಟ್ಟಿಗೆ ಹೇಳುವುದಾದರೆ ಬೆಳಗ್ಗಿನ ಪತ್ರಿಕೆಗಳಿಗಿಂತ ಸಂಜೆ ಪತ್ರಿಕೆಗಳೇ ಹೆಚ್ಚು ಜಾತ್ಯತೀತವಾದಿಯಾಗಿವೆ. ಅವುಗಳ ಸಂಘಪರಿವಾರಕ್ಕೆ ನೀಡಿದಷ್ಟೇ ಪ್ರಾಮುಖ್ಯತೆಯನ್ನು ಇತರರಿಗೂ ನೀಡುವ ಮೂಲಕ ತಕ್ಕಡಿಯ ಮುಳ್ಳನ್ನು ನೇರವಾಗಿರಿಸಲು ಪ್ರಯತ್ನಿಸುತ್ತಿದೆ. ರಾಜ್ಯಮಟ್ಟದಲ್ಲಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಜಾವಾಣಿ, ವಾರ್ತಾಭಾರತಿ, ನ್ಯಾಯಪಥದಂತಹ ಪತ್ರಿಕೆಗಳಿರುವಂತೆ ಒಂದು ಚಾನಲ್ನ ಅಗತ್ಯವಿದೆ. ಜಾತ್ಯತೀತ ಪ್ರೇಮಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವರೆಂದು ಆಶಿಸಲೇ?