Homeಮುಖಪುಟಮಣಿವಣ್ಣನ್ ವರ್ಗಾವಣೆ ರದ್ದುಗೊಳಿಸದಿದ್ದರೆ ಹೋರಾಟ - ಕಾರ್ಮಿಕ ಸಂಘಟನೆಗಳ ಎಚ್ಚರಿಕೆ

ಮಣಿವಣ್ಣನ್ ವರ್ಗಾವಣೆ ರದ್ದುಗೊಳಿಸದಿದ್ದರೆ ಹೋರಾಟ – ಕಾರ್ಮಿಕ ಸಂಘಟನೆಗಳ ಎಚ್ಚರಿಕೆ

- Advertisement -
- Advertisement -

ಕೈಗಾರಿಕೆಗಳ ಮಾಲಿಕರ ಲಾಬಿಗೆ ಮಣಿದ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ವರ್ಗಾವಣೆ ಮಾಡಿರುವುದಕ್ಕೆ ಕಾರ್ಮಿಕ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಯಾವುದೇ ತಪ್ಪು ಮಾಡದ ಪಿ.ಮಣಿವಣ್ಣನ್ ಅವರನ್ನು ವರ್ಗಾವಣೆ ಮಾಡಿರುವುದನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಕಾರ್ಮಿಕ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಕೊರೊನ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಮಣಿವಣ್ಣನ್ ನೆರವಾಗಿದ್ದರು. ಅವರ ಸಮಸ್ಯೆಗಳಿಗೆ ಕೈಲಾದ ಮಟ್ಟಿಗೆ ಸ್ಪಂದಿಸುತ್ತಿದ್ದರು. ಇಂಥ ಸಮಯದಲ್ಲಿ ವರ್ಗಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಉದ್ದಿಮೆಗಳ ಮಾಲಿಕರು ಹಾಕಿದ ಒತ್ತಡದಿಂದಲೇ ಮಣಿವಣ್ಣನ್ ಅವರನ್ನು ಬಿ.ಎಸ್. ಯಡಿಯೂರಪ್ಪ ನೇತೃತೃತ್ವದ ಸರ್ಕಾರ ವರ್ಗಾವಣೆ ಮಾಡಿದೆ. ಅಧಿಕಾರಿಗಳ ಪರ ಎಂದು ಹೇಳಿಕೊಳ್ಳುವ ಬಿಜೆಪಿ ಸರ್ಕಾರ ಮನಬಂದಂತೆ ಅಧಿಕಾರಿಗಳ ವರ್ಗಾವಣೆಯಲ್ಲಿ ತೊಡಗಿದೆ. ಇದು ಬಿಜೆಪಿ ಸರ್ಕಾರದ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ಜನರು ಕಿಡಿಕಾರಿದ್ದಾರೆ.

ಸಿಐಟಿಯು ತುಮಕೂರು ಜಿಲ್ಲಾಧ್ಯಕ್ಷ  ಸೈಯದ್ ಮುಜೀಬ್ ಮಾತನಾಡಿ, “ಮಣಿವಣ್ಣನ್ ವರ್ಗಾವಣೆಯಲ್ಲಿ ಮಾಲಿಕರ ಒತ್ತಡಕ್ಕೆ ಮಣಿದಿರುವುದು ಸ್ವಷ್ಟವಾಗಿದೆ. ಕಾರ್ಮಿಕರ ಪರ, ಸಂವಿಧಾನಬದ್ದವಾಗಿ ಕೆಲಸ ನಿರ್ವಹಿಸುತ್ತಿದ್ದ ಮಣಿವಣ್ಣನ್, ಕೊರೊನ ಸಂದರ್ಭದಲ್ಲಿ ಕಾರ್ಮಿಕರಿಗೆ ಸಂಬಳ ನೀಡದ ಕೈಗಾರಿಕೆಗಳ ಆಡಳಿತ ಮಂಡಳಿ/ಮಾಲಿಕರಿಗೆ ನೋಟಿಸ್ ನೀಡಲು ಮುಂದಾಗಿದ್ದರು. ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದ ಅವರು ಬಡವರ ಪರ ಇದ್ದರು. ಕುಂಟು ನೆಪವೊಡ್ಡಿ ಮಾಲಿಕರ ಸಂಘ ಸರ್ಕಾರದ ಮೇಲೆ ಒತ್ತಡ ಹೇರಿ ವರ್ಗಾವಣೆ ಮಾಡಿದೆ. ವರ್ಗಾವಣೆ ರದ್ದುಪಡಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸುವ ಸಂದರ್ಭದಲ್ಲಿ ಬಿಲ್ಡರ್ ಗಳ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ರೈಲು ಸೇವೆಯನ್ನು ರದ್ದುಗೊಳಿಸಿತ್ತು. ಈಗ ಮಣಿವಣ್ಣನ್ ವರ್ಗಾವಣೆಯಲ್ಲಿ ಮಾಲಿಕರ ಲಾಬಿಗೆ ಸರ್ಕಾರ ಮಣೆ ಹಾಕಿದ್ದು ಬಂಡವಾಳಗಾರರ ಹಿತ ಕಾಯಲು ಬದ್ದತೆ ಪ್ರದರ್ಶಿಸುತ್ತಿದೆ. ಇಂತಹ ತೀರ್ಮಾನಗಳು ಒಳ್ಳೆಯವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಫೆಡರೇಷನ್ ಜಿಲ್ಲಾಧ್ಯಕ್ಷ ಬಿ.ಉಮೇಶ್ ಮಾತನಾಡಿ “ಕೊರೊನ ಸಂದರ್ಭದಲ್ಲಿ ಅಧಿಕಾರಿಗಳ ವರ್ಗಾವಣೆಗೆ ಅರ್ಥವಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಅಧಿಕಾರಿಗಳಿಂದ ಹೇಗೆ ಕೆಲಸ ತೆಗೆಸಿಕೊಳ್ಳಬೇಕೆಂಬ ಬಗ್ಗೆ ಸರ್ಕಾರ ಯೋಚಿಸಬೇಕೇ ಹೊರತು ವರ್ಗಾವಣೆ ಪರಿಹಾರವಲ್ಲ. ಯಾವುದೋ ಹಿತಾಸಕ್ತಿಗೆ ವರ್ಗಾವಣೆ ಮಾಡಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಕಾರ್ಮಿಕರಿಗೆ ಬಂದ ಭಾಗ್ಯವೇನು? ಕೊನೊನ ಆಪತ್ಕಾಲದ. ಹಣ ಕಾರ್ಮಿಕರಿಗೆ ಬಂದಿಲ್ಲ. ಕಾರ್ಮಿಕರಿಗೆ ಪರಿಹಾರ ನೀಡಬೇಕಾದ ಹಣಬಿಡುಗಡೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಕ್ಕಟ್ಟು ಉದ್ಭವಿಸಿರುವ ಸಂದರ್ಭ ಅಧಿಕಾರಿಗಳು ತಪ್ಪು ಮಾಡಿದ್ದರೆ ಸರಿಪಡಿಸಿಕೊಂಡು ಹೋಗಬೇಕು. ಇಂತಹ ವೇಳೆ ಸಮಸ್ಯೆ ಬಗೆಹರಿಸುವುದು ಮೊದಲ ಆದ್ಯತೆ ಆಗಬೇಕು. ಆದರೆ ಹೊಸದಾಗಿ ಗೆದ್ದುಬಂದಿರುವವರು ಹಣ ಮಾಡಿಕೊಳ್ಳಲು ಅಧಿಕಾರಿಗಳ ವರ್ಗಾವಣೆಗೆ ಇಳಿದಿದ್ದಾರೆ. ಕಾರ್ಮಿಕ, ಅರಣ್ಯ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಕಾರ್ಮಿಕರು ಬೀದೀಲಿ ಇದ್ದಾರೆ ಅವರಿಗೆ ನೆರವು ನೀಡಬೇಕು. ಈ ದಿಕ್ಕಿನತ್ತ ಸಚಿವರು ಯೋಚಿಸಬೇಕು ಎಂದಿದ್ದಾರೆ.

ತುಮಕೂರಿನಲ್ಲಿ ನಗರಸಭೆ ಆಯುಕ್ತರಾಗಿದ್ದಾಗ ಪಿ.ಮಣಿವಣ್ಣನ್ ಉತ್ತಮ ಕೆಲಸ ಮಾಡಿದ್ದರು. ಜನರ ಮೆಚ್ಚುಗೆ ಗಳಿಸಿದ್ದರು. ಇಲ್ಲಿಯೂ ರಾಜಕೀಯ ಮುಖಂಡರ ಲಾಬಿಗೆ ಮಣಿದ ಯಡಿಯೂರಪ್ಪ ಸರ್ಕಾರವೇ ಅಂದು ಮಣಿವಣ್ಣನ್ ಅವರನ್ನು ವರ್ಗಾವಣೆ ಮಾಡಿತ್ತು. ಈಗಲೂ ಅದೇ ಯಡಿಯೂರಪ್ಪ ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ. ತಾನು ದಕ್ಷ ಅಧಿಕಾರಿಗಳ ಪರ ಎಂದು ಹೇಳಿಕೊಳ್ಳುವ ಬಿಜೆಪಿ ನಾಯಕರು ಇದೀಗ ತುಟಿ ಹೊಲಿದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನಾನುಗೌರಿ.ಕಾಂ ಜೊತೆ ದೂರವಾಣಿಯಲ್ಲಿ ಮಾತನಾಡಿದ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಗಿರೀಶ್ “ಇಂಥ ಸಮಯದಲ್ಲಿ ವರ್ಗಾವಣೆ ಸರಿಯಲ್ಲ. ಕಾರ್ಮಿಕರು ಕೆಲಸ ಕಳೆದುಕೊಂಡಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ 2005ರಲ್ಲಿ ಜಾರಿಗೆ ತಂದಿರುವ ಕಾನೂನುಗಳನ್ನು ಮಣಿವಣ್ಣನ್ ಪಾಲಿಸುತ್ತಿದ್ದರು. ಶಿಸ್ತಿನಿಂದ ಕೆಲಸ ಮಾಡುತ್ತಿದ್ದರು. ಕಾರ್ಮಿಕರಿಗೆ  ಸೌಲಭ್ಯ ಕೊಡಿಸುತ್ತಿದ್ದರು. ಅವರ ವರ್ಗಾವಣೆ ಸರ್ಕಾರದ ಲೋಪಕ್ಕೆ ಹಿಡಿದ
ಕನ್ನಡಿ. ಕೂಡಲೇ ವರ್ಗಾವಣೆ ರದ್ದುಗೊಳಿಸಿ ಕಾರ್ಮಿಕ ಪ್ರದಾನ ಕಾರ್ಯದರ್ಶಿ ಹುದ್ದೆಯಲ್ಲೇ ಮುಂದುವರಿಸಬೇಕು. ಇಲ್ಲದಿದ್ದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಐಎಎಸ್ ಅಧಿಕಾರಿ ರವಿ ಸಾವಿನ ಪ್ರಕರಣ ಸೇರಿದಂತೆ ಅಧಿಕಾರಿಗಳ ವರ್ಗಾವಣೆ ಮುಂದಿಟ್ಟುಕೊಂಡು ಬಿಜೆಪಿ ದಕ್ಷ, ಪ್ರಾಮಾಣಿಕ ಪಾರದರ್ಶಕ ಅಧಿಕಾರಿಗಳಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಬೆಲೆ ಇಲ್ಲ. ಬಿಜೆಪಿ ಸದಾ ಉತ್ತಮ ಅಧಿಕಾರಿಗಳ ಜೊತೆಗೆ ಇರುತ್ತದೆ ಎಂದು ಹೇಳಿ ರಾಜ್ಯದ್ಯಾಂತ ಪ್ರತಿಭಟನೆ ನಡೆಸಿತ್ತು. ಈಗ ಅದೇ ಬಿಜೆಪಿ ಸರ್ಕಾರ ಕಾರ್ಮಿಕರ ಪರವಾಗಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದ ಪಿ.ಮಣಿವಣ್ಣನ್ ಅವರನ್ನು ವರ್ಗಾವಣೆ ಮಾಡಿರುವುದು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.


ಇದನ್ನೂ ಓದಿ: ರಾಜ್ಯ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ‘ಮಣಿವಣ್ಣನ್. ಪಿ’ ವರ್ಗಾವಣೆ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮನುವಾದಿಗಳು ಮಾಲೀಕರ ಪರವೇ ಹೊರತು ಕಾರ್ಮಿಕರ ಪರ ಅಲ್ಲ. ಇದನ್ನು ಈ ದೇಶದ ಜನಸಾಮಾನ್ಯರು ಮೊದಲು ತಿಳಿದುಕೊಳ್ಳಬೇಕು.

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...